ಕಲಘಟಗಿ: ಜಾನಪದವು ನಮ್ಮ ದೇಶದ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು, ಗ್ರಾಮೀಣ ಜನತೆ ಬಾಳಿ ಬೆಳಗಿದ ಬದುಕನ್ನೇ ನಾಡಿನುದ್ದಕ್ಕೂ ಸಾರುತ್ತಲಿದೆ ಎಂದು ಅಖೀಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಐ.ಸಿ. ಗೋಕುಲ ಹೇಳಿದರು.
ಮಿಶ್ರಿಕೋಟಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕಿನ ಭೋಗೆನಾಗರಕೊಪ್ಪದ ಕರ್ನಾಟಕ ಗ್ರಾಮೀಣ ಜಾನಪದ ಕಲಾ ಅಭಿವೃದ್ಧಿ ಸಂಘ ಹಾಗೂ ಕನ್ನಡ-ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಜರುಗಿದ ಜಾನಪದ ಸಂಭ್ರಮ-2021 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಮ್ಮ ದೇಶದ ಸಂಸ್ಕಾರ ಹಾಗೂ ಸಂಸ್ಕೃತಿ ಗ್ರಾಮೀಣ ಬದುಕಿನ ಕೊಡುಗೆಯಾಗಿ ಜಾನಪದದ ಮುಖೇನ ಹೊರಹೊಮ್ಮಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ನಗರ ಹಾಗೂ ಗ್ರಾಮೀಣ ಭಾಗದಾದ್ಯಂತ ವಿದೇಶಿ ಸಂಸ್ಕೃತಿಯ ವ್ಯಾಮೋಹದಿಂದಾಗಿ ನಮ್ಮ ಜನಪದ ಕಲೆಗಳು ನಶಿಸುತ್ತ ಸಾಗಿವೆ. ಅವುಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಜಾನಪದ ಕಲಾವಿದ ನಿಂಗಪ್ಪ ದೊಡ್ಡಪೂಜಾರ ಮಾತನಾಡಿ, ಕರ್ನಾಟಕ ಗ್ರಾಮೀಣ ಜಾನಪದ ಕಲಾ ಅಭಿವೃದ್ಧಿ ಸಂಘವು ನಾಡಿನಾದ್ಯಂತ ಜಾನಪದದ ಸದಭಿರುಚಿಯನ್ನು ಜನತೆಗೆ ಉಣಬಡಿಸಿ, ಇಂದಿನ ಯುವ ಪೀಳಿಗೆಗೆ ಜಾನಪದದತ್ತ ಒಲವು ಮೂಡುವಂತೆ ನಿರಂತರವಾಗಿ ಶ್ರಮಿಸುತ್ತಲಿದೆ.
ಕಲೆಗಳನ್ನು ಜೀವಂತವಾಗಿರಿಸಲು ಪ್ರತಿಯೊಬ್ಬರೂ ಶ್ರಮಿಸಿ ಕೈ ಜೋಡಿಸಬೇಕು ಎಂದು ಹೇಳಿದರು. ಜಾನಪದ ಕಲಾವಿದ ಇಮಾಮಸಾಬ ವಲ್ಲೆಪ್ಪನವರ, ಕರವೇ ಜಿಲ್ಲಾಧ್ಯಕ್ಷ ರುದ್ರೇಶ ಹವಳದ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮಾರುತಿ ಭಜಂತ್ರಿ, ಶಿಕ್ಷಕ ಪ್ರಕಾಶ ಹೂಗಾರ ಮಾತನಾಡಿದರು. ನವಲಗುಂದ ಭಾವೈಕ್ಯ ಜಾನಪದ ಕಲಾತಂಡ, ಗೊಬ್ಬರಗುಂಪಿಯ ದ್ಯಾಮಣ್ಣ ಪೂಜಾರ ಕಲಾತಂಡ, ಧಾರವಾಡದ
ಜಾನಪದ ಸಂಗೀತ ಕಲಾತಂಡದವರು ವಿವಿಧ ಜಾನಪದ ಗೀತೆಗಳನ್ನು ಹಾಡುವುದರೊಂದಿಗೆ ಜನಮನಸೂರೆಗೊಂಡರು. ಹುಬ್ಬಳ್ಳಿಯ ಶ್ರೀ ಆತ್ಮಾನಂದ ನಾಟಕ ಮಂಡಳಿಯವರಿಂದ ಶ್ರೀ ಸಂತ ಶಿಶುನಾಳ ಷರೀಫ ಸಾಹೇಬರು ಎಂಬ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಪುರಸ್ಕರಿಸಲಾಯಿತು. ಐ.ವಿ. ಜವಳಿ ನಿರೂಪಿಸಿದರು. ಪ್ರಕಾಶ ತುಕ್ಕಪ್ಪನವರ ಸ್ವಾಗತಿಸಿದರು. ಮಂಜುನಾಥ ವಾವಲ ವಂದಿಸಿದರು.