Advertisement

ಕೃಷ್ಣಾ ನದಿ ಪ್ರವಾಹ : ರಬಕವಿ-ಬನಹಟ್ಟಿ ತಾಲೂಕಿನಲ್ಲಿ 1207 ಕುಟುಂಬಗಳ ಸ್ಥಳಾಂತರ

06:27 PM Jul 28, 2021 | Team Udayavani |

ಬನಹಟ್ಟಿ: ಕೃಷ್ಣಾ ಮತ್ತು ಘಟಪ್ರಭಾ ನದಿಗಳಲ್ಲಿ ಉಂಟಾದ ಪ್ರವಾಹದ ಸಂತ್ರಸ್ತರ ನೆರವಿಗಾಗಿ ತಾಲ್ಲೂಕು ಆಡಳಿತ 12 ಕಾಳಜಿ ಕೇಂದ್ರಗಳನ್ನು ಆರಂಭಿಸಿದೆ. ಒಟ್ಟು 1207 ಕುಟುಂಬಗಳ 4867 ಜನರನ್ನು ಹಾಗೂ 4020 ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ. ಕೆಲವು ಕುಟುಂಬದವರು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ತಾಲ್ಲೂಕು ಆಡಳಿತ ನಿರ್ಮಾಣ ಮಾಡಿದ ಕಾಳಜಿ ಕೇಂದ್ರಗಳಲ್ಲಿ 1127 ಜನರು ವಾಸವಾಗಿದ್ದಾರೆ ಎಂದು ರಬಕವಿ ಬನಹಟ್ಟಿ ತಹಶೀಲ್ದಾರ್ ಸಂಜಯ ಇಂಗಳೆ ತಿಳಿಸಿದರು.

Advertisement

ಅವರು ಬುಧವಾರ ಸಮೀಪದ ಆಸಂಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಿರ್ಮಾಣ ಮಾಡಲಾದ ಸಂತ್ರಸ್ತರ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಕಾಳಜಿ ಕೇಂದ್ರದಲ್ಲಿರುವ ಜನರಿಗೆ ಶಾಲೆಯ ಬಿಸಿಯೂಟದ ಅಡುಗೆಯವರು ಊಟ ತಯಾರು ಮಾಡುತ್ತಿದ್ದಾರೆ. ಅದೇ ರೀತಿಯಾಗಿ ಇಲ್ಲಿ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ, ವೈದ್ಯರು, ಪಶು ವೈದ್ಯರು, ವಿದ್ಯುತ್ ವ್ಯವಸ್ಥೆ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಕಾಳಜಿ ಕೇಂದ್ರದಲ್ಲಿರುವ ಜನರಿಗೆ ಯಾವುದೆ ತೊಂದರೆಯಾಗದಂತೆ ಅಧಿಕಾರಿಗಳು ಗಮನ ನೀಡುತ್ತಿದ್ದಾರೆ.

ಯಾವುದೆ ಪ್ರಾಣಹಾನಿ ಇಲ್ಲ: ತಾಲ್ಲೂಕಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರವಾಹವಿದ್ದರೂ ಇದುವರೆಗೆ ಯಾವುದೆ ಜನ ಹಾಗೂ ಜಾನುವಾರುಗಳ ಪ್ರಾಣಹಾನಿಯಾಗಿಲ್ಲ.

ಇದನ್ನೂ ಓದಿ :ಯಡಿಯೂರಪ್ಪನವರಷ್ಟೇ ಸಮರ್ಥವಾಗಿ ಬೊಮ್ಮಾಯಿ ಕೂಡ ಕೆಲಸ ಮಾಡ್ತಾರೆ : ಬಸವ ಮರುಳಸಿದ್ಧ ಸ್ವಾಮೀಜಿ

ಬಹಳಷ್ಟು ರಸ್ತೆಗಳು ಜಲಾವೃತ: ರಬಕವಿ ಬನಹಟ್ಟಿ ತಾಲ್ಲೂಕಿನ ಅನೇಕ ಕಡೆಗಳಲ್ಲಿ ಪ್ರವಾಹದಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು, ಕೆಲವು ಗ್ರಾಮಗಳು ನಡುಗಡ್ಡೆಗಳಾಗಿವೆ.

Advertisement

ತೇರದಾಳ ಹಳಿಂಗಳಿ, ಮದನಮಟ್ಟಿ ಅಸ್ಕಿ, ರಬಕವಿ ಮದನಮಟ್ಟಿ ಹಳಿಂಗಳಿ ರಸ್ತೆ, ಕುಲಹಳ್ಳಿ ಹಿಪ್ಪರಗಿ ತೋಟದ, ಕುಲಹಳ್ಳಿ ಗೊಂಬಿಗುಡ್ಡ ಅಸ್ಕಿ ರಸ್ತೆಗಳು ಹಾಗೂ ರಬಕವಿ ಬನಹಟ್ಟಿ ಜಾಕವೆಲ್ಗೆ ಹೋಗುವ ರಸ್ತೆ ಕೂಡಾ ಜಲಾವೃತಗೊಂಡಿವೆ ಎಂದು ತಹಶೀಲ್ದಾರ್ ಸಂಜಯ ಇಂಗಳೆ ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ ಹಿಪ್ಪರಗಿ, ನೋಡಲ್ ಅಧಿಕಾರಿ ಶ್ರೀನಿವಾಸ ಜಾಧವ, ಗ್ರೇಡ್-2 ತಹಶೀಲ್ದಾರ್ ಎಸ್.ಬಿ.ಕಾಂಬಳೆ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಪ್ರವೀಣ ಶಿರಬೂರ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next