Advertisement

ಪಂಪ್‌ವೆಲ್ ಬಸ್‌ ನಿಲ್ದಾಣ ಪಡೀಲ್‌ಗೆ ಸ್ಥಳಾಂತರ ?

01:43 AM Jun 25, 2019 | Sriram |

ವಿಶೇಷ ವರದಿ-ಮಹಾನಗರ: ಸುಸಜ್ಜಿತ ಬಸ್‌ ನಿಲ್ದಾಣಕ್ಕಾಗಿ 10 ವರ್ಷಗಳ ಹಿಂದೆ ಪಂಪ್‌ವೆಲ್‌ನಲ್ಲಿ ಭೂಸ್ವಾಧೀನ ಪಡಿಸಿ, ವಿವಿಧ ಸ್ತರದಲ್ಲಿ ಚರ್ಚೆ- ಸಭೆಗಳೆಲ್ಲ ನಡೆದ ಬಳಿಕ ಈಗ ಇದನ್ನು ಪಂಪ್‌ವೆಲ್ನಿಂದ ಪಡೀಲ್‌ಗೆ ಸ್ಥಳಾಂತರಿಸಲು ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮರು ಚಿಂತನೆ ನಡೆಸುತ್ತಿದೆ.

Advertisement

ಪಡೀಲ್‌ನಲ್ಲಿ ದ.ಕ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಅದೇ ಪರಿಸರದಲ್ಲಿ ಬಸ್‌ ನಿಲ್ದಾಣ ಕೂಡ ನಿರ್ಮಾಣವಾದರೆ ಸಾರ್ವಜನಿಕರಿಗೆ ಉಪಯೋಗವಾಗುತ್ತದೆ. ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣ ಕೂಡ ಸನಿಹದಲ್ಲಿಯೇ ಇರುವ ಹಿನ್ನೆಲೆಯಲ್ಲಿ ಬಸ್‌ ನಿಲ್ದಾಣವನ್ನು ಪಡೀಲಿಗೆ ಸ್ಥಳಾಂತರಿಸುವುದು ಸೂಕ್ತ ಎಂಬ ಬಗ್ಗೆ ಚರ್ಚೆ ಶುರುವಾದ ಹಿನ್ನೆಲೆಯಲ್ಲಿ ಈ ಯೋಜನೆ ಮರುಜೀವ ಪಡೆದುಕೊಂಡಿದೆ.

ಪಡೀಲ್ನ ನೂತನ ಜಿಲ್ಲಾಧಿಕಾರಿ ಸಂಕೀರ್ಣದ ಸಮೀಪದಲ್ಲಿ ಸುಮಾರು 17 ಎಕ್ರೆ ಖಾಸಗಿ ಭೂಮಿ ಲಭ್ಯವಿದ್ದು, ಇದನ್ನು ನೂತನ ಬಸ್‌ ನಿಲ್ದಾಣಕ್ಕೆ ಬಳಸಿಕೊಳ್ಳುವ ಬಗ್ಗೆ ಭೂಮಾಲಕರೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ. ಪಂಪ್‌ವೆಲ್ನಿಂದ ಪಡೀಲ್ ಬಸ್‌ ನಿಲ್ದಾಣಕ್ಕೆ ಸುಮಾರು 2ರಿಂದ 3 ಕಿ.ಮೀ. ದೂರವಿದೆ.

ಪಂಪ್‌ವೆಲ್ ನಿರಾಸಕ್ತಿ ಯಾಕೆ ?
ಪಂಪ್‌ವೆಲ್ ಈಗಾಗಲೇ ಫ್ಲೈಓವರ್‌ ಸಹಿತ ವಿವಿಧ ಕಾರಣದಿಂದ ಸಂಚಾರ ಒತ್ತಡದ ಕೇಂದ್ರವಾಗಿ ಪರಿಣಮಿಸಿದೆ. ಮುಂದೆ ಇದೇ ವ್ಯಾಪ್ತಿಯಲ್ಲಿ ಬಸ್‌ ನಿಲ್ದಾಣ ಮಾಡಿದರೆ ಟ್ರಾಫಿಕ್‌ ಒತ್ತಡ ಇನ್ನಷ್ಟು ಹೆಚ್ಚಳವಾಗಬಹುದು ಎಂಬ ಆತಂಕದಿಂದಾಗಿ ಬಸ್‌ ನಿಲ್ದಾಣ ಬೇರೆ ಕಡೆಗೆ ಸ್ಥಳಾಂತರಿಸುವುದೇ ಉತ್ತಮ ಎಂಬ ಅಭಿಪ್ರಾಯ ಸ್ಮಾರ್ಟ್‌ ಸಿಟಿ ಸಭೆಗಳಲ್ಲಿ ವ್ಯಕ್ತವಾಗಿವೆ.

ಜತೆಗೆ, ಸದ್ಯ ಪಂಪ್‌ವೆಲ್ನಲ್ಲಿ ನಿಗದಿ ಮಾಡಿದ ಜಾಗದಲ್ಲಿ ಮಳೆಗಾಲದ ಸಂದರ್ಭ ಸಮಸ್ಯೆಗಳಾಗುವ ಬಗ್ಗೆಯೂ ತಜ್ಞರು ತಿಳಿಸಿದ್ದಾರೆ. ಪಂಪ್‌ವೆಲ್ ಬಸ್‌ ನಿಲ್ದಾಣದಿಂದ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಬಗ್ಗೆ ಹೆದ್ದಾರಿ ಇಲಾಖೆ ಮತ್ತು ಪಾಲಿಕೆ ಮಧ್ಯೆ ವಿಚಾರ ವ್ಯತ್ಯಾಸ ಮೂಡಿಬಂದ ಹಿನ್ನೆಲೆಯಲ್ಲಿ ಈ ಯೋಜನೆ ಕಾರ್ಯ ಸಾಧುವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

Advertisement

‘ಸಮಗ್ರ ಟ್ರಾನ್ಸ್‌ಪೊರ್ಟೇಶನ್‌ ಹಬ್‌’ ಕನಸಿತ್ತು!
ಪಂಪ್‌ವೆಲ್ನಲ್ಲಿ ಸುಮಾರು 20 ಎಕ್ರೆ ಪ್ರದೇಶದಲ್ಲಿ ಖಾಸಗಿ ಇಂಟರ್‌ ಸಿಟಿ, ಇಂಟ್ರಾಸಿಟಿ ಬಸ್‌ಗಳಿಗೆ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಶಾಪಿಂಗ್‌ ಸೆಂಟರ್‌, ಕಚೇರಿಗಳನ್ನು ನಿರ್ಮಿಸುವ ‘ಸಮಗ್ರ ಟ್ರಾನ್ಸ್‌ಪೋರ್ಟೆಶನ್‌ ಹಬ್‌’ ನಿರ್ಮಾಣಕ್ಕೆ ಮಂಗಳೂರು ಮಹಾ ನಗರಪಾಲಿಕೆ ಯೋಜನೆ ರೂಪಿಸಿತ್ತು. ಇದಕ್ಕೆ ಸಂಬಂಧಿಸಿ 2009ರಲ್ಲಿ 7.23 ಎಕ್ರೆ ಖಾಸಗಿ ಜಮೀನು ಸ್ವಾಧೀನ ಪಡಿಸಲಾಗಿತ್ತು.

ಇದರ ಸುತ್ತ ಇರುವ ಸರಕಾರಿ ಜಾಗದ ಪರಂಬೋಕು, ಖಾಸಗಿ ಸ್ವಾಮ್ಯದ ಸುಮಾರು 4 ಎಕ್ರೆ ಜಮೀನು ಕೂಡ ಇದೇ ಉದ್ದೇಶಕ್ಕಾಗಿ ಕಾದಿರಿಸಲಾಗಿತ್ತು. ಹೆಚ್ಚುವರಿಯಾಗಿ 11.59 ಎಕ್ರೆ ಖಾಸಗಿ ಜಮೀನು ಸ್ವಾಧೀನ ಮಾಡಲಾಗಿತ್ತು. ಆದರೆ 11.59 ಎಕ್ರೆ ಭೂಮಿಯನ್ನು ಕಳೆದ ಬಾರಿ ಪಾಲಿಕೆ ಕೈಬಿಟ್ಟಿತ್ತು.

ಉಪ ಬಸ್‌ ನಿಲ್ದಾಣ
ನಗರದಲ್ಲಿ ಸುಸಜ್ಜಿತ ಬಸ್‌ ನಿಲ್ದಾಣಗಳನ್ನು ಮಾಡುವುದು ಸ್ಮಾರ್ಟ್‌ ಸಿಟಿ ಯೋಜನೆಯ ಉದ್ದೇಶ. ಇದರಂತೆ ಪಂಪ್‌ವೆಲ್ನ ಮುಖ್ಯ ಬಸ್‌ನಿಲ್ದಾಣವನ್ನು ಪಡೀಲ್ಗೆ ಸ್ಥಳಾಂತರಿಸಲು ಯೋಚಿಸಲಾಗಿದೆ. ಹೀಗಾಗಿ ಪಂಪ್‌ವೆಲ್ನಲ್ಲಿ ‘ಉಪ ಬಸ್‌ ನಿಲ್ದಾಣ’ ನಿರ್ಮಿಸುವ ಬಗ್ಗೆ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಹಾಗೇ ಕೂಳೂರಿನಲ್ಲಿಯೂ ಉಪಬಸ್‌ನಿಲ್ದಾಣ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಆದರೆ, ಈ ಕುರಿತಂತೆ ಸ್ಮಾರ್ಟ್‌ಸಿಟಿ ಸಭೆಗಳಲ್ಲಿ ಪ್ರಸ್ತಾವ ಆಗಿದೆ.

 ಪಡೀಲ್‌ನಲ್ಲೇ ಬಸ್‌ ನಿಲ್ದಾಣ

ಪಂಪ್‌ವೆಲ್ನಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಿಸುವ ಪ್ರಸ್ತಾವವನ್ನು ಕೈಬಿಟ್ಟಿಲ್ಲ. ಆದರೆ, ಪಡೀಲ್ನಲ್ಲಿ ಜಿಲ್ಲಾಧಿಕಾರಿ ಕಚೇರಿ ಬರುವ ಕಾರಣದಿಂದ ಅದೇ ಪರಿಸರದಲ್ಲಿ ಸುಸಜ್ಜಿತ ಬಸ್‌ನಿಲ್ದಾಣ ಮಾಡುವ ಬಗ್ಗೆ ಈಗಾಗಲೇ ತೀರ್ಮಾನ ಮಾಡಲಾಗಿದೆ. ಜಾಗ ನಿಗದಿಯಾದ ಬಳಿಕ ಪಂಪ್‌ವೆಲ್ ಬಸ್‌ನಿಲ್ದಾಣಕ್ಕಾಗಿ ಮೀಸಲಿಟ್ಟ ಸ್ಥಳದ ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
ನಾರಾಯಣಪ್ಪ,

ಆಯುಕ್ತರು, ಮನಪಾ
Advertisement

Udayavani is now on Telegram. Click here to join our channel and stay updated with the latest news.

Next