Advertisement

Train: ಮಂಗಳೂರು-ಸುಬ್ರಹ್ಮಣ್ಯ “ಮೆಮು’ ರೈಲು ಪುನರಾರಂಭ?

12:16 AM Sep 24, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯೊಳಗೆ ಸಂಚರಿಸಿದ “ಮಂಗ ಳೂರು-ಸುಬ್ರಹ್ಮಣ್ಯ’ ಮೊದಲ ಪ್ಯಾಸೆಂ ಜರ್‌ ರೈಲು ಸ್ಥಗಿತವಾಗಿ 29 ವರ್ಷಗಳ ಬಳಿಕ ರೈಲು ಬಳಕೆದಾರರ ಬೇಡಿಕೆಗೆ ಮಣಿದಿರುವ ಇಲಾಖೆಯು “ಮೆಮು’ ರೈಲು ಓಡಾಟದ ಸುಳಿವು ನೀಡಿದೆ.

Advertisement

ರೈಲು ಹಳಿ “ಮೀಟರ್‌ಗೇಜ್‌’ ಇದ್ದ ಕಾಲದಲ್ಲಿ ಪ್ಯಾಸೆಂಜರ್‌ ರೈಲು ಬೆಳಗ್ಗೆ 6.30ಕ್ಕೆ ಸುಬ್ರಹ್ಮಣ್ಯದಿಂದ ಹೊರಟು ಮಂಗಳೂರಿಗೆ ಮತ್ತೆ ರಾತ್ರಿ 8 ಗಂಟೆಗೆ ಸುಬ್ರಹ್ಮಣ್ಯ ತಲುಪುತ್ತಿತ್ತು. 1995ರ ವರೆಗೆ ಈ ರೈಲು ಓಡಾಟ ನಡೆಸುತ್ತಿತ್ತು. ಬೆಳಗ್ಗೆ ಹಾಗೂ ಸಂಜೆ ಸಾವಿರಾರು ಮಂದಿಗೆ ಇದು ಉಪಯೋಗವಾಗುತ್ತಿತ್ತು.

ಸುಬ್ರಹ್ಮಣ್ಯದಲ್ಲಿ ರಾತ್ರಿ ರೈಲು ತಂಗಲು ಅವಕಾಶ ಇಲ್ಲ; ಜತೆಗೆ ಹೆಚ್ಚು ರೈಲುಗಳ ಓಡಾಟ ಇರುವುದರಿಂದ ನಿಲ್ಲಿಸಲು ಜಾಗವಿಲ್ಲ. ಬಂದ ರೈಲು ವಾಪಸ್‌ ಹೋಗಬೇಕು ಮುಂತಾದ ಕಾರಣ ನೀಡಿದ ರೈಲ್ವೇ ಇಲಾಖೆಯು ಮತ್ತೆ ಆ ರೈಲುಸೇವೆ ಆರಂಭಕ್ಕೆ ಮನಸ್ಸು ಮಾಡಿರಲಿಲ್ಲ. ಈಗ ರೈಲಿನ “ಹಿಂದೆ-ಮುಂದೆ ಎಂಜಿನ್‌ ಸೌಕರ್ಯದ ಮೆಮು’ ರೈಲು ಇದ್ದರೆ ಅನುಕೂಲ ಎಂದು ಮನಗಂಡಿದ್ದು, ಈ ಕುರಿತಂತೆ ಪರಾಮರ್ಶೆ ನಡೆಸಲಾಗುತ್ತಿದೆ.

“ಮೆಮು’ ಸಂಚರಿಸಬೇಕಾದರೆ ರೈಲ್ವೇ ಮಾರ್ಗ ವಿದ್ಯುದೀಕರಣ ಆಗಿರಬೇಕು. ಸದ್ಯ, ಸುಬ್ರಹ್ಮಣ್ಯ-ಮಂಗಳೂರು ಮಧ್ಯೆ ವಿದ್ಯುದೀಕರಣ ಆಗಿದೆ. ಪಡೀಲ್‌ನಿಂದ ಇದಕ್ಕೆ ವಿದ್ಯುತ್‌ ಸರಬರಾಜು ಮಾಡಲಾಗುತ್ತದೆ. ಈ ಪ್ರಮಾಣ ಮೆಮು ರೈಲಿಗೆ ಸಾಕಾಗದು ಎಂಬ ಕಾರಣದಿಂದ ನೇರಳಕಟ್ಟೆಯಲ್ಲಿ ಟ್ರಾನ್ಸ್‌ಫಾರ್ಮರ್‌ ಸಬ್‌ಸ್ಟೇಷನ್‌ ಮಾಡಲಾಗುತ್ತಿದೆ. ಅಲ್ಲಿಗೆ ಕೆಪಿಟಿಸಿಎಲ್‌ನಿಂದ ವಿದ್ಯುತ್‌ ನೀಡಿದ ಬಳಿಕ ಮೆಮು ಸಂಚಾರ ಆರಂಭಿಸುವ ಸಾಧ್ಯತೆ ಇದೆ.

ಉಪಯುಕ್ತ ರೈಲು
“ಮೀಟರ್‌ಗೇಜ್‌ನಿಂದ ಬ್ರಾಡ್‌ಗೆàಜ್‌ ಮಾಡುವಾಗ ಯಾವೆಲ್ಲ ರೈಲು ಓಡಾಟ ನಡೆಸು ತ್ತಿತ್ತೋ ಅವುಗಳನ್ನು ಮುಂದುವರಿಸಬೇಕು. ಆದರೆ ಬೆಳಗ್ಗೆ ಸುಬ್ರಹ್ಮಣ್ಯದ ಜನರಿಗೆ ಹೆಚ್ಚು ಉಪಯೋಗವಾಗುತ್ತಿದ್ದ ರೈಲನ್ನು ಮಾತ್ರ ಗೇಜ್‌ ಪರಿವರ್ತನೆಯ ಕಾಲಕ್ಕೆ ಬದಲಾಯಿಸಿ ರುವುದರಿಂದ ಯಾನಿಗಳಿಗೆ ಸಮಸ್ಯೆ ಆಗಿದೆ’ ಎನ್ನುತ್ತಾರೆ ರೈಲ್ವೇ ಹೋರಾಟಗಾರ ಅನಿಲ್‌ ಹೆಗ್ಡೆ.

Advertisement

“ಮಂಗಳೂರು-ಸುಬ್ರಹ್ಮಣ್ಯ ಮಧ್ಯೆ ಹಿಂದಿನ ರೈಲು ಮತ್ತೆ ಆರಂಭಿಸಿದರೆ ಸಾವಿರಾರು ಮಂದಿಗೆ ಉಪಯೋಗ. ಈಗ ಒಂದೇ ರೈಲು ನಿಲುಗಡೆಯಿಂದಾಗಿ ನರಿಮುಗೇರು, ಕಾಣಿಯೂರು, ಎಡಮಂಗಲ, ಕೋಡಿಂಬಾಳ, ಬಜೆಕೆರೆ 5 ಸ್ಟೇಷನ್‌ಗಳು ಇದ್ದೂ ಇಲ್ಲದಂತಾಗಿದೆ. ಇಲಾಖೆಯು ಕಾರಣಗಳನ್ನು ನೀಡುವ ಬದಲು ಇಚ್ಛಾಶಕ್ತಿ ಪ್ರದರ್ಶಿಸಲಿ’ ಎನ್ನುತ್ತಾರೆ ರೈಲ್ವೇ ಹೋರಾಟಗಾರ ವಿನಯಚಂದ್ರ ಎಡಮಂಗಲ.

ಗೇಜ್‌ ಪರಿವರ್ತನೆಯಾಗಿ ರೈಲು ಸ್ಥಗಿತ
“ಮೀಟರ್‌ಗೇಜ್‌’ ಹಳಿಯು “ಬ್ರಾಡ್‌ಗೇಜ್‌’ ಆಗಿ ಬದಲಾದ ಕಾರಣದಿಂದ ಪ್ಯಾಸೆಂಜರ್‌ ರೈಲು ಸಂಚಾರ ಸ್ಥಗಿತವಾಗಿತ್ತು. 2004ರಲ್ಲಿ ಮಂಗಳೂರು
-ಪುತ್ತೂರುವರೆಗೆ “ಬ್ರಾಡ್‌ಗೇಜ್‌’ ಆಗಿತ್ತು. ಆಗ ಮಂಗಳೂರು-ಪುತ್ತೂರು ಪ್ಯಾಸೆಂಜರ್‌ ರೈಲು ಆರಂಭವಾಯಿತು. 2006ರ ಸುಮಾರಿಗೆ ಸುಬ್ರಹ್ಮಣ್ಯ
-ಮಂಗಳೂರು “ಬ್ರಾಡ್‌ಗೇಜ್‌’ ಆಯಿತು. ಆಗ ಈ ರೂಟ್‌ನಲ್ಲೂ ಪ್ಯಾಸೆಂಜರ್‌ ರೈಲು ಆರಂಭಿಸಲಾಯಿತು. ಅದು ಈಗಲೂ ಓಡುತ್ತಿದ್ದು, ಬೆಳಗ್ಗೆ 10ರ ಸುಮಾರಿಗೆ ಮಂಗಳೂರಿನಿಂದ ಹೊರಟು ಮಧ್ಯಾಹ್ನ ಸುಬ್ರಹ್ಮಣ್ಯ ತಲುಪಿ ಸಂಜೆ ಮಂಗಳೂರಿಗೆ ಬರುತ್ತಿದೆ. ಆದರೆ ಇದು ನಿತ್ಯ ಯಾನಿಗಳಿಗೆ ಅನುಕೂಲ ಆಗುತ್ತಿಲ್ಲ. ಬೆಳಗ್ಗಿನ ಸಮಯಕ್ಕೆ ಸುಬ್ರಹ್ಮಣ್ಯದಿಂದ ರೈಲು ಇದ್ದರೆ ಅನುಕೂಲ ಎಂಬುದು ರೈಲು ಬಳಕೆದಾರರ ಆಗ್ರಹ.

ಸುಬ್ರಹ್ಮಣ್ಯ-ಧರ್ಮಸ್ಥಳ
ಹೊಸ ರೈಲು ಮಾರ್ಗ?
ಈ ಮಧ್ಯೆ, ಕುಕ್ಕೆ ಸುಬ್ರಹ್ಮಣ್ಯ-ಧರ್ಮಸ್ಥಳಕ್ಕೆ ನೂತನ ರೈಲು ಸಂಪರ್ಕ ಕಲ್ಪಿಸಲು ಶೀಘ್ರ ಆದೇಶ ಹೊರಡಿಸಲಾಗುವುದು ಎಂದು ಇತ್ತೀಚೆಗೆ ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ ಅವರು ಹಾಸನದಲ್ಲಿ ತಿಳಿಸಿದ್ದರು. 2 ಪುಣ್ಯ ಕ್ಷೇತ್ರಗಳ ಮಧ್ಯೆ ದೇಶದ ವಿವಿಧ ಭಾಗಗಳಿಂದ ಪ್ರಯಾಣಿಕರು ಸಂಚರಿಸುವ ಕಾರಣದಿಂದ ನೂತನ ರೈಲ್ವೇ ಜಾಲ ಆರಂಭಿಸಿದರೆ ಪ್ರಯಾಣಿಕರಿಗೆ ಅನುಕೂಲ ಎಂಬುದು ಅವರ ಮಾತಿನ ಸಾರಾಂಶ. ಆದರೆ ಹೊಸ ರೈಲು ಇಲ್ಲಿ ಕಾರ್ಯಸಾಧುವೇ? ಭೂಮಿ ಬಿಟ್ಟುಕೊಡುವ ಪ್ರಕ್ರಿಯೆ ಸುಲಲಿತವೇ ಮುಂತಾದ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

ಮಂಗಳೂರು-ಸುಬ್ರಹ್ಮಣ್ಯ ಮಧ್ಯೆ ವಿದ್ಯುದೀಕರಣ ಕಾಮಗಾರಿಗಳು ನವೆಂಬರ್‌ ವೇಳೆ ಪೂರ್ಣವಾಗುವ ನಿರೀಕ್ಷೆ ಇದೆ. ಆಗ ಪ್ಯಾಸೆಂಜರ್‌ ರೈಲು ಆರಂಭದ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ತಿಂಗಳು ನಡೆಯುವ ಡಿಆರ್‌ಎಂ ಸಭೆಯಲ್ಲಿ ಈ ಬಗ್ಗೆ ಮಾಹಿತಿ ಪಡೆದು ಪೂರಕ ಕ್ರಮ ಕೈಗೊಳ್ಳಲಾಗುವುದು.
ಕ್ಯಾ| ಬ್ರಿಜೇಶ್‌ ಚೌಟ,
ಸಂಸದರು, ದ.ಕ.

ಮೀಟರ್‌ಗೇಜ್‌ ಇದ್ದ ಕಾಲದಲ್ಲಿ ಮಂಗಳೂರು-ಸುಬ್ರಹ್ಮಣ್ಯ ನಡುವೆ ರೈಲು ಸಂಪರ್ಕವಿತ್ತು. ಇದು ಬ್ರಾಡ್‌ಗೆàಜ್‌ಗೆ ಬದಲಾವಣೆ ಆದ ಬಳಿಕ ಸ್ಥಗಿತವಾಗಿದೆ. ಸುಬ್ರಹ್ಮಣ್ಯ ಅತ್ಯಂತ ಪ್ರಮುಖ ಧಾರ್ಮಿಕ ಸ್ಥಳ. ಅಲ್ಲಿಂದ ಪುತ್ತೂರು, ಮಂಗಳೂರು ಕಡೆಗೆ ನಿತ್ಯ ಸಹಸ್ರಾರು ಮಂದಿ ಬರುತ್ತಾರೆ. ಸ್ಥಳೀಯರಿಗೆ ಹೆಚ್ಚು ಅನುಕೂಲ ಆಗುವ ಈ ರೈಲು ಸೇವೆಯನ್ನು ಮರು ಆರಂಭಿಸಬೇಕು.
-ಹನುಮಂತ ಕಾಮತ್‌, ಅಧ್ಯಕ್ಷರು ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ದಿ ಸಮಿತಿ

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next