Advertisement

IAS ನಿವೃತ್ತಿ, ಕೃಷಿಯಲ್ಲಿ ಪ್ರವೃತ್ತಿ

11:59 PM Feb 23, 2024 | Team Udayavani |

ಎರಡು ದಶಕಗಳ ಹಿಂದೆ ಉಡುಪಿ ಜಿ.ಪಂ. ಸಿಇಒ ಆಗಿದ್ದ ಆರ್‌.ಶಾಂತರಾಜ್‌ ಸುಮಾರು ಮೂರು ತಿಂಗಳು ಕಾಲ ಪ್ರಭಾರ ಜಿಲ್ಲಾಧಿಕಾರಿಯೂ ಆಗಿದ್ದರು. ಪ್ರಭಾರ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಕೊಲ್ಲೂರು ದೇವಳದ ಆಡಳಿತಾ ಧಿಕಾರಿಯೂ ಆಗಿದ್ದರು. ಒಂದು ದಿನ ಶಾಂತರಾಜ್‌ ಸಕುಟುಂಬಿಕರಾಗಿ ಬಸ್‌ ಏರಿ ಕೊಲ್ಲೂರು ದೇವಸ್ಥಾನಕ್ಕೆ ತೆರಳಿ ಸರತಿ ಸಾಲಿನಲ್ಲಿ ನಿಂತೇ ದರ್ಶನ ಪಡೆದರು ಎಂಬ ಸುದ್ದಿ ತಿಳಿದು ಮಾಧ್ಯಮದವರು ತಡಕಾಡಿದರೂ ಶಾಂತರಾಜ್‌ ಅದು ದೊಡ್ಡ ವಿಷಯವೇನಲ್ಲ ಎಂಬ ರೀತಿಯಲ್ಲಿ ವರ್ತಿಸಿದ್ದರು.

Advertisement

ಇವರು ಚಿಕ್ಕಮಗಳೂರಿನಲ್ಲಿ ಜಿ.ಪಂ. ಸಿಇಒ, ವಿಜಯಪುರ ಜಿಲ್ಲಾಧಿಕಾರಿ, ಶಿವಮೊಗ್ಗ, ಮೈಸೂರು ವಿ.ವಿ.ಯ ಕುಲಸಚಿವ, ಬೆಂಗಳೂರಿನಲ್ಲಿ ಆಹಾರ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ಹೆಚ್ಚುವರಿ ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಹೀಗೆ ವಿವಿಧ ಸ್ತರಗಳಲ್ಲಿ ಕಾರ್ಯನಿರ್ವಹಿಸಿದ್ದರು.
ಅಧೀನ ಸಿಬಂದಿಗೆ “ಸರಕಾರ ನಿಗದಿಪಡಿಸಿದ ಸಮಯವಾದ ಅನಂತರ ಕಚೇರಿಯಲ್ಲಿರುವುದು ಬೇಡ’ ಎಂದು ಹೇಳುವ ಅಧಿಕಾರಿ ಯಾರಾದರೂ ಸಿಗಬಹುದೆ? ವಿಶೇಷವಾಗಿ ಮಹಿಳೆಯರಿಗೆ ಇದು ಅನ್ವಯವಾಗಿತ್ತು. ಶಾಂತರಾಜ್‌ ಹೀಗೆ ಆದೇಶ ಕೊಟ್ಟ ಅಧಿಕಾರಿ. ನಿಮ್ಮ ನಿಗದಿತ ಸಮಯದಲ್ಲಿದ್ದು ಕೆಲಸವನ್ನು ಸರಿಯಾಗಿ ಮಾಡಿದರೆ ಧಾರಾಳ ಸಾಕು. ನಿಮ್ಮ ಸಮಯ ಮೀರಿಯೂ ಕಚೇರಿಯಲ್ಲಿದ್ದರೆ ಅಲ್ಲೇನೋ ಏರುಪೇರು ಇದೆ ಎಂದರ್ಥ ಎನ್ನುತ್ತಿದ್ದರು.

ಮೀಟಿಂಗ್‌= ಸಮಯ ಪೋಲು?
ಸರಕಾರ ಮತ್ತು ಸಂಘಸಂಸ್ಥೆಗಳಿಗೆ ಮೀಟಿಂಗ್‌ಗಳನ್ನು ನಡೆಸುವುದು ಕೆಲಸದಷ್ಟೇ ಸಾಮಾನ್ಯ ಎಂದು ಕಂಡುಬರುತ್ತದೆ. ಮೀಟಿಂಗ್‌ಗಳೆಂದರೆ ಸಮಯ ಪೋಲು ಮಾಡುವ, ಮೀಟಿಂಗ್‌ ಆಯೋಜಿಸುವವರಿಗೆ ತಮ್ಮ ಅಧಿಕಾರ ತೋರಿಸುವ ಚಪಲ ಎಂದು ಬಹಳ ಬಾರಿ ಅನಿಸದೆ ಇರದು. ಪ್ರಗತಿ ಪರಿಶೀಲನ ಸಭೆಯಲ್ಲಿ ಹತ್ತಾರು ಇಲಾಖೆಗಳ ಅಧಿಕಾರಿಗಳನ್ನು ಕೂರಿಸಿಕೊಂಡು ಮೇಲಧಿಕಾರಿಗಳು (ಸಚಿವರೂ ಸಹಿತ) ತಮ್ಮ ಅಧಿಕಾರ ವ್ಯಾಪ್ತಿಯನ್ನು ತೋರಿಸುತ್ತಾರೆ. ಒಂದು ವಿಷಯ ಚರ್ಚೆಗೆ ಬರುವಾಗ ಇತರ ಹತ್ತಾರು ಇಲಾಖೆಗಳ ಅಧಿಕಾರಿಗಳು, ಸಿಬಂದಿ ಸಮಯ ವ್ಯರ್ಥ ಮಾಡುವುದು ದೇಶಕ್ಕೆ, ಸರಕಾರಕ್ಕೆ, ಸಮಾಜಕ್ಕೆ ನಷ್ಟ ಎಂದು ಯಾರಿಗಾದರೂ ಅನ್ನಿಸಿದ್ದಿದೆಯೆ? ಹೀಗೆಂದು ಶಾಂತರಾಜರಿಗೆ ಅನ್ನಿಸಿತು. ಅವರು ಪ್ರತೀ ಇಲಾಖೆಯ ಅಧಿಕಾರಿಯನ್ನು ಕರೆದು ಸಭೆ ನಡೆಸುತ್ತಿದ್ದರು. ಸ್ಥಳದಲ್ಲಿಯೇ ಕೆಲವು ನಿರ್ಣಯಗಳನ್ನು ಕೊಡುತ್ತಿದ್ದರು, ಕೆಲವು ಆದೇಶಗಳನ್ನು ಹೊರಡಿಸುತ್ತಿದ್ದರು. ಅಲ್ಲಿ ಒಂದು ಇಲಾಖೆಯ ಅಧಿಕಾರಿಗೆ ಮಾತ್ರ ಮೀಟಿಂಗ್‌. ಹೀಗೆ ಇತರ ಇಲಾಖೆಗಳಿಗೂ ಸಮಯ ನಿಗದಿಪಡಿಸುವ ಮೂಲಕ ಇತರರ ಸಮಯ ವ್ಯರ್ಥ ಮಾಡಲು ಬಿಡುತ್ತಿರಲಿಲ್ಲ.

ಎಷ್ಟೋ ಮೀಟಿಂಗ್‌ಗಳಲ್ಲಿ ಅಧಿಕಾರಿಗಳು ಪಾಲ್ಗೊಂಡಿರುವುದಿಲ್ಲ. ಇದಕ್ಕೆ ಹಲವು ಕಾರಣಗಳು ಇವೆ. ಪಾಲ್ಗೊಳ್ಳದ ಅಧಿಕಾರಿಗಳಿಗೆ ಒಂದಿಷ್ಟು ಜರೆಯುವುದು, ಇವು ಮಾಧ್ಯಮಗಳಲ್ಲಿ ಬೆಳಕು ಕಾಣುವುದೇ ವಿನಾ ಮತ್ತೇನೂ ಸಾಧನೆಯಾಗುವುದಿಲ್ಲ. ಇದನ್ನು ಗಮನಿಸಿದ ಶಾಂತರಾಜ್‌ ಜಿ.ಪಂ. ಮತ್ತು ಜಿಲ್ಲಾಧಿಕಾರಿ ಅಧೀನದ ಎಲ್ಲ ಇಲಾಖೆಗಳ ವಾರ್ಷಿಕ ಸಭೆಗಳನ್ನು ನಡೆಸುವ ವಾರ್ಷಿಕ ಕ್ಯಾಲೆಂಡರ್‌ ಜಾರಿಗೆ ತಂದರು. ವರ್ಷ ಆರಂಭದಲ್ಲಿಯೇ ಅಧಿಕಾರಿಗಳಿಗಾಗಲೀ, ಜನಪ್ರತಿನಿಧಿಗಳಿಗಾಗಲೀ ಯಾವ ದಿನ ಯಾವ ಸಭೆಗಳಿರುತ್ತವೆ ಎಂಬ ಸಂದೇಶ ಸಿಕ್ಕಿರುತ್ತದೆ. ಇದು ಬಹಳ ಯಶಸ್ಸು ಆಗಿತ್ತು.

ಕೇಸ್‌ ವರ್ಕರ್‌ರಿಂದ ಮೆನೇಜರ್‌, ಅನಂತರ ಸಹಾಯಕ ನಿರ್ದೇಶಕರು (ಎಡಿ), ಉಪನಿರ್ದೇಶಕರು(ಡಿಡಿ), ಜಂಟಿ ನಿರ್ದೇಶಕರು(ಜೆಡಿ) ಅಲ್ಲಿಂದ ಆಯುಕ್ತರ ವರೆಗೆ ಒಂದೇ ವಿಷಯದ ಕಡತಗಳು ಚಲನೆಯಾಗುವುದನ್ನು ಕಂಡ ಆಯುಕ್ತರಾಗಿದ್ದ ಶಾಂತರಾಜರು ಎಡಿ, ಡಿಡಿ, ಜೆಡಿಯವರಿಗೆ ಪ್ರತ್ಯೇಕ ಕೆಲಸ ನಿಗದಿಗೊಳಿಸಿ ಆಯಾ ಕಡತಗಳು ಮಾತ್ರ ಎಡಿಯಿಂದ, ಡಿಡಿಯಿಂದ, ಜೆಡಿಯಿಂದ ನೇರ ಆಯುಕ್ತರಿಗೆ ರವಾನೆಯಾಗುವಂತೆ ಮಾಡಿದ್ದರು. ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ನ್ನು ಮೊದಲ ಬಾರಿ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ನೋಡಿಕೊಂಡದ್ದು ಇವರೇ. ಕಡತಗಳನ್ನು ತಯಾರಿಸುವಲ್ಲಿ ಅವರ ನೈಪುಣ್ಯ ನಮಗೆಲ್ಲರಿಗೂ ಮಾದರಿ ಎಂದು ಬೆಂಗಳೂರಿನಲ್ಲಿ ಸಮಾಜಕಲ್ಯಾಣ ಇಲಾಖೆ ಎಸ್‌ಸಿ, ಎಸ್‌ಟಿ, ಟಿಎಸ್ಪಿ ನಿರ್ದೇಶಕಿಯಾಗಿರುವ ಊರ್ಮಿಳಾ ಬೆಟ್ಟು ಮಾಡುತ್ತಾರೆ. ಸ್ವಂತ ಕೆಲಸಕ್ಕೆಂದೂ ಸರಕಾರಿ ವಾಹನವನ್ನು ಬಳಸದೆ ಇರುವುದು ಇವರ ಮಟ್ಟಿಗೆ ಸಾಮಾನ್ಯ ಉದಾಹರಣೆ.

Advertisement

ಭೂಮಿ-ಚಿನ್ನ: ಯಾವುದು ಸಂಪತ್ತು?
2014ರಲ್ಲಿ ನಿವೃತ್ತರಾದ ಶಾಂತರಾಜ್‌, ಕೋಲಾರದಿಂದ 15 ಕಿ.ಮೀ. ದೂರದ ಮಜರಾ ಅಗ್ರಹಾರದಲ್ಲಿ ಪಿತ್ರಾರ್ಜಿತವಾಗಿ ಬಂದ ಕೃಷಿ ಭೂಮಿಯಲ್ಲಿ ಭತ್ತ, ಬಾಳೆ, ಮಾವು ಇತ್ಯಾದಿಗಳನ್ನು ಬೆಳೆಸುವ ಅಪ್ಪಟ ಕೃಷಿಕರಾಗಿದ್ದಾರೆ. ಇವರಿಗೆ ಕೃಷಿಕರಾಗಿಯೇ ಇರಬೇಕೆಂಬ ಅನಿವಾರ್ಯತೆ ಇಲ್ಲ. ಒಟ್ಟಾರೆ ಸಮಾಜಹಿತ ಇದ್ದರೆ, ಪ್ರಾಮಾಣಿಕ ಇಚ್ಛಾಶಕ್ತಿ ಇದ್ದವರಿಗೆ ಮಾತ್ರ ಇದು ಸಾಧ್ಯ. ಲೋಕದ ಆಹಾರ ಗ್ರಿಡ್‌ಗೆ ಇವರ ತೋಟವೂ ಪೂರೈಸುತ್ತಿದೆ. ಅಂತರ್ಜಲದ ಕೊರತೆ ಕಾಣುವ ಈ ಕಾಲಘಟ್ಟದಲ್ಲಿ ಬೇಸಾಯ ತನ್ನದೇ ಕೊಡುಗೆ ನೀಡುತ್ತದೆ ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲ. “ಭೂಮಿ ದೊಡ್ಡ ಸಂಪತ್ತೋ? ಚಿನ್ನ ದೊಡ್ಡ ಸಂಪತ್ತೋ? ಒಂದು ಕೆ.ಜಿ. ಚಿನ್ನ ಸಾವಿರ ವರ್ಷಗಳ ಬಳಿಕವೂ ಒಂದು ಕೆ.ಜಿ. ಮಾತ್ರ ಇರುತ್ತದೆ. ಭೂಮಿಗೆ ಒಂದು ಹಣ್ಣು ಹಾಕಿದರೆ ಲಕ್ಷ ಹಣ್ಣು ಬೆಳೆಯುತ್ತದೆ. ಈಗ ಹೇಳಿ ಯಾವುದು ದೊಡ್ಡ ಸಂಪತ್ತು?’ ಎಂಬ ಮಾತನ್ನು ಕೀರ್ತಿಶೇಷರಾಗಿರುವ ವಿಜಯಪುರದ ಶ್ರೀಸಿದ್ದೇಶ್ವರ ಸ್ವಾಮೀಜಿ ಹೇಳುತ್ತಿದ್ದರು. ಈ ನೆಲೆಯಲ್ಲಿಯೂ ಸಕಲ ಜೀವಿಗಳ ಜೀವ ಉಳಿಸುವ ಆಹಾರಧಾನ್ಯವನ್ನು ನಿರಂತರ ಪೂರೈಸುವ ಕೃಷಿಕ ಎಷ್ಟು ದೊಡ್ಡವನು?

ಸುಳ್ಳಿಲ್ಲದ ಸರದಾರ !
ಶಾಂತರಾಜ್‌ರನ್ನು ಬಲ್ಲವರು ವಿಭಿನ್ನವಾಗಿ ಬಣ್ಣಿಸುತ್ತಾರೆ. “ಎಲ್ಲರೂ ಇದೇ ರೀತಿ ಇರಬೇಕೆಂಬುದು ನಮ್ಮ ಕಾನೂನಿನ ಆಶಯ. ಹೀಗಿರುವುದು ವಿಶೇಷವೇನಲ್ಲ ಎಂದು ತಿಳಿದ ಶಾಂತರಾಜ್‌ರು ಇದೇ ಕಾರಣಕ್ಕಾಗಿ ಪ್ರಚಾರಕ್ಕಾಗಿ ಕಾಣಿಸಿಕೊಳ್ಳುವವರಲ್ಲ, ಹೇಳಿಕೊಳ್ಳುವವರೂ ಅಲ್ಲ. ಹೀಗೆ ಇರುವವರು ಕಡಿಮೆ ಇರುವುದರಿಂದ ಇಂತಹವರು ಎದ್ದು ಕಾಣುತ್ತಾರೆ’ ಎಂಬುದು ನಿವೃತ್ತ ಅಪರ ಜಿಲ್ಲಾಧಿಕಾರಿ ಸುಬ್ರಾಯ ಕಾಮತ್‌ ಅಭಿಪ್ರಾಯ. “ಶಾಂತರಾಜ್‌ ಕಟ್ಟಾ ಪ್ರಾಮಾಣಿಕ, ಒಂದೇ ಒಂದು ಸುಳ್ಳು ಅವರ ಬಾಯಿಂದ ಬರುವುದು ಸಾಧ್ಯವಿಲ್ಲ. ಅವರು ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದಾಗ ಕೆಎಎಸ್‌ ಪರೀಕ್ಷೆ ಕಟ್ಟಿ ಅತ್ಯುತ್ತಮ ಅಂಕ ಗಳಿಸಿದ್ದರಿಂದ ಏನೂ ಖರ್ಚಿಲ್ಲದೆ ಸರಕಾರಿ ಸೇವೆಗೆ ಸೇರಿದರು. ನಿಮ್ಮಂತಹವರಿಗೆ ಸರಕಾರಿ ಕೆಲಸ ಸೂಕ್ತವಲ್ಲ. ನಿಮ್ಮಂತಹ ಬುದ್ಧಿವಂತ ಉಪನ್ಯಾಸಕರಾಗಿದ್ದರೆ ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರಯೋಜನವಾಗುತ್ತದೆಂದು 40 ವರ್ಷಗಳ ಹಿಂದೆ ಹೇಳಿದ್ದೆ. ಅನಂತರ ಅವರಿಗೆ ಬಹಳಷ್ಟು ಸಮಸ್ಯೆಗಳು ಎದುರಾದವು. ಆದರೆ ಅವರು ಪ್ರಾಮಾಣಿಕರಾದ್ದರಿಂದ ಸಮಸ್ಯೆಗಳನ್ನು ಸೋಲು ಎಂದು ಒಪ್ಪಿಕೊಳ್ಳುವವರೇ ಅಲ್ಲ’ ಎಂಬ ಅಭಿಪ್ರಾಯ ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಕಾಲೇಜಿನಲ್ಲಿ ಅವರ ಜತೆ ಸಸ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಉಡುಪಿಯ ಪ್ರೊ| ಅರವಿಂದ ಹೆಬ್ಟಾರ್‌ ಅವರದು.

ಸಮತೋಲನದ ಹಿಂದೆ…
ಏನಕೇನ ಪ್ರಕಾರೇಣ ಅಕ್ರಮವಾಗಿ ಸಂಪತ್ತನ್ನು ಕೂಡಿ ಹಾಕುವವರೇ ಢಾಳಾಗಿ ಕಣ್ಣಿಗೆ ರಾಚುವಾಗ ಶಾಂತರಾಜ್‌ ಅಂತಹವರು ವಿಶೇಷವಾಗಿ ಕಾಣುತ್ತಾರೆ. ಯಾವುದೇ ಸಂಸ್ಥೆಗಳಲ್ಲಿ ಕಟ್ಟುನಿಟ್ಟಿನ ಪ್ರಾಮಾಣಿಕರು ಎಷ್ಟು ಮಂದಿ ಇರುತ್ತಾರೋ ಅವರಿಗಿಂತ ಹತ್ತು ಪಟ್ಟು ಲಂಚಕೋರರು, ಮಜಾಕೋರರು, ಸೋಮಾರಿಗಳು, ಜಗಳಗಂಟರು ತುಂಬಿರುತ್ತಾರೆನ್ನುವುದು ಅನುಭವಕ್ಕೆ ಬರುತ್ತದೆ. ಆದರೆ ಇಡೀ ವ್ಯವಸ್ಥೆ ಹಾಗೋ ಹೀಗೋ ನಡೆಯುವುದು ಕೆಲವೇ ಮಂದಿ ಪ್ರಾಮಾಣಿಕರಿಂದ, ಇವರು ವ್ಯವಸ್ಥೆಯಲ್ಲಿ ಸಮತೋಲನ ಕಾಪಾಡುತ್ತಾರೆ‌. ಸರಕಾರಿ ವ್ಯವಸ್ಥೆಯಲ್ಲಿಯೂ (ರಾಜಕೀಯ ಪಕ್ಷಗಳ ಆಡಳಿತ) ಸಚಿವ ಸಂಪುಟ, ಸಂಸದರು, ಶಾಸಕರ ಗಡಣದಲ್ಲಿ ಕೆಲವು ಮಂದಿಯಾದರೂ ಶುದ್ಧಹಸ್ತರು ಇರುವುದರಿಂದಲೇ ಸಮತೋಲನ ಸಾಧ್ಯವಾಗುತ್ತಿದೆ. ಈ ಸಮತೋಲನದ ಪರಿಣಾಮವೇನೆಂದರೆ ವ್ಯವಸ್ಥೆ “ಅರಾಜಕ’ ಸ್ಥಿತಿಗೆ ಮುಟ್ಟಿಲ್ಲ ಎಂದು ಧಾರಾಳ ಹೇಳಬಹುದು. ಇದೊಂದೇ ಈಗ ಪಡಬಹುದಾದ ಸಮಾಧಾನ.

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next