Advertisement

ಹಲ್ಲೆಗೆ ಐಎಂಎ ವೈದ್ಯರ ಪ್ರತಿಭಟನ ಮನವಿ

11:12 PM Jun 14, 2019 | Team Udayavani |

ಉಡುಪಿ: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ದೇಶಾದ್ಯಂತ ಭಾರತೀಯ ವೈದ್ಯ ಸಂಘದ (ಐಎಂಎ) ಸದಸ್ಯ ವೈದ್ಯರು ಶುಕ್ರವಾರ ಪ್ರತಿಭಟನೆ ನಡೆಸಿದ್ದು, ಅದರ ಅಂಗವಾಗಿ ಉಡುಪಿ ಸಂಘದ ಸದಸ್ಯರು
ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.

Advertisement

ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆಯ ವಿರುದ್ಧ ರಾಷ್ಟ್ರೀಯ ಕಾಯಿದೆ ರೂಪಿಸಿ ಅನುಷ್ಠಾನಿಸಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರಿಗೆ ಮನವಿ ಸಲ್ಲಿಸಲಾಯಿತು. ಉಡುಪಿ ಕರಾವಳಿ ಐಎಂಎ ಅಧ್ಯಕ್ಷ ಡಾ|ಗುರುಮೂರ್ತಿ ಭಟ್‌ ನೇತೃತ್ವದಲ್ಲಿ ಜಿಲ್ಲಾಧಿಕಾರಿಯವರ ಮೂಲಕ ಮನವಿ ಪತ್ರ ಕಳುಹಿಸಲಾಯಿತು. ದೇಶಾದ್ಯಂತ ವೈದ್ಯರು ಪ್ರತಿಭಟನೆ ಅಂಗವಾಗಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದಂತೆ ಉಡುಪಿಯಲ್ಲಿಯೂ ಸಾಂಕೇತಿಕವಾಗಿ ಕಪ್ಪು ಪಟ್ಟಿ ಧರಿಸಿ ಮನವಿ ಸಲ್ಲಿಸಲಾಯಿತು.

ವೈದ್ಯಕೀಯ ರಂಗದ ಸಿಬಂದಿ ಮೇಲೆ ಹಲ್ಲೆ, ಹಿಂಸೆ ನಡೆಯುವುದನ್ನು ವಿಶ್ವ ವೈದ್ಯಕೀಯ ಸಂಘದವರೂ ಖಂಡಿಸಿದ್ದಾರೆ. ಆಸ್ಪತ್ರೆಯಲ್ಲಿ ನಡೆಯುವ ಹಿಂಸಾಚಾರದ ವಿರುದ್ಧ ರಾಷ್ಟ್ರೀಯ ಕಾನೂನು ರೂಪಿಸಲು ಭಾರತೀಯ ವೈದ್ಯ ಸಂಘ ಒತ್ತಾಯಿಸಿದೆ. ವೈದ್ಯರ ಮೇಲಿನ ಹಲ್ಲೆಯಿಂದ ರೋಗಿಗಳಿಗೆ ಮಾತ್ರ ತೊಂದರೆಯಾಗುವುದಲ್ಲದೆ, ಪರೋಕ್ಷ ದುಷ್ಪರಿಣಾಮಗಳೂ ಇವೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next