Advertisement

ನೆರವಿಲ್ಲದೆ ಕಂಗಾಲಾಗಿದ್ದಾರೆ ರೋಹಿಂಗ್ಯ ನಿರಾಶ್ರಿತರು

06:09 PM May 16, 2020 | sudhir |

ಢಾಕಾ : ಬಾಂಗ್ಲಾದೇಶದ ಕಾಕ್ಸ್‌ ಬಜಾರ್‌ನಲ್ಲಿರುವ ರೋಹಿಂಗ್ಯ ನಿರಾಶ್ರಿತರ ಬದುಕು ಕೋವಿಡ್‌ ವೈರಸ್‌ನಿಂದಾಗಿ ಅಕ್ಷರಶಃ ನರಕ ಸದೃಶವಾಗಿದೆ. ಜಗತ್ತಿನ ಅತಿ ಹೆಚ್ಚು ಜನದಟ್ಟಣೆಯಿರುವ ನಗರಗಳಿಗಿಂತಲೂ ಕಾಕ್ಸ್‌ ಬಜಾರ್‌ನಲ್ಲಿರುವ ನಿರಾಶ್ರಿತ ಶಿಬಿರಗಳಲ್ಲಿ ಜನದಟ್ಟಣೆ ಹೆಚ್ಚಿದೆ. ಮಾ.14ರಿಂದ ಇಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದು, ಜನರು ಕನಿಷ್ಠ ಮೂಲಸೌಕರ್ಯಗಳೂ ಇಲ್ಲದೆ ಪರದಾಡುತ್ತಿದ್ದಾರೆ.

Advertisement

ನಿರಾಶ್ರಿತರ ಶಿಬಿರಗಳಲ್ಲಿರುವ ಇಬ್ಬರಿಗೆ ಕೋವಿಡ್‌ ಸೋಂಕು ತಗಲಿರುವುದು ಗುರುವಾರ ದೃಢಪಟ್ಟಿದೆ. ಬರೀ ಎರಡು ಪ್ರಕರಣವಾಗಿದ್ದರೂ ನಿರಾಶ್ರಿತ ಶಿಬಿರಗಳಲ್ಲಿರುವವರೆಲ್ಲ ಭಯದಿಂದ ನಡುಗ ತೊಡಗಿದ್ದಾರೆ. ಇಲ್ಲಿರುವವರ ಪರಿಸ್ಥಿತಿ ನಿಜಕ್ಕೂ ಯಾತನಾಮಯವಾಗಿದೆ ಎಂದು ವಿಶ್ವಸಂಸ್ಥೆಯ ವಲಸೆ ವಿಭಾಗ ಕೂಡ ಹೇಳಿದೆ.

ಒಂದೊಂದು ಕೋಣೆಯಲ್ಲಿ 10-12 ಮಂದಿ ವಾಸವಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಅಂತರ ಕಾಪಾಡಿಕೊಳ್ಳುವುದು ಸಾಧ್ಯವಾಗದ ವಿಚಾರ. ಅಲ್ಲದೆ ಸಾಬೂನು, ಶುದ್ಧ ನೀರು ಈ ಮುಂತಾದ ಮೂಲ ಸೌಕರ್ಯಗಳ ತೀವ್ರ ಕೊರತೆಯಿದೆ. ಕುಡಿಯುವ ನೀರು ಸಂಗ್ರಹಿಸಲು ತಾಸುಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಆಹಾರ ಹೊರಗಿನಿಂದ ಬಂದಾಗಬೇಕು. ಹೀಗಿರುವಾಗ ಸಾಮಾಜಿಕ ಅಂತರವನ್ನು ಪಾಲಿಸಲು ಅವರನ್ನು ನಿರ್ಬಂಧಿಸುವುದು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ರೋಹಿಂಗ್ಯಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿರುವುದು ಕಳವಳವನ್ನು ಹೆಚ್ಚಿಸಿರುವ ಇನ್ನೊಂದು ಅಂಶ. ಅಲೆಮಾರಿ ಬದುಕು ಸಾಗಿಸುತ್ತಿರುವ ಕಾರಣ ಅವರಿಗೆ ಲಸಿಕೆ ಕಾರ್ಯಕ್ರಮಗಳು ತಲುಪುತ್ತಿಲ್ಲ.

ಬಾಂಗ್ಲಾದೇಶದಲ್ಲಿ ಕೋವಿಡ್‌ ಸೋಂಕಿನ ಪ್ರಕರಣಗಳು ಕ್ಷಿಪ್ರವಾಗಿ ಹೆಚ್ಚುತ್ತಿರುವುದು ಕೂಡ ರೋಹಿಂಗ್ಯ ಕ್ಯಾಂಪ್‌ಗ್ಳಲ್ಲಿ ಭೀತಿಯ ಅಲೆಯೆಬ್ಬಿಸಿದೆ.

Advertisement

2,000 ವೆಂಟಿಲೇಟರ್‌ಗಳ
ದೇಶದಲ್ಲಿ ಒಟ್ಟಾರೆಯಾಗಿ ಇರುವುದು 2,000 ವೆಂಟಿಲೇಟರ್‌ಗಳು. ರೋಹಿಂಗ್ಯ ಕ್ಯಾಂಪ್‌ಗ್ಳಲ್ಲಿ ಎಲ್ಲಿಯಾದರೂ ಕೋವಿಡ್‌ ಹರಡಲು ತೊಡಗಿದರೆ ಬಾಂಗ್ಲಾದೇಶದ ವೈದ್ಯಕೀಯ ಸೌಲಭ್ಯಗಳು ಯಾವ ಮೂಲೆಗೂ ಸಾಲದು. ಐಸಿಯು ಸೌಲಭ್ಯಗಳೂ ಸಾಕಷ್ಟಿಲ್ಲ. ಹೀಗಾಗಿ ಕ್ಯಾಂಪ್‌ಗ್ಳನ್ನು ಸುರಕ್ಷಿತವಾಗಿಡಲು ದೇವರನ್ನು ಪ್ರಾರ್ಥಿಸುವುದೆಂದೇ ನಮ್ಮ ಮುಂದಿರುವ ಮಾರ್ಗ ಎಂದು ಮಾರ್ಮಿಕವಾಗಿ ಹೇಳುತ್ತಾರೆ ಸೇವ್‌ ದ ಚಿಲ್ಡ್ರನ್ಸ್‌ ಹೆಲ್ತ್‌ನ ನಿರ್ದೇಶಕಿ ಡಾ| ಶಮೀಮ್‌ ಜಹಾನ್‌.

ವೈರಸ್‌ ‌ ಜಗತ್ತಿನ ಅತಿ ದೊಡ್ಡ ನಿರಾಶ್ರಿತ ಶಿಬಿರಗಳಲ್ಲಿ ಒಂದಾಗಿರುವ ಕಾಕ್ಸ್‌ ಬಜಾರ್‌ಗೆ ಪ್ರವೇಶಿಸಿದೆ. ಸಾವಿರಾರು ಮಂದಿ ವೈರಸ್‌ಗೆ ಬಲಿಯಾಗುವ ಅಪಾಯ ಗೋಚರಿಸುತ್ತಿದೆ. ಹೀಗಾದರೆ ಬಾಂಗ್ಲಾದೇಶ ದಶಕಗಳಷ್ಟು ಹಿಂದಕ್ಕೆ ಹೋಗಲಿದೆ ಎಂದಿದ್ದಾರೆ ಡಾ| ಶಮೀಮ್‌.

ಇಂಟರ್‌ನೆಟ್‌ ಇಲ್ಲ
ಸುಳ್ಳು ಸಂದೇಶಗಳನ್ನು ಹರಡುವುದನ್ನು ತಡೆಯುವ ಸಲುವಾಗಿ ಬಾಂಗ್ಲಾ ಸರಕಾರ ನಿರಾಶ್ರಿತರ ಶಿಬಿರಗಳಲ್ಲಿ ಇಂಟರ್‌ನೆಟ್‌ ನಿಷೇಧಿಸಿದೆ. ಆದರೆ ಕೋವಿಡ್‌ ಹಾವಳಿ ಸಂದರ್ಭದಲ್ಲಿ ಇದರಿಂದ ಬಹಳ ಸಮಸ್ಯೆ ಎದುರಾಗಿದೆ. ಜನರಿಗೆ ವೈರಸ್‌ನ ಅಪಾಯದ ಕುರಿತು ನೈಜ ಮಾಹಿತಿಯನ್ನು ನೀಡಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ರಕ್ಷಣೆಗೆ ವಹಿಸಿಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿದುಕೊಳ್ಳಲು ಜನರಿಗೆ ಆಗುತ್ತಿಲ್ಲ. ಕೋವಿಡ್‌ಗೆ ಹೆದರಿ ನಿರಾಶ್ರಿತರಿಗಾಗಿ ದುಡಿಯುತ್ತಿರುವ ಸ್ವಯಂ ಸೇವಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಹೀಗೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಎರಗಿರುವುದರಿಂದ ರೋಹಿಂಗ್ಯಗಳು ಕಂಗಾಲಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next