Advertisement

ವಿಷಯ-ವಿಶೇಷ: ಔಚಿತ್ಯಕ್ಕೇ ಸಮ್ಮಾನ

11:38 PM Jul 15, 2023 | Team Udayavani |

ಬದಲಾವಣೆ, ಪರಿವರ್ತನೆ ಎರಡೂ ಸಂದರ್ಭರೂಪಿ. ಮೊದಲನೆಯದ್ದಕ್ಕೆ ಹಲವು ಬಾರಿ ಅನಿವಾರ್ಯಯತೆಯೇ ಇಂಧನ ಆಗಬಹುದು. ಎರಡನೆಯದ್ದರಲ್ಲಿ ಹಾಗಲ್ಲ; ಒಂದು ಸಂಪೂರ್ಣ ಪ್ರಕ್ರಿಯೆ. ನಮ್ಮ ಪ್ರತೀ ಸಾಂಸ್ಕೃತಿಕ ಆವಿಷ್ಕಾರಗಳು ಕಾಲಕ್ಕೆ ಸಮನಾಗಿ ಹೆಜ್ಜೆ ಹಾಕಬೇಕೋ, ಕುಣಿಯಬೇಕೋ ಎಂಬುದೇ ಒಂದು ಚರ್ಚೆ. ಯಕ್ಷಗಾನದಲ್ಲಿನ ಮಾತಿನ ಬಗ್ಗೆಯೇ ಇಲ್ಲಿ ಮಾತು.

Advertisement

ಯಕ್ಷಗಾನದ ಬದಲಾವಣೆ ವೇಗ ಪಡೆದುಕೊಳ್ಳುತ್ತಲೇ ಇದೆ. ಆ ಬದಲಾವಣೆ ಬಹುರೂಪಿಯೂ ಆಗಿದೆ. ಬಹುತೇಕ ಎಲ್ಲವನ್ನೂ ಪ್ರೇಕ್ಷಕರು ಒಪ್ಪಿಕೊಳ್ಳುತ್ತಿದ್ದಾರೆ. ಕೆಲವು ಬದಲಾವಣೆ ಗಳ ಬಗ್ಗೆ ಟೀಕೆಗಳಿವೆಯಾದರೂ ಗಂಭೀರ ಸ್ವರೂಪದಲ್ಲೇನಲ್ಲ.

ಕೆಲವು ಸಂದರ್ಭಗಳಲ್ಲಿ ಪಾತ್ರಧಾರಿಗಳು ತಮ್ಮ ಪಾತ್ರದ ವ್ಯಾಪ್ತಿ ಮೀರಿ ಹೋಗುತ್ತಿದ್ದಾರೆ ಎಂಬುದು ಇಂಥ ಟೀಕೆಗಳ ಲ್ಲೊಂದು. ಪ್ರೇಕ್ಷಕರ ಚಪ್ಪಾಳೆ ಅಥವಾ ದಿಢೀರ್‌ ಗಮನ ಸೆಳೆಯಬೇಕು ಎಂಬ ಕಾರಣಕ್ಕಾಗಿ ಕೆಲವರು ಪಾತ್ರದ ಚೌಕಟ್ಟು ಮೀರಿ ಮಾತನಾಡುವುದೂ ಇದೆ. ಇನ್ನೊಂದೆಡೆ ಪಾತ್ರದ ವ್ಯಾಪ್ತಿಯ ಒಳಗಿದ್ದುಕೊಂಡೇ ಮನಸ್ಪರ್ಶಿಯಾಗಿ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವುದೂ ಇದೆ. ಇದು ಈಗಿನ ಅಗತ್ಯವಾಗಿದೆ. ಪುರಾಣ ಪಾತ್ರದಲ್ಲಿರುವ ಕಲಾವಿದ ಆಧುನಿಕ ಜೀವನದ ವಿಷಯವನ್ನು ಪ್ರಸ್ತಾವಿಸಿದರೆ ಅದು ನಗೆಪಾಟಲಿಗೀಡಾಗುವುದು ಖಚಿತ. ಅದು ಕಲಾವಿದನ ಜತೆಯಲ್ಲಿ ಕಲೆಯ ಗೌರವಕ್ಕೂ ಧಕ್ಕೆ ತರುವಂಥದ್ದಾಗಿದೆ.

ಪಾತ್ರಗಳ ವ್ಯಾಪ್ತಿಯಲ್ಲೇ ಈಗಿನ ಸಮಾಜದ ಬಗ್ಗೆ ವಿಮರ್ಶಿಸುವುದು ತಾಳಮದ್ದಳೆಯಂಥ ಮಾತುಪ್ರಧಾನ ಪ್ರಕಾರದಲ್ಲಿ ಸಾಮಾನ್ಯವಾಗಿದೆ. ಅದನ್ನು ಸಮಯದ ಮಿತಿಯಲ್ಲಿ ಯಕ್ಷಗಾನಕ್ಕೂ ತರುವ ಪ್ರಯತ್ನಗಳು ನಡೆಯುತ್ತಲೇ ಇವೆ. ಅದರಲ್ಲಿ ಕೆಲವು ಹೆಚ್ಚು ಸುದ್ದಿಯಾಗಿ ಸಮಾಜದ ಮೆಚ್ಚುಗೆಗೆ ಪಾತ್ರವಾಗುವುದೂ ಇದೆ. ಈಚೆಗೆ ಯಕ್ಷಗಾನವೊಂದರಲ್ಲಿ ಕಲಾವಿದರೋರ್ವರು ಮಾನವೀಯತೆ ಬಗ್ಗೆ ಆಡಿರುವ ತೂಕದ ಮಾತುಗಳಿಗೆ ಭರ್ಜರಿ ಪ್ರಚಾರ ಸಿಕ್ಕಿ ಜನರ ಪ್ರಶಂಸೆಗೆ ಭಾಜನವಾಗಿದೆ. ಒಂದಷ್ಟು ಜನರಲ್ಲಿ ಚಿಂತನೆಯನ್ನೂ ಹುಟ್ಟು ಹಾಕಿದೆ. ಹುಟ್ಟುವುದು ಮತ್ತು ಸಾಯುವುದು ಅಳುವಿನ ಜತೆಗೆ.

ಆದರೆ ಅದರ ನಡುವಿನ ಜೀವನವನ್ನು ನಗುವಿನಲ್ಲಿ ಕಳೆಯಬೇಕು. ಯಾವ ಧರ್ಮದವರಾದರೂ ಉಸಿರಾಡುವ ಗಾಳಿ, ಸೇವಿಸುವ ನೀರು ಒಂದೇ ಆಗಿದೆ. ಹಾಗಿರುವಾಗ ನಾವು ನಗುವಿನಲ್ಲಿ ಕಳೆಯಬೇಕಾದ ಜೀವನವನ್ನು ನಮ್ಮ ನಡುವೆ ಅಂತರ ಸೃಷ್ಟಿಸಿಕೊಂಡು ಆತಂಕಕ್ಕೆ ತಳ್ಳಬಾರದು ಎಂಬರ್ಥದ ಮಾತುಗಳು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಯಕ್ಷಗಾನೀಯ ಶೈಲಿಯಲ್ಲೇ, ಪಾತ್ರದ ವ್ಯಾಪ್ತಿಯಲ್ಲೇ ಅವರು ಆಡಿರುವ ಈ ಸಾಮಾಜಿಕ ಸಂದೇಶದ ಮಾತುಗಳು ಸಮಾಜದ ಆರೋಗ್ಯಕ್ಕೆ ಪೂರಕವಾಗಿಯೇ ಇದೆ.

Advertisement

ಹಿಂದೆ ಇಂಥದ್ದೆಲ್ಲ ಬೇಗ ಸುದ್ದಿಯಾಗುತ್ತಿರಲಿಲ್ಲ. ಆಟಕ್ಕೆ ಹೋದವರು ಮಾತ್ರ ಅದನ್ನು ಕೇಳಿಸಿಕೊಂಡಿರುತ್ತಾರೆ, ಅದೂ ನಿದ್ದೆಗಣ್ಣಿನಲ್ಲಿ ಕೇಳಿದ ತೂಕದ ಮಾತುಗಳು ಸರಿಯಾಗಿ ಅರ್ಥ ವಾಗದಿರುವುದೂ ಇದೆ. ಈಗ ಪರಿಸ್ಥಿತಿ ಬದಲಾಗಿದೆ. ಇಂಥವು ಹೆಚ್ಚು ಮಹತ್ವ ಪಡೆದು ಕೊಳ್ಳುತ್ತವೆ ಹಾಗೂ ಬೇಗನೆ ಬಾಯಿಂದ ಬಾಯಿಗೆ ಹರಡುತ್ತವೆ. ಮಾಧ್ಯಮಗಳ ಮೂಲಕವೂ ಸುದ್ದಿ ಯಾಗುತ್ತಿರುವ ಕಾರಣ ಮಾತಿನಲ್ಲಿ ಎಚ್ಚರ ಅಗತ್ಯ.

ಹಾಗೆ ನೋಡಿದರೆ ಕಲಾವಿದರ ಉತ್ತಮ ಮಾತು ಗಳಿಗೆ ಸಮಾಜ ಹೆಚ್ಚು ಪ್ರತಿಕ್ರಿಯಿಸದೆ ಇದ್ದರೂ ಪರೋಕ್ಷ ಅವಹೇಳನ ಅಥವಾ ದ್ವಂದ್ವಾರ್ಥದ ಮಾತುಗಳಿಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸುತ್ತದೆ.

ರಾಜಕೀಯ, ಜಾತಿ, ಧರ್ಮದ ವಿಷಯದಲ್ಲಿ ಮಾತನಾಡಿ ಎಷ್ಟೋ ಕಲಾವಿದರು ಬೆದರಿಕೆಗೂ ಒಳಗಾದದ್ದಿದೆ. ಜತೆಗೆ ಪ್ರಸಂಗದ ಬಗ್ಗೆಯೂ ಸಮಾಜದಿಂದ ಪ್ರತಿ ರೋಧ ವ್ಯಕ್ತ ವಾದದ್ದಿದೆ. ಹಿಂದಿನ ಕಾಲದಲ್ಲಿ ಪ್ರದರ್ಶನ ಕಂಡ ಎಲ್ಲ ಪ್ರಸಂಗಗಳನ್ನು ಈಗ ಅದೇ ಸ್ಥಿತಿಯಲ್ಲಿ ಪ್ರದರ್ಶನ ನೀಡಲಾದೀತು ಎನ್ನಲೂ ಸಾಧ್ಯವಿಲ್ಲ. ಜನರ ಈಗಿನ ಚಿಂತನೆ ಹಾಗೂ ಪ್ರತಿಕ್ರಿಯೆಯ ರೀತಿ ಬೇರೆಯೇ ಆಗಿದೆ.

ಪಾತ್ರದ ವ್ಯಾಪ್ತಿಯಲ್ಲೇ ಉತ್ತಮ ಸಂದೇಶಗಳನ್ನು ನೀಡಿದರೆ ಆ ಪಾತ್ರದ ಘನತೆ, ಕಲಾವಿದನ ಗೌರವ ಹೆಚ್ಚುತ್ತದೆ. ಆದರೆ ಪ್ರಚಾರ ಹಾಗೂ ಪುಕ್ಕಟೆ ಚಪ್ಪಾಳೆಯ ದೃಷ್ಟಿಯಿಂದ ನಿರ್ದಿಷ್ಟ ಸಮುದಾಯ, ಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯವನ್ನು ಪ್ರಸ್ತಾವಿಸುವುದರಿಂದ ಹಾನಿಯೇ ಹೆಚ್ಚು. ಇಂಥ ಸೂಕ್ಷ್ಮ ವಿಷಯ ಹಾಗೂ ವಿವಾದದ ಸಂಗತಿಗಳಿಂದ ಯಕ್ಷಗಾನಕ್ಕೂ ಕಳಂಕ ಎದುರಾದೀತು. ಪ್ರೇಕ್ಷಕರನ್ನು ನಗಿಸಬೇಕು ಎಂದು ವಿವಾದದ ಹಾಗೂ ಕೆಲವರಿಗೆ ಇಷ್ಟವಾಗುವ, ಕೆಲವರಿಗೆ ಕಿರಿಕಿರಿ ಆಗುವಂಥ ವಿಷಯಗಳನ್ನು ಪ್ರಸ್ತಾವಿಸುವುದು ಕಲೆಗೆ ಮಾಡುವ ಅಪಚಾರವಾದೀತು. ಯಕ್ಷಗಾನದ ಮಾತಿಗೆ ಘನತೆಯಿದೆ. ಆ ಮಾತು ಮಥನಕ್ಕೊಳಗಾಗಿ ಸಮಾಜದ ಆರೋಗ್ಯಕ್ಕೆ ಪೂರಕವಾಗುವಂತಿದ್ದರಷ್ಟೇ ಸೊಗಸು.

ನಗಿಸಿದ್ದೆಲ್ಲ ಹಾಸ್ಯವಲ್ಲ
ಹಾಸ್ಯ ಕಲಾವಿದರು ಪ್ರೇಕ್ಷಕರನ್ನು ನಗಿಸಲು ಶಕ್ತಿ ಮೀರಿ ಶ್ರಮಿಸುವಾಗ ಮಾತು ಹಾಗೂ ವಿಷಯದ ಬಗ್ಗೆ ಎಚ್ಚರಿಕೆ ಹೊಂದಿರಬೇಕು. ಪ್ರೇಕ್ಷಕರನ್ನು ನಗಿಸಿದ್ದೆಲ್ಲವೂ ಹಾಸ್ಯವಲ್ಲ, ಚಪ್ಪಾಳೆ ಗಿಟ್ಟಿಸಿದ್ದೆಲ್ಲವೂ ಪ್ರಶಂಸೆಯೂ ಅಲ್ಲ. ಯಾವ ಸಂದೇಶ ನೀಡುವುದಿದ್ದರೂ, ಯಾವ ರೀತಿಯ ಹಾಸ್ಯ ಪ್ರದರ್ಶನ ನೀಡುವುದಿದ್ದರೂ ಅದು ಯಾರ ಮನಸ್ಸನ್ನೂ ನೋಯಿಸುವಂತಿರಬಾರದು. ಹಾಸ್ಯಕ್ಕೆ ಶ್ರೇಷ್ಠ ಸ್ಥಾನವಿದೆ. ಹಾಸ್ಯ ಮತ್ತು ಅಪಹಾಸ್ಯದ ನಡುವಿನ ವ್ಯತ್ಯಾಸವನ್ನು ಕಲಾವಿದರು ತಿಳಿದುಕೊಂಡಿರುವುದು ಮುಖ್ಯ.ಯಕ್ಷಗಾನಕ್ಕೂ ಸಾಮಾಜಿಕ ನಾಟಕಗಳಿಗೂ ತುಂಬಾ ಅಂತರವಿದೆ ಎಂಬುದನ್ನು ಕಲಾವಿದರು ಮತ್ತು ಮೇಳಗಳ ಮಾಲಕರು ತಿಳಿದು ವ್ಯವಹರಿಸಬೇಕಾಗಿದೆ. ಬದಲಾವಣೆ ಹಾಗೂ ಪ್ರಚಾರದ ಉದ್ದೇಶದಲ್ಲಿ ಯಕ್ಷಗಾನದ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದರಲ್ಲಿ ನಮ್ಮೆಲ್ಲರ ಹೊಣೆಗಾರಿಕೆಯೂ ಇದೆ.

 ಪುತ್ತಿಗೆ ಪದ್ಮನಾಭ ರೈ

 

Advertisement

Udayavani is now on Telegram. Click here to join our channel and stay updated with the latest news.

Next