Advertisement

210 ಆಟೋ ರಿಕ್ಷಾ ಪಾರ್ಕ್‌ ಅಧಿಕೃತಕ್ಕೆ ಪ್ರಸ್ತಾವ : ಮಹಾನಗರ ಪಾಲಿಕೆ ಸಾಮಾನ್ಯ ಸಭೆ

10:42 PM Feb 25, 2022 | Team Udayavani |

ಲಾಲ್‌ಬಾಗ್‌: ಮಹಾನಗರ ಪಾಲಿಕೆಯ 210 ಕಡೆಗಳಲ್ಲಿ ಆಟೋ ರಿಕ್ಷಾ ಪಾರ್ಕ್‌ಗಳನ್ನು ಅಧಿಕೃತಗೊಳಿಸುವ ಪ್ರಸ್ತಾವ ಪಾಲಿಕೆಯಲ್ಲಿ ಶುಕ್ರವಾರ ಮಂಡನೆಯಾಗಿದ್ದು, ಪ್ರತೀ ವಾರ್ಡ್‌ನಲ್ಲಿರುವ ಸ್ಥಳಾವಕಾಶ ಸಹಿತ ಎಲ್ಲ ವಿಚಾರಗಳನ್ನು ಅವಲೋಕಿಸಿ ಮುಂದಿನ ತೀರ್ಮಾನ ಕೈಗೊಳ್ಳಲು ಪಾಲಿಕೆ ನಿರ್ಧರಿಸಿದೆ.

Advertisement

ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮೇಯರ್‌ ಪ್ರೇಮಾನಂದ ಶೆಟ್ಟಿ ಅವರ ಆಡಳಿತ ಅವಧಿಯ ಕೊನೆಯ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಪಾಲಿಕೆ ವ್ಯಾಪ್ತಿಯ ಆಟೋ ರಿಕ್ಷಾಗಳನ್ನು ನಿಲ್ಲಿಸುವ ಸಂಬಂಧ ಆಟೋ ರಿಕ್ಷಾ ಮಾಲಕ/ಚಾಲಕರ ಸಂಘದ ಪದಾಧಿಕಾರಿಗಳೊಂದಿಗೆ ಸಂಚಾರ ಉಪವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರು ಸ್ಥಳ ಪರಿಶೀಲನೆ ನಡೆಸಿ, ಪರಿಷ್ಕೃತ ಆಟೋ ರಿಕ್ಷಾ ಪಾರ್ಕ್‌ಗಳನ್ನು ಅಧಿಕೃತಗೊಳಿಸಲು ತಾತ್ಕಾಲಿಕ ಆದೇಶ ನೀಡು ವಂತೆ ಪಾಲಿಕೆಗೆ ಕೋರಿದ್ದಾರೆ ಎಂದು ಮೇಯರ್‌ ಸಭೆ ಯಲ್ಲಿ ತಿಳಿಸಿದರು. ಎ.ಸಿ. ವಿನಯ್‌ರಾಜ್‌, ನವೀನ್‌ ಡಿ’ಸೋಜಾ, ಎಂ. ಶಶಿಧರ ಹೆಗ್ಡೆ ಸಹಿತ ಇತರರು ಮಾತನಾಡಿ, ವಾರ್ಡ್‌ ವ್ಯಾಪ್ತಿಯ ಸ್ಥಳಾವಕಾಶದ ಬಗ್ಗೆ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಬೇಕು ಎಂದರು. ಪರಿಶೀಲನೆ ನಡೆದ ಬಳಿಕ ಇದನ್ನು ಅನುಮೋದಿಸಲಾಗುವುದು ಎಂದು ಮೇಯರ್‌ ತಿಳಿಸಿದರು. ಎಸಿಪಿ ನಟರಾಜ್‌ ಸಭೆಯಲ್ಲಿ ಭಾಗವಹಿಸಿದ್ದರು.

ಮಂಗಳಾದೇವಿ ಸನಿಹ ಬಹುಉಪಯೋಗಿ ಕಾಮಗಾರಿ
ಮಂಗಳಾದೇವಿ ವಾರ್ಡ್‌ನಲ್ಲಿ ಜಪ್ಪು ಹೆರಿಗೆ ಕೇಂದ್ರ, ಡಿಸ್ಪೆನ್ಶರಿ, ಪಶುವೈದ್ಯಕೀಯ ಚಿಕಿತ್ಸಾಲಯ, ನಗರ ನೈರ್ಮಲ್ಯ ನಿರೀಕ್ಷಕರ ಕಚೇರಿ ಹಾಗೂ ವಸತಿಗೃಹಗಳು ಬಹಳ ಹಳೆಯದಾಗಿದ್ದು ಇದನ್ನು ತೆರವುಗೊಳಿಸಿ ಇಲ್ಲಿ ಬಹು ಉಪಯೋಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಪ್ರವೀಣ್‌ಚಂದ್ರ ಆಳ್ವ ಮಾತನಾಡಿ, ಸ್ವಯಂಘೋಷಿತ ಆಸ್ತಿ ತೆರಿಗೆ ಬಹುತೇಕ ಮಂದಿ ಪಾವತಿಸಿದ್ದಾರೆ. ಬಾಕಿ ಇಟ್ಟವರಿಗೆ ದಂಡ ವಿಧಿಸುತ್ತಿದ್ದಾರೆ. ಇದರಿಂದ ಬಹುತೇಕ ಬಾಕಿಯವರು ಪಾವತಿಸುತ್ತಿಲ್ಲ ಎಂದರು. ಮೇಯರ್‌ ಮಾತನಾಡಿ, ಈ ವಿಚಾರವನ್ನು ಅಧಿಕಾರಿಗಳ ಜತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಸೆಂಟ್ರಲ್‌ ಮಾರುಕಟ್ಟೆ ಕೇಳುವವರೇ ಇಲ್ಲ!
ಮಾಜಿ ಮೇಯರ್‌ ಎಂ. ಶಶಿಧರ ಹೆಗ್ಡೆ ಮಾತನಾಡಿ, ಸೆಂಟ್ರಲ್‌ ಮಾರುಕಟ್ಟೆಯನ್ನು ಕೆಡವಿ 2 ವರ್ಷವಾಗುತ್ತಿವೆ. ವಾರ್ಷಿಕ 9 ಲಕ್ಷ ರೂ. ಆದಾಯ, 51 ಲಕ್ಷ ರೂ. ಟೆಂಡರ್‌ ಆದಾಯ, ಸಾವಿರಾರು ಮಂದಿಗೆ ಉದ್ಯೋಗ, ಬದುಕು ಕಲ್ಪಿಸುವ ಮಾರುಕಟ್ಟೆಯನ್ನು ಈಗ ಕೇಳುವವರೇ ಇಲ್ಲ. ಇಲ್ಲಿ ಈಗ ತ್ಯಾಜ್ಯ ಹಾಕುವ ಸ್ಥಳವಾಗಿ ಪರಿವರ್ತಿತವಾಗಿದೆ. ಅವಶೇಷಗಳ ರೀತಿಯಲ್ಲಿ ಇಲ್ಲಿನ ಪರಿಸರವಿದೆ ಎಂದರು.

Advertisement

ಇದನ್ನೂ ಓದಿ : ಪ್ರೊ ಕಬಡ್ಡಿ: ಪಾಟ್ನಾ ಪೈರೇಟ್ಸ್‌ ಪತನ, ದಬಾಂಗ್‌ ಡೆಲ್ಲಿ ಚಾಂಪಿಯನ್‌

ಅಧಿಕಾರಿಗಳು ಕಚೇರಿಯಲ್ಲಿರಬೇಕು!
ಮಾಜಿ ಮೇಯರ್‌ ಭಾಸ್ಕರ್‌ ಕೆ. ಮಾತನಾಡಿ, ಅಪರಾಹ್ನ 3ರ ಬಳಿಕ ಅಧಿಕಾರಿಗಳು ಪಾಲಿಕೆಯಲ್ಲಿ ಸಾರ್ವಜನಿಕರಿಗೆ ಲಭ್ಯರಿರಬೇಕು ಎಂಬ ನಿಯಮವಿದ್ದರೂ ಪಾಲಿಸುತ್ತಿಲ್ಲ ಎಂದು ದೂರಿದರು. ಮೇಯರ್‌ ಮಾತನಾಡಿ, ಮಧ್ಯಾಹ್ನ ಬಳಿಕ ಕಚೇರಿಯಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯರಿಲ್ಲದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಾಲಿಕೆಯ ನಾಮನಿರ್ದೇಶಿತ ಸದಸ್ಯರಾಗಿ ನೂತನವಾಗಿ ನೇಮಕವಾದ ಪ್ರಶಾಂತ್‌ ಕುಮಾರ್‌ ಪ್ರಮಾಣವಚನ ಸ್ವೀಕರಿಸಿ ದರು. ಉಪಮೇಯರ್‌ ಸುಮಂಗಲಾ, ಲೋಕೇಶ್‌ ಬೊಳ್ಳಾಜೆ, ಸಂದೀಪ್‌, ಶೋಭಾ ರಾಜೇಶ್‌, ಲೀಲಾವತಿ, ಉಪ ಆಯುಕ್ತರು (ಆಡಳಿತ)ಭಾಸ್ಕರ್‌ ಉಪಸ್ಥಿತರಿದ್ದರು.

ಕುಡಿಯುವ ನೀರಿನ ದರ ಇಳಿಕೆ?
ಮೇಯರ್‌ ಪ್ರೇಮಾನಂದ ಶೆಟ್ಟಿ ಮಾತನಾಡಿ, ಮಂಗಳೂರಿನ ಕುಡಿಯುವ ನೀರಿನ ದರ ಇಳಿಕೆ ಮಾಡಲು ಪರಿಷ್ಕರಣೆ ಮಾಡು ವಂತೆ ಈಗಾಗಲೇ ಸರಕಾರದ ನೆಲೆಯಲ್ಲಿ ಮಾತುಕತೆ ನಡೆಸಲಾಗಿದೆ. ರಾಜ್ಯ ಮಟ್ಟದ ಅಧಿಕಾರಿಗಳ ಜತೆಗೆ ಚರ್ಚೆ ಆಗಿದೆ. ಇದರಂತೆ ಗೃಹಬಳಕೆ ನೀರಿನ ದರ ಕಡಿಮೆ ಮಾಡುವ ಬಗ್ಗೆ ದರ ಪರಿಷ್ಕೃರಣೆಗೆ ಮೌಖೀಕ ಒಪ್ಪಿಗೆ ದೊರೆತಿದ್ದು, ಒಂದೆರಡು ದಿನದಲ್ಲಿ ಈ ಕುರಿತು ಸರಕಾರದಿಂದ ಆಧಿಕೃತ ಆದೇಶ ಬರಲಿದೆ ಎಂದರು. ಎ.ಸಿ. ವಿನಯ್‌ರಾಜ್‌ ಮಾತನಾಡಿ, “ಮೌಖೀಕ ಒಪ್ಪಿಗೆಯನ್ನು ಪಾಲಿಕೆಯ ನಿಯಮಾವಳಿ ಪ್ರಕಾರ ಒಪ್ಪಲು ಸಾಧ್ಯವಿಲ್ಲ. ಸರಕಾರದ ಆದೇಶ ಬಂದಿದ್ದರೆ ಮಾತ್ರ ತಿಳಿಸಿ’ ಎಂದರು. “ಕೆಲವೇ ದಿನದಲ್ಲಿ ಸರಕಾರ ದಿಂದ ಅಧಿಕೃತ ಆದೇಶ ಬರಲಿದೆ’ ಎಂದು ಮೇಯರ್‌ ತಿಳಿಸಿದರು.

ಸಮಗ್ರ ಅಭಿವೃದ್ಧಿಗೆ ಒತ್ತು: ಮೇಯರ್‌
ಮೇಯರ್‌ ಅವಧಿಯ ಕೊನೆಯ ಪಾಲಿಕೆ ಸಭೆಯಲ್ಲಿ ಮಾತನಾಡಿದ ಪ್ರೇಮಾನಂದ ಶೆಟ್ಟಿ, ಒಂದು ವರ್ಷದ ಅವಧಿಯಲ್ಲಿ ಪಾಲಿಕೆ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗೆ, ಆಡಳಿತ ಸುಧಾರಣೆಗೆ ಆದ್ಯತೆ ನೀಡಲಾಗಿದೆ. ಎಲ್ಲ ಕಾರ್ಯಕ್ರಮವನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಪ್ರಯತ್ನ ಮಾಡ ಲಾಗಿದೆ. ಜಲಸಂಸ್ಕರಣ ಘಟಕದ ಬಹುಕಾಲದ ಸಮಸ್ಯೆಗೆ ಪರಿಹಾರ ನೀಡಲಾಗಿದೆ. ಉದ್ದಿಮೆ ಪರವಾನಿಗೆ ಸಹಿತ ಆನ್‌ಲೈನ್‌ ವ್ಯವಸ್ಥೆ ಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ ಎಂದರು. ಮುಖ್ಯಸಚೇತಕ ಸುಧೀರ್‌ ಶೆಟ್ಟಿ ಮಾತನಾಡಿ, “ಒಂದು ವರ್ಷದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಗೆ ವೇಗ ನೀಡಲಾಗಿದೆ. ಪಡೀಲ್‌-ಪಂಪ್‌ವೆಲ್‌ ರಸ್ತೆಗೆ ವಿಸ್ತರಣೆ ಭಾಗ್ಯ ದೊರಕಿದೆ. ಆನ್‌ಲೈನ್‌ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ. ಜನಸಾಮಾನ್ಯರ ಜತೆಗೆ ಬೆರೆಯುವ ಹಾಗೂ ಅವರ ಕಷ್ಟ ಗಳಿಗೆ ಸ್ಪಂದಿಸುವ ಮೂಲಕ ಪ್ರೇಮಾನಂದ ಶೆಟ್ಟಿ ಅಜಾತಶತ್ರುವಾಗಿ ಆಡಳಿತ ನಡೆಸಿದ್ದಾರೆ’ ಎಂದರು.

ಎ.ಸಿ. ವಿನಯ್‌ರಾಜ್‌ ಮಾತನಾಡಿ, ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅಭಿನಂದನ ಭಾಷಣ ಮಾಡುವುದು ಬೇಡ. ಅಭಿವೃದ್ಧಿ ಎಂಬುದು ನಿರಂತರ ಪ್ರಕ್ರಿಯೆ. ಹಿಂದಿನ ಆಡಳಿತ ಅವಧಿಯಲ್ಲಿ ಮಾಡಿರುವುದುನ್ನು ಈಗ ಮುಂದುವರಿಸಲಾಗುತ್ತಿದೆ ಎಂದರು. ಈ ವೇಳೆ ಆಡಳಿತ ಹಾಗೂ ವಿಪಕ್ಷದ ಸದಸ್ಯರ ಮಧ್ಯೆ ಮಾತಿನ ಚಕಮಕಿ ಉಂಟಾಯಿತು.

Advertisement

Udayavani is now on Telegram. Click here to join our channel and stay updated with the latest news.

Next