Advertisement

Road Mishap ಲಾರಿ ಢಿಕ್ಕಿ: ಯುವತಿ ಸಹಿತ ಇಬ್ಬರು ಟೆಕ್ಕಿಗಳ ಸಾವು

12:08 AM Jul 30, 2024 | Team Udayavani |

ಬೆಂಗಳೂರು: ಬೈಕ್‌ಗೆ ಬಿಬಿಎಂಪಿ ಕಸದ ಲಾರಿ ಢಿಕ್ಕಿ ಹೊಡೆದು ಇಬ್ಬರು ಸಾಫ್ಟ್ ವೇರ್‌ ಎಂಜಿನಿಯರ್‌ಗಳು ಮೃತಪಟ್ಟಿರುವ ಘಟನೆ ಹಲಸೂರು ಗೇಟ್‌ ಸಂಚಾರ ಠಾಣೆ ವ್ಯಾಪ್ತಿಯ ಶೇಷಾದ್ರಿ ರಸ್ತೆಯ ಕೆ.ಆರ್‌. ವೃತ್ತದ ಬಳಿ ರವಿವಾರ ರಾತ್ರಿ ಸಂಭವಿಸಿದೆ.

Advertisement

ಬಾಣಸವಾಡಿಯ ಪ್ರಶಾಂತ್‌ (25) ಮತ್ತು ಆಂಧ್ರಪ್ರದೇಶದ ಹಿಂದೂಪುರ ಮೂಲದ ಶಿಲ್ಪಾ (27) ಮೃತಪಟ್ಟವರು.

ಪ್ರಶಾಂತ್‌ ಹಾಗೂ ಶಿಲ್ಪಾ ಐಟಿಪಿಎಲ್‌ನಲ್ಲಿರುವ ಸಾಫ್ಟ್ ವೇರ್‌ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಸ್ನೇಹಿತರಾಗಿದ್ದರು. ಶಿಲ್ಪಾ ಅವರು ನಾಗವಾರದ ಪೇಯಿಂಗ್‌ ಗೆಸ್ಟ್‌ (ಪಿಜಿ)ನಲ್ಲಿ ವಾಸವಾಗಿದ್ದು, ರವಿವಾರ ರಾತ್ರಿ ಅವರಿಬ್ಬರೂ ಹೊಟೇಲೊಂದರ‌ಲ್ಲಿ ಊಟ ಮುಗಿಸಿ ಮರಳುತ್ತಿದ್ದಾಗ ಲಾರಿ ಢಿಕ್ಕಿ ಹೊಡೆಯಿತು.

ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ತತ್‌ಕ್ಷಣ ಸ್ಥಳೀಯರು ಬೌರಿಂಗ್‌ ಆಸ್ಪತ್ರೆಗೆ ಕರೆದೊಯ್ದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆಸ್ಪತ್ರೆ ಬಳಿ ಇಬ್ಬರ ಹೆತ್ತವರು ಹಾಗೂ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

ಚಾಲಕನ ಬಂಧನ
ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಅಪಘಾತ ಎಸಗಿದ ಚಾಲಕ ರಾಜಪ್ಪ ಲಾರಿಯನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದ. ಬಳಿಕ ಆತನನ್ನು ಬಂಧಿಸಿದ್ದಾರೆ.

Advertisement

ಮದುವೆ ಬಗ್ಗೆ ಪುತ್ರಿ ಜತೆಗೆ ಚರ್ಚಿಸಿದ್ದ ತಂದೆ
ಮೃತ ಶಿಲ್ಪಾ ಅವರ ತಂದೆ ವೆಂಕಟರಾಮ ರೆಡ್ಡಿಗೆ ಮೂವರು ಹೆಣ್ಣು ಮಕ್ಕಳು. ಶಿಲ್ಪಾ ಕೊನೆಯವರು. ಈ ವರ್ಷ ಮಗಳ ಮದುವೆ ಮಾಡಲು ಕುಟುಂಬ ನಿರ್ಧರಿಸಿತ್ತು. ಹೀಗಾಗಿ ತಂದೆ ಚಿನ್ನಾಭರಣಗಳನ್ನು ಖರೀದಿಸಿದ್ದರು. ರವಿವಾರ ಬೆಳಗ್ಗೆ ಮಗಳಿಗೆ ಫೋನ್‌ ಮಾಡಿ ಮದುವೆ ಬಗ್ಗೆ ಮಾತನಾಡಿದ್ದರು.

ಹುಟ್ಟಿದ ಆಸ್ಪತ್ರೆಯಲ್ಲೇ ಸಾವು!
ನನ್ನ ಮಗ ಇದೇ ಆಸ್ಪತ್ರೆಯಲ್ಲಿ ಹುಟ್ಟಿದ್ದ. ಇದೀಗ ಅದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಪ್ರಶಾಂತ್‌ ತಂದೆ ಕಣ್ಣೀರಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next