Advertisement

ದೇಗುಲಗಳಿಗೆ ಬಿಡುಗಡೆಯ ಭಾಗ್ಯ:ಅನುಕೂಲದ ಲೆಕ್ಕ

11:43 PM Jan 03, 2022 | Team Udayavani |

ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಮಾತನಾಡುತ್ತಾ, ರಾಜ್ಯದಲ್ಲಿರುವ ದೇವಸ್ಥಾನಗಳನ್ನು ಸರಕಾರದ ಹಿಡಿತದಿಂದ ಬಿಡಿಸುವುದಾಗಿ ಹೇಳಿದ್ದಾರೆ. ಬಜೆಟ್‌ಗೂ ಮುನ್ನವೇ ಕಾನೂನು ತರುವುದಾಗಿ ಹೇಳಿದ್ದು, ಇದು ಜಾರಿಯಾಗಬಲ್ಲದೇ ಎಂಬ ಚರ್ಚೆಗಳೂ ಆರಂಭವಾಗಿವೆ. ವಿಪಕ್ಷಗಳು ಇದನ್ನು ವಿರೋಧಿಸುತ್ತಿದ್ದರೆ, ಆಡಳಿತ ಪಕ್ಷ ಬಿಜೆಪಿ ನಾಯಕರು ಬೆಂಬಲಿಸುತ್ತಿದ್ದಾರೆ. ಈ “ಸ್ವಾತಂತ್ರ್ಯ ಹೋರಾಟ’ದ ಸುತ್ತಲಿನ ಲೆಕ್ಕಾಚಾರ ಇಲ್ಲಿದೆ..

Advertisement

ಸಿಎಂ ಬೊಮ್ಮಾಯಿ ಹೇಳಿದ್ದು ಏನು?
ಸದ್ಯ ರಾಜ್ಯದಲ್ಲಿರುವ ಹಲವು ದೇವಾಲಯಗಳು ಸರಕಾರಿ ಇಲಾಖೆಯ ಹಿಡಿತದಲ್ಲಿದೆ. ಅಧಿಕಾರಿಗಳ ಕೈಯಲ್ಲಿ ನರಳುತ್ತಿರುವ ದೇವಾಲಯಗಳನ್ನು ಮುಕ್ತಿಗೊಳಿಸಬೇಕಿದೆ. ನಾವು ದೇವಾಲಯಗಳ ಆಡಳಿತ ಮಂಡಳಿಗಳಿಗೆ ಅಧಿಕಾರ ಕೊಡುವಂಥ ಕಾಯ್ದೆಯೊಂದನ್ನು ಜಾರಿಗೆ ತರಲಿದ್ದೇವೆ. ಸ್ಥಳೀಯ ಆಡಳಿತ ಮಂಡಳಿಗಳೇ ದೇವಾಲಯಗಳ ಅಭಿವೃದ್ಧಿಯನ್ನು ನೋಡಿಕೊಳ್ಳಲಿವೆ ಎಂದು ಬೊಮ್ಮಾಯಿ ಅವರು ಹೇಳಿದ್ದರು.

ಏನಿದು ದೇಗುಲಗಳ ಸ್ವಾತಂತ್ರ್ಯ ಬೇಡಿಕೆ?
ಈ ವಿವಾದ ಇಂದು-ನಿನ್ನೆಯದಲ್ಲ. ದಶಕಗಳಿಂದಲೂ ಇಂಥದ್ದೊಂದು ಚರ್ಚೆ ದೇಶದ ವಿವಿಧೆಡೆ ಕೇಳಿಬರುತ್ತಲೇ ಇದೆ. ಆದರೆ  ಕಳೆದ ವರ್ಷ ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನ ಈ ಚರ್ಚೆ ಬಲಗೊಂಡಿತ್ತು. ಅದರಲ್ಲೂ ಸದ್ಗುರು ಜಗ್ಗಿ ವಾಸುದೇವ್‌ ಅವರು ದೇಗುಲಗಳ ಸ್ವಾತಂತ್ರ್ಯದ ಹೋರಾಟದ ನೇತೃತ್ವ ವಹಿಸಿಕೊಂಡಿದ್ದರು. ಅದರಲ್ಲೂ ತಮಿಳುನಾಡಿನ ದೇಗು ಲಗಳನ್ನು ಭಕ್ತಾದಿಗಳ ವಶಕ್ಕೆ ನೀಡಬೇಕು ಎಂಬುದು ಇವರ ವಾದವಾಗಿತ್ತು. ಈ ವಿವಾದ ಶುರುವಾಗಿದ್ದು ಬ್ರಿಟಿಷರ ಕಾಲದಿಂದ. 19ನೇ ಶತಮಾನದಲ್ಲಿ ಬ್ರಿಟಿಷರ ಆಳ್ವಿಕೆ ಕಾಲದಲ್ಲಿಯೇ ದೇವಸ್ಥಾನಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದರು. ಇದರಿಂದಾಗಿ ದೇವಾಲಯಗಳು ಸಾಕಷ್ಟು ಶೋಷಣೆಗೂ ಒಳಗಾಗಿದ್ದವು. ಇತಿಹಾಸವನ್ನು ಕೆದಕಿದರೆ ಹಲವು ದೇವಸ್ಥಾನಗಳು ರಾಜ ಮನೆತನಗಳ ಹಿಡಿತದಲ್ಲಿತ್ತು. ಕೆಲವು ರಾಜಮನೆತನಗಳು ದೇಗುಲಗಳಿಗಾಗಿ ಟ್ರಸ್ಟ್‌ಗಳನ್ನು ಮಾಡಿ ವ್ಯವಹಾರ ನೋಡಿಕೊಳ್ಳಲು ಆರಂಭಿಸಿದ್ದರು. ಇದಕ್ಕೆ ಉದಾಹರಣೆ ಎಂದರೆ, ಮೈಸೂರು, ತಿರುವಾಂಕೂರು ಮತ್ತು ಕೊಚ್ಚಿ. ಇಲ್ಲಿ  ರಾಜರುಗಳು ದೇವಸ್ಥಾನಗಳನ್ನು ಕಟ್ಟಿಸುತ್ತಿದ್ದರು. ಅಷ್ಟೇ ಅಲ್ಲ, ಇವುಗಳ ನಿರ್ವಹಣೆಗಾಗಿ ಕೃಷಿ ಭೂಮಿ ನೀಡುವುದಷ್ಟೇ ಅಲ್ಲ, ಅಪಾರ ಪ್ರಮಾಣದ ಬಂಗಾರವೂ ಸೇರಿದಂತೆ ಸಂಪತ್ತನ್ನೂ ಕೊಡುತ್ತಿದ್ದರು.

ಈಸ್ಟ್‌ ಇಂಡಿಯಾ ಕಂಪೆನಿಯ ಹಿಡಿತ
ಭಾರತವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡ ಬ್ರಿಟಿಷರ ಈಸ್ಟ್‌ ಇಂಡಿಯಾ ಕಂಪೆನಿ, ದೇವಾಲಯಗಳ ಸಂಪತ್ತಿನ ಮೇಲೆ ಕಣ್ಣು ಹಾಕಿತು. ದೇವಸ್ಥಾನಗಳನ್ನು ತನ್ನ ವಶಕ್ಕೆ ತೆಗೆದುಕೊಂಡು ಅವುಗಳಿಂದ ಬರುವ ಆದಾಯವನ್ನು ತಾನೇ ತೆಗೆದುಕೊಂಡು, ಅವುಗಳಿಗೆ ಅನುದಾನ ರೂಪದಲ್ಲಿ ಹಣ ನೀಡಲಾಗುತ್ತಿತ್ತು. ಬ್ರಿಟಿಷ್‌ ಕಲೆಕ್ಟರ್‌ಗಳೇ ದೇವಸ್ಥಾನದ ಆಡಳಿತ ನೋಡಿಕೊಳ್ಳುತ್ತಿದ್ದರು.  ಈಸ್ಟ್‌ ಇಂಡಿಯಾ ಕಂಪೆನಿಯ  ದೇವಾಲಯಗಳ ನಿರ್ವಹಣೆ ವಿಚಾರ ಬ್ರಿಟನ್‌ನಲ್ಲಿನ ಚರ್ಚ್‌ಗಳ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಈ ಬಗ್ಗೆ ಅವುಗಳು ವಿರೋಧ ಮಾಡಿದಾಗ, 1833ರಲ್ಲಿ ಈಸ್ಟ್‌ ಇಂಡಿಯಾ ಕಂಪೆನಿ, ದೇವಸ್ಥಾನಗಳ ಆಡಳಿತವನ್ನು ಮತ್ತೆ ಭಕ್ತಾದಿಗಳ ಕೈಗೆ ಒಪ್ಪಿಸಿತು ಎಂದು ಕೆಲವು ವರದಿಗಳು ಹೇಳುತ್ತವೆ. ಇನ್ನು ಕೆಲ ಮಾಹಿತಿಗಳ ಪ್ರಕಾರ, ಹಲವು ದೇವಸ್ಥಾನ ಗಳನ್ನು ಬ್ರಿಟಿಷರು ಹಾಳುಗೆಡವಿ ಸಂಪತ್ತನ್ನು  ಕೊಳ್ಳೆ ಹೊಡೆದರು, ಅಭಿವೃದ್ಧಿಯನ್ನು ಕಡೆಗಣಿಸಿದರು.

ಸ್ವಾತಂತ್ರ್ಯಾನಂತರ..
ನಿಜವಾಗಿಯೂ ದೇವಸ್ಥಾನಗಳ ಮೇಲೆ ಸಂಪೂರ್ಣ ಹಿಡಿತ ಶುರುವಾಗಿದ್ದು ಸ್ವಾತಂತ್ರ್ಯಾನಂತರವೇ. 1951ರಲ್ಲಿ ಮದ್ರಾಸ್‌ ಹಿಂದೂ ಧಾರ್ಮಿಕ ಮತ್ತು ದಾನ ದತ್ತಿ ಕಾಯ್ದೆಯೊಂದನ್ನು ಭಾರತ ಸರಕಾರ ತಂದಿತು. ಈ ಮೂಲಕ ದೇವಸ್ಥಾನಗಳು ಮತ್ತು ಮಠಗಳಲ್ಲಿ ಜಾತ್ಯತೀತ ವ್ಯವಹಾರಗಳನ್ನು ನಡೆಸಲು ಗರಿಷ್ಠ ಶಕ್ತಿಯನ್ನು ನೀಡಲಾಯಿತು. ದೇಗುಲಗಳನ್ನು ನೋಡಿಕೊಳ್ಳುವ ಈ ಮಂಡಳಿಗಳ ನೇತೃತ್ವವನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಯಿತು. ಈ ಕಾಯ್ದೆ ಪ್ರಶ್ನಿಸಿ ಶಿರೂರು ಮಠ ಸುಪ್ರೀಂಗೆ ಅರ್ಜಿ ಸಲ್ಲಿಸಿತ್ತು. ಆದರೆ ಕೋರ್ಟ್‌ ಕಾಯ್ದೆಯನ್ನೇ ಎತ್ತಿ ಹಿಡಿದು, ಮಠದ ಮನವಿ ತಳ್ಳಿಹಾಕಿತ್ತು. 1960ರಲ್ಲಿ ಕೇಂದ್ರ ಸರಕಾರ, ಸಿ.ಪಿ. ರಾಮಸ್ವಾಮಿ ಅಯ್ಯರ್‌ ನೇತೃತ್ವದಲ್ಲಿ ಉನ್ನತ ಆಯೋಗವೊಂದನ್ನು ರಚಿಸಿ, ದೇವಸ್ಥಾನಗಳು ಮತ್ತು ಮಠಗಳಲ್ಲಿನ ಸಮಸ್ಯೆಗಳ ಅಧ್ಯಯನ ನಡೆಸಿತು. ಈ ಸಮಿತಿಯು ಖಾಸಗಿ ಬೋರ್ಡ್‌ಗಳ ಹಿಡಿತದಲ್ಲಿದ್ದ ದೇವಸ್ಥಾನಗಳಲ್ಲಿ ಸರಿಯಾದ ಆಡಳಿತವಿಲ್ಲ ಎಂಬ ವರದಿ ನೀಡಿತ್ತಲ್ಲದೆ,  ಇಂಥ ದೇವಸ್ಥಾನಗಳನ್ನು ಸರಕಾರ ಸೂಕ್ತ ಕಾಯ್ದೆಯ ಮೂಲಕ ವಶಕ್ಕೆ ತೆಗೆದುಕೊಳ್ಳಬೇಕು ಎಂದಿತು.

Advertisement

ಇದನ್ನೂ ಓದಿ:ಪ್ಯಾಂಗಾಂಗ್‌ ಸರೋವರಕ್ಕೆ ಸೇತುವೆ ನಿರ್ಮಿಸುತ್ತಿದೆ ಚೀನಾ! ಉಪಗ್ರಹ ಚಿತ್ರದಿಂದ ಸ್ಪಷ್ಟ

ರಾಜ್ಯದಲ್ಲಿರುವ ದೇಗುಲಗಳು
ಕರ್ನಾಟಕದಲ್ಲಿ ಸದ್ಯ 34,563 ದೇವಾಲಯಗಳು ಮುಜರಾಯಿ ಇಲಾಖೆ ಅಡಿ ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ 205 ದೇಗುಲಗಳು “ಎ’ ಕೆಟಗರಿಯಲ್ಲಿವೆ. ಇವುಗಳ ಆದಾಯ ವಾರ್ಷಿಕವಾಗಿ 25 ಲಕ್ಷ ರೂ.ಗಳಿಗೂ ಹೆಚ್ಚಿರುತ್ತದೆ. ಇನ್ನು “ಬಿ’ ಕೆಟಗರಿಯಲ್ಲಿ 139 ದೇಗುಲಗಳಿದ್ದು, ಇವುಗಳ ಆದಾಯ 5 ಲಕ್ಷ ರೂ.ನಿಂದ 25 ಲಕ್ಷ ರೂ.ಗಳ ವರೆಗೆ ಇರುತ್ತದೆ. ಉಳಿದ ಎಲ್ಲ ದೇವಸ್ಥಾನಗಳು “ಸಿ’ ಕೆಟಗರಿಗೆ ಬೀಳುತ್ತವೆ.

ಮೂಲಗಳ ಪ್ರಕಾರ, 2018-20ರ ಅವಧಿಯಲ್ಲಿ “ಎ’ ಮತ್ತು “ಬಿ’ ಕೆಟಗರಿಯ ದೇವಸ್ಥಾನಗಳಿಂದ 1,383.63 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ದಾನ ಕಾಯ್ದೆ ಮತ್ತು ನಿಯಮಗಳ ಪ್ರಕಾರ “ಎ’ ಮತ್ತು “ಬಿ’ ಕೆಟಗರಿಯ ದೇವಾಲಯಗಳು ತಮ್ಮ ಎಲ್ಲ ವೆಚ್ಚಗಳನ್ನು ಕಡಿತ ಮಾಡಿಕೊಂಡು, ಬಂದಿರುವ ಕಾಣಿಕೆ ಹಣದಲ್ಲಿ ಕ್ರಮವಾಗಿ ಶೇ.10 ಮತ್ತು ಶೇ.5ರಷ್ಟನ್ನು ಮುಜರಾಯಿ ಇಲಾಖೆಗೆ ನೀಡುತ್ತವೆ. ಈ ಹಣವನ್ನು ದೇವಸ್ಥಾನಗಳ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತದೆ.

ಕೆಲವು ದೇಗುಲಗಳಲ್ಲಿ ಹೆಚ್ಚಾದ ಭ್ರಷ್ಟಾಚಾರ
ಕೆಲವು ಮೂಲಗಳು ಹೇಳುವ ಪ್ರಕಾರ, ಕೆಲವು ದೇವಸ್ಥಾನಗಳ ಟ್ರಸ್ಟಿಗಳು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡರು ಎಂಬ ಆರೋಪದಡಿ ಬ್ರಿಟಿಷ್‌ ಸರಕಾರ 1908ರಲ್ಲಿ ಹೊಸ ಕಾಯ್ದೆಯೊಂದನ್ನು ಜಾರಿಗೆ ತಂದು ದೇಗುಲಗಳ ವಿವಾದಗಳನ್ನು ಕೋರ್ಟ್‌ನಲ್ಲಿ ಪ್ರಶ್ನಿಸಬಹುದು ಎಂದಿತು. ಅದುವರೆಗೆ ಆ ಅವಕಾಶ ಇರಲಿಲ್ಲ. ಇದಾದ ಮೇಲೆ 1919ರಲ್ಲಿ ಹೊಸ ಕಾನೂನು ತಂದು ಭಾರತೀಯ ಸಚಿವರ ನೇತೃತ್ವದಲ್ಲೇ ದೇಗುಲಗಳ ನಿಯಂತ್ರಣಕ್ಕೆ ನಿಯಮವೊಂದನ್ನು ರೂಪಿಸಲಾಯಿತು. ಇದಾದ ಮೇಲೆ ಮದ್ರಾಸ್‌ ಪ್ರಸಿಡೆನ್ಸಿ 1927ರಲ್ಲಿ ಹಿಂದೂ ಧಾರ್ಮಿಕ ದಾನ ಕಾಯ್ದೆ ತಂದು ದೇಗುಲಗಳ ಆಡಳಿತಕ್ಕಾಗಿ ಮಂಡಳಿ ರಚನೆ ಮಾಡಲು ಅವಕಾಶ ನೀಡಲಾಯಿತು. ಆದರೆ ಈ ಮಂಡಳಿಗಳ ಅಧಿಕಾರ ವ್ಯಾಪ್ತಿ ಹೆಚ್ಚಿರಲಿಲ್ಲ.

ರಾಜ್ಯದಲ್ಲಿ ಬೇಡಿಕೆ‌ ಶುರು ಆಗಿದ್ದು ಯಾವಾಗ?
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರವಿದ್ದಾಗ ವಿವಾದವೊಂದು ಎದ್ದಿತ್ತು. ಮುಜರಾಯಿ ಇಲಾಖೆಗೆ ದೇವಾಲಯಗಳಿಂದ ಅಪಾರ ಆದಾಯ ಬರುತ್ತಿದ್ದು, ಇದನ್ನು ಸರಕಾರ ಇತರ ಧರ್ಮಗಳ ಸಂಸ್ಥೆಗಳ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು.

ಯಾರಿಗೆ ಲಾಭ? ಯಾರಿಗೆ ನಷ್ಟ?
ಒಂದು ವೇಳೆ ರಾಜ್ಯ ಸರಕಾರ ದೇವಸ್ಥಾನಗಳನ್ನು ತನ್ನ ಹಿಡಿತದಿಂದ ಮುಕ್ತಿಗೊಳಿಸಿದಲ್ಲಿ ಹೆಚ್ಚು ಖುಷಿಯಾಗುವುದು “ಎ’ ಮತ್ತು “ಬಿ’ ದರ್ಜೆಯ ದೇವಸ್ಥಾನ

ಗಳಿಗೆ. ಏಕೆಂದರೆ ಈ ದೇವಸ್ಥಾನಗಳಿಗೆ ಕಾಣಿಕೆ ರೂಪದಲ್ಲೇ ಹೆಚ್ಚು ಹಣ ಸಂಗ್ರಹವಾಗುವುದರಿಂದ ಇವುಗಳಿಗೆ ಸಂಪೂರ್ಣ ಹಣವನ್ನು ವೆಚ್ಚ ಮಾಡುವ ಸ್ವಾತಂತ್ರ್ಯ ಸಿಕ್ಕಂತಾಗುತ್ತದೆ. ಆದರೆ “ಸಿ’ ಕೆಟಗರಿಯಲ್ಲಿ ಬರುವ ದೇವಸ್ಥಾನಗಳಿಗೆ ಈ ನಿರ್ಧಾರ ಸ್ವಲ್ಪಮಟ್ಟಿಗೆ ಬೇಸರ ತರಬಹುದು. ಏಕೆಂದರೆ ಇಲ್ಲಿ ಕಾಣಿಕೆ ರೂಪದಲ್ಲಿ ಹೆಚ್ಚು ಹಣ ಸಂಗ್ರಹವಾಗುವುದಿಲ್ಲ. ಅಲ್ಲದೆ, ದೇವಸ್ಥಾನಗಳ ಅಭಿವೃದ್ಧಿಗಾಗಿ ರಾಜ್ಯ ಸರಕಾರದ ಬಳಿಯೇ ಕೋರಿಕೆ ಸಲ್ಲಿಸಬೇಕಾಗುತ್ತದೆ.

ಸ್ವಾತಂತ್ರ್ಯ ಸಿಕ್ಕರೆ ಲಾಭ ಏನು?
ಸರಕಾರದ ಹಿಡಿತದಲ್ಲಿದ್ದರೆ ದೇವಸ್ಥಾನದ ಆದಾಯವನ್ನು ಇತರ ಧಾರ್ಮಿಕ ಸಂಸ್ಥೆಗಳು ಅಥವಾ ಬೇರೆ ಉದ್ದೇಶಕ್ಕಾಗಿ ಬಳಕೆ ಮಾಡುವ ಸಾಧ್ಯತೆಯಿರುತ್ತದೆ.

ದೇಗುಲಗಳಿಗೆ ಸ್ವಾತಂತ್ರ್ಯ ಸಿಕ್ಕರೆ ಕಾಣಿಕೆ ರೂಪದಲ್ಲಿ ಬರುವ ಹಣವನ್ನು ದೇವಸ್ಥಾನಗಳ ಸಂಪೂರ್ಣ ಅಭಿವೃದ್ಧಿಗೆ ಬಳಕೆ ಮಾಡಲು ಸಾಧ್ಯವಾಗುತ್ತದೆ.

ಹೆಚ್ಚಿನ ಆದಾಯ ಬರುವ ದೇಗುಲಗಳು ಆ ಮೊತ್ತವನ್ನು ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆಗಳು, ಕುಡಿಯುವ ನೀರು ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳಿಗೆ ಬಳಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next