Advertisement

ಅಘನಾಶಿನಿ ನದಿಗೆ ಅಡ್ಡಗಟ್ಟಿದ ಮಣ್ಣು ತೆರವಿಗೆ ಮನವಿ

03:41 PM May 11, 2019 | Team Udayavani |

ಕುಮಟಾ: ತಾಲೂಕಿನ ಐಗಳಕುರ್ವೆ ಸೇತುವೆ ನಿರ್ಮಾಣ ಕಾಮಗಾರಿಗಾಗಿ ಅಘನಾಶಿನಿ ನದಿಗೆ ಕೆಂಪುಮಣ್ಣು ತುಂಬಿ ತಡೆಕಟ್ಟಿರುವುದರಿಂದ ಮೀನುಗಾರಿಕೆಯಿಂದ ಜೀವನ ನಡೆಸುವವರಿಗೆ ಸಮಸ್ಯೆಯಾಗಿದೆ ಹಾಗೂ ನದಿಯ ಸಹಜ ಪ್ರಕೃತಿಗೆ ಅಪಾಯ ಎದುರಾಗಿದೆ ಎಂದು ತಾಲೂಕಿನ ವಿವಿಧ ಮೀನುಗಾರ ಸಂಘಟನೆಗಳು, ಬೋಟ್ ಹಾಗೂ ದೋಣಿ ಸಂಘಟನೆಗಳ ವತಿಯಿಂದ ಶುಕ್ರವಾರ ಉಪವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್ರಿಗೆ ಮನವಿ ಸಲ್ಲಿಸಲಾಯಿತು.

Advertisement

ತಾಲೂಕಿನಲ್ಲಿ ಅಘನಾಶಿನಿ ನದಿಯನ್ನೇ ನಂಬಿ ಬದುಕುವ 30 ಸಾವಿರಕ್ಕೂ ಹೆಚ್ಚು ಕುಟುಂಬಗಳಿವೆ. ಅಘನಾಶಿನಿ ಜೀವನದಿಯಾಗಿದ್ದು, ವಿಶಿಷ್ಟತೆ, ವಿಶೇಷತೆಗಳ ಆಗರವಾಗಿದೆ. ಇಂತಹ ನದಿಯನ್ನು ಅವೈಜ್ಞಾನಿಕ ಕಾಮಗಾರಿಯಿಂದ ಹಾಳುಗೆಡಹುವುದು ಹಾಗೂ ನದಿಯನ್ನೇ ನಂಬಿರುವ ಜನರ ಬದುಕಿಗೆ ಶಾಶ್ವತ ಬರೆ ಎಳೆಯುವುದು ಸರಿಯಲ್ಲ. ಅಘನಾಶಿನಿ ನದಿಯಲ್ಲಿ ಕೆಂಪುಮಣ್ಣು ಸುರಿದು ನೀರಿನ ಹರಿವಿಗೆ ಮಾತ್ರವಲ್ಲದೇ ದೋಣಿಗಳ ಸುಗಮ ಸಂಚಾರಕ್ಕೂ ಅಡ್ಡಿಪಡಿಸಿರುವುದು ತುರ್ತು ಸಮಸ್ಯೆ ಮಾತ್ರವಲ್ಲದೇ ಹಲವಾರು ದೂರಗಾಮಿ ಸಮಸ್ಯೆಗಳಿಗೂ ಕಾರಣವಾಗಲಿದೆ. ಈ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ, ಪ್ರತಿಭಟನೆಗಳನ್ನು ಮಾಡಿದ್ದರೂ ಸಮಸ್ಯೆ ಬಗೆಹರಿಸುವ ಭರವಸೆ ಮಾತ್ರ ಈಡೇರಿಲ್ಲ. ದೋಣಿಗಳನ್ನು ಕ್ರೇನ್‌ ಮೂಲಕ ದಾಟಿಸುವ ವಿಧಾನವೂ ಸುರಕ್ಷಿತ ಹಾಗೂ ಸಮರ್ಪಕ ಕ್ರಮವಲ್ಲ.

ಆದ್ದರಿಂದ ನಮ್ಮ ಸಮಸ್ಯೆಗೆ ನಾವೇ ಪರಿಹಾರ ಕಂಡುಕೊಳ್ಳಲು ಮುಂದಾಗಲಿದ್ದೇವೆ. ಮೇ 14 ರೊಳಗೆ ಹೊಳೆಗೆ ಅಡ್ಡಗಟ್ಟಿದ ಮಣ್ಣು ತೆಗೆಯದೇ ಇದ್ದಲ್ಲಿ ಮೇ 15ರಂದು ಪಾತಿ ದೋಣಿಗಳ ಮೂಲಕ ಸೇತುವೆ ಕಾಮಗಾರಿಗಾಗಿ ಮಣ್ಣು ಸುರಿದ ಜಾಗಕ್ಕೆ ತೆರಳಿ ನಮಗೆ ಅವಶ್ಯಕ ಇರುವಷ್ಟು ಮಣ್ಣು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗುತ್ತೇವೆ. ನಮ್ಮ ಈ ಕಾರ್ಯವನ್ನು ತಡೆದರೆ ಅಲ್ಲಿಯೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧರಿದ್ದೇವೆ. ಈ ಸಂದರ್ಭದಲ್ಲಿ ಉಂಟಾಗುವ ಅನಾಹುತಗಳಿಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರೇ ಜವಾಬ್ದಾರರು ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು.

ಗಣೇಶ ಅಂಬಿಗ, ರಾಮಚಂದ್ರ ಅಂಬಿಗ, ಗೋಪಾಲ ಅಂಬಿಗ, ಸುಮಂತ್‌ ಅಂಬಿಗ, ನಾಡದೋಣಿ ಹಾಗೂ ಸದಾನಂದ ಹರಿಕಂತ್ರ, ಪರ್ಶಿನ್‌-ಟ್ರಾಲ್ ಇನ್ನಿತರ ಬೋಟ್ ಯೂನಿಯನ್‌ ಹಾಗೂ ಹರಿಕಂತ್ರ ಸಮಾಜ ಮತ್ತಿತರ ಸಂಘಟನೆಗಳಿಂದ ಗೋಪಾಲ ಹೊಸ್ಕಟ್ಟಾ, ಸುಧಾಕರ ತಾರಿ, ಸುರೇಶ ಹರಿಕಂತ್ರ ಹೊರಭಾಗ, ಉದಯ ಹರಿಕಂತ್ರ, ಜಗದೀಶ ಹರಿಕಂತ್ರ, ಉಸ್ಮಾನ್‌ ಸಾಬ್‌, ನಾಗಪ್ಪ ಹರಿಕಂತ್ರ, ವೀರಪ್ಪ ಹರಿಕಂತ್ರ ಇನ್ನಿತರರು ಮನವಿ ಸಲ್ಲಿಸುವ ನಿಯೋಗದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next