Advertisement

“ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌’,”ಇಂಡಿಯ ಬುಕ್‌ ಆಫ್‌ ರೆಕಾರ್ಡ್‌’ನಲ್ಲಿ ದಾಖಲೆ

04:56 PM Nov 17, 2019 | Suhan S |

ಮುಂಬಯಿ, ನ. 16: ಭಾಯಂದರ್‌ ಪೂರ್ವದ ಇಂದ್ರಲೋಕ ಸಮೀಪದ ಶ್ರೀ ಬಾಳಾ ಠಾಕ್ರೆ ಕ್ರೀಡಾಂಗಣದಲ್ಲಿ ನ. 14ರಂದು ಸುಮಾರು 738 ವಿದ್ಯಾರ್ಥಿಗಳು ಒಂದು ಗಂಟೆ ಹತ್ತು ನಿಮಿಷಗಳ ಕಾಲ ಕಣ್ಣಿಗೆ ಬಟ್ಟೆ ಕಟ್ಟಿ ಭರತನಾಟ್ಯದ ವಿವಿಧ ಕಲಾಪ್ರಕಾರಗಳನ್ನು ಪ್ರದರ್ಶಿಸುವುದರ ಮೂಲಕ “ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌” ಮತ್ತು “ಇಂಡಿಯ ಬುಕ್‌ ಆಫ್‌ ರೆಕಾರ್ಡ್‌’ನಲ್ಲಿ ದಾಖಲಿಸಿದ್ದಾರೆ.

Advertisement

ಆಯ್ಕೆ ಸಮಿತಿಯು ಮಹರ್ಷಿ ಡಾ| ಆನಂದ ಗುರೂಜಿ, ಕಟೀಲು ವಾಸುದೇವ ಆಸ್ರಣ್ಣ, ಲಯನ್‌ ಡಾ| ಕೆ. ಟಿ. ಶಂಕರ್‌, ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ ಶೆಟ್ಟಿ, ಶ್ರೀ ಯಕ್ಷ ಕಲಾ ನಿಲಯದ ಅಧ್ಯಕ್ಷ ಶಶಿಧರ ಶೆಟ್ಟಿ, ಪುಣೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಆನಂದ ಶೆಟ್ಟಿ, ಮಹಾರಾಷ್ಟ್ರ ಮಾನವ ಸೇವಾ ಸಂಘದ ಅಧ್ಯಕ್ಷ ಡಾ| ಹರೀಶ್‌ ಬಿ. ಶೆಟ್ಟಿ, ಮಲೇಶಿಯಾದ ಸಂಗೀತ ನಿರ್ದೇಶಕ ಎನ್‌. ತಾರನಾಥ, ಪಲಿಮಾರು ಮಠದ ವಿದ್ವಾನ್‌ ರಾಧಾಕೃಷ್ಣ ಭಟ್‌, ಆಹಾರ್‌ ಪೋಲೀಸ್‌ ಸಮಿತಿಯ ಕಾರ್ಯಾಧ್ಯಕ್ಷ ಡಾ| ಸತೀಶ್‌ ಶೆಟ್ಟಿ, ಬಂಟ್ಸ್‌ ಸಂಘ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್‌ ಶೆಟ್ಟಿ ತೆಳ್ಳಾರ್‌, ಕಲಾಜಗತ್ತಿನ ವಿಜಯ ಕುಮಾರ್‌ ಶೆಟ್ಟಿ ತೋನ್ಸೆ, ನಗರ ಸೇವಕ ಅರವಿಂದ ಶೆಟ್ಟಿ, ಸುಬ್ರಮಣ್ಯ ಭಟ್‌, ಪ್ರವೀಣ್‌ ಶೆಟ್ಟಿ ಮೊದಲಾದವರ ಸಮ್ಮುಖದಲ್ಲಿ ರಾಧಾಕೃಷ್ಣ ನೃತೃ ಅಕಾಡೆಮಿಯ ನಿರ್ದೇಶಕಿ, ಸ್ಥಾಪಕಿ, ನೃತ್ಯ ಗುರು ಸುಕನ್ಯಾ ಸುಬ್ರಮಣ್ಯ ಭಟ್‌ ಅವರಿಗೆ ಏಷ್ಯಾ ಬುಕ್‌ ಆಪ್‌ ರೆಕಾರ್ಡ್‌ ಮತ್ತು ಇಂಡಿಯ ಬುಕ್‌ ಆಪ್‌ ರೆಕಾರ್ಡ್‌ ಪ್ರಶಸ್ತಿ, ಪ್ರಮಾಣ ಪತ್ರ, ಸ್ಮರಣಿಕೆಯನ್ನು ನೀಡಿ ಅಭಿನಂದಿಸಿ ಗೌರವಿಸಿದರು.

ಬೆಳಗ್ಗೆ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರು ದಿನವಿಡೀ ನಡೆಯುವ ಸಮಾರಂಭಕ್ಕೆ ದೀಪ ಪ್ರಜ್ವಲಿ ಶುಭ ಹಾರೈಸಿದರು. ಮಹರ್ಷಿ ಡಾ| ಆನಂದ ಗುರೂಜಿ ಅವರು ಆಶೀರ್ವಚನ ನೀಡಿ, ನಮ್ಮ ಭಾರತೀಯ ಸಂಸ್ಕೃತಿಯನ್ನು ಶಾಸ್ತ್ರಿಯ ಸಂಗೀತದಲ್ಲಿ ಸಂಯೋಜನೆ ಮಾಡಿಕೊಂಡು ಭರತ ನಾಟ್ಯದ ಮುಖೇನ ಸುಮಾರು ಒಂದು ಸಾವಿರ ಮಕ್ಕಳನ್ನು ಒಂದೆಡೆ ಸೇರಿಸಿ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾಯಕದಲ್ಲಿ ನೃತ್ಯ ಗುರು ಸುಕನ್ಯಾ ಭಟ್‌ ಅದ್ದೂರಿಯ ಸೇವೆ ಸಲ್ಲಿಸಿದ್ದಾರೆ. ಇಂತಹ ಕಾರ್ಯಕ್ರಮಗಳು ನಿರ್ವಿಘ್ನವಾಗಿ ನೆರವೇರಲು ಸಹಕರಿಸಿದ ಮಕ್ಕಳಿಗೆ, ಪರಿವಾರದವರಿಗೆ, ಕಾಣದ ಕೈಗಳಿಗೆ ಶ್ರೀ ಶಾರದ ಮಾತೆಯ ಅನುಗ್ರಹ ಸದಾ ಇರಲಿ. ಭಾರತಿಯ ಕಲೆ, ಹಿಂದೂ ಸಂಸ್ಕೃತಿಯ ಸೂಕ್ಷ್ಮತೆಯನ್ನು ಅರಿತು ಬಾಳುವಂತಹ ಸಹಬಾಳ್ವೆಯನ್ನು ಇಂದಿನ ಪ್ರದರ್ಶನ ಸ್ಪಷ್ಟಪಡಿಸಿದೆ. ಮಕ್ಕಳ ಆಟೋಟ, ನೃತ್ಯ ಕಲೆಗಳಿಗೆ ಪ್ರೋತ್ಸಾಹ ನೀಡಿ ಜ್ಞಾನವಂತರಾಗಿ ಬೆಳೆಸಬೇಕೆಂದು ತಿಳಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನೃತ್ಯ ಗುರು ಸುಕನ್ಯಾ ಭಟ್‌ ಅವರು, ಹಲವಾರು ವರ್ಷಗಳ ಕನಸು ಇಂದು ನನಸಾಗಿದೆ. ವಿದ್ಯಾರ್ಥಿಗಳ ಪಾಲಕರ, ಪೋಷಕರ ನಿರಂತರ ಸಹಕಾರದಿಂದ ಈ ದಾಖಲೆ ನಿರ್ಮಿಸಲು ಸಾಧ್ಯವಾಯಿತು.

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಭರತ ನಾಟ್ಯ ಪ್ರದರ್ಶನ ಮಾಡುವುದು ಸುಲಭದ ಸಾಧನೆಯಲ್ಲ. ಭರತ ನಾಟ್ಯದಲ್ಲಿ ಕಣ್ಣಿನ ಭಾವನೆ ಪ್ರಧಾನವಾಗಿರುತ್ತದೆ. 738 ಮಂದಿ ವಿದ್ಯಾರ್ಥಿಗಳು ಒಂದು ಗಂಟೆ ಹತ್ತು ನಿಮಿಷಗಳ ಕಾಲ ನೃತ್ಯ ಮಾಡಿ ಪುರಾತನ ಸಂಸ್ಕೃತಿಗೆ ಭದ್ರ ಬುನಾದಿ ನೀಡಿದ್ದಾರೆ. ಸಾಧನೆಯ ಹಂಬಲ ಇಷ್ಟಕ್ಕೆ ನಿಲ್ಲದೆ ಮುಂದೆ ವಿಶಿಷ್ಟ ಸಾಹಸಕ್ಕೆ ಸಿದ್ದರಾಗ ಬೇಕು ಎಂದು ಹೇಳಿದ ಅವರು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ನಟುವಾಂಗದಲ್ಲಿ ಗುರುಗಳಾದ ಶಾಂತಾ ಪಡುವೆಟ್ನಾಯ, ರಾಮಕೃಷ್ಣ ಕೊಡಂಚ ಮತ್ತು ರಾಜೇಂದ್ರ ನಾಯ್ಡು, ಕೊಳಲಿನಲ್ಲಿ ರಾಘವೇಂದ್ರ ಬಳೆಗ, ವಾಯೊಲಿನ್‌ನಲ್ಲಿ ಬಾಲ ಸುಬ್ರಮಣಿಯಾನಿ, ಹಾಡುಗಾರಿಕೆಯಲ್ಲಿ ನವಲ್‌ ಕಿಶೋರ್‌ ಕುಲಕರ್ಣಿ ಮತ್ತು ಕಾರ್ತಿಕ್‌ ಭಟ್‌, ಮೃದಂಗದಲ್ಲಿ ವೆಂಕಟೇಶ್ವರ ಕೆ. ಎನ್‌., ಕಾಂಜೀರದಲ್ಲಿ ಕಾರ್ತಿಕ್‌ ಆಯ್ಯರ್‌ ಸಹಕರಿಸಿದರು. ಎಂ. ಸಿ. ಪ್ರಸಾದ್‌ ಕಾರ್ಯಕ್ರಮವನ್ನು ನಿರ್ವಹಿಸಿದರು.

Advertisement

ಸದಾನಂದ ಶೆಟ್ಟಿ, ಗೋಪಾಲಕೃಷ್ಣ ಗಾಣಿಗ, ಭವಾನಿ ಶೆಟ್ಟಿ, ವಿನಯ ಹೆಗ್ಡೆ, ಚಂದ್ರಹಾಸ ಪಾಲನ್‌, ಪೂರ್ಣಿಮ ಪೂಜಾರಿ, ವೈಷ್ಣವಿ ಅಗ್ನಿ ಹೋತ್ರಿ, ಸುಜತಾ ಪಾಲನ್‌, ಅರುಣ್‌ ಶೆಟ್ಟಿ, ಸಂಪತ್‌ ಶೆಟ್ಟಿ, ಕುಶಲ ಹೆಗ್ಡೆ, ಗುಣಕಾಂತ್‌ ಶೆಟ್ಟಿ ಕರ್ಜೆ, ರಾಜೇಶ್‌ ಶೆಟ್ಟ್ ಕಾಪು ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು, ಸಲಹಾ ಸಮಿತಿ ಸದಸ್ಯರು, ಹಿತೈಷಿಗಳು ಸಹಕರಿಸಿದರು.

 

ಚಿತ್ರ-ವರದಿ: ರಮೇಶ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next