Advertisement

ಕುಸಿಯುವ ಹಂತದಲ್ಲಿ ಜಿಲ್ಲಾಡಳಿತ ಭವನದ ತಡೆಗೋಡೆ: ಮಡಿಕೇರಿ –ಮಂಗಳೂರಿಗೆ ಪರ್ಯಾಯ ಮಾರ್ಗ

01:13 AM Jul 18, 2022 | Team Udayavani |

ಮಡಿಕೇರಿ: ಜಿಲ್ಲಾಡಳಿತ ಭವನಕ್ಕೆ ರಕ್ಷಣೆ ಒದಗಿಸಬೇಕಾದ ಭಾರೀ ಗಾತ್ರದ ತಡೆಗೋಡೆ ಕುಸಿಯುವ ಅಪಾಯವನ್ನು ಎದುರಿಸುತ್ತಿದ್ದು, ಮುಂಜಾಗ್ರತ ಕ್ರಮವಾಗಿ ಬರೆಯಂಚಿನಲ್ಲೇ ಸಾಗಿ ಹೋಗುವ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

Advertisement

ಸ್ವಲ್ಪ ಸಮಯದ ಹಿಂದೆಯಷ್ಟೆ ತಡೆಗೋಡೆಯ ಕೆಳ ಭಾಗದ ಕೆಲವು ಸೀಮೆಂಟ್‌ ಸ್ಲ್ಯಾಬ್ ಗಳು ಹೊರ ಭಾಗಕ್ಕೆ ಸರಿದಿದ್ದವು. ಶನಿವಾರ ಸಂಜೆಯ ವೇಳೆಗೆ ಮತ್ತಷ್ಟು ಸಿಮೆಂಟ್‌ ಸ್ಲ್ಯಾಬ್ ಗಳು ಮುಂದಕ್ಕೆ ವಾಲಿಕೊಳ್ಳಲಾರಂಭಿಸಿದ್ದವು. ಲೋಕೋಪಯೋಗಿ ಇಲಾಖೆ ಸ್ಲ್ಯಾಬ್ ಗಳಿಗೆ ರಂಧ್ರಗಳನ್ನು ಕೊರೆದು, ನೀರು ಹರಿದುಹೋಗುವಂತೆ ಮಾಡಿ ಮಣ್ಣಿನ ಒತ್ತಡ ತಡೆಯುವ ವಿಫ‌ಲ ಯತ್ನ ನಡೆಸಿತ್ತು. ಅನಂತರ ಮತ್ತಷ್ಟು ಸ್ಲ್ಯಾಬ್ ಗಳು ಹೊರಚಾಚಿಕೊಳ್ಳಲಾ ರಂಭಿಸಿದ್ದವು. ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆಗಳ ಹಿನ್ನೆಲೆ ಶನಿವಾರ ರಾತ್ರಿ ಮಡಿಕೇರಿ-ಮಂಗಳೂರು ರಸ್ತೆ ಸಂಚಾರವನ್ನು ನಿರ್ಬಂಧಿಸಲಾಯಿತು.

ಪ್ರತಿಭಟನೆ
ಜಿಲ್ಲಾಡಳಿತದ ಈ ಏಕಾಏಕಿ ನಿರ್ಧಾರವನ್ನು ವಿರೋಧಿಸಿ ರಾತ್ರಿಯ ಅವಧಿಯಲ್ಲಿ ಮಳೆಯ ನಡುವೆ ವಿವಿಧೆಡೆಗಳಿಂದ ಮಂಗಳೂರಿನತ್ತ ತೆರಳುತ್ತಿದ್ದ ಪ್ರಯಾಣಿಕರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿದೆ.

ಮಂಗಳೂರಿಗೆ ಪರ್ಯಾಯ ಮಾರ್ಗ
ಮೇಕೇರಿ-ಕಾಟಕೇರಿ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಸಮಸ್ಯೆಯಿಂದ ಮಂಗಳೂರು ಕಡೆಗೆ ತೆರಳುವವರು ಅಂದಾಜು 10 ಕಿ.ಮೀ. ಬಳಸು ಹಾದಿಯನ್ನು ಬಳಸುವುದು ಅನಿವಾರ್ಯ ವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next