Advertisement

ತ್ವರಿತ ಸೇವೆಗೆ  ಇ-ಆಡಳಿತಕ್ಕೆ ಒತ್ತು ನೀಡಲು ಶಿಫಾರಸು

08:47 PM Feb 24, 2022 | Team Udayavani |

ಬೆಂಗಳೂರು: ಮಹಾನಗರ ಪಾಲಿಕೆಯು ಆಡಳಿತ ಮತ್ತು ನಾಗರಿಕರಿಗೆ ಸೇವಾ-ಸೌಲಭ್ಯಗಳನ್ನು ಕಲ್ಪಿಸಲು ಇ-ಆಡಳಿತಕ್ಕೆ ಒತ್ತು ನೀಡುವಂತೆ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ನೇತೃತ್ವದ ಆಡಳಿತ ಸುಧಾರಣ ಆಯೋಗವು ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ.

Advertisement

ಹೊಸ ತಂತ್ರಜ್ಞಾನ ಬೆಳವಣಿಗೆ, ನಿಯಮಗಳು ಹಾಗೂ ಮಾರ್ಗಸೂಚಿಗಳಿಗೆ ತಿದ್ದುಪಡಿಗಳು, ಬಳಕೆದಾರರ ಅಗತ್ಯಗಳು ಮತ್ತು ಭದ್ರತೆಗಳ ಕಾರಣಕ್ಕಾಗಿ ನವೀಕರಣ ಅಗತ್ಯವಿದೆ. ಇ- ಕಚೇರಿ ಕಡತಗಳ ವಿವರಗಳು ಮತ್ತು ನಿರ್ಬಂಧಗಳು, ಆದೇಶಗಳು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಸಾರ್ವಜನಿಕ ಡೊಮೇನ್‌ಲ್ಲಿ ಲಭ್ಯವಾಗುವಂತೆ ಮಾಡಲು ಶಿಫಾರಸು ಮಾಡಿದೆ.

ಬಿಬಿಎಂಪಿ ಇ-ಅಂದಾಜು ಪುಸ್ತಕ ಮತ್ತು ಇ-ಮಾಪನ ಪುಸ್ತಕವನ್ನು ತಯಾರಿಸಲು ಇ-ಪ್ರೊಕ್ಯೂರ್‌ವೆುಂಟ್‌ ಮತ್ತು ಗುತ್ತಿಗೆ ನಿರ್ವಹಣಾ ವ್ಯವಸ್ಥೆಯನ್ನು ಕಡ್ಡಾಯವಾಗಿ ಬಳಸುವಂತೆ ತಿಳಿಸಿದೆ.

ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ, ಖಾತಾ ಪ್ರಮಾಣಪತ್ರ, ವ್ಯಾಪಾರ ಪರವಾನಗಿ, ಕಟ್ಟಡ ಯೋಜನೆ ಅನುಮೋದನೆ, ಮರ ಕಡಿಯುವ ಅನುಮತಿ, ರಸ್ತೆ ಕತ್ತರಿಸುವ ಅನುಮತಿ ಮುಂತಾದ 13 ಆನ್‌ಲೈನ್‌ ಸೇವೆಗಳನ್ನು ಒದಗಿಸುತ್ತಿದೆ. ಹಾಲಿ ಇರುವ ಐಟಿ ಸೆಲ್‌ ನಗರದ 1.2 ಕೋಟಿ ಜನರಿಗೆ ಅಗತ್ಯ ಸೇವೆಯನ್ನು ಕಲ್ಪಿಸುವ ಸಾಮರ್ಥ್ಯ ಹೊಂದಿಲ್ಲ. ಆದ್ದರಿಂದ ಪ್ರಸ್ತುತ ಬಳಸುತ್ತಿರುವ ಸಾಫ್ಟ್ವೇರ್‌ ಸಿಸ್ಟಂ ಅನ್ನು ವಿವಿಧ ವೆಂಡರ್‌ಗಳು ಅಭಿವೃದ್ಧಿಪಡಿಸುತ್ತಿದ್ದಾರೆ. ಕೆಲವು ಫೌಂಡೇಷನ್‌, ಎನ್‌ಐಸಿ, ಖಾಸಗಿ ಏಜೆನ್ಸಿ ಮತ್ತು ಆಂತರಿಕವಾಗಿ ಇ- ಆಡಳಿತಕ್ಕಾಗಿ ಸಂಯೋಜಿಸುವ ಅಗತ್ಯವಿದೆ.

ಆನ್‌ಲೈನ್‌ ಪೇಮೆಂಟ್‌ಗೆ ಆದ್ಯತೆ: 

Advertisement

ನಿವಾಸಿಗಳ ಉತ್ತಮ ಸೇವೆಯನ್ನು ನೀಡುವ ಹಿತದೃಷ್ಟಿಯಿಂದ ಬಿಬಿಎಂಪಿಯು ಆಸ್ತಿ ತೆರಿಗೆ ಪಾವತಿಯನ್ನು ಬೆಂಗಳೂರು ಒನ್‌ ಮತ್ತು ಕರ್ನಾಟಕ ಒನ್‌ ಕೇಂದ್ರಗಳಲ್ಲಿ ಡಿಬಿಟ್‌, ಕ್ರೆಡಿಟ್‌ ಕಾರ್ಡ್‌ ಅಥವಾ ಯುಪಿಐ ಪಾವತಿ ಮೂಲಕ ಸ್ವೀಕರಿಸುವ ವಿಧಾನ ಅಳವಡಿಸಿಕೊಳ್ಳಬೇಕು. ಜನನ ಮತ್ತು ಮರಣ ಪ್ರಮಾಣಪತ್ರಗಳು, ವ್ಯಾಪಾರ ಪರವಾನಗಿ ಮತ್ತು ಇ-ಆಸ್ತಿ ಯಂತಹ ಇತರೆ ಸೇವೆಗಳನ್ನು ಸ್ವೀಕರಿಸಲು ಸಕ್ರಿಯಗೊಳಿಸಬಹುದು.

ತೆರಿಗೆಗಳ ಆನ್‌ಲೈನ್‌ ಪಾವತಿಗೆ ಲಿಂಕ್‌ಗಳನ್ನು ಕಳುಹಿಸಬೇಕು. ಅರ್ಜಿದಾರರು, ಅರ್ಕಿಟೆಕ್ಟ್ ಮತ್ತು ಎಂಜಿನಿಯರುಗಳಿಂದ ಘೋಷಣೆ, ಅಂಡರ್‌ಟೇಕಿಂಗ್‌, ಸ್ವಯಂ ಪ್ರಮಾಣೀಕರಣಕ್ಕೆ ಸಹಿ ಮಾಡಿದ ತಕ್ಷಣ ಮತ್ತು ಅಗತ್ಯ ಶುಲ್ಕವನ್ನು ಪಾವತಿಸಿದ ತಕ್ಷಣ ಎಇಇ, ಎಡಿಟಿಪಿಯ ಇ- ಸಹಿಯೊಂದಿಗೆ ಮಂಜೂರಾತಿಯನ್ನು ನೀಡಬೇಕು.

ವಿವಿಧ ಸೇವೆಗಳನ್ನು ಪಡೆಯುವ ಬಗ್ಗೆ ಮಾರ್ಗದರ್ಶನ ನೀಡಲು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ “ಸಹಾಯಯ ಕೇಂದ್ರ’ವನ್ನು ಪ್ರತಿ ವಾರ್ಡ್‌ಗೂ ವಿಸ್ತರಿಸಬೇಕು. ಸಾರ್ವಜನಿಕ ವಿಚಾರಣೆಗಳು ಮತ್ತು ದೂರುಗಳಿಗೆ ಬಿಬಿಎಂಪಿ ಒಂದೇ ಟೋಲ್‌ ಫ್ರೀ ಸಂಖ್ಯೆಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.

ವಾಟ್ಸಾಪ್‌ ಗ್ರೂಪ್‌ ಕಡ್ಡಾಯ ಮಾಡಿ:

ಸಾರ್ವಜನಿಕರ ದೂರುಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಅನುಕೂಲವಾಗುವಂತೆ ವಾರ್ಡ್‌ ಎಂಜಿನಿಯರ್‌ಗಳು, ಆರೋಗ್ಯ ನಿರೀಕ್ಷಕ ಮತ್ತು ಎಲೆಕ್ಟ್ರಿಕಲ್‌ ಎಂಜಿನಿಯರ್‌ಗಳು ತಮ್ಮ ವಾರ್ಡ್‌ಗಳಲ್ಲಿ ನಿವಾಸಿಗಳ ಕಲ್ಯಾಣ ಅಸೋಸಿಯೇಷನ್‌ಗಳ (ಆರ್‌ಡಬ್ಲೂéಎ) ವಾಟ್ಸಾಪ್‌ ಗುಂಪುಗಳನ್ನು ಕಡ್ಡಾಯವಾಗಿ ರಚಿಸಲು ನಿರ್ದೇಶನ ನೀಡಬೇಕು. ಈ ಮೂಲಕ ಸಾರ್ವಜನಿಕರ ಆರೋಗ್ಯ, ವಿಪತ್ತು ಸಂಬಂಧಿತ ಮತ್ತು ಇತರೆ ಸಂದೇಶಗಳನ್ನು ವಾರ್ಡ್‌ ನಿವಾಸಿಗಳಿಗೆ ತ್ವರಿತವಾಗಿ ತಿಳಿಸುವ ಸಾಧನವಾಗಿ ಕಾರ್ಯನಿರ್ವಹಿಸಲಿದೆ.

ಬಿಬಿಎಂಪಿಯ “ಸಹಾಯ’ ಅಪ್ಲಿಕೇಷನ್‌ ಅನ್ನು ಜನಸ್ಪಂದನ- ಸಮಗ್ರ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ವ್ಯವಸ್ಥೆ (ಐಪಿಜಿಆರ್‌ಎಸ್‌) ನೊಂದಿಗೆ ಲಿಂಕ್‌ ಮಾಡಬೇಕು. ಸಹಾಯ ಅಪ್ಲಿಕೇಷನ್‌ನಲ್ಲಿ ನಮೂದಿಸಿದ ಎಲ್ಲಾ ಕುಂದುಕೊರತೆಗಳು ಐಪಿಜಿಆರ್‌ಎಸ್‌ನಲ್ಲಿ ಸ್ವಯಂಚಾಲಿತವಾಗಿ ನೋಂದಾಯಿಸಲ್ಪಡಬೇಕು.

ಕೆಸ್ವಾನ್‌ ಅತವಾ ವಿಪಿಎನ್‌ ಸಂಪರ್ಕವನ್ನು ವಾರ್ಡ್‌, ಉಪ-ವಿಭಾಗ ಮತ್ತು ವಿಭಾಗ ಮಟ್ಟಗಳಿಗೆ ನೀಡಬೇಕು. ಸಭೆಗಳಿಗೆ ಹಾಜರಾಗಲು ವಲಯ ಕಚೇರಿಗಳಿಗೆ ಹೋಗುವ ಸಮಯವನ್ನು ಉಳಿಸಲು ಇಇ ಅಥವಾ ಆರ್‌ಒ ಕಚೇರಿಗಳಲ್ಲಿ ಕೆಸ್ವಾನ್‌ ವೀಡಿಯೋ ಕಾನ್ಫರೆನ್ಸ್‌ ಸೌಲಭ್ಯ ಕಲ್ಪಿಸಬೇಕು.

ಆರ್ಥಿಕ ವ್ಯವಸ್ಥೆ ಸುಧಾರಣೆಗೆ ಡಿಜಿಟಲೀಕರಣ:

ಬಿಬಿಎಂಪಿಯಲ್ಲಿರುವ ಆರ್ಥಿಕ ವ್ಯವಸ್ಥೆ ಇಂಟಿಗ್ರೇಟೆಡ್‌ ಫೈನಾನ್ಸಿಯಲ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ (ಐಎಫ್ಎಂಎಸ್‌) ನಲ್ಲಿ ಪ್ರಸ್ತುತ 100 ಹೊರಗುತ್ತಿಗೆ ನೌಕರರಿಗೆ ವೇತನ ಪಾವತಿ ಮಾಡಲು ಬಿಬಿಎಂಪಿ ಅಧಿಕಾರಿಯು 200 ಒಟಿಪಿಗಳನ್ನು ನಮೂದಿಸಬೇಕಿದೆ. ಇದನ್ನು ಒಂದೇ ಒಟಿಪಿಯೊಂದಿಗೆ ವ್ಯವಹಾರ ನಡೆಸಲು ಹಣಕಾಸು ಉಪ ನಿಯಂತ್ರಕರಿಗೆ ಅಧಿಕಾರ ನೀಡಬೇಕು.

ಆನ್‌ಲೈನ್‌ ಪಾವತಿ ವ್ಯವಸ್ಥೆ ಬಂದ ನಂತರ ಡಿಮ್ಯಾಂಡ್‌ ಡಾ³ಫ್ಟ್ಗಳು (ಡಿಡಿ) ಗಳು ಅಪ್ರಸ್ತುತವಾಗಿದೆ. ಬ್ಯಾಂಕ್‌ನಲ್ಲಿ ಡಿಡಿ ಜಮೆ ಮತ್ತು ಖಾತೆಗಳನ್ನು ಮರುಪರಿಶೀಲಿಸಲು ಸಮಯ ವ್ಯವರ್ಥವಾಗುತ್ತದೆ. ಕೆಲವೊಮ್ಮೆ ಸಿಂಗಲ್‌ ಡಿಡಿಯನ್ನು ಡಬಲ್‌ ಡಿಡಿಯೊಂದಿಗೆ ಬಳಸಿದ ಪ್ರಕರಣಗಳಿವೆ. ಆದ್ದರಿಂದ ಡಿಡಿ ತೆಗೆದುಕೊಳ್ಳುವ ನೀತಿಯನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಿದೆ.

ಬಯೋಮೆಟ್ರಿಕ್‌ಗೆ ಫೇಸ್‌ ರೆಕಾನೈಜಿಂಗ್‌ ಜಾರಿಗೊಳಿಸಿ:

ಕೊರೊನಾ ನಂತರ ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆಯನ್ನು ಬಳಸುತ್ತಿಲ್ಲ. ಇದರ ಬದಲಿಗೆ ಪೌರ ಕಾರ್ಮಿಕರು, ಆರೋಗ್ಯ ನಿರೀಕ್ಷಕರು, ಕ್ಲರಿಕಲ್‌ ಸಿಬ್ಬಂದಿ ಮತ್ತು ವಾರ್ಡ್‌, ವಲಯ ಮತ್ತು ಕೇಂದ್ರ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಪಿಎಚ್‌ಸಿ, ಶಾಲೆಗಳು, ಪಿಕೆ ಮಸ್ಟರಿಂಗ್‌ ಕೇಂದ್ರಗಳು, ಆಸ್ಪತ್ರೆಗಳಲ್ಲಿ ದೈನಂದಿನ ಹಾಜರಾತಿಗಾಗಿ ಮುಖ ಗುರುತಿಸುವ ಹಾಜರಾತಿ ವ್ಯವಸ್ಥೆಯನ್ನು ಅನುಷ್ಠಾನ ಮಾಡಬೇಕು ಎಂದು ಶಿಫಾರಸ್ಸಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next