Advertisement

ಗುರು-ಶಿಷ್ಯರ ಸಂಬಂಧ ಅಮೂಲ್ಯ: ಭಾನುಪ್ರಕಾಶ್‌

11:47 AM Feb 05, 2020 | Naveen |

ಶೃಂಗೇರಿ: ಮೆಕಾಲೆಯ ಉದ್ಯೋಗ ಆಧಾರಿತ ಅಂಕಗಳಿಕೆಯ ಫಲಾಪೇಕ್ಷೆ ಶಿಕ್ಷಣವನ್ನೇ ಕೊಡುತ್ತಾ ಮಾನಸಿಕ ಗುಲಾಮಗಿರಿಯನ್ನು ಈಗಲೂ ಒಪ್ಪಿಕೊಂಡಿದ್ದೇವೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಮತ್ತೂರಿನ ಭಾನುಪ್ರಕಾಶ್‌ ವಿಷಾದಿಸಿದರು.

Advertisement

ಹರಿಹರಪುರ ಚಿತ್ರಕೂಟದ ಪ್ರಬೋಧಿನಿ ಗುರುಕುಲದ ಅರ್ಧಮಂಡಲೋತ್ಸವದ ಅಂಗವಾಗಿ ಪಟ್ಟಣದ ಜಿಎಸ್‌ಬಿ ಸಭಾಭವನದಲ್ಲಿ ಏರ್ಪಡಿಸಿದ್ದ ಗುರುಕುಲ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ರಿಟಿಷರು ಗುರುಕುಲ ವಿದ್ಯಾಭ್ಯಾಸ ಪರಂಪರೆ ನಾಶಮಾಡಿ ಶಾಶ್ವತವಾಗಿ ಸ್ವಾಭಿಮಾನದ ಬದುಕಿಗೆ ಕೊಡಲಿ ಏಟು ನೀಡಿದರು. ದೇಶದ ಮೇಲೆ ಆಕ್ರಮಣ ಮಾಡಿದ ಮೊಗಲರು ನಮ್ಮ ಶ್ರದ್ಧಾಕೇಂದ್ರ ನಾಶ ಮಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಆಗುತ್ತಿವೆ ಆದರೂ ಸ್ವಾತಂತ್ರ್ಯದ ನಂತರ ನಮ್ಮದೇ ಆದ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರುವಲ್ಲಿ ನಾವು ಸೋತಿದ್ದರಿಂದ, ಅಂತಃಸತ್ವದ ಶಿಕ್ಷಣದ ಬದಲಿಗೆ ನಿಶ್ಚಿತ ಗುರಿ ಇಲ್ಲದ ಮೆಕಾಲೆ ಪದ್ಧತಿಯನ್ನೇ ಅನುಸರಿಸಿಕೊಂಡು ಬಂದಿದ್ದೇವೆ ಎಂದರು.

ಪರಕೀಯರ ಆಳ್ವಿಕೆಗೂ ಮೊದಲು 30 ಸಾವಿರ ಗುರುಕುಲಗಳು ನಮ್ಮಲ್ಲಿದ್ದವು. ಆರ್ಷಗುರುಕುಲ ಶಿಕ್ಷಣದಲ್ಲಿ ಭಗವಂತನ ಚಿಂತನೆ, ಪ್ರಕೃತಿಯ ಆರಾಧನೆಯೊಂದಿಗೆ ನಮ್ಮೊಳಗಿನ ವಿದ್ವತ್ತನ್ನು ಅರಳಿಸುವ ಬೋಧನೆ ಇತ್ತು. ಆದರೆ, ಇಂದಿಗೂ ನಮ್ಮ ಮಕ್ಕಳಿಗೆ ಬೇಕಾಗಿರುವ ಶಿಕ್ಷಣ ಗುರುತಿಸಿ, ಅದನ್ನೇ ಕೊಡಿಸುವಲ್ಲಿ ನಾವು ಸಂಪೂರ್ಣವಾಗಿ ಸೋತ್ತಿದ್ದೇವೆ. ಗುರು-ಶಿಷ್ಯರ ಸಂಬಂಧ ಅಮೂಲ್ಯವಾದದ್ದು. ಪ್ರಶ್ನೆ ಮಾಡುವ ಮನೋಭಾವವನ್ನು ಶಿಷ್ಯನಲ್ಲಿ ಮೂಡಿಸುವುದೇ ಸರಿಯಾದ ಶಿಕ್ಷಣವಾಗಿದೆ. ಶ್ರೀಮಂತ, ಬಡವ, ಜಾತಿ ಬೇಧವಿಲ್ಲದೇ ಯಾವುದೇ ಶುಲ್ಕ ಪಡೆಯದೇ ಶಿಕ್ಷಣ ನೀಡುವುದು ಗುರುಕುಲವಾಗಿದೆ. ಗುರುಕುಲದಲ್ಲಿ ಗುರು ತನ್ನ ಶಿಷ್ಯನನ್ನು ಸದಾಕಾಲ ತನ್ನೊಡನೆ ಇರಿಸಿಕೊಂಡು ಸರ್ವತೋಮುಖ ಮಾರ್ಗದರ್ಶನ ಮಾಡುತ್ತಾನೆ. ಇನ್ನಾದರೂ ಆಡಳಿತಗಾರರು ಎಚ್ಚೆತ್ತುಕೊಂಡು ಗುರುಕುಲ ಪದ್ಧತಿಯ ಶಿಕ್ಷಣವನ್ನು ದೇಶದಲ್ಲಿ ಜಾರಿಗೆ ತರಬೇಕು ಎಂದರು.

ಪ್ರಬೋಧಿನಿ ಗುರುಕುಲದ ಪ್ರಧಾನ ವ್ಯವಸ್ಥಾಪಕ ಉಮೇಶ್‌ ಮಾತನಾಡಿ, ಪ್ರಬೋಧಿ ನಿ ಗುರುಕುಲಕ್ಕೆ 24 ವರ್ಷ ಪೂರ್ಣಗೊಂಡ ಕಾರಣ ಈಗ ಅರ್ಧ ಮಂಡಲೋತ್ಸವವನ್ನು ಆಚರಿಸಲಾಗುತ್ತಿದೆ. ಇಲ್ಲಿ ಬಾಲಕರಿಗೆ ಮಾತ್ರ ಅವಕಾಶ. ವಿಟ್ಲದ ಮೈತ್ರೇಯಿ ಗುರುಕುಲದಲ್ಲಿ ಬಾಲಕಿಯರಿಗೆ ಮತ್ತು ಚನ್ನೇನಹಳ್ಳಿಯ ವೇದವಿಜ್ಞಾನ ಗುರುಕುಲದಲ್ಲಿ ಉನ್ನತ ಶಿಕ್ಷಣ ನೀಡಲಾಗುತ್ತಿದೆ. ಗುರುಕುಲ ಶಿಕ್ಷಣದ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸುವ ಸಲುವಾಗಿ ಈ ವರ್ಷ ರಾಜ್ಯಾದ್ಯಂತ ಕಾರ್ಯಕ್ರಮ ನಡೆಸಲಾಗುತ್ತಿದೆ. ಫೆ.9ರಂದು ಅರ್ಧಮಂಡಲೋತ್ಸವದ ಸಮಾರೋಪ ಸಮಾರಂಭವು ಗುರುಕುಲದಲ್ಲಿ ನಡೆಯುತ್ತಿದ್ದು ರಾ.ಸ್ವ.ಸಂಘದ ಸರಸಂಘಚಾಲಕ ಮೋಹನ್‌ ಭಾಗ್ವತ್‌ ಹಾಗೂ ಅಮೆರಿಕದ ಭಾರತೀಯ ಸಾಂಸ್ಕೃತಿಕ ವಿದ್ವಾಂಸ ಡೆವಿಡ್‌ ಫ್ರಾಲಿ ಭಾಗವಹಿಸಲಿದ್ದಾರೆ ಎಂದರು.

Advertisement

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಎಂ.ಶ್ರೀನಿವಾಸ್‌ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಧಮಂಡಲೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎಚ್‌ .ಬಿ.ರಾಜಗೋಪಾಲ್‌, ಗುರುಕುಲದ ಆಚಾರ್ಯ ರಾಕೇಶ್‌ ಇದ್ದರು. ಸುರೇಶ್ಚಂದ್ರ ನಿರೂಪಿಸಿದರು. ಎ.ಎಸ್‌.ನಯನ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next