Advertisement

ರಸ್ತೆ ಸನಿಹ ಅನಧಿಕೃತ ಕಟ್ಟಡ: ಸರ್ವೇಗೆ ಶಾಸಕರ ಸೂಚನೆ

10:36 PM Sep 27, 2019 | mahesh |

ಸುಳ್ಯ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸುಳ್ಯ ನಗರದೊಳಗೆ ರಸ್ತೆ ಪರಂಬೋಕು ಸ್ಥಳ ಅತಿಕ್ರಮಿಸಿ ನಿರ್ಮಿಸಿರುವ ಅನಧಿಕೃತ ಕಟ್ಟಡಗಳ ಬಗ್ಗೆ ನ.ಪಂ., ಕಂದಾಯ, ರಾ.ಹೆ. ಇಲಾಖೆ ಜಂಟಿ ಸರ್ವೇ ನಡೆಸುವಂತೆ ಶಾಸಕ ಎಸ್‌. ಅಂಗಾರ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಶಾಸಕ ಎಸ್‌. ಅಂಗಾರ ಅವರ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ಶುಕ್ರವಾರ ನಡೆದ ತಾ.ಪಂ. ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಅನಧಿಕೃತ ಕಟ್ಟಡಗಳ ಗುರುತಿಸುವಿಕೆ ವಿಚಾರದಲ್ಲಿ ಇಲಾಖೆಗಳು ನಿಧಾನಗತಿ ಧೋರಣೆ ತಳೆದಿರುವುದು ಗಮನಕ್ಕೆ ಬಂದಿದೆ. ಇದರಲ್ಲಿ ಯಾವುದೇ ಮುಲಾಜು ತೋರದೆ ಅತಿಕ್ರಮ ತೆರೆವುಗೊಳಿಸುವಂತೆ ಶಾಸಕರು ನಿರ್ದೇಶ ನೀಡಿದರು.

ತಹಶೀಲ್ದಾರ್‌ ಕುಂಞಿ ಅಹ್ಮದ್‌ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಈ ಬಗ್ಗೆ ಪತ್ರ ಬರೆದಿದ್ದು, ಅವರು ಅ. 15ರಂದು ಸರ್ವೆಗೆ ದಿನಾಂಕ ನಿಗದಿಪಡಿಸಿದ್ದಾರೆ. ನ.ಪಂ., ಕಂದಾಯ ಇಲಾಖೆ ಜಂಟಿ ಆಗಿ ಸರ್ವೇ ನಡೆಸಿ ವರದಿ ನೀಡಲಿದೆ ಎಂದರು.

ವಸತಿ ಸಹಾಯಧನ ವಿಳಂಬ
2011ರಿಂದ ಸರಕಾರದ ವಿವಿಧ ಯೋಜನೆಗಳಡಿ ಮನೆ ನಿರ್ಮಾಣ ಆರಂಭಿಸಿದ ಫಲಾನುಭವಿಗಳಿಗೆ ಸಹಾಯ ಧನ ಸಿಗದೆ ಅಪೂರ್ಣ ಸ್ಥಿತಿಯಲ್ಲಿ ಇರುವ ಬಗ್ಗೆ ಜಿ.ಪಂ. ಸದಸ್ಯ ಹರೀಶ್‌ ಕಂಜಿಪಿಲಿ ಗಮನ ಸೆಳೆದರು. ಕೆಲ ಮನೆಗಳ ಅಡಿಪಾಯ, ಗೋಡೆ ಹಂತದಲ್ಲಿ ಮನೆಗಳು ಬಾಕಿ ಆಗಿವೆ. ಇದಕ್ಕೆ ಏನು ಕಾರಣ ಎಂದು ಪ್ರಶ್ನಿಸಿದರು. ಉತ್ತರಿಸಿದ ವಸತಿ ನೋಡಲ್‌ ಅಧಿಕಾರಿ, ಈ ಹಿಂದೆ 60, 75 ಸಾವಿರ ರೂ. ಸಹಾಯಧನ ದೊರೆಯುತಿತ್ತು. ಆ ಮೊತ್ತ ಸಾಲದೆ ಬಾಕಿ ಆಗಿದೆ ಹಾಗೂ ಮರಳು ಸಮಸ್ಯೆ ಕಾರಣ ಎಂದು ಪಿಡಿಒಗಳು ಉತ್ತರ ನೀಡುತ್ತಾರೆ. ಈ ಸಾಲಿನಲ್ಲಿ 30 ಮನೆಗಳಿಗೆ ಸಹಾಯಧನ ಬಿಡುಗಡೆಗೆ ಬಾಕಿ ಇದೆ ಎಂದರು.

ಮರಳು ಸಮಸ್ಯೆ ಉಂಟಾಗಿರುವುದು 2014ರ ಅನಂತರ. ಇಲ್ಲಿ ಜಿಪಿಎಸ್‌, ಸಹಾಯಧ ಪಾವತಿಯಲ್ಲಿ ತಾರತಮ್ಯ ಮೊದಲಾದ ಕಾರಣಗಳು ಇವೆ. ಕೆಲವೆಡೆ ಫಲಾನುಭವಿಗಳಿಂದಾದ ಸಮಸ್ಯೆಗಳು ಇರಬಹುದು. ಇದನ್ನು ಬಗೆಹರಿಸಿ ಬಡವರ ಮನೆಗೆ ಸಹಾಯಧನ ನೀಡಬೇಕು ಎಂದು ಜಿ.ಪಂ. ಸದಸ್ಯ ಹರೀಶ್‌, ಎಸ್‌.ಎನ್‌. ಮನ್ಮಥ, ಆಶಾ ತಿಮ್ಮಪ್ಪ, ಪುಷ್ಪಾವತಿ ಬಾಳಿಲ ಆಗ್ರಹಿಸಿದರು. ಈ ಬಗ್ಗೆ ಸಂಪೂರ್ಣ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

Advertisement

ಬೇರೆ-ಬೇರೆ ಕಾನೂನು ಇದೆಯಾ?
ಅಜ್ಜಾವರ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬರ ರಬ್ಬರ್‌ ಕೃಷಿ ಇರುವ ಜಾಗವನ್ನು ಘನ ತ್ಯಾಜ್ಯ ವಿಲೇಗೆಂದು ಗುರುತಿಸಿರುವ ಬಗ್ಗೆ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಪ್ರಸ್ತಾವಿಸಿದರು. ಕಲ್ಲು- ಕೋರೆ ಗಣಿಗಾರಿಕೆಗೆ 15 ಎಕ್ರೆಗೂ ಅಧಿಕ ಭೂಮಿ ಒತ್ತುವರಿ ಮಾಡಿದ್ದರೂ ಇಲಾಖೆಯ ಕಣ್ಣಿಗೆ ಕಾಣುವುದಿಲ್ಲ. ಬಡ ಕುಟುಂಬದ ಭೂಮಿ ಮೇಲೆ ಏಕೆ ಕೆಂಗಣ್ಣು ಎಂದು ಪ್ರಶ್ನಿಸಿದರು. ಇದಕ್ಕೆ ಹರೀಶ್‌ ಕಂಜಿ ಪಿಲಿ ಧ್ವನಿಗೂಡಿಸಿ, ಶ್ರೀಮಂತರು ಏನು ಬೇಕಾದರೂ ಮಾಡಿದರೂ ಇಲಾಖೆ ಮೌನ ವಾಗಿರುತ್ತದೆ. ಬಡವರ ಮೇಲೆ ಮಾತ್ರ ದಬ್ಟಾಳಿಕೆ ಮಾಡಲಾಗುತ್ತಿದೆ. ಪರಿಶಿಷ್ಟ ಜಾತಿ ಕುಟುಂಬಕ್ಕೆ ಸೇರಿದ ಜಮೀನು ವಶಕ್ಕೆ ಪಡೆದುಕೊಳ್ಳಬಾರದು ಎಂದರು.

4,705 ತಿರಸ್ಕೃತ ಅರ್ಜಿ ಪುನರ್‌ ಪರಿಶೀಲನೆ
94ಸಿ ಯೋಜನೆಯಡಿ ಸಲ್ಲಿಕೆಯಾದ ಅರ್ಜಿಯಲ್ಲಿ 4,705 ಅರ್ಜಿಗಳು ನಿಯಮಕ್ಕೆ ಒಳಪಡದಿರುವ ಕಾರಣ ಅದನ್ನು ತಿರಸ್ಕೃರಿಸಲಾಗಿತ್ತು. ಈಗ ಸರಕಾರದ ಸೂಚನೆ ಮೇರೆಗೆ ಪುನರ್‌ ಪರಿಶೀಲನೆ ನಡೆಸಲಾಗುತ್ತಿದೆ. 350 ಹಕ್ಕುಪತ್ರ ವಿತರಣೆಗೆ ರೆಡಿ ಇದೆ ಎಂದು ತಹಶೀಲ್ದಾರ್‌ ಕುಂಞಿ ಅಹ್ಮದ್‌ ಹೇಳಿದರು. ಅರಣ್ಯ ಸಮಸ್ಯೆಯಿಂದ ತಿರಸ್ಕೃತಗೊಂಡಿರುವ ಹಾಗೂ ಸರಕಾರಿ ಭೂಮಿಯಲ್ಲಿ ಕೆಲವರಿಗೆ ಹಕ್ಕುಪತ್ರ ಕೊಟ್ಟು, ಬೇರೆ-ಬೇರೆ ಕಾರಣಗಳಿಂದ ಕೆಲವರಿಗೆ ಕೊಡಲು ಬಾಕಿ ಇರುವ ಅರ್ಜಿಗಳ ಬಗ್ಗೆ ಪೂರ್ಣ ವಿವರನ್ನು ಸಲ್ಲಿಸುವಂತೆ ಶಾಸಕ ಅಂಗಾರ ಅವರು ಸೂಚಿಸಿದರು.

ಸುಳ್ಯದಿಂದ ಕಡಬ ತಾಲೂಕಿಗೆ ಸೇರಿರುವ ಏಳು ಗ್ರಾಮಗಳಿಂದ 94ಸಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಆರ್‌ಟಿಸಿ ದಾಖಲು ಆಗಲು ಬಾಕಿ ಇದೆ ಎಂದು ಉಪಾಧ್ಯಕ್ಷೆ ಶುಭದಾ ಎಸ್‌.ರೈ ಹೇಳಿದರು. ಎಡಮಂಗಲ ಹೊರತುಪಡಿಸಿ ಉಳಿದೆಡೆ ಪಹಣಿ ದಾಖಲಾಗಿದ್ದು, 10 ದಿನಗಳಲ್ಲಿ ಆರ್‌ಟಿಸಿ ಆಗಲಿದೆ ಎಂದು ಕಡಬ ಕಂದಾಯ ನಿರೀಕ್ಷಕ ಆವಿನ್‌ ಕುಮಾರ್‌ ರಂಗತ್ತಮಲೆ ಹೇಳಿದರು.

ಈ ಬಗ್ಗೆ ಕಡಬ ಕಂದಾಯ ನಿರೀಕ್ಷಕ ಆವಿನ್‌ ಕುಮಾರ್‌ ಅವರು ಉತ್ತರಿಸಿಲು ಮುಂದಾದರು. ನಿಮ್ಮ ವ್ಯಾಪ್ತಿಗೆ ಸಂಬಂಧ ಪಡದ ವಿಚಾರ. ನೀವು ಉತ್ತರಿಸುವುದು ಸರಿಯಲ್ಲ ಎಂದು ಜಿ.ಪಂ. ಸದಸ್ಯ ಹರೀಶ್‌ ಅವರು ಆಕ್ಷೇಪ ವ್ಯಕ್ತಪಡಿಸಿದರು. ಯಾರಿಗೂ ತೊಂದರೆ ಆಗದಂತೆ ಪರ್ಯಾಯ ಜಮೀನು ಗುರುತಿಸುವಂತೆ ಶಾಸಕ ಅಂಗಾರ ಕಂದಾಯ ಇಲಾಖೆಗೆ ಸೂಚಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು, ಇಒ ಭವಾನಿ ಶಂಕರ ಎಚ್‌., ವೃತ್ತ ನಿರೀಕ್ಷಕ ಸತೀಶ್‌ ಕುಮಾರ್‌ ಉಪಸ್ಥಿತರಿದ್ದರು.

ಅಜ್ಜಾವರ ರಸ್ತೆ, ಅರಣ್ಯ ಭೂಮಿ ಅಡ್ಡಿ
ಸಿಆರ್‌ಎಫ್‌ ಅನುದಾನದಡಿ ಕಾಂತಮಂಗಲ-ಅಜ್ಜಾವರ ಅಂತಾರಾಜ್ಯ ಸಂಪರ್ಕ ರಸ್ತೆ ಅಭಿವೃದ್ಧಿ ಆಗುತ್ತಿದೆ. ಇದರಲ್ಲಿ 650 ಮೀಟರ್‌ ರಸ್ತೆ 5.5 ಮೀ. ಅಗಲಗೊಳಿಸಲು ಅರಣ್ಯ ಭೂಮಿ ಅಡ್ಡಿಯಾಗಿದೆ. ಸಿಆರ್‌ಎಫ್‌ ಯೋಜನೆಯಡಿ ಭೂಸ್ವಾಧೀನಕ್ಕೆ ಅನುದಾನ ಲಭ್ಯವಿಲ್ಲ. ಹಾಗಾಗಿ ಅಲ್ಲಿ ವಿಸ್ತರಣೆ ಬದಲು ಹಳೆ ರಸ್ತೆಯ ಸ್ಥಳಲ್ಲಿ ಹೊಸ ಡಾಮರು ಹಾಕುವ ಕಾರ್ಯ ಮಾಡಬೇಕಷ್ಟೆ ಎಂದರು. ಶಾಸಕ ಅಂಗಾರ ಮಾತನಾಡಿ, ಅಲ್ಲಿ ಮೋರಿ ಅಳವಡಿಕೆ ಅಗತ್ಯವಿದೆ. ಅರಣ್ಯ ಇಲಾಖೆ, ರಸ್ತೆ ಇಲಾಖೆ ಅಧಿಕಾರಿಗಳ ಜತೆ ಪ್ರತ್ಯೇಕವಾಗಿ ಚರ್ಚಿಸುವುದಾಗಿ ಹೇಳಿ ಚರ್ಚೆಗೆ ತೆರೆ ಎಳೆದರು.

26 ಕೋ.ರೂ. ಅನುದಾನ
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ-ಜಲಾಸುರು ಹಾಗೂ ಜಲಾಸುರು-ಸಂಪಾಜೆ ತನಕ ಕ್ರಮವಾಗಿ 14 ಕೋ.ರೂ. ಮತ್ತು 12 ಕೋ.ರೂ. ಅನುದಾನ ದಲ್ಲಿ ನಿಯತಕಾಲಿಕ ನಿರ್ವಹಣ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ಈ ಅನುದಾನದಡಿ ಮರು ಡಾಮರು ಹಾಕಲಾಗುವುದು ಎಂದು ರಾ.ಹೆ. ಇಲಾಖೆ ಅಧಿಕಾರಿಗಳು ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next