Advertisement

ಪದವಿ ತರಗತಿ ಆರಂಭದಲ್ಲೇ ನೀರಸ

01:38 PM Nov 18, 2020 | Suhan S |

ಹೊಸಕೋಟೆ: ಮಂಗಳವಾರ ‌ದಿಂದ ಅಂತಿಮ ಪದವಿ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದ್ದರೂ ವಿದ್ಯಾರ್ಥಿಗಳ ‌ ನೀರಸ ಪ್ರತಿಕ್ರಿಯೆ ಕಂಡುಬಂದಿದೆ.

Advertisement

ವಿಶ್ವವಿದ್ಯಾಲಯದ ಮಾರ್ಗಸೂಚಿಯಂತೆ ಪ್ರತಿ ವಿದ್ಯಾರ್ಥಿಯು ಕನಿಷ್ಠ 3 ದಿನಗಳ ಹಿಂದೆ ಕೋವಿಡ್‌-19 ತಪಾಸಣೆಗೆ ಒಳಪಟ್ಟು ನೆಗೆಟಿವ್‌ ವರದಿಯ ದೃಢೀಕರಣ, ಪೋಷಕರ ಸಮ್ಮತಿ ಪತ್ರ ಹಾಜರುಪಡಿಸಿದಲ್ಲಿ ಮಾತ್ರ ತರಗತಿಗೆ ಹಾಜರಾಗಲು ಅನುಮತಿಸಲಾಗುತ್ತದೆ. ಆದರೆ, ಬಹಳಷ್ಟು ವಿದ್ಯಾರ್ಥಿಗಳು ಇದರ ಬಗ್ಗೆ ಮಾಹಿತಿಯಿಲ್ಲದೆ ಕಾಲೇಜಿಗೆ ಬಂದಿದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿಯಿಂದ ತಪಾಸಣೆಗೆ ಒಳಪಡಿಸಿದ್ದಾರೆ. ಅದರ ಫ‌ಲಿತಾಂಶ ಬಂದ ನಂತರವಷ್ಟೇ ತರಗತಿಗಳನ್ನು ಪ್ರಾರಂಭಿಸಲಾಗುತ್ತದೆ. ನಗರದ ಸರ್ಕಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿಬ್ಬಂದಿ ವರ್ಗದವರೂ ತಪಾಸಣೆಗೆ ಒಳ ಪಟ್ಟಿದ್ದು, ಅಂತಿಮ ವರ್ಷದ ಪದವಿಯಲ್ಲಿ ವ್ಯಾಸಂಗಮಾಡುತ್ತಿರುವವರಲ್ಲಿ ಕೇವಲ 50 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದರು.

ಕೊಠಡಿಗಳನ್ನು ಸೋಡಿಯಂ ಹೈಪೊಕ್ಲೋರೈಟ್‌ ದ್ರಾವಣ ಸಿಂಪಡಿಸಿ ಸ್ವತ್ಛಗೊಳಿಸಲಾಗಿದ್ದು, ವಿಶ್ವ ವಿದ್ಯಾಲಯ ನಿಗದಿಪಡಿಸಿರುವ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಪ್ರತಿ ಕೊಠಡಿಗೆ 20 ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದರೊಂದಿಗೆ ಸ್ಯಾನಿಟೈಸರ್‌ನಿಂದ ಕೈತೊಳೆಸಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಮುನಿ ನಾರಾಯಣಪ್ಪ ತಿಳಿಸಿದ್ದಾರೆ.

ಉಪನ್ಯಾಸಕರ ಆಕ್ರೋಶ: ವಿಶ್ವ ವಿದ್ಯಾಲಯ 5ನೇ ಸೆಮಿಸ್ಟರ್‌ ಪದವಿ ತರಗತಿಗಳನ್ನು ಪ್ರಾರಂಭಿಸಲು ಅವೈಜ್ಞಾನಿಕವಾದ ‌ ನಿರ್ಧಾರ ಕೈಗೊಂಡಿದ್ದು, ತಪಾಸಣೆಯ ವರದಿಗಾಗಿ ವಿದ್ಯಾರ್ಥಿಗಳು 6-8 ದಿನಗಳು ಕಾಯಬೇಕಾಗಿದೆ. ಇದರೊಂದಿಗೆ ಹಿಂದಿನಂತೆ ತರಗತಿಗಳಿಗೆ ಹಾಜರಾಗದವರಿಗೆ ಆನ್‌ಲೈನ್‌ ಮೂಲಕ ಪಾಠ ಮುಂದುವರಿಸ ‌ ಬೇಕಾಗಿರುವ ಕಾರಣ ಉಪನ್ಯಾಸಕರಿಗೆ ಕೆಲಸದ ಒತ್ತಡ ಹೆಚ್ಚಾಗಿ ಹೊರೆಯಾಗಿ ಪರಿಣಮಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಸ್ಯೆ ನಿವಾರಿಸಲು ವಿಶ್ವವಿದ್ಯಾಲಯ ಯಾವುದಾದರೂ ಒಂದು ಪದ್ಧತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ನಗರದ ಸರ್ಕಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷ ವ್ಯಾಸಂಗ ಮಾಡುತ್ತಿರುವ ಅಂದಾಜು500ರಲ್ಲಿ ಕೇವಲ 50 ವಿದ್ಯಾರ್ಥಿಗಳು ಮಾತ್ರ ತಪಾಸಣೆಗೆ ಒಳಗಾಗಿದ್ದು, ಇವರಲ್ಲಿ 20 ಪೋಷಕರು ಮಾತ್ರ ಒಪ್ಪಿಗೆ ಪತ್ರ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next