Advertisement

Dharmsthala ಯೋಜನೆ ವತಿಯಿಂದ ರಾಜ್ಯಾದ್ಯಂತ 770 ಕೆರೆ ಪುನಶ್ಚೇತನ: ಆನಂದ್‌ ಸುವರ್ಣ

02:51 PM Jun 19, 2024 | Team Udayavani |

ಹುಣಸೂರು: ಎಸ್.ಕೆ.ಡಿ.ಆರ್.ಡಿ.ಪಿ. ವತಿಯಿಂದ ನಮ್ಮೂರು ನಮ್ಮಕೆರೆ ಯೋಜನೆಯಡಿ ರಾಜ್ಯಾದ್ಯಂತ ಈವರೆಗೆ 55 ಕೋಟಿ ವೆಚ್ಚದಡಿ 770 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ದಿ ವಿಭಾಗದ ಪ್ರಾದೇಶಿಕ ನಿರ್ಧೇಶಕ ಆನಂದ್‌ಸುವರ್ಣ ತಿಳಿಸಿದರು.

Advertisement

ತಾಲೂಕಿನ ಯಮಗುಂಬದಲ್ಲಿ ಯೋಜನೆ ವತಿಯಿಂದ ಪುನಶ್ಚೇತನಗೊಳಿಸಿರುವ ಹಳೆಕೆರೆಯನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಿ, ತುಂಬಿದ ಕೆರೆಗೆ ಬಾಗಿನ ಅರ್ಪಿಸಿ, ನಾಮಪಲಕ ಅನಾವರಣಗೊಳಿಸಿದ ನಂತರ ಮಾತನಾಡಿದರು.

ನಾಡಿನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಬರಗಾಲದ ಹಿನ್ನೆಲೆಯಲ್ಲಿ ಜಲ ಸಂರಕ್ಷಿಸುವ ಉದ್ದೇಶದಿಂದ ರಾಜ ಮಹಾರಾಜರ ಕಾಲದಲ್ಲಿ ನಿರ್ಮಿಸಿರುವ ಕೆರೆ-ಕಟ್ಟೆಗಳನ್ನು ಸಮುದಾಯ, ಸರಕಾರದ ಬೆಂಬಲದೊಂದಿಗೆ ಪುನಶ್ಚೇತನಗೊಳಿಸಲು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ-ಹೇಮಾವತಿ ವಿ. ಹೆಗ್ಗಡೆ ನಮ್ಮೂರು ನಮ್ಮ ಕೆರೆ ಯೋಜನೆಯನ್ನು 2014 ರಲ್ಲಿ ಹುಟ್ಟು ಹಾಕಿದ್ದಾರೆ ಎಂದರು.

ಗ್ರಾಮಸ್ಥರು, ಗ್ರಾ.ಪಂ. ಸರಕಾರದ ಸಹಭಾಗಿತ್ವದಲ್ಲಿ ಈವರೆಗೆ 770 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಇದರಿಂದ ಜೀವಜಲ ಸಂರಕ್ಷಣೆ, ಹೂಳೆತ್ತುವುದರಿಂದ ನೀರಿನ ಸಂರಕ್ಷಣೆಯಾಗಿ ಜಾನುವಾರು, ಪ್ರಾಣಿ, ಪಕ್ಷಿಗಳಿಗೆ ಅನುಕೂಲವಾಗಿದೆ. ಕೆರೆ ಸುತ್ತಮುತ್ತಲ ಪ್ರದೇಶದ ಬೋರ್‌ವೆಲ್‌ಗಳು ಪುನಶ್ಚೇತನಗೊಂಡಿವೆ ಎಂದು ಹೇಳಿದರು.

ರಾಜ್ಯದಲ್ಲಿ ಸುಮಾರು 36 ಸಾವಿರಕ್ಕೂ ಹೆಚ್ಚು ಕೆರೆಗಳಿದ್ದು, ಅನೇಕ ಕಡೆಗಳಲ್ಲಿ ಕೆರೆ ಅತಿಕ್ರಮಣ, ತ್ಯಾಜ್ಯ ವಸ್ತುಗಳ ಸಂಗ್ರಹಣೆಯ ತಾಣವಾಗಿವೆ. ತಿಪ್ಪೆಗುಂಡಿಗಳಾಗಿವೆ. ಕೆರೆ ಅಭಿವೃಧ್ದಿ ಸಮಿತಿ ರಚಿಸಿಕೊಂಡು ಅದರ ಸಹಭಾಗಿತ್ವದಲ್ಲಿ ಕೆರೆಗಳ ಪುನಶ್ಚೇತನವನ್ನು ಆದ್ಯತೆಯಾಗಿಸಿಕೊಂಡು ಯೋಜನೆ ರೂಪಿಸಲಾಗಿದೆ. ಸಮಿತಿಯು ಕೆರೆಗಳು ಅತಿಕ್ರಮಣವಾಗದಂತೆ ನೋಡಿಕೊಳ್ಳಬೇಕು. ಕೆರೆಗಳ ಸುತ್ತ ಹಣ್ಣು, ಹೂಗಳ ಸಸಿ ನೆಟ್ಟು ಪೋಷಿಸಬೇಕೆಂದರು.

Advertisement

97 ಸಾವಿರ ವಿದ್ಯಾರ್ಥಿಗಳಿಗೆ ವೇತನ:

ವಿದ್ಯಾನಿಧಿ ಯೋಜನೆಯಡಿ ರಾಜ್ಯಾದ್ಯಂತ 97 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, 18 ಸಾವಿರ ಅನಾಥರಿಗೆ ತಲಾ ಸಾವಿರ ರೂ. ಮಾಶಾಸನ, 500 ಕ್ಕೂ ಹೆಚ್ಚು ಮಂದಿ ನಿರ್ಗತಿಕರಿಗೆ ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಾಣ, ಸಮುದಾಯ ಅಭಿವೃದ್ದಿ ಕಾರ್ಯಕ್ರಮದಡಿ ಡೇರಿ ಕಟ್ಟಡ, ದೇವಾಲಯ, ಸಮುದಾಯ ಭವನ ನಿರ್ಮಾಣಕ್ಕೆ ನೆರವು ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.

ಕೊತ್ತೇಗಾಲ ಗ್ರಾ.ಪಂ. ಕಾರ್ಯದರ್ಶಿ ಆನಂದ್ ಪುನಶ್ಚೇತನಗೊಳಿಸಿರುವ ಈ ಕೆರೆಯ ಸುತ್ತ ವಾಕಿಂಗ್‌ ಪಾಥ್ ನಿರ್ಮಿಸಲಾಗುವುದೆಂದರು. ನಿವೃತ್ತ ಶಿಕ್ಷಕ ಎಸ್.ಎಲ್. ಮಹದೇವಪ್ಪ ಯೋಜನೆ ವತಿಯಿಂದ ಗ್ರಾಮದ ಕೊಳವನ್ನು ಪುನಶ್ಚೇತನಗೊಳಿಸುವಂತೆ ಮನವಿ ಮಾಡಿದರು.

ಕೆರೆ ಸಮಿತಿ ಅಧ್ಯಕ್ಷ ಬಸವರಾಜಪ್ಪ ಕೆರೆ ಅಭಿವೃದ್ದಿಯಿಂದ ಬರಗಾಲ ಬಂದರೂ ನೀರಿಗೆ ತೊಂದರೆ ಇಲ್ಲವೆಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕ ಮುರಳೀಧರ್, ನಿರ್ದೇಶಕ ಶಿವಾನಂದ ಆಚಾರ್ಯ, ಕೆರೆ ಇಂಜಿನಿಯರ್ ಪುಷ್ಪರಾಜ್, ತಾಲೂಕು ಯೋಜನಾಧಿಕಾರಿ ನಾರಾಯಣ ಶೆಟ್ಟಿ, ಗ್ರಾ.ಪಂ .ಸದಸ್ಯರಾದ ಸುಂದರಾಚಾರ್ಯ, ಮಹದೇವ ಶೆಟ್ಟಿ, ಯಜಮಾನ್ ಚಂದ್ರಶೆಟ್ಟಿ, ಕೃಷಿ ಮೇಲ್ವಿಚಾರಕ ಅಣ್ಣಪ್ಪ, ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ರೂಪಾ, ಸೇವಾ ಪ್ರತಿನಿಧಿ ಮಂಜುಳ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next