ಬಂಟ್ವಾಳ: ಅಡಿಕೆ ಎಲೆ ಹಳದಿ ರೋಗ ಸಂತ್ರಸ್ತ ರೈತರ ಸ್ವಯಂಘೋಷಿತ ಅರ್ಜಿಯ ಆಧಾರದಲ್ಲಿ ವರದಿ ಬಿಡುಗಡೆ, ಹಕ್ಕೊತ್ತಾಯ ಮಂಡನೆ ಕರ್ನಾಟಕ ರಾಜ್ಯ ರೈತ ಸಂಘ, ಯುವ ಘಟಕ ಮತ್ತು ಪೃಥ್ವಿ ಪ್ರತಿಷ್ಠಾನದ ಆಶ್ರಯದಲ್ಲಿ ತಾಂತ್ರಿಕ ಕಾರ್ಯಾಗಾರವು ಶುಕ್ರವಾರ ಬಿ.ಸಿ.ರೋಡಿನಲ್ಲಿ ನಡೆಯಿತು.
ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ, ಕೃಷಿ ಆರ್ಥಿಕ ತಜ್ಞ ಡಾ| ಪ್ರಕಾಶ್ ಕಮ್ಮರಡಿ ಅವರು ಅಡಿಕೆ ಎಲೆ ಹಳದಿ ರೋಗದ ವ್ಯಾಪ್ತಿ, ವಿಸ್ತಾರ, ಪ್ರಸ್ತುತ ಸನ್ನಿವೇಶದಲ್ಲಿ ಬೆಳೆಗಾರರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿಷಯ ಮಂಡನೆ ಮಾಡಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಪ್ರಸ್ತಾವನೆಗೈದು, ಸುಳ್ಯದ ಕಲ್ಲುಗುಂಡಿಯಲ್ಲಿ ಆರಂಭಗೊಂಡ ಹಳದಿ ರೋಗವು ಕಳೆದ 4 ದಶಕಗಳಿಂದೀಚೆಗೆ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿಯ ಜತೆಗೆ ಕೊಡಗು, ಶಿವಮೊಗ್ಗ, ಕೊಪ್ಪ ಭಾಗಕ್ಕೂ ವಿಸ್ತರಿಸಿದೆ. ಸುಮಾರು 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಷ್ಟ ಉಂಟಾಗಿದ್ದು, ಸರಕಾರದ ಮುಂದೆ ಸಂತ್ರಸ್ತರು, ಸಂಘಟನೆಗಳು ಆರ್ಥಿಕ ಪುನಃಶ್ಚೇತನಕ್ಕೆ ಒತ್ತಾಯ ಮಂಡಿಸಿದರೂ ಪ್ರಯೋಜನ ಆಗದೆ ಒಂದಷ್ಟು ಮಂದಿಗೆ ಬೆಳೆ ನಷ್ಟದಿಂದ ಜೀವನ ನಡೆಸುವುದು ಕೂಡ ಕಷ್ಟವಾಗಿತ್ತು. ಹೀಗಾಗಿ ಸುಮಾರು 1,200 ರೈತರು ಸ್ವಯಂ ಅರ್ಜಿ ಸಲ್ಲಿಸಿ ಎಂದು ವಿವರಿಸಿದರು.
ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ, ಹಣಕಾಸು ಮತ್ತು ಆರ್ಥಿಕ ತಜ್ಞ ಜೀವಿ ಸುಂದರ್, ಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆನಾಂìಡಿಸ್, ಪ್ರಧಾನ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಬಾಳ್ತಿಲ, ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್, ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ವಿಟ್ಲ, ಜಿಲ್ಲಾ ಕಾರ್ಯದರ್ಶಿ ಡಿ.ಕೆ. ಶಾಹುಲ್ ಹಮೀದ್, ನಾರಾಯಣಸ್ವಾಮಿ ಶೃಂಗೇರಿ ಉಪಸ್ಥಿತರಿದ್ದರು.
ಸಂಘದ ಯುವ ಘಟಕದ ರಾಜ್ಯ ಸಂಚಾಲಕ ಆದಿತ್ಯನಾರಾಯಣ ಕೊಲ್ಲಾಜೆ ನಿರ್ವಹಿಸಿದರು.