Advertisement

ಕ್ರಾಂತಿವೀರನ ಅಂಡಮಾನಿನ ದಿನಗಳು

08:28 PM Oct 25, 2019 | Team Udayavani |

“ಭಾರತ ದರ್ಶನ’ ಉಪನ್ಯಾಸದ ಆಯ್ದ ಭಾಗ ಇದು. ಅಂಡಮಾನ್‌ನ ಸೆಲ್ಯುಲರ್‌ ಜೈಲಿನಲ್ಲಿ ಸ್ವಾತಂತ್ರ್ಯ ವೀರ ವಿ.ಡಿ. ಸಾವರ್ಕರ್‌ ಅನುಭವಿಸಿದ ಕರಾಳ ಶಿಕ್ಷೆಯ ಚಿತ್ರಣ ಮೂಡಿಸುವ, ಈ ಮಾತುಗಳು, “ಭಾರತ ದರ್ಶನ’ದ 2ನೇ ಭಾಗದಲ್ಲಿದೆ…

Advertisement

ಅಂಡಮಾನಿನ ಸೆಲ್ಯುಲರ್‌ ಜೈಲಿನಲ್ಲಿ ಆ ಜೈಲರ್‌, ಸಾವರ್ಕರ್‌ಗೆ 3ನೇ ಮಹಡಿಯ ಕತ್ತಲೆ ಕೋಣೆಗೆ ತಳ್ಳಿದ. ಅಲ್ಲಿ ಹತ್ತುವಾಗ ಒಂದು ಕೊಳ. ಪೇದೆ ಹೇಳ್ತಾನೆ, “ಇಲ್ಲಿ ಸ್ನಾನ ಮಾಡು’ ಅಂತ. ಸಾವರ್ಕರ್‌ಗೆ ಬಹಳ ಸಂತೋಷ ಆಯ್ತು. ನಾಲ್ಕು ದಿನದಿಂದ ಸ್ನಾನ ಆಗಿರಲಿಲ್ಲ. ಸ್ನಾನವೆಂದರೆ, ಅವರಿಗೆ ಖುಷಿ. ಚಿಕ್ಕ ವಯಸ್ಸಿನಲ್ಲಿ ಗೋದಾವರಿಯಲ್ಲಿ ಸ್ನಾನ ಮಾಡಿದ್ರು. ಕೆರೆಯಲ್ಲಿ, ತಮ್ಮೂರಿನ ಹೊಂಡದಲ್ಲಿ ಆನಂದದಿಂದ ಸ್ನಾನ ಮಾಡಿದ್ರು. ಸ್ನಾನ ಮಾಡಿದ್ರೆ ಸಮಾಧಾನ ಆಗುತ್ತೆ ಅಂತ, ಬಟ್ಟೆ ಬಿಚ್ಚಿ ಏಕ್‌ಧಂ ಡೈವ್‌ ಮಾಡಿದ್ರು.

ಜೈಲಿನ ಅಧಿಕಾರಿ ಹೇಳಿದ: “ತಾಂಬ್‌.. ನಿಲ್ಲು… ನಾನು ಪಾನಿ ಲೇವ್‌ ಅಂತೀನಿ, ಒಂದು ಚೊಂಬು ತಗೋ. ಮೈಮೇಲೆ ಹಾಕ್ಕೊಂಡ್‌ ಉಜ್ಜಿಕೋ. ಮತ್ತೆ ಪಾನೀ ಲೇವ್‌ ಅಂತೀನಿ. ಎರಡು ಚೊಂಬು ತಗೋ. ಅದನ್ನು ಮೈಮೇಲೆ ಹಾಕ್ಕೊಂಡು ಒರೆಸಿಕೋ’. ಸಾವರ್ಕರ್‌ಗೆ ಬಹಳ ನಿರಾಸೆ ಆಯ್ತು. ನೀರು ಅಂದ್ರೆ ಪ್ರೀತಿ. ಆ ನೀರು ಮೈಮೇಲೆ ಬೀಳ್ತಿದ್ದಂತೆ ಕೂದಲು ನೆಟ್ಟಗಾಯ್ತು. ಮೈಯೆಲ್ಲ ಉರೀತು. ಉಪ್ಪುನೀರು! ನರಕಯಾತನೆ.

ಆ ಜೈಲಲ್ಲಿ ತೆಂಗಿನ ನಾರನ್ನು ಬಿಚ್ಚೋದು, ಹೊಸೆಯೋ ಕೆಲಸ. ದಿನವೂ 30 ಪೌಂಡ್‌ ದಿವಸ ತೆಗೆಯಬೇಕಿತ್ತು. ರಕ್ತಸಿಕ್ತ ಕೈ. ರಾತ್ರಿ ಬ್ಯಾರಿ ಬಂದು, ನಾರನ್ನು ತೂಕ ಮಾಡ್ತಾನೆ. ಇವರು ಹೊಸೆದಿದ್ದು, 30 ಪೌಂಡೂ ಆಗಿರ್ಲಿಲ್ಲ. ಮೂರೂವರೆ ಪೌಂಡ್‌ ಕಡಿಮೆ ಇತ್ತು. “ಏನು, ಬ್ರಿಟಿಷರಿಗೆ ಚಾಲೆಂಜ್‌ ಹಾಕ್ತೀಯಾ? 30 ಪೌಂಡ್‌ ಹೊಸೆಯೋಕೆ ಆಗೋಲ್ವಾ, ನಿಂಗೆ? ನಿನಗಿಂತ ಕೆಟ್ಟ ಕ್ರಿಮಿನಲ್ಸ್‌ಗಳು 35- 40 ಪೌಂಡ್‌ ಹೊಸೀತಾರೆ. ಭಾರಿ ಮಾತಾಡ್ತೀಯ.

ಹೇಳಿದ್‌ ಕೆಲ್ಸ ಮಾಡೋಕ್ಕಾಗಲ್ಲ. 30 ಪೌಂಡ್‌ ಹೊಸೆಯೋಕೆ ತಾಕತ್ತಿಲ್ಲ ನಿಂಗೆ’ ಅಂತ ಬ್ಯಾರಿ ಹೇಳಿದಾಗ, ಸಾವರ್ಕರ್‌ ಹೇಳ್ತಾರೆ: “ನಂಗೊಂದು ಪದ್ಯ ಬರೀ ಅಂತ ಹೇಳು. ಐದು ನಿಮಿಷದಲ್ಲಿ ಬರೆದುಕೊಡ್ತೀನಿ. ಆ 30-40 ಪೌಂಡ್‌ ತೆಗೀತಾರಲ್ಲ, ಅವರಿಗೆ ಪದ್ಯ ಬರೆಯಲು ಹೇಳಿದ್ರೆ, ಆಗೋಲ್ಲಪ್ಪಾ… ಯಾರಿಂದ ಏನ್‌ ಕೆಲ್ಸ ಮಾಡಿಸ್ಬೇಕು ಅಂತ ತಲೆಯಿಲ್ಲದ ನಿಮ್ಮಂಥವರ ಕೈಯಲ್ಲಿ ಏನು ಮಾತಾಡೋದು?’.

Advertisement

ಆ ಅಧಿಕಾರಿಗಳು ಸಾವರ್ಕರ್‌ರನ್ನು ಹೆಜ್ಜೆ ಹೆಜ್ಜೆಗೂ ತಿವಿಯುತ್ತಿದ್ದರು. ನಾಲ್ಕು ತಿಂಗಳು ಆ ಮಹಾಪುರುಷನ ಕೈಗೆ ಬೇಡಿಗಳನ್ನು ಹಾಕಿ, ಗೋಡೆ ಕಡೆಗೆ ಮುಖ ಮಾಡಿ ನಿಲ್ಲಿಸಿದ್ರು. ಸೊಂಟ ಮತ್ತು ಕಾಲುಗಳು ನೆಟ್ಟಗಿರುವ ಹಾಗಿಲ್ಲ. ಬಗ್ಗಿ ನಿಂತ್ಕೊàಬೇಕು. ಐದು ನಿಮಿಷ ಬಗ್ಗಿ ನಿಲ್ಲಿ ನೀವು, ನಿಲ್ಲೋಕ್ಕಾಗಲ್ಲ. 4 ತಿಂಗಳು ಹಗಲು, ರಾತ್ರಿ ಅವರು ನಿಂತಿದ್ದಾರೆ. ಗಾಣದಿಂದ ಎಣ್ಣೆ ತೆಗೆಯೋದು ಇನ್ನೊಂದು ಕಠೊರ ಕೆಲಸ. ಒಣ ಕೊಬ್ಬರಿಯಾದರೆ, ಪರ್ವಾಗಿಲ್ಲ. ಹಸಿಕೊಬ್ಬರಿ ಹಾಕಿದಾಗ, ಸಿಕ್ಕಾಪಟ್ಟೆ ದಣಿವಾಗುತ್ತಿತ್ತು. ಮೈಮೇಲೆ ಬರೀ ಲಂಗೋಟಿಯೇ ಇರಬೇಕು. ಬಟ್ಟೆ ಹಾಕ್ಕೊಳ್ಳೋ ಹಾಗಿಲ್ಲ.

ಸುಸ್ತಾಯ್ತು ಅಂತ ಒಂದು ಕ್ಷಣ ನಿಂತರೆ, ತಲೆ ತಿರುಗಿತು ಅಂತ ಒಂದು ಕ್ಷಣ ನಿಂತರೆ, ಪೊಲೀಸ್‌ ಜಮಾದಾರ್‌ ಹಿಂದುಗಡೆಯಿಂದ ಚಾಟಿಯಲ್ಲಿ ಹೊಡೀತಿದ್ದ. ಊಟ ಕೊಡ್ತಿದ್ರು. ಏನು ಊಟ? ಹಿರಿಯ ಕೈದಿಗಳು, ಅಲ್ಲೇ ಹತ್ತಿರದ ಕಾಡಿಗೆ ಹೋಗಿ, ಒಂದಿಷ್ಟು ಸೊಪ್ಪು ಕಡಿದುಕೊಂಡು, ಬರೋರು. ಅದನ್ನು ಕೊಚ್ಚಿ ಬಿಸಿನೀರಿಗೆ ಹಾಕೋರು. ಅದೇ ಊಟ. ಅವರು ಸೊಪ್ಪು ಕಡಿದುಕೊಂಡು ಬರೋವಾಗ ಕತ್ತಲು ಆಗ್ತಿತ್ತು. ಆ ಸೊಪ್ಪಿನಲ್ಲಿ ಹಾವುಗಳು ಇರುತ್ತಿದ್ದವು. ಕತ್ತಲಲ್ಲಿ ಅವೂ ಕಾಣಿಸುತ್ತಿರಲಿಲ್ಲ. ಅವನ್ನೂ ಕೊಚ್ಚಿ, ಕುದಿವ ನೀರಿಗೆ ಹಾಕೋರು. ಎಷ್ಟೋ ಸಲ ಸಾವರ್ಕರ್‌ ಅವರ ತಟ್ಟೆಯಲ್ಲಿ, ಚೇಳಿನ, ಹಾವುಗಳ ತುಂಡುಗಳು ಸಿಕ್ಕಿದ್ದೂ ಇದೆ.

ಬೆಳಗ್ಗೆ 6 ಗಂಟೆಗೆ ಕೈದಿಗಳ ಕರ್ತವ್ಯ ಪ್ರಾರಂಭ. ಅಂದ್ರೆ, ಐದೂವರೆ ಒಳಗೆ ಊಟ ಮುಗಿದಿರಬೇಕು. ಐದೂವರೆಗೆ ಮುಗೀಬೇಕಾದ್ರೆ, ಅವರು 3 ಗಂಟೆಗೇ ಊಟ ತಯಾರು ಮಾಡ್ಬೇಕು. 500-600 ಜನರಿಗೆ ಅಡುಗೆ. ಮೂರೂವರೆಗೆ ಎದ್ದು ಆ ಸೀನಿಯರ್‌ ಕೈದಿಗಳು ಅಡುಗೆ ಮಾಡ್ಬೇಕು. ಅವರಿಗೆ ಕಣ್ಣಲ್ಲಿ ನಿದ್ದೆ. ಆ ನಿದ್ದೆಯ ಕಂಗಳಲ್ಲಿ, ಒಂದು ಎಳ್ಳೆಣ್ಣೆಯ ಕಂದೀಲು ಇಟ್ಕೊಂಡು, ಏನು ಗೊಟಾಯಿಸೋದು? ಎಷ್ಟೋ ಸಲ, ಎಳ್ಳೆಣ್ಣೆ ಅಡುಗೆ ಬೀಳ್ತಿತ್ತು. ಆ ಊಟ ತಿನ್ನುವಾಗ, ಎಳ್ಳೆಣ್ಣೆಯ ಗಬ್ಬು ವಾಸನೆ. ಸುಖವಾಗಿ ನಮಗೆ ಸ್ವಾತಂತ್ರ್ಯ ಸಿಗಲೇ ಇಲ್ಲ. ಅದರ ಹಿಂದೆ ಸಾವರ್ಕರ್‌ರಂಥ ಮಹನೀಯರ ತ್ಯಾಗದ ಚಿತ್ರಗಳಿವೆ.

* ಬಿ.ವಿ. ವಿದ್ಯಾನಂದ ಶೆಣೈ

Advertisement

Udayavani is now on Telegram. Click here to join our channel and stay updated with the latest news.

Next