Advertisement

ಸೆ.1ರಿಂದ ಅಗ್ನಿವೀರರ ನೇಮಕಾತಿ ರ್ಯಾಲಿ

05:10 PM Aug 22, 2022 | Team Udayavani |

ಹಾವೇರಿ: ಅಗ್ನಿಪಥ್‌ ಸೇನಾ ನೇಮಕಾತಿ ಯೋಜನೆಯಡಿ ಸೆ.1ರಿಂದ 20ರವರೆಗೆ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಅಗ್ನಿವೀರರ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು 11 ಜಿಲ್ಲೆಯ 58 ಸಾವಿರ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಜಿಲ್ಲೆಗೆ ಆಗಮಿಸುವ ಅಭ್ಯರ್ಥಿಗಳಿಗೆ ರಿಯಾಯಿತಿ ದರದಲ್ಲಿ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದ್ದಾರೆ.

Advertisement

ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಅಗ್ನಿಪಥ್‌ ನೇಮಕಾತಿ ರ್ಯಾಲಿ ಪೂರ್ವ ಸಿದ್ಧತಾ ಸಭೆಯಲ್ಲಿ ನಗರದ ಹೋಟೆಲ್‌ ಮಾಲಿಕರ ಸಂಘ ಹಾಗೂ ಸಮುದಾಯ, ಕಲ್ಯಾಣ ಮಂಟಪಗಳ ಮಾಲಿಕರನ್ನುದ್ದೇಶಿಸಿ ಮಾತನಾಡಿದರು.

ಪ್ರತಿದಿನ ಅಂದಾಜು ಮೂರು ಸಾವಿರ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ನೇಮಕಾತಿ ಪ್ರಕ್ರಿಯೆಗಾಗಿ 150 ಜನ ಸೇನಾ ನೇಮಕಾತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಲಿದ್ದಾರೆ. 20 ಜನ ಸೇನಾ ಅಧಿಕಾರಿಗಳಿಗೆ ಖಾಸಗಿ ಹೋಟೆಲ್‌ ಹಾಗೂ 130 ಜನ ಸೇನಾ ಸಿಬ್ಬಂದಿಗೆ ಕ್ರೀಡಾ ವಸತಿ ನಿಲಯ ಹಾಗೂ ಪರಿಶಿಷ್ಟ ಜಾತಿ ವಸತಿ ನಿಲಯದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

20 ದಿನಗಳ ಕಾಲ ನಿರಂತರವಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ನೋಂದಾಯಿತ ಅಭ್ಯರ್ಥಿಗಳ ಪೈಕಿ ಪ್ರತಿದಿನ ಮೂರು ಸಾವಿರ ಅಭ್ಯರ್ಥಿಗಳಿಗೆ ಆಹ್ವಾನ ನೀಡಲಾಗುವುದು. ಹೊರ ಜಿಲ್ಲೆಗಳಿಂದ ಆಯಾ ದಿನ ಬರುವ ಅಭ್ಯರ್ಥಿಗಳಿಗೆ ರಿಯಾಯಿತಿ ದರದಲ್ಲಿ ಕಲ್ಯಾಣ ಮಂಟಪಗಳು ಹಾಗೂ ಸಮುದಾಯ ಭವನಗಳಲ್ಲಿ ತಾತ್ಕಾಲಿಕ ವಸತಿ ಸೌಕರ್ಯ ಕಲ್ಪಿಸಲು ನಿರ್ಧರಿಸಲಾಯಿತು. ಹೋಟೆಲ್‌ಗ‌ಳಲ್ಲಿ ಅಭ್ಯರ್ಥಿಗಳಿಗೆ ನಿಗದಿತ ದರಕ್ಕಿಂತ ಶೇ.25ರಷ್ಟು ರಿಯಾಯಿತಿ ನೀಡಿ ಊಟ ಪೂರೈಸುವುದಾಗಿ ಹೋಟೆಲ್‌ ಮಾಲಿಕರ ಸಂಘ ಒಪ್ಪಿಗೆ ಸೂಚಿಸಿತು.

ಹೋಟೆಲ್‌ಗ‌ಳಲ್ಲಿ ಬಾಡಿಗೆ ಪಾವತಿಸಿ ಉಳಿಯುವ ಅಭ್ಯರ್ಥಿಗಳಿಗೆ ರಿಯಾಯಿತಿ ದರದಲ್ಲಿ ಕೊಠಡಿಗಳನ್ನು ಪೂರೈಸುವುದಾಗಿ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

Advertisement

ರೆಡ್‌ಕ್ರಾಸ್‌ ಸಂಸ್ಥೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಒಂದೊಂದು ದಿನ ಉಚಿತ ಊಟ ಪೂರೈಸುವುದಾಗಿ ಪ್ರಕಟಿಸಿದರು. ಇಷ್ಟಾಗಿಯೂ ಅಭ್ಯರ್ಥಿಗಳಿಗೆ ಉಪಹಾರ-ಊಟದ ಕೊರತೆಯಾಗದಂತೆ ಕ್ರೀಡಾಂಗಣದ ಹೊರಭಾಗದಲ್ಲಿ ಕನಿಷ್ಟ 15ಕ್ಕೂ ಹೆಚ್ಚು ಫುಡ್‌ ಕೋರ್ಟ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಹೊರ ಜಿಲ್ಲೆಯಿಂದ ಬರುವ ಅಭ್ಯರ್ಥಿಗಳಿಗೆ ಸಾರಿಗೆ ಸೌಕರ್ಯದ ಕೊರತೆಯಾಗದಂತೆ ನೇಮಕಾತಿಯಲ್ಲಿ ಭಾಗವಹಿಸುವ 11 ಜಿಲ್ಲೆಗಳಿಂದ ಹಾವೇರಿಗೆ ಹೆಚ್ಚುವರಿ ಬಸ್‌ ಸೌಕರ್ಯ ಕಲ್ಪಿಸಲು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ಸೇನಾ ನೇಮಕಾತಿ ರ್ಯಾಲಿಗೆ ಅಭ್ಯರ್ಥಿಗಳಿಗೆ ಉಪಹಾರ-ಊಟ ಹಾಗೂ ವಸತಿ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗುವ ಸಾಮಾಜಿಕ ಕಾರ್ಯಕರ್ತರಿಗೆ, ದಾನಿಗಳು ಸ್ವಯಂ ಪ್ರೇರಣೆಯಿಂದ ಮುಂದೆ ಬಂದರೆ ಅವರ ನೆರವು ಪಡೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಪಂ ಸಿಇಒ ಮಹಮ್ಮದ ರೋಷನ್‌, ಅಪರ ಜಿಲ್ಲಾಧಿಕಾರಿ ಡಾ| ಎನ್‌.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಡಿವೈಎಸ್‌ಪಿ ಶಿವಾನಂದ, ಡಿಎಚ್‌ಒ ಡಾ| ಎಚ್‌. ಎಸ್‌. ರಾಘವೇಂದ್ರಸ್ವಾಮಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಬಾಬಾ ಮುದ್ದೇಬಿಹಾಳ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರವೀಣ, ಜಿಲ್ಲಾ ವಾರ್ತಾಧಿಕಾರಿ ಡಾ| ಬಿ.ಆರ್‌. ರಂಗನಾಥ್‌, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲಲಿತಾ, ತಹಶೀಲ್ದಾರ ಗಿರೀಶ ಸ್ವಾದಿ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಹೋಟೆಲ್‌ ಮಾಲೀಕರ ಸಂಘದ ಪ್ರಕಾಶ ಶೆಟ್ಟಿ, ರಮೇಶ ಕಡಕೋಳ, ರಮೇಶ ಆನವಟ್ಟಿ, ಪ್ರಭು ಹಿಟ್ನಳ್ಳಿ ಇತರರು ಇದ್ದರು.

ನಗರದ ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣಗಳಲ್ಲಿ ಅಭ್ಯರ್ಥಿಗಳಿಗೆ ಅನುಕೂಲವಾಗಲು ಮಾರ್ಗಸೂಚಿ ಫಲಕಗಳು, ಕ್ರೀಡಾಂಗಣ ಹಾಗೂ ಹೊರಭಾಗದಲ್ಲಿ ಶೌಚಾಲಯ ವ್ಯವಸ್ಥೆ, ಬ್ಯಾರಿಕೇಡ್‌ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ವಸತಿ ಸೌಕರ್ಯ, ಕ್ರೀಡಾಂಗಣದ ಆವರಣದಲ್ಲಿ ಬ್ಯಾರಿಕೇಡ್‌, ನೇಮಕಾತಿ ಪ್ರಕ್ರಿಯೆಗೆ ತಾತ್ಕಾಲಿಕ ಟೆಂಟ್‌ ವ್ಯವಸ್ಥೆ, ಹೆಲ್ಪಡೆಸ್ಕ್ ಸ್ಥಾಪನೆ, ನೋಂದಣಿ ಕೌಂಟರ್‌, ದಾಖಲೆಗಳ ಪರಿಶೀಲನೆ ಕೌಂಟರ್‌, ಆಂಬ್ಯುಲೆನ್ಸ್‌, ಪೊಲೀಸ್‌ ಭದ್ರತೆ ವ್ಯವಸ್ಥೆ, ಅಗ್ನಿಶಾಮಕದಳ ನೇಮಕಾತಿ, ಎನ್‌ ಎಸ್‌ಎಸ್‌, ಸ್ಕೌಟ್‌ ಆಂಡ್‌ ಗೈಡ್ಸ್‌, ಎನ್‌ಸಿಸಿ, ಕೆಡೆಟ್‌ಗಳ ಬಳಕೆ ಸೇರಿದಂತೆ ಅಧಿ ಕಾರಿಗಳು ವಿವಿಧ ವ್ಯವಸ್ಥೆ ಕೈಗೊಳ್ಳಬೇಕು. zಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next