ಸುಳ್ಯ: ತಂದೆ ತಾಯಿಯೊಂದಿಗೆ ರಾತ್ರಿ ವೇಳೆ ನಡೆದುಕೊಂಡು ಹೋಗುತ್ತಿದ್ದ 10 ವರ್ಷದ ಬಾಲಕನಿಗೆ ಬೈಕೊಂದು ಗುದ್ದಿದ ಕಾರಣ ಬಾಲಕ ಸಾವನ್ನಪ್ಪಿದ ಘಟನೆ ಇಲ್ಲಿನ ನೆಟ್ಟಾರು ಸಮೀಪ ಬಾಯಂಬಾಡಿ ಎಂಬಲ್ಲಿ ಬುಧವಾರ ತಡರಾತ್ರಿ ನಡೆದಿದೆ.
10 ವರ್ಷದ ಅವಿನಾಶ್ ಮೃತಪಟ್ಟ ಬಾಲಕ. ಬೈಕ್ ಗುದ್ದಿದ ಪರಿಣಾಮ ಗಾಯಗೊಂಡಿದ್ದ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು,. ಆದರೆ ಅಷ್ಟರಲ್ಲಿ ಬಾಲಕ ಮೃತಪಟ್ಟಿದ್ದಾನೆ.
ಮೃತಪಟ್ಟ ಬಾಲಕ ಕೊಳ್ತಿಗೆ ಗ್ರಾಮದ ಎಕ್ಕಡ್ಕ ಮನೆ ಮೋಹನ್ ಮತ್ತು ಶೇಷಮ್ಮ ದಂಪತಿಯ ಪುತ್ರ ಅವಿನಾಶ್ ತನ್ನ ತಂದೆ ತಾಯಿಯೊಂದಿಗೆ ಬಾಯಂಬಾಡಿ ದೇವಸ್ಥಾನದ ಜಾತ್ರೋತ್ಸವಕ್ಕೆ ಹೋಗಿ ರಾತ್ರಿ ಮನೆಗೆ ನಡೆದುಕೊಂಡು ಹಿಂತಿರುಗುತ್ತಿದ್ದಾಗ ಮೋಟಾರು ಬೈಕೊಂದು ಗುದ್ದಿ ಪರಾರಿಯಾಗಿದೆ. ಬೈಕ್ ಗುದ್ದಿದ ರಭಸಕ್ಕೆ ಬಾಲಕನಿಗೆ ಮುಖ, ತಲೆಗೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿತ್ತು.
ಗಾಯಗೊಂಡ ಬಾಲಕನನ್ನು ಕೂಡಲೆ ಬೆಳ್ಳಾರೆ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಿ ಕೂಡಲೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಆಸ್ಪತ್ರೆಯಲ್ಲಿ ಬಾಲಕನನ್ನು ಪರೀಕ್ಷಿಸಿದ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ದೃಢಪಡಿಸಿದರು.
ಬಾಲಕನಿಗೆ ಗುದ್ದಿದ ಅಪರಿಚಿತ ಬೈಕ್ ಸವಾರನ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.