Advertisement

‘ಆಟೋ ರಿಕ್ಷಾದಲ್ಲಿ ದಾಖಲೆಗಳು ಕಡ್ಡಾಯ ‘

09:36 AM Jun 20, 2019 | Suhan S |

ಹುಬ್ಬಳ್ಳಿ: ಜನರಿಗೆ ಉತ್ತಮ ಸೇವೆ ನೀಡುವ ಮೂಲಕ ಹುಬ್ಬಳ್ಳಿ ಆಟೋ ಚಾಲಕರು ಮಾದರಿ ಆಟೋ ಚಾಲಕರಾಗಬೇಕು ಎಂದು ಪ್ರಾದೇಶಿಕ ಸಾರಿಗೆ ಹಿರಿಯ ಅಧಿಕಾರಿ ಅಪ್ಪಯ್ಯ ನಾಲತ್ತವಾಡಮಠ ಹೇಳಿದರು.

Advertisement

ಗೋಕುಲ ರಸ್ತೆ ಸುರಭಿ ನಗರದ ಸಮುದಾಯ ಭವನದಲ್ಲಿ ಬುಧವಾರ ಹುಬ್ಬಳ್ಳಿ ಆಟೋರಿಕ್ಷಾ ಮಾಲಿಕರು ಹಾಗೂ ಚಾಲಕರ ಸಂಘದಿಂದ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಹು-ಧಾ ಮಹಾನಗರದಲ್ಲಿ ಆಟೋರಿಕ್ಷಾಗಳಿಗೆ ಮೀಟರ್‌ ಕಡ್ಡಾಯಗೊಳಿಸಲಾಗಿದೆ. ಮೀಟರ್‌ ಅಳವಡಿಕೆಗೆ ಸಂಘದಿಂದ ಹಲವಾರು ಬೇಡಿಕೆಗಳನ್ನಿಟ್ಟಿದ್ದು, ಅವುಗಳನ್ನು ಈಡೇರಿಸಲಾಗಿದೆ ಎಂದರು.

ಶೇರಿಂಗ್‌ ಆಟೋ ಬಂದ್‌ ಮಾಡಿ. ಬದಲಾಗಿ ಮೀಟರ್‌ ಹಾಕದೇ ಇದ್ದರೇ ಸಂಚಾರ ಇಲ್ಲ ಎಂದು ಸಾರ್ವಜನಿಕರಿಗೆ ತಿಳಿಯುವಂತೆ ಸೇವೆ ಸಲ್ಲಿಸಿ. ಆಟೋ ರಿಕ್ಷಾ ಚಾಲನೆ ಒಂದು ಉತ್ತಮ ಸೇವೆ ಆಗಿದೆ. ಯಾರೇ ನಗರಕ್ಕೆ ಬಂದರು ಅವರಿಗೆ ಮೊದಲ ಭೇಟಿ ನಿಮ್ಮದೇ, ಆದ್ದರಿಂದ ಸಾರ್ವಜನಿಕರೊಂದಿಗೆ ಉತ್ತಮವಾಗಿ ಸ್ಪಂದನೆ ಅವಶ್ಯ. ಪ್ರತಿಯೊಬ್ಬ ಆಟೋರಿಕ್ಷಾ ಚಾಲಕರು ಕಡ್ಡಾಯವಾಗಿ ವಾಹನದ ಎಲ್ಲ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಸಮವಸ್ತ್ರದಿಂದ ಹಿಡಿದು ಎಲ್ಲವೂ ಸರಿಯಾಗಿರಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು. ಪರವಾನಗಿ ಇಲ್ಲದ ಆಟೋ ರಿಕ್ಷಾಗಳನ್ನು ಇಲಾಖೆಯಿಂದ ಈಗಾಗಲೇ ಸೀಜ್‌ ಮಾಡಲಾಗುತ್ತಿದೆ ಎಂದರು.

ಸ್ಕೂಲ್ ಕ್ಯಾಬ್‌ ಸಿಸ್ಟಮ್‌ಗೆ ಒಳಪಡಿಸಿ: ಶಾಲೆಗೆ ಓಡಿಸುವ ವಾಹನಗಳನ್ನು ಆಯಾ ಶಾಲಾ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಆಟೋ ಸ್ಕೂಲ್ ಕ್ಯಾಬ್‌ ಮಾಡಿಕೊಳ್ಳಿ. ಇದಕ್ಕಾಗಿ ಇಲಾಖೆಯಿಂದ ವ್ಯವಸ್ಥೆ ಕಲ್ಪಿಸಬಹುದು ಎಂದರು. ಇದು ಸುಪ್ರೀಂ ಕೋರ್ಟ್‌ ಆದೇಶವನ್ನು ಎಲ್ಲರೂ ಪಾಲನೆ ಮಾಡೋಣ ಎಂದು ಅಪ್ಪಯ್ಯ ನಾಲತ್ತವಾಡಮಠ ಹೇಳಿದರು.

ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಮಾತನಾಡಿ, ಈ ಹಿಂದೆ ನಗರದಲ್ಲಿ ರಸ್ತೆಗಳು ಸರಿ ಇರಲಿಲ್ಲ. ಆದರೆ ಈಗಾಗಲೇ ಶೇ.50ರಷ್ಟು ರಸ್ತೆಗಳು ಸುಧಾರಣೆ ಕಂಡಿದ್ದು, ಇನ್ನುಳಿದ ರಸ್ತೆಗಳು ಕಾಮಗಾರಿ ಪ್ರಗತಿಯಲ್ಲಿವೆ. ಅದಕ್ಕೆ ತಕ್ಕಂತೆ ನಾವು ಕೂಡಾ ಇಂದಿನ ದಿನಕ್ಕೆ ಹೊಂದಿಕೊಳ್ಳುವ ಮೂಲಕ ಮೀಟರ್‌ ಕಡ್ಡಾಯ ಸೇರಿದಂತೆ ಕಾನೂನು ಪಾಲನೆ ಮಾಡೋಣ ಎಂದರು.

Advertisement

ಕಾರ್ಯದರ್ಶಿ ಚಿದಾನಂದ ಸವದತ್ತಿ, ಸುರಭಿ ನಗರದ ನಿವಾಸಿಗಳ ಸಂಘದ ಅಧ್ಯಕ್ಷ ಎಸ್‌.ಎಂ. ಹಿರೇಮಠ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಲವು ಆಟೋರಿಕ್ಷಾ ಚಾಲಕರು ಮತ್ತು ಮಾಲಿಕರು ತಮ್ಮಲ್ಲಿರುವ ಸಂದೇಹಗಳಿಗೆ ಪರಿಹಾರ ಕಂಡುಕೊಂಡರು.

ಆರ್‌ಟಿಒ ಅರುಣ ಕಟ್ಟಿಮನಿ, ಬಸವರಾಜ ಉಣಕಲ್ಲ ಸೇರಿದಂತೆ ಇನ್ನಿತರರು ಇದ್ದರು. ಪುಂಡಲೀಕ ಬಡಿಗೇರ ನಿರೂಪಿಸಿದರು.

ಆಟೋ ರಿಕ್ಷಾಗಳಲ್ಲಿ ಆರು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಕರೆದ್ಯೊಯುವಂತಿಲ್ಲ. ಈಗಾಗಲೇ ಹಲವು ಕಡೆ ಆಟೋ ರಿಕ್ಷಾಗಳಲ್ಲಿ, ಓಮಿನಿ ಸೇರಿದಂತೆ ಇನ್ನಿತರರ ವಾಹನಗಳಲ್ಲಿ ಮಕ್ಕಳನ್ನು ಕುರಿ ತುಂಬಿದಂತೆ ತುಂಬಲಾಗುತ್ತದೆ. ಇದು ತಪ್ಪು. ಇಂತಹ ಘಟನೆಗಳು ಕಂಡು ಬಂದಲ್ಲಿ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು.
• ಅಪ್ಪಯ್ಯ ನಾಲವತ್ತವಾಡಮಠ, ಪ್ರಾದೇಶಿಕ ಸಾರಿಗೆ ಆಯುಕ್ತ
Advertisement

Udayavani is now on Telegram. Click here to join our channel and stay updated with the latest news.

Next