Advertisement

ಅರಣ್ಯ ಭವನದಲ್ಲಿ ದಸರಾ ಗಜಪಡೆಗೆ ವಿಶ್ರಾಂತಿ

09:45 PM Aug 23, 2019 | Team Udayavani |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಕಾಡಿನಿಂದ ಅಂಬಾರಿ ಆನೆ ಅರ್ಜುನ ನೇತೃತ್ವದಲ್ಲಿ ಮೊದಲ ತಂಡದಲ್ಲಿ ಅರಮನೆ ನಗರಿಗೆ ಬಂದಿರುವ ಆರು ಆನೆಗಳು ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವರಣದಲ್ಲಿ ಬೀಡುಬಿಟ್ಟಿವೆ. ಗುರುವಾರ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಬ್ಟಾಗಿಲು ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಬಳಿಯಿಂದ ಗಜಪಯಣದ ಮೂಲಕ ಕರೆತರಲಾದ ಅರ್ಜುನ, ವಿಜಯ, ಅಭಿಮನ್ಯು, ವರಲಕ್ಷ್ಮೀ, ಧನಂಜಯ, ಈಶ್ವರ ಆನೆಗಳು.

Advertisement

ಅರಣ್ಯ ಭವನದ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿವೆ. ಅರಣ್ಯ ಭವನ ಆವರಣದ ಮರಗಳಿಗೆ ಸರಪಳಿಯಿಂದ ಆನೆಗಳನ್ನು ಕಟ್ಟಿ, ಆಲದ ಸೊಪ್ಪು, ಭತ್ತದ ಒಣಹುಲ್ಲನ್ನು ತಂದು ಮೇವು ನೀಡಲಾಗುತ್ತಿದೆ. ಆ.26ರಂದು ಮೊದಲ ತಂಡದ ಆರು ಆನೆಗಳನ್ನು ಸಾಂಪ್ರದಾಯಿಕ ಪೂಜೆಯೊಂದಿಗೆ ಅರಮನೆಗೆ ಬರಮಾಡಿಕೊಳ್ಳಲಾಗುತ್ತದೆ.

ಆನೆಗಳಿಗೆ ವಿಮೆ: ದಸರಾ ಮಹೋತ್ಸವಕ್ಕಾಗಿ ಆಯ್ಕೆ ಮಾಡಲಾಗಿರುವ ಎಲ್ಲಾ 14 ಆನೆಗಳಿಗೂ ಜಿಲ್ಲಾಡಳಿತ ಈಗಾಗಲೇ ವಿಮೆ ಮಾಡಿಸಿದೆ. ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್‌ ಕಂಪನಿ ಮೂಲಕ 14 ಆನೆಗಳಿಗೆ 40 ಲಕ್ಷ ಮೊತ್ತಕ್ಕೆ ವಿಮೆ ಮಾಡಿಸಿರುವ ಜಿಲ್ಲಾಡಳಿತ 44,840 ರೂ. ಪ್ರೀಮಿಯಂ ಪಾವತಿಸಿದೆ. ಇನ್ನು ಈ ಆನೆಗಳ 14 ಮಾವುತರು ಮತ್ತು 14 ಕವಾಡಿಗಳಿಗೆ ತಲಾ 1 ಲಕ್ಷ ರೂ.ಗಳಂತೆ 28 ಲಕ್ಷ ಮೊತ್ತಕ್ಕೆ ವಿಮೆ ಮಾಡಿಸಿದ್ದು, ತಲಾ 720 ರೂ. ಪ್ರೀಮಿಯಂ ಪಾವತಿಸಿದೆ. ದಸರಾ ಆನೆಗಳಿಂದ ಸಾರ್ವಜನಿಕರಿಗೆ ಅಥವಾ

ಸಾರ್ವಜನಿಕ ಆಸ್ತಿಗೆ ನಷ್ಟ ಉಂಟಾದಲ್ಲಿ ಪರಿಹಾರಕ್ಕಾಗಿ 30 ಲಕ್ಷ ಮೊತ್ತಕ್ಕೆ ವಿಮೆ ಮಾಡಿಸಿ, 3,540 ರೂ. ಪ್ರೀಮಿಯಂ ಪಾವತಿಸಿದೆ. ಒಟ್ಟಾರೆ 98 ಲಕ್ಷ ರೂ.ಗಳಿಗೆ ವಿಮೆ ಮಾಡಿಸಿರುವ ಜಿಲ್ಲಾಡಳಿತ 49,100 ರೂ. ಪ್ರೀಮಿಯಂ ಪಾವತಿಸಿದೆ. ಈ ವಿಮೆ ಅಕ್ಟೋಬರ್‌ 15ರವರೆಗೆ ಚಾಲ್ತಿಯಲ್ಲಿರಲಿದೆ. ಆಕಸ್ಮಿಕ ಸಂದರ್ಭಗಳು ಉಂಟಾದಲ್ಲಿ 3 ದಿನಗಳೊಳಗೆ ವಿಮೆ ಪಾವತಿಸಬೇಕು ಎಂಬ ಷರತ್ತಿನ ಮೇಲೆ ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿ ಹೆಸರಿನಲ್ಲಿ ವಿಮೆ ಮಾಡಿಸಲಾಗಿದೆ.

ಇಂದು ಸಭೆ: ಮೈಸೂರು ಜಿಲ್ಲೆಯ ನೂತನ ಉಸ್ತುವಾರಿ ಸಚಿವ ವಿ.ಸೋಮಣ್ಣ ಶನಿವಾರ ದಸರಾ ಕಾರ್ಯಕಾರಿ ಸಭೆ ನಡೆಸಲಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ 11ಗಂಟೆಗೆ ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳ ಸಂಸದರು, ಮೈಸೂರು-ಚಾಮರಾಜ ನಗರ ಜಿಲ್ಲೆ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಇತರೆ ಜನಪ್ರತಿನಿಧಿಗಳೊಂದಿಗೆ ದಸರಾ ಕಾರ್ಯಕಾರಿ ಸಭೆ ನಡೆಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next