Advertisement

ಕಾಪು: ಬಸ್ ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು

08:53 PM Dec 09, 2022 | Team Udayavani |

ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಕೊಪ್ಪಲಂಗಡಿಯಲ್ಲಿ ಬಸ್‌ ಢಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.

Advertisement

ಕಾಪು ಕೊಪ್ಪಲಂಗಡಿ ನಿವಾಸಿ ಸ್ವಪ್ನಾ ರವಿ ಶೆಟ್ಟಿ (55) ಮೃತರು. ಅವರು ತವರುಮನೆ ಕಾಪು ಬೈರುಗುತ್ತುವಿಗೆ ತೆರಳಿ ಅಲ್ಲಿಂದ ಕೊಪ್ಪಲಂಗಡಿಯಲ್ಲಿರುವ ತನ್ನ ಮನೆಗೆ ಮರಳುತ್ತಿದ್ದರು. ಕೊಪ್ಪಲಂಗಡಿ ಮಸೀದಿ ಮುಂಭಾಗದಲ್ಲಿ ರಸ್ತೆ ದಾಟಿ ಡಿವೈಡರ್‌ ಮೇಲೆ ನಿಂತಿದ್ದ ವೇಳೆಯಲ್ಲಿ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಶಾಲಾ ಬಸ್‌ ಅವರಿಗೆ ಢಿಕ್ಕಿ ಹೊಡೆದಿದೆ.

ಬಸ್‌ ಢಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಬಳಿಕ ಅವರ ತಲೆಯ ಮೇಲೆ ಬಸ್‌ನ ಚಕ್ರ ಹರಿದಿದ್ದು, ತಲೆ ಬುರುಡೆ ಒಡೆದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾ.ಹೆ. 66ರ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿದ್ದ ಮಹಿಳೆಯ ಮೃತದೇಹವನ್ನು ಆಸಿಫ್‌ ಅವರ ಸಹಕಾರದೊಂದಿಗೆ ಎಸ್‌ಡಿಪಿಐ ಆ್ಯಂಬುಲೆನ್ಸ್‌ ಮೂಲಕ ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಅಪಘಾತಕ್ಕೆ ಕಾರಣವಾದ ಬಸ್‌ ಅನ್ನು ವಶಕ್ಕೆ ಪಡೆದುಕೊಂಡಿರುವ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಮಹಿಳೆಯ ಪತಿ ರವಿ ಶೆಟ್ಟಿ ಅವರು ಈ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಪ್ರಸ್ತುತ ಕೊಪ್ಪಲಂಗಡಿಯಲ್ಲಿ ಮನೆ ಮಾಡಿ ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಿದ್ದರು. ಮೃತ ಸ್ವಪ್ನಾ ಶೆಟ್ಟಿ ಪತಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಮೃತ ಸ್ವಪ್ನಾ ಶೆಟ್ಟಿ ಅವರ ನೆರೆಮನೆಯ ಕಿಶೋರ್‌ ಶೆಟ್ಟಿ ಅವರು ಎರಡೂವರೆ ತಿಂಗಳ ಹಿಂದೇ ಇದೇ ಸ್ಥಳದಲ್ಲಿ ಬೈಕ್‌ ಢಿಕ್ಕಿ ಹೊಡೆದು ಮೃತಪಟ್ಟಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next