Advertisement

ಕಾರು ಢಿಕ್ಕಿ: ರಸ್ತೆ ದಾಟುತ್ತಿದ್ದ ಟಿಪ್ಪರ್‌ ಚಾಲಕ ಸಾವು

09:46 AM Jan 03, 2020 | Hari Prasad |

ಬೈಂದೂರು: ಕಾರು ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಯಡ್ತರೆಯಲ್ಲಿ ಬುಧವಾರ ಸಂಭವಿಸಿದೆ.

Advertisement

ಘಟನೆ ವಿವರ
ಬೈಂದೂರು ಗ್ರಾಮದ ಗಂಗನಾಡಿನ ಕೆ. ವಿ. ಬಾಬು ಅವರು ಅಣ್ಣ ರಾಜು ಅವರ ಜತೆಯಲ್ಲಿ ಬುಧವಾರ ಬೆಳಗ್ಗೆ 4 ಗಂಟೆಗೆ ಪಡುವರಿಯ ಮಂಜುನಾಥ ಶೆಟ್ಟಿ ಎಂಬವರ ಟಿಪ್ಪರ್‌ನಲ್ಲಿ ಸಾಹೇಬ್ರಕಟ್ಟೆಯ ನಂಚಾರಿನಿಂದ ಜಲ್ಲಿ ಲೋಡ್‌ ಮಾಡಿಕೊಂಡು ಬರಲು ಹೊರಟಿದ್ದರು.

ಟಿಪ್ಪರ್‌ನಲ್ಲಿ ರಾಜು ಚಾಲಕರಾಗಿದ್ದರು ಹಾಗೂ ಬಾಬು ಕ್ಲೀನರ್‌ ಆಗಿದ್ದರು. ಸುಮಾರು 4.30ಕ್ಕೆ ಯಡ್ತರೆ ಗ್ರಾಮದ ಎ.ಕೆ. ರೆಸಿಡೆನ್ಸಿ ಎದುರು ರಾಷ್ಟ್ರೀಯ ಹೆದ್ದಾರಿ 66ರ ಪೂರ್ವ ಭಾಗದ ಸರ್ವಿಸ್‌ ರಸ್ತೆಯಲ್ಲಿ ರಾಜು ಟಿಪ್ಪರನ್ನು ನಿಲ್ಲಿಸಿ, ತನ್ನ ರೂಮಿಗೆ ಹೋಗಿ ಬರುತ್ತೇನೆಂದು ರಸ್ತೆ ದಾಟಲು ಡಿವೈಡರ್‌ ಬಳಿ ನಿಂತಿದ್ದರು.

ಆಗ ಶಿರೂರು ಕಡೆಯಿಂದ ಉಪ್ಪುಂದದ ಕಡೆಗೆ ಬಂದ ಬಿಳಿ ಬಣ್ಣದ ಕಾರು ರಾಜು ಅವರಿಗೆ ಢಿಕ್ಕಿ ಹೊಡೆಯಿತು. ಪರಿಣಾಮ ಅವರು ಸುಮಾರು 20 ಅಡಿಗಳಷ್ಟು ದೂರ ಹೋಗಿ ಬಿದ್ದಿದ್ದು, ಕಾರು ಪರಾರಿಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ರಾಜು ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಾಬು ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next