Advertisement

ರಾಜಕೀಯದಲ್ಲಿ ಮಹಿಳಾ ಮೀಸಲಾತಿ

03:50 AM Apr 15, 2017 | |

ಬಹಳ ಪ್ರಮುಖ ವಿಚಾರ ಪುರುಷರಿಂದ ಏಕಪಕ್ಷೀಯವಾಗಿ ನಿರ್ಧರಿತವಾಗುತ್ತವೆ ಹಾಗೂ ಇದರಲ್ಲಿ ಮಹಿಳಾ ಹಿತಾಸಕ್ತಿಗಳು ಕಡೆಗಣಿಸಲ್ಪಡುತ್ತವೆ. ಕಡಿಮೆ ಸಂಖ್ಯೆಯಲ್ಲಿ ಮಹಿಳೆಯರು ರಾಜಕೀಯದಲ್ಲಿದ್ದಾಗ, ಪ್ರಮುಖ ಇಲಾಖೆಗಳು ಪುರುಷರ ವಶವಾಗುವುದು ಸ್ವಾಭಾವಿಕ ಎಂಬಂತಾಗಿದೆ!

Advertisement

ರಾಜಕೀಯದಲ್ಲಿ ಮಹಿಳಾ ಮೀಸಲಾತಿ ಬಗೆಗೆ ಸ್ವಾತಂತ್ರ್ಯಪೂರ್ವದಲ್ಲೇ ಚರ್ಚೆ ಆರಂಭವಾಗಿತ್ತು. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಶ್ರೀಮಂತ ವರ್ಗಗಳಿಗೆ ಸೇರಿದ ಕೆಲವು ಮಹಿಳೆಯರು, ಮಹಿಳೆಯರು ಎದುರಿಸಬೇಕಾದ ಸಮಸ್ಯೆಗಳನ್ನು ಅರಿತಿದ್ದರು. ಸಾರ್ವಜನಿಕ ಕ್ಷೇತ್ರದಲ್ಲಿ ಭಾಗವಹಿಸಲು ಮಹಿಳೆಗಿರುವ ತೊಂದರೆಗಳನ್ನು ಅವರು ಮನಗಂಡಿದ್ದರು. ಭಾರತದಲ್ಲಿ ಮಹಿಳೆಯರ ಸ್ಥಿತಿಗತಿ ವರದಿಯ ಸಮಿತಿ 1974ರಲ್ಲಿ ರಾಜಕೀಯದಲ್ಲಿ ಮಹಿಳೆಯರ ಸಂಕಷ್ಟಗಳನ್ನು ವರದಿ ಮಾಡಿತು. ಸಂವಿಧಾನ ಮಹಿಳಾ ಸಂದರ್ಭದಲ್ಲಿ ಸಮಾನತೆಯ ಒಂದು ಭ್ರಮೆಯನ್ನು ಹುಟ್ಟಿಸುವಲ್ಲಿ ಸಫ‌ಲವಾಗಿದೆ ಹಾಗೂ ಈ ಭ್ರಮೆ ಮಹಿಳೆಯ ಸಾಮಾಜಿಕ ಸಮಾನ ಹಕ್ಕು ಹಾಗೂ ನ್ಯಾಯಸಮ್ಮತ ಸ್ಥಾನಗಳ ಬಗೆಗೆ ಚರ್ಚೆಗಷ್ಟೇ ಸೀಮಿತವಾಗಿದೆಯಲ್ಲದೆ, ವಾಸ್ತವದಲ್ಲಿ ಪರಿಸ್ಥಿತಿ ಈ ರೀತಿ ಇಲ್ಲ ಎಂಬುದಾಗಿ ವರದಿ ತಿಳಿಸುತ್ತದೆ. ಈ ಕ್ಷೇತ್ರದಲ್ಲಿ ಸಂಶೋಧನೆ, ಮೌಲ್ಯಮಾಪನ ನಡೆಸಿದ ಸಮಾಜ ಶಾಸ್ತ್ರಜ್ಞರು ಮಹಿಳೆಯರ ಮತದಾನದ ಪ್ರಮಾಣ ಹೆಚ್ಚಾಗಿದೆ, ಆದರೆ ಮಹಿಳಾ ಅಭ್ಯರ್ಥಿಗಳ ರಾಜಕೀಯ ಪ್ರವೇಶ ಅಧಿಕಗೊಂಡಿಲ್ಲ ಎಂಬುದಾಗಿ ವರದಿ ಮಾಡಿದರು!

ಮಹಿಳೆಯರು ರಾಜಕೀಯದಿಂದ ದೂರ ಉಳಿಯುವಿಕೆಯ ಪ್ರಕ್ರಿಯೆ ಇಂದಿಗೂ ಮುಂದುವರಿದೆ. 1952ರಿಂದ 1996ರವರೆಗಿನ ಚುನಾವಣೆಗಳಲ್ಲಿ, ಮಹಿಳಾ ಪ್ರಾತಿನಿಧ್ಯ ಶೇ.32ಕ್ಕೆ ಸೀಮಿತಗೊಂಡಿತ್ತು. ಗೆದ್ದವರ ಸಂಖ್ಯೆಯಂತೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಯ್ತು. 1952ರಲ್ಲಿ ಶೇ.43ರಷ್ಟು, 1957ರಲ್ಲಿ ಶೇ. 50ರಷ್ಟು ಇದ್ದ ಮಹಿಳಾ ಪ್ರಾತಿನಿಧ್ಯ 1962ರಲ್ಲಿ ಅತ್ಯಂತ ಕಡಿಮೆ ಮಟ್ಟವಾದ ಶೇ.7.9 ತಲುಪಿತು.

ರಾಜ್ಯ ಚುನಾವಣೆಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಗಮನಿಸಿದರೆ, 1952ರಲ್ಲಿ ಶೇ.1.8, 1957ರಲ್ಲಿ ಶೇ.6.3 ಹೀಗೆ ಏರಿಳಿತ ಕಂಡುಬಂದಿದೆ. ಶೇ.4ರ ಸ್ಥಾಗಿತ್ಯ ರಾಜ್ಯ ಚುನಾವಣೆಗಳಲ್ಲೂ 1952ರಿಂದ 1997ರ ನಡುವೆ ಕಂಡುಬಂದಿದೆ. ಪಂಚಾಯತ್‌ ಮಟ್ಟದಲ್ಲಿ ಮಹಿಳಾ ಮೀಸಲಾತಿಗಾಗಿ ಸಿಎಸ್‌ಡಬುಐ ಒಮ್ಮತದಿಂದ ಶಿಫಾರಸು ಮಾಡಿದರೂ ರಾಜ್ಯಮಟ್ಟದಲ್ಲಿ ಇದನ್ನು ಶಿಫಾರಸು ಮಾಡಲಿಲ್ಲ. ಭಾರತ ಸರಕಾರದ ರಾಷ್ಟ್ರೀಯ ಮಹಿಳಾ ಭಾವೀ ಯೋಜನೆ, 1988 ಭಾರತದಲ್ಲಿ ಮಹಿಳೆಯರ ರಾಜಕೀಯ ಒಳಗೊಳ್ಳುವಿಕೆಯನ್ನು ಒಪ್ಪಿಕೊಂಡು, ಅವರಿಗೆ ಪಂ.ರಾಜ್‌ ಸಂಸ್ಥೆಗಳಲ್ಲಿ, ನಗರಸಭೆ ಹಾಗೂ ಇನ್ನಿತರ ಸ್ಥಳೀಯ ಸಂಸ್ಥೆಗಳಲ್ಲಿ ಶೇ.30ರಷ್ಟು ಮೀಸಲಾತಿ ಕೊಡುವಂತೆ ಶಿಫಾರಸು ಮಾಡಿತು. ಆರಂಭದಲ್ಲಿ ನಾಮ ನಿರ್ದೇಶನದ ಮುಖೇನ ಮೀಸಲಾತಿ ಘೋಷಿಸಲಾಯ್ತು. ರಾಷ್ಟ್ರೀಯ ಮಹಿಳಾ ಸಂಘಟನೆಗಳು ಇದನ್ನು ಖಂಡಿಸಿ, ಮಹಿಳೆಯರಿಗೆ ಶೇ.30ರಷ್ಟು ಮೀಸಲಾತಿ ಕೊಡಬೇಕಲ್ಲದೇ ಪ. ಜಾತಿ ಹಾಗೂ ಪ. ಪಂಗಡಗಳ ಮಹಿಳೆಯರನ್ನು ವಿಶೇಷವಾಗಿ ಮೀಸಲಾತಿಯಲ್ಲಿ ಒಳಗೊಳ್ಳುವಂತೆ ಮಾಡಬೇಕೆಂದು ವಾದಿಸಿದವು. ಎನ್‌.ಪಿ.ಪಿ. ಅಂತಿಮವಾಗಿ ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಶೇ.30ರಷ್ಟು ಮೀಸಲಾತಿ ಘೋಷಿಸಿತು ಹಾಗೂ ಚುನಾವಣೆ ಮುಖೇನ ಮಹಿಳೆಯರು ಈ ಸ್ಥಾನಗಳನ್ನು ಪಡೆದುಕೊಳ್ಳಬೇಕೆಂದು ಸಲಹೆಯನ್ನು ಇತ್ತಿತು. ಈ ಸಲಹೆಯನ್ನು 1989ರ 64ನೇ ತಿದ್ದುಪಡಿಯಲ್ಲಿ ಸೇರಿಸಲಾಯ್ತು. 1980 ಹಾಗೂ 1990ರ ದಶಕಗಳಲ್ಲಿ ಕೆಲ ಬದಲಾವಣೆ ಕಂಡು ಬಂದವು. ಪಂಚಾಯತ್‌ರಾಜ್‌ ಮಸೂದೆ ಕೆಲ ಬದಲಾವಣೆಗಳೊಡನೆ 1992ರ 73 ಹಾಗೂ 74ನೇ ತಿದ್ದುಪಡಿಗಳ ಮುಖೇನ ರೂಪುಗೊಂಡಿತು.

ಈ ತಿದ್ದುಪಡಿಗಳ ಅನುಷ್ಠಾನದಿಂದ ಪ್ರೇರಿತವಾದ ಹಲವಾರು ಮಹಿಳಾ ಸಂಘಟನೆಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಹಿಳೆಯರಿಗೆ ಈ ತೆರನಾದ ಮೀಸಲಾತಿ ಅಗತ್ಯ ಎಂದು ಒತ್ತಾಯಿಸಿದವು. ಸಂವಿಧಾನದ 81, 84 ಹಾಗೂ 85ನೇ ತಿದ್ದುಪಡಿಗಳು ಒಪ್ಪಿಗೆ ಪಡೆಯದೆ ನನೆಗುದಿಗೆ ಬಿದ್ದಿವೆ. 

Advertisement

ಕರ್ನಾಟಕದಲ್ಲಿ ಮಹಿಳಾ ಮೀಸಲಾತಿ
ಕರ್ನಾಟಕದಲ್ಲೂ ಮಹಿಳೆಯರ ರಾಜಕೀಯ ಸಬಲೀಕರಣ ಸಂಘರ್ಷಪೂರ್ಣವಾದುದು. ಅನಕ್ಷರತೆ, ಪುರುಷ ಪ್ರಧಾನ ನಂಬುಗೆಗಳು, ಆದಾಯ ಹಾಗೂ ಆಸ್ತಿಯ ಮೇಲೆ ನಿಯಂತ್ರಣ ಇಲ್ಲದಿರುವಿಕೆ, ಮಹಿಳಾ ಸೀಮಿತ ಸಮಸ್ಯೆಗಳು, ಸಾರ್ವಜನಿಕ ಸಂದರ್ಭಗಳಲ್ಲಿ ಸ್ವಾತಂತ್ರ್ಯದ ಕೊರತೆ, ಅಷ್ಟೇನೂ ಸಹಕಾರಿಯಲ್ಲದ ನ್ಯಾಯಾಂಗ ಮತ್ತು ಇನ್ನಿತರ ಮಿತಿಗಳಿಂದಾಗಿ ಮಹಿಳೆಯರ ರಾಜಕೀಯ ಸಬಲೀಕರಣ ಕುಂಠಿತಗೊಂಡದ್ದು ತಿಳಿದ ವಿಚಾರ. ಅಗತ್ಯ ಅರಿವನ್ನು ಕೊಡುವ ತರಬೇತಿಗಳ ಕೊರತೆ, ಮಹಿಳೆಯರನ್ನು ಒಳಗೊಂಡು ಮುಂದೆ ಹೋಗುವ ಪುರುಷರ ಸಂಖ್ಯೆ ಕಡಿಮೆ ಇರುವಿಕೆ, ಇಚಾಶಕ್ತಿಯ ಕೊರತೆ ಸಮಸ್ಯೆ ಉಲ್ಬಣಿಸುವಂತೆ ಮಾಡಿವೆ.

ಮಹಿಳೆಯರು ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದಿದ್ದಾಗ, ಬಹಳ ಪ್ರಮುಖ ವಿಚಾರಗಳು ಪುರುಷರಿಂದ ಏಕಪಕ್ಷೀಯವಾಗಿ ನಿರ್ಧರಿತವಾಗುತ್ತವೆೆ ಹಾಗೂ ಇದರಲ್ಲಿ ಮಹಿಳಾ ಹಿತಾಸಕ್ತಿಗಳು ಕಡೆಗಣಿಸಲ್ಪಡುತ್ತವೆ. ಬಹಳ ಕಡಿಮೆ ಸಂಖ್ಯೆಯಲ್ಲಿ ಮಹಿಳೆಯರು ರಾಜಕೀಯದಲ್ಲಿದ್ದಾಗ, ಪ್ರಮುಖ ಇಲಾಖೆಗಳು ಪುರುಷರ ವಶವಾಗುವುದು ಸ್ವಾಭಾವಿಕ. ಈ ಎಲ್ಲ ಸ್ವಾಭಾವಿಕ ಮಿತಿಗಳ ನಡುವೆಯೂ, ಕರ್ನಾಟಕದಲ್ಲಿ ಮಹಿಳೆಯರ ರಾಜಕೀಯ ಪ್ರವೇಶ ಹಾಗೂ ಸಬಲೀಕರಣ ಅನ್ಯ ರಾಜ್ಯಗಳಿಗಿಂತ ಉತ್ತಮ ಮಟ್ಟದಲ್ಲಿದೆ. ಮಾತೃಪ್ರಧಾನ ಕುಟುಂಬ ವ್ಯವಸ್ಥೆಯನ್ನು ಕರ್ನಾಟಕದ ಕೆಲ ಭಾಗಗಳಲ್ಲಿ ಇಂದಿಗೂ ಕಾಣುತ್ತೇವೆ. 

ದಲಿತರ ಹಿಂದುಳಿದಿರುವಿಕೆ ರಾಷ್ಟ್ರೀಯ ಸಮಸ್ಯೆ. ಕರ್ನಾಟಕ (ಅಂದಿನ ಮೈಸೂರು)ದಲ್ಲಿ 1918ರಲ್ಲಿ ಮಿಲ್ಲರ್‌ ಕಮಿಷನ್‌ ತನ್ನ ವರದಿಯಲ್ಲಿ ಬ್ರಾಹ್ಮಣರು ಹಾಗೂ ಕ್ರೈಸ್ತರನ್ನು ಬಿಟ್ಟರೆ ಉಳಿದ ಜಾತಿಗಳೆಲ್ಲ ಮೈಸೂರು ರಾಜ್ಯದಲ್ಲಿ ಹಿಂದುಳಿದವರಾಗಿದ್ದಾರೆ ಎಂಬುದಾಗಿ ಬರೆಯಿತು. ಈ ವರದಿಯ ಹಿನ್ನೆಲೆಯಲ್ಲಿ ಸರಕಾರ ಹಿಂದುಳಿದವರ ಅಭಿವೃದ್ಧಿಗಾಗಿ ನಿಯಮಗಳನ್ನು ರಚಿಸಿತು-ಯೋಜನೆಗಳನ್ನು ತಯಾರಿಸಿತು. ಈ ಕಾರ್ಯಕ್ರಮಗಳ ಲಾಭವನ್ನು ಕೆಲವು ಜಾತಿಗಳು ಪಡೆದದ್ದೂ ನಿಜ. ಪುರುಷರು ಈ ಯೋಜನೆಗಳ ಲಾಭವನ್ನು ನೇರವಾಗಿ ಪಡೆದರು, ಪರೋಕ್ಷ ಲಾಭ ಮಹಿಳೆಯರಿಗಾಯಿತು. ದಲಿತರು, ಹಿಂದುಳಿದವರ ಪರವಾಗಿ ನಡೆದ ಈ ಎಲ್ಲ ಬದಲಾವಣೆಯ ಪ್ರಯತ್ನಧಿಗಳಲ್ಲಿ, ಕೆಲ ಜಾತಿಗಳು ರಾಜಕೀಯ ಪ್ರವೇಶ ಮಾಡಿ, ನೆಲೆ ನಿಂತದ್ದು ನಿಜವಾದರೂ ಮಹಿಳೆಯರು ಜಾತಿ ಆಧಾರದಲ್ಲಿ ಲಾಭ ಪಡೆದರೇ ಎಂಬುದು ಅಸ್ಪಷ್ಟ. ಯಾವುದೋ ಒಂದು ಜಾತಿ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಲಾಭ ಪಡೆದರೆ, ಆ ಜಾತಿಯ ಮಹಿಳೆಯರೂ ಈ ಲಾಭ ಪಡೆದರೆನ್ನಲಾಗದು. ಪ್ರತೀ ಜಾತಿಯೂ ತಮ್ಮ ಮಹಿಳೆಯರನ್ನು ನಡೆಸಿಕೊಂಡ ಪರಿಯೇ ಖಂಡನಾಧಿರ್ಹವಾದುದರಿಂದ, ಮಹಿಳೆಯರು ಈ ಕಾರ್ಯಕ್ರಮಗಳ ಲಾಭವನ್ನು ನಿರೀಕ್ಷಿತ ಮಟ್ಟದಲ್ಲಿ ಪಡೆಯದೇ ಹೋದರೆಂಬುದು ತಪ್ಪಲ್ಲ. ಪ.ಜಾತಿ ಹಾಗೂ ಪ. ಪಂಗಡಗಳಿಗೆ ಸೇರಿದವರು ಹಿಂದುಳಿದ ಪಂಗಡಗಳಷ್ಟು ಲಾಭ ಪಡೆಯಲಿಲ್ಲ ಎಂಬುದು ಸ್ಪಷ್ಟ. ಹಾಗಾಗಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮಹಿಳೆಯರ ಸ್ಥಿತಿ ಇನ್ನೂ ಶೋಚನೀಯವಾಗಿದೆ.

ಮೈಸೂರು ಸರಕಾರ,ಮಹಿಳಾ ಮೀಸಲಾತಿ
ಹಿಂದುಳಿದ ಜಾತಿಗಳಿಗೆ ಮೀಸಲಾತಿಗಾಗಿ ಕರ್ನಾಟಕದಲ್ಲಿ ನಡೆದ ಚಟುವಟಿಕೆಗಳು ಹಲವಾರು. 19ನೇ ಶತಮಾನದಲ್ಲಿ, ಟಿಪ್ಪು ಸುಲ್ತಾನನ ಅನಂತರ, ಒಡೆಯರ ಮನೆತನದವರು ಮೈಸೂರು ಸಂಸ್ಥಾನ ಆಳಲು ಆರಂಭಿಸಿದಾಗ, ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ತಮ್ಮದೇ ಆದ ಸಂಘಟನೆಗಳ, ವಿದ್ಯಾ ಸಂಸ್ಥೆಗಳ ಮುಖೇನ ಪ್ರಬಲ ಹಿಂದುಳಿದ ಸಮುದಾಯಗಳಾಗಿ ರೂಪುಗೊಂಡವು. ಮುಸಲ್ಮಾನರೂ ಆ  ಕೋಮುಗಳೊಡನೆ ಗುರ್ತಿಸಿಕೊಂಡರು. ಹೀಗೆ, ಪ್ರದೇಶದ ಮೂರು ಪ್ರಬಲ ಜಾತಿಗಳು ಒಟ್ಟಾಗಿ ಪ್ರಜಾಮಿತ್ರ ಮಂಡಳಿಯನ್ನು ಹುಟ್ಟು ಹಾಕಿದವು. ಮುಂದೆ ಇದೇ ಮಂಡಳಿ ಪ್ರಜಾ ಸಂಯುಕ್ತ ಪಕ್ಷವಾಗಿ ರೂಪಾಂತರಗೊಂಡಿತು. 1907ರಲ್ಲಿ ಆರಂಭಿಸಲ್ಪಟ್ಟ ಪ್ರಥಮ ಮೈಸೂರು ವಿಧಾನ ಪರಿಷದ್‌ ಹಿಂದುಳಿದ ವರ್ಗದವರ ಹೋರಾಟಕ್ಕೆ ಒಳ್ಳೆಯ ವೇದಿಕೆಯಾಯಿತು. ಕಾಂತರಾಜೇ ಅರಸರ ಆಯ್ಕೆ ಹಿಂದುಳಿದ ವರ್ಗಗಳಿಗೆ ಗೆಲುವಿನ ಸಂಕೇತವೆನಿಸಿತು. ಕಾಂತರಾಜೇ ಅರಸರ ಅವಧಿಯಲ್ಲಿ ಹಿಂದುಳಿದ ವರ್ಗಗಳ ಹಲವಾರು ಕಲ್ಯಾಣ ಕಾರ್ಯಕ್ರಮಗಳು ಅನುಷ್ಠಾನಗೊಂಡವು.

ಸ್ವಾತಂತ್ರೊéàತ್ತರ ದಿನಗಳಲ್ಲಿ ಹಿಂದುಳಿದವರ ಅಭಿವೃದ್ಧಿಗಾಗಿ ನಾಗನಗೌಡರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಲಾಯ್ತು. 1975ರಲ್ಲಿ ಆಗಿನ ಮುಖ್ಯಮಂತ್ರಿ ದೇವರಾಜ ಅರಸು, ಎಲ್‌.ಜಿ. ಹಾವನೂರರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ನಾಯಕ ಹಾಗೂ ವಕೀಲರ ಆಯೋಗ ರಚಿಸಿದರು. 11 ವರ್ಷಗಳ ಅನಂತರ ರಾಮಕೃಷ್ಣ ಹೆಗಡೆಯವರ ಸರಕಾರವು ವೆಂಕಟಸ್ವಾಮಿ ನೇತೃತ್ವದಲ್ಲಿ ಮೂರನೆಯ ಹಿಂದುಳಿದ ವರ್ಗಗಳ ಆಯೋಗ ರಚಿಸಿತು. ಈ ಎರಡೂ ಸಮಿತಿ, ಆಯೋಗಗಳಲ್ಲಿ ಮಹಿಳಾ ಪ್ರತಿನಿಧಿಗಳಿರಲಿಲ್ಲ. ಮೈಸೂರು ಸಂಸ್ಥಾನದಲ್ಲಿ ಮಹಿಳೆಯರ ಧ್ವನಿ ಬಹಳ ಕ್ಷೀಣವಾಗಿದ್ದರೂ, ಮಹಿಳೆಯರಿಗೆ ಮತದಾನದ ಹಕ್ಕು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಅವರ ಪ್ರಾತಿನಿಧ್ಯಕ್ಕೆ ಬೇಡಿಕೆ ಕೇಳಿ ಬಂದಿತ್ತು. ಶಿಕ್ಷಣ ಕ್ಷೇತ್ರದಲ್ಲಾಗಲೀ ಸರಕಾರೀ ಹುದ್ದೆಗಳಲ್ಲಾಗಲೀ, ಮೀಸಲಾತಿ ಬಗೆಗೆ ಪ್ರಶ್ನೆ ಉದ್ಭವಿಸಲಿಲ್ಲ. ಹಿಂದುಳಿದ ವರ್ಗಗಳ ಮಹಿಳೆೆಯರ ಮೀಸಲಾತಿ ಬಗೆಗೆ ನಡೆದ ಚರ್ಚೆ, ಚಳುವಳಿಗಳ ಬಗೆಗೆ ಮಾಹಿತಿ ಸಿಗುವುದಿಲ್ಲ. ಯಾವುದೇ ಸಮಿತಿ, ಆಯೋಗ ಜಾತಿ ಮೀಸಲಾತಿ ಬಗೆಗೆ ಶಿಫಾರಸು ಮಾಡಿದರೆ, ಅದು, ಆ ಸಂಬಂಧಿತ ಜಾತಿಗೆ ಸಂಬಂಧ ಪಟ್ಟಿರುತ್ತದಲ್ಲದೇ ಆ ಜಾತಿಯ ಮಹಿಳಾ ಮೀಸಲಾತಿಯ ಬಗೆಗೆ ಮಾಹಿತಿ ಕೊಡುತ್ತಿರಲಿಲ್ಲ. 1930ರ ವಿಧಾನ ಪರಿಷದ್‌ನಲ್ಲಿ ಕಮಲಮ್ಮ ಹಾಗೂ ಸಾಕಮ್ಮ ಎಂಬೀರ್ವ ಮಹಿಳಾ ಪ್ರತಿನಿಧಿಗಳಿದ್ದರೆಂಬುದು ಮಾತ್ರ ತಿಳಿದು ಬರುತ್ತದೆ. ಕರ್ನಾಟಕ ರಾಜ್ಯದಲ್ಲಿ ಮೀಸಲಾತಿಯ ಮಾನದಂಡಗಳನ್ನು ಬೇರೆ ಬೇರೆ ರೀತಿಯಲ್ಲಿ ಬಳಸಲಾಗಿದೆ, ಲಿಂಗಾಧಾರಿತ ಮೀಸಲಾತಿ 1980ರ ಅಂತ್ಯ ಭಾಗದಲ್ಲಿ ಆರಂಭವಾಯ್ತು. 

ಕರ್ನಾಟಕದಲ್ಲಿ ಶಿಕ್ಷಣ, ಸರಕಾರಿ ಹುದ್ದೆಗಳು, ಇನ್ನಿತರ ಸಾಮಾಜಿಕ-ಆರ್ಥಿಕ ಸ್ಥರಗಳಲ್ಲಿ ದಲಿತರ ಪ್ರಾತಿನಿಧ್ಯಕ್ಕಾಗಿ ಹೋರಾಟ ನಡೆಯುತ್ತಾ ಬಂದಿದ್ದರೂ ದಲಿತ ಮಹಿಳೆಯರಿಗಾಗಿ, ಮುಖ್ಯವಾಗಿ ಅವರ ರಾಜಕೀಯ ಸಬಲೀಕರಣಕ್ಕಾಗಿ ನಡೆದ ಪ್ರಯತ್ನಗಳು ಇತ್ತೀಚಿನವು.

ಡಾ| ಕೃಷ್ಣ ಕೊತಾಯ

Advertisement

Udayavani is now on Telegram. Click here to join our channel and stay updated with the latest news.

Next