Advertisement

ಕೆಂಪುಸುಂದರಿ

09:04 PM Aug 17, 2019 | Sriram |

ಇಡೀ ಜಗತ್ತೇ ಗಾಢನಿದ್ರೆಯಲ್ಲಿರುವ ಈ ಅಪರಾತ್ರಿಯಲ್ಲಿ ಭಾರತವು ಹೊಸ ಸ್ವಾತಂತ್ರ್ಯ ಮತ್ತು ಬದುಕಿನತ್ತ ತೆರೆದುಕೊಳ್ಳಲಿದೆ…”

Advertisement

ಅದು 1947 ಆಗಸ್ಟ್‌ 14ರ ಅಪರಾತ್ರಿ. ಸ್ಥಳ ಲಾಹೋರಿ ಗೇಟ್‌. ಲಾಹೋರಿ ಗೇಟ್‌ ಎನ್ನುವುದಕ್ಕಿಂತಲೂ ಲಾಲ್‌ ಕಿಲಾ (ಕೆಂಪುಕೋಟೆ) ಎಂದರೆ ಬಹುತೇಕರಿಗೆ ಪರಿಚಿತ ಮತ್ತು ಆಪ್ತಭಾವ. ಅಂದು ಪಂಡಿತ್‌ ಜವಾಹರಲಾಲ್‌ ನೆಹರೂರವರು ಆಗ ತಾನೇ ಅಧಿಕೃತವಾಗಿ ಜನ್ಮತಾಳಿದ್ದ ಸ್ವತಂತ್ರಭಾರತದ ಬಗ್ಗೆ ಹೀಗೆ ಭಾವಪರವಶರಾಗಿ ಭಾಷಣವನ್ನು ಮಾಡುತ್ತಲಿದ್ದರೆ ದೇಶಕ್ಕೆ ದೇಶವೇ ಸಂಭ್ರಮಾಚರಣೆಯಲ್ಲಿತ್ತು. ವಿದೇಶೀ ಮಾಧ್ಯಮಗಳೂ ಕೂಡ ಈ ಘಟನೆಯನ್ನು ಇತಿಹಾಸದ ಒಂದು ಮೈಲುಗಲ್ಲೆಂಬಂತೆ ಪರಿಗಣಿಸಿದ್ದವು. ಟ್ರೈಸ್ಟ್‌ ವಿದ್‌ ಡೆಸ್ಟಿನಿ ಎಂಬ ಖ್ಯಾತಿಯ ನೆಹರೂರವರ ಭಾಷಣವಂತೂ ಇಪ್ಪತ್ತನೆಯ ಶತಮಾನದ ಶ್ರೇಷ್ಠ ಭಾಷಣಗಳಲ್ಲೊಂದು ಎಂಬ ಮನ್ನಣೆಯನ್ನು ಗಳಿಸಿಕೊಂಡು ಅಜರಾಮರವಾಗಿಬಿಟ್ಟಿತ್ತು.

ಈ ಐತಿಹಾಸಿಕ ಘಟನೆಯು ನಡೆದು ಇಂದಿಗೆ ಬರೋಬ್ಬರಿ ಏಳು ದಶಕಗಳೇ ಕಳೆದಿವೆ. ಆದರೆ, ಈ ಸ್ಥಳವಾಗಲಿ, ಇಲ್ಲಿಯ ಸ್ಥಳಪುರಾಣವಾಗಲಿ ಹಳತಾಗಿಲ್ಲ. ಇಂದಿಗೂ ಸ್ವಾತಂತ್ರ್ಯ ದಿನಾಚರಣೆಯೆಂದರೆ ಅದೇ ದಿಲ್ಲಿ, ಅದೇ ಭವ್ಯ ಕೆಂಪುಕೋಟೆ, ದೇಶದ ಪ್ರಧಾನಮಂತ್ರಿಯ ಘನ ಉಪಸ್ಥಿತಿ ಮತ್ತು ಜಯಹೇ ಉದ್ಘೋಷದೊಂದಿಗೆ ಪ್ರತೀ ಭಾರತೀಯನ ಎದೆಗೂಡಿನಲ್ಲೂ ಹುಮ್ಮಸ್ಸನ್ನು ತರುವ ಹೆಮ್ಮೆಯ ತಿರಂಗಾ. ಸುಮಾರು ಇನ್ನೂರೈವತ್ತು ಎಕರೆಗಳ ವಿಸ್ತೀರ್ಣವಿರುವ ಕೆಂಪುಕೋಟೆಯ ಪ್ರವೇಶದ್ವಾರವೇ ಲಾಹೋರಿ ಗೇಟ್‌. ದಿಲ್ಲಿಯ ಕೆಂಪುಕೋಟೆಯನ್ನು ಖುದ್ದಾಗಿ ನೋಡದಿದ್ದವರಿಗೂ ಕೂಡ ಈ ಲಾಹೋರಿ ಗೇಟ್‌ ಮಾತ್ರ ಚಿರಪರಿಚಿತ. ನಮ್ಮ ಐದುನೂರು ರೂಪಾಯಿಗಳ ಕರೆನ್ಸಿ ನೋಟು ಸೇರಿದಂತೆ ಕೆಂಪುಕೋಟೆಯ ಬಹುತೇಕ ಚಿತ್ರಗಳಲ್ಲಿ ಕಾಣಸಿಗುವ ಮತ್ತು ಭಾರತದ ತ್ರಿವರ್ಣಧ್ವಜವನ್ನು ಟ್ರೇಡ್‌-ಮಾರ್ಕ್‌ನಂತೆ ಹೊತ್ತುನಿಂತಿರುವ ಲಾಹೋರಿ ಗೇಟ್‌ ಜನಪ್ರಿಯತೆಯಲ್ಲಿ ಕೆಂಪುಕೋಟೆಯಷ್ಟೇ ಪ್ರಸಿದ್ಧ.

ಕೆಂಪುಕೋಟೆಯ ಐತಿಹಾಸಿಕ ಅಂಗಳ
ನೆಹರೂರವರು ದಿಲ್ಲಿಯ ಕೆಂಪುಕೋಟೆಯಲ್ಲಿ ನೀಡಿದ್ದ ಆ ಐತಿಹಾಸಿಕ ಭಾಷಣವು ಭವಿಷ್ಯದ ಭಾರತದ ಬಗ್ಗೆ ಜಾಗತಿಕ ನೆಲೆಯಲ್ಲಿ ಅಪಾರವಾದ ನಿರೀಕ್ಷೆಯನ್ನು ಹುಟ್ಟಿಸಿತ್ತು. ಮುಂದೆ ನೆಹರೂರವರ ನಂತರದ ಪ್ರಧಾನಿಗಳು ಆಯಾ ಕಾಲಘಟ್ಟದ ಸಂಗತಿಗಳ ಬಗ್ಗೆ ಸಮಸ್ತ ದೇಶವನ್ನುದ್ದೇಶಿಸಿ ಮಾತನಾಡುತ್ತ ಈ ಪರಂಪರೆಯನ್ನು ಅಷ್ಟೇ ಘನತೆಯಿಂದ ಮುಂದುವರೆಸಿಕೊಂಡು ಹೋಗಿದ್ದು ವಿಶೇಷ. ಹಾಗೆ ನೋಡಿದರೆ, ಅಂದಿನ ನೆಹರೂರವರಿಂದ ಹಿಡಿದು ಈಚಿನ ಇಪ್ಪತ್ತೂಂದನೆಯ ಶತಮಾನದ ಪ್ರಧಾನಮಂತ್ರಿಗಳವರೆಗೂ, ಬಹುತೇಕ ಎಲ್ಲರೂ ಇಲ್ಲಿ ತಮ್ಮ ದೂರದೃಷ್ಟಿಯ ನೋಟಗಳನ್ನು ದೇಶವಾಸಿಗಳೊಂದಿಗೆ ಹಂಚಿಕೊಂಡವರೇ. ಕೆಂಪುಕೋಟೆಯ ಈ ಭವ್ಯ ಪರಿಸರದಲ್ಲಿ ಸ್ವಾತಂತ್ರ್ಯ ದಿನಾಚರಣೆಗಳಂದು ದೇಶವನ್ನು ಪ್ರತಿನಿಧಿಸಿ ಮಾತನಾಡಿದ ಪ್ರಧಾನಿಗಳೆಲ್ಲರಿಗೂ ನೆಹರೂರವರ ಭಾಷಣಕ್ಕೆ ಸಿಕ್ಕಷ್ಟು ಖ್ಯಾತಿಯು ದಕ್ಕಲಿಲ್ಲವಾದರೂ, ಆಯಾ ಕಾಲಮಾನಕ್ಕೆ ತಕ್ಕಂತೆ ದೇಶದ ಜನತೆಯಲ್ಲಿ ಎಲ್ಲಿಲ್ಲದ ಭರವಸೆಗಳನ್ನು ಮೂಡಿಸಿರುವುದರಲ್ಲಿ ಸಂದೇಹವಿಲ್ಲ.

“”ನಾವಿದ್ದರೂ ಇರದಿದ್ದರೂ ಈ ದೇಶವು ಬಲಿಷ್ಠವಾಗಿ ಉಳಿಯಲಿದೆ ಮತ್ತು ಈ ಧ್ವಜವು ಎಂದಿನಂತೆ ಹೆಮ್ಮೆಯಿಂದ ಹಾರಾಡಲಿದೆ”, ಎಂದು ತಮ್ಮ ಭಾಷಣದಲ್ಲಿ ಹೇಳಿದ್ದರು ನೆಹರೂರವರ ನಂತರ ಪ್ರಧಾನಿಯಾಗಿ ಬಂದಿದ್ದ ಲಾಲ್‌ ಬಹಾದ್ದೂರ್‌ ಶಾಸಿŒ. “”ಭಾರತವನ್ನು ಜಗತ್ತಿನ ಶಕ್ತಿಗಳಲ್ಲೊಂದಾಗಿ ಮಾಡಬೇಕಿದೆ. ಆದರೆ ಇತರ ರಾಷ್ಟ್ರಗಳನ್ನು ತುಳಿದು ತಾನಷ್ಟೇ ಬೀಗುವ ಕೆಲ ಶ್ರೀಮಂತ ರಾಷ್ಟ್ರಗಳಂತಲ್ಲ” ಎಂದಿದ್ದರು ರಾಜೀವ್‌ ಗಾಂಧಿ. 1993ರಲ್ಲಿ ನಡೆದಿದ್ದ ಭೀಕರ ಬಾಂಬ್‌ ಸ್ಫೋಟಗಳು ಮತ್ತು ಕೋಮುಘರ್ಷಣೆಗಳ ಹಿನ್ನೆಲೆಯಲ್ಲಿ ಆಗಿನ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್‌ ಮಾತನಾಡುತ್ತ, “ಬೆರಳೆಣಿಕೆಯ ಬಾಂಬುಗಳು ನಮ್ಮಂಥ ದೈತ್ಯ ರಾಷ್ಟ್ರದ ಆರ್ಥಿಕತೆಯನ್ನು ಕೆಡವಲು ಸಾಧ್ಯವೇ ಇಲ್ಲ” ಎಂದು ಅಬ್ಬರಿಸಿದರೆ, ಜಾತ್ಯತೀತ ರಾಷ್ಟ್ರದ ಕಲ್ಪನೆಯನ್ನು ಎತ್ತಿಹಿಡಿದು ಅದನ್ನು ಕಾಶ್ಮೀರಕ್ಕೂ ವಿಸ್ತರಿಸಿ ಈ ಭಾವವನ್ನು ಕಶ್ಮೀರಿಯತ್‌ ಎಂದು ಅಟಲ್‌ ಬಿಹಾರಿ ವಾಜಪೇಯಿಯವರು ಪ್ರಶಂಸಿಸಿದ್ದು ಇದೇ ಕೆಂಪುಕೋಟೆಯಲ್ಲಿ. ಈಚೆಗೆ ನಮ್ಮ ಪ್ರಧಾನಮಂತ್ರಿಗಳು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ತಾವು ಯಾವ ವಿಷಯದ ಬಗ್ಗೆ ಮಾತನಾಡಬೇಕೆಂದು ದೇಶವಾಸಿಗಳಲ್ಲೇ ಸಲಹೆಯನ್ನು ಕೇಳಿ ಸುದ್ದಿ ಮಾಡಿದ್ದರು. ಹೀಗೆ ನಮ್ಮ ಪ್ರಧಾನಮಂತ್ರಿಗಳು ದೇಶದ ಇತರೆಡೆ ಅದೆಷ್ಟು ಮಾತನಾಡಿದರೂ ಕೆಂಪುಕೋಟೆಯ ಅಂಗಳದಲ್ಲಿ ನೀಡಲಾಗುವ ಭಾಷಣಗಳು ಎಲ್ಲರ ಮನದಲ್ಲೂ, ಇತಿಹಾಸದಲ್ಲೂ ಶಾಶ್ವತವಾಗಿ ಉಳಿಯುವಂತಹ ಅಪರೂಪದ ಕ್ಷಣಗಳಾದ್ದರಿಂದ ಇಲ್ಲಿಯ ಭಾಷಣಗಳನ್ನು ಗಂಭೀರವಾಗಿ ಪರಿಗಣಿಸುವುದು ಸಾಮಾನ್ಯ.

Advertisement

ಆಗಸ್ಟ್‌ ಮಾಸದ ಮದುವಣಗಿತ್ತಿ ದೇಶದ ಸ್ವಾತಂತ್ರ್ಯ ಸಂಭ್ರಮಾಚರಣೆಗೆ ರಾಷ್ಟ್ರರಾಜಧಾನಿಯಾದ ದಿಲ್ಲಿಯಿಡೀ ಇನ್ನಿಲ್ಲದ ಉತ್ಸಾಹದೊಂದಿಗೆ ತಯಾರಾಗುತ್ತಿದ್ದರೆ, ಕೆಂಪುಕೋಟೆಯಂತೂ ಮದುವಣಗಿತ್ತಿಯಂತೆ ಅಣಿಯಾಗುತ್ತಿರುತ್ತದೆ. ಭದ್ರತೆಯ ದೃಷ್ಟಿಯಿಂದ ಕೆಂಪುಕೋಟೆಯ ಆಸುಪಾಸಿನಲ್ಲಿರುವ ಜನನಿಬಿಡ ಬಜಾರುಗಳು ತಾತ್ಕಾಲಿಕವಾಗಿ ಮುಚ್ಚುತ್ತವೆ. ದಿಲ್ಲಿಯ ಖ್ಯಾತ ಜನನಿಬಿಡ ತಾಣಗಳಲ್ಲೊಂದಾದ ಇಂಡಿಯಾ ಗೇಟ್‌ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಮವಸ್ತ್ರಧಾರಿ ಪಡೆಗಳ ಓಡಾಟ ಜೋರಾಗುತ್ತದೆ. ದೇಶದ ವಾರ್ಷಿಕ ಸಂಭ್ರಮಾಚರಣೆಯ ಲಗುಬಗೆಯಲ್ಲಿ ಅತಿಥಿ ಅಭ್ಯಾಗತರಿಗೂ, ಜನಸಾಮಾನ್ಯರಿಗೂ ಗೊಂದಲಗಳಾಗದಂತೆ, ಒಟ್ಟಾರೆ ವ್ಯವಸ್ಥೆಯಲ್ಲಿ ಒಂದಿನಿತೂ ಲೋಪದೋಷಗಳಾಗದಂತೆ ಶಹರದ ಆರಕ್ಷಕ ಪಡೆಗಳು ಕಟ್ಟೆಚ್ಚರದಿಂದ ಕಾಯುತ್ತವೆ. ಇನ್ನು ಕೆಂಪುಕೋಟೆಯು ಕಾರ್ಯಕ್ರಮದ ಕೇಂದ್ರಬಿಂದುವಾಗಿರುವುದರಿಂದ ಈ ನಿರ್ದಿಷ್ಟ ಪ್ರದೇಶದಲ್ಲಿ ವಿಶೇಷ ತಯಾರಿಗಳಿರುವುದು ಸಾಮಾನ್ಯವೇ ಅನ್ನಿ. ಪ್ರಾಯಶಃ ಆಗ್ರಾದ ತಾಜ್‌ಮಹಲ್‌ ಅನ್ನು ಹೊರತುಪಡಿಸಿದರೆ ಇಡೀ ದೇಶದಲ್ಲೇ ಬಹುತೇಕ ಎಲ್ಲರಿಗೂ ಚಿರಪರಿಚಿತವಾಗಿರುವ ವಾಸ್ತುಶಿಲ್ಪದ ಅದ್ಭುತವೊಂದಿದ್ದರೆ ಅದು ಕೆಂಪುಕೋಟೆ.

ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಬೇರೆಲ್ಲೂ ಕಾಣಸಿಗದ ವೈವಿಧ್ಯ ಮತ್ತು ಈ ವೈವಿಧ್ಯದಲ್ಲೂ ಏಕತಾಭಾವದ ಭಾÅತೃತ್ವವನ್ನು ಸಾವಿರಾರು ವರ್ಷಗಳಿಂದ ಉಳಿಸಿಕೊಂಡು ಬಂದಿರುವ ಭಾರತದ ವೈಶಿಷ್ಟ್ಯವೇ ಬೇರೆ. ಕಾಲಾನುಕ್ರಮದಲ್ಲಿ ಎದುರಾಗಿದ್ದ ಹಲವು ಸವಾಲು, ಅಗ್ನಿಪರೀಕ್ಷೆಗಳ ಹೊರತಾಗಿಯೂ ಇದುವೇ ನಮ್ಮ ಜೀವನಾಡಿ ಎಂಬುದನ್ನು ಭಾರತೀಯ ಮನಸ್ಸುಗಳು ಸಾಬೀತು ಮಾಡುತ್ತಲೇ ಬಂದಿವೆ. ಅದು ಈ ಮಣ್ಣಿನ ಗುಣ. ಹೀಗಾಗಿಯೇ ಹೊರಗಿನ ಬಹಳಷ್ಟು ಜನರಿಗೆ ಭಾರತವೆಂದರೆ ಪದಗಳಲ್ಲಿ ಹಿಡಿದಿಡಲಾಗದ ಅದ್ಭುತ, ಅದೊಂದು ಮುಗಿಯದ ಕೌತುಕ. ಇಂಥಾದ್ದೊಂದು ರಾಷ್ಟ್ರದ ರಾಜಧಾನಿಯಾಗಿರುವ ದಿಲ್ಲಿಯಲ್ಲೂ ಇವೆಲ್ಲವನ್ನು ಆತ್ಮದಂತೆ ಕಾಣಬಹುದು ಎಂಬುದು ಹೆಮ್ಮೆಯ ಸಂಗತಿ.

ಇಂದು ಕೆಂಪುಕೋಟೆಯೆಂದರೆ ಕೇವಲ ಒಂದು ಪ್ರಾಚೀನ ವಾಸ್ತುಶಿಲ್ಪದ ಕುರುಹಾಗಿಯಷ್ಟೇ ಉಳಿದಿಲ್ಲ. ಅದು ದಿಲ್ಲಿಗೆ ಮುಕುಟಪ್ರಾಯ. ಏಕಕಾಲದಲ್ಲಿ ಭವ್ಯ ಭೂತಕಾಲಕ್ಕೂ, ದೂರದೃಷ್ಟಿಯುಳ್ಳ ಭವಿತವ್ಯಕ್ಕೂ ಮುತ್ಸದ್ದಿಗಳ ಮೂಲಕವಾಗಿ ಸೇತುವೆಯಾಗಬಲ್ಲ ಒಂದು ವಿಶಿಷ್ಟ ವೇದಿಕೆ. ಕೆಂಪುಕೋಟೆಯನ್ನು ಕಿಲಾ-ಎ-ಮುಬಾರಕ್‌ ಎಂದೂ ಕರೆಯುವುದುಂಟು. ತನ್ನ ಅನ್ವರ್ಥನಾಮದಂತೆ ಈ ಕೋಟೆ ದಿಲ್ಲಿಯು ಪಡೆದುಕೊಂಡು ಬಂದ ವರವೇ ಹೌದು.

-ಪ್ರಸಾದ್‌ ನಾೖಕ್‌

Advertisement

Udayavani is now on Telegram. Click here to join our channel and stay updated with the latest news.

Next