Advertisement

ರಮೇಶ್‌ ಜಾರಕಿಹೊಳಿ ಸೀಟು ರಿಸರ್ವ್‌ ಮಾಡಿದ್ರು : ಉಳಿದವರದ್ದು ?

09:42 AM Aug 21, 2019 | Nagendra Trasi |

ಮಣಿಪಾಲ : ಬಿ.ಎಸ್‌ ಯಡಿಯೂರಪ್ಪನವರ ನೂತನ ಸಚಿವ ಸಂಪುಟದ ರಚನೆಯಾಗುತ್ತಿದ್ದಂತೆಯೇ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದ್ದ ಮಾತು ಇದೇ- ಅನರ್ಹ ಶಾಸಕ ರಮೇಶ್‌ ಜಾರಕಿ ಹೊಳಿ ಅವರ ಟವೆಲ್‌ ಹಾಸಿ ಅವರ ಸೀಟನ್ನು ಗಟ್ಟಿ ಮಾಡಿಕೊಂಡರು. ಉಳಿದವರು ಏನು ಮಾಡುತ್ತಾರೆ ಕಾದು ನೋಡಬೇಕು.

Advertisement

ನಿಜ, ನೂತನ ಮಂತ್ರಿ ಮಂಡಲ ರಚನೆಯಲ್ಲಿ ಬಹಳ ಅನಿರೀಕ್ಷಿತವಾಗಿ ಹೊರ ಹೊಮ್ಮಿದವರು ಅಥಣಿಯ ಮಾಜಿ ಶಾಸಕ ಲಕ್ಷ್ಮಣ ಸವದಿ. ಕಳೆದ ಚುನಾವಣೆಯಲ್ಲಿ ಆ ಕ್ಷೇತ್ರದಿಂದ ಅವರು ಸೋತಿದ್ದರು. ಇವರ ವಿರುದ್ಧ ಇದೇ ರಮೇಶ್‌ ಜಾರಕಿಹೊಳಿ ತಮ್ಮ ಆಪ್ತ ಮಹೇಶ್‌ ಕುಮಟಳ್ಳಿಯನ್ನು ನಿಲ್ಲಿಸಿ ಗೆಲ್ಲಿಸಿದ್ದರು. ಹಾಗಾಗಿಯೇ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌-ಕಾಂಗ್ರೆಸ್‌ ಸರಕಾರವನ್ನು ಉರುಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ರಮೇಶ್‌ ಜಾರಕಿಹೊಳಿಯವರು ಬಂಡಾಯವೆದ್ದು ಮುಂಬಯಿಗೆ ಕುಳಿತಾಗ ಮಹೇಶ್‌ ಅದೇ ಹಾದಿಯನ್ನು ಅನುಸರಿಸಿದ್ದರು.

ಸೋತು ಮನೆಯಲ್ಲಿ ಕುಳಿತಿದ್ದ ಲಕ್ಷ್ಮಣ ಸವದಿಯವರಿಗೆ ಈಗ ಇದ್ದಕ್ಕಿದ್ದಂತೆ ಸಚಿವ ಪಟ್ಟ ಸಿಕ್ಕಿರುವುದು ಸಹಜವಾಗಿ ಉಳಿದ ಆಕಾಂಕ್ಷಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಪ್ರಮುಖವಾಗಿ ಬಿಜೆಪಿಯ ಹಿರಿಯ ನಾಯಕರಾದ ಉಮೇಶ್‌ ಕತ್ತಿ ಮತ್ತಿತರರು ಈ ಲೆಕ್ಕಾಚಾರವೇ ಅರ್ಥವಾಗದೇ ಗೊಂದಲಕ್ಕೆ ಸಿಲುಕಿದ್ದಾರೆ. ಟಿವಿ ಯೊಂದಿಗೂ ಮಾತನಾಡುತ್ತಾ, ನಮಗೂ ಗೊತ್ತಾಗ್ತಿಲ್ಲ, ಯಾವ ಲೆಕ್ಕದಲ್ಲಿ ಮಂತ್ರಿಗಿರಿ ಕೊಟ್ಟಿದ್ದಾರೋ? ನೋಡಬೇಕು ಎಂದರು. ಇದೇ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಇದಕ್ಕೂ ಕಾರಣವಿದೆ

ಇಂಥದೊಂದು ಪ್ರಶ್ನೆಗೂ ಹಲವು ಕಾರಣಗಳಿವೆ. ಈ ಬಾರಿ ಮಂತ್ರಿ ಮಂಡಲದಲ್ಲಿ ಸ್ಥಾನ ಪಡೆದ ಇಬ್ಬರು ಸಚಿವರಾದ ಲಕ್ಷ್ಮಣ ಸವದಿ ಹಾಗೂ ನರಗುಂದ ಶಾಸಕ ಸಿ. ಸಿ. ಪಾಟೀಲರು 2012 ರಲ್ಲಿ ಡಿ.ವಿ ಸದಾನಂದಗೌಡರ ಮಂತ್ರಿ ಮಂಡಳದಲ್ಲಿ ಸಚಿವರಾಗಿದ್ದರು. ಲಕ್ಷಣ ಸವದಿಯವರು ಸಹಕಾರ ಸಚಿವರಾಗಿದ್ದರೆ, ಸಿ.ಸಿ. ಪಾಟೀಲರು ಮಹಿಳಾ ಮತ್ತು ಮಕ್ಕಳ ಖಾತೆ ಸಚಿವರಾಗಿದ್ದರು.

Advertisement

ವಿಧಾನಸಭೆ ಅಧಿವೇಶನ ಸಂದರ್ಭದಲ್ಲಿ ಉಡುಪಿಯಲ್ಲಿ ನಡೆದಿತ್ತೆನ್ನಲಾದ ರೇವ್‌ ಪಾರ್ಟಿಯೊಂದರ ಅಶ್ಲೀಲ ತುಣುಕನ್ನು ವೀಕ್ಷಿಸುತ್ತಿದ್ದರೆಂಬ ಆಪಾದನೆಗೆ ಗುರಿಯಾಗಿದ್ದರು. ಇವರೊಂದಿಗೆ ಇನ್ನೊಬ್ಬ ಸಚಿವರೂ ಆರೋಪ ಎದುರಿಸಿದ್ದರು. ಕ್ರಮೇಣ ಮೂವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಲೆಕ್ಕದಲ್ಲಿ ಅವರಿಬ್ಬರೂ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇದುಅಚ್ಚರಿಗೆ ಕಾರಣವಾಗಿದೆ.

ಲಕ್ಷಣ ಸವದಿ ಅವರ ಲೆಕ್ಕ, ಸಿಸಿ ಪಾಟೀಲ್‌ ಯಾರ ಲೆಕ್ಕ?

ಇದೇ ಲೆಕ್ಕಾಚಾರ ತಲೆ ಕೆಡಿಸಿರುವುದು. ಪ್ರಸ್ತುತ ಲಕ್ಷಣ ಸವದಿಯವರು ಮಂತ್ರಿಯಾಗಿರಬಹುದು. ಆದರೆ, ಅವರು ಯಾರಿಗೆ ಸೀಟು ಕಾದಿರಿಸಲು ಬಂದಿದ್ದಾರೆ ಗೊತ್ತೇ? ರಮೇಶ್‌ ಜಾರಕಿ ಹೊಳಿಯವರಿಗೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ಲಕ್ಷಣ ಸವದಿಯವರಿಗೆ ಸ್ಥಾನ ನೀಡಿರುವುದು ರಮೇಶ್‌ ಜಾರಕಿಹೊಳಿಯವರ ಲೆಕ್ಕದಲ್ಲಿ. ಯಾಕೆಂದರೆ, ಒಂದು ವೇಳೆ ಅನರ್ಹತೆ ಕುರಿತ ಕೋರ್ಟ್‌ ತಗಾದೆಯೆಲ್ಲಾ ಬಗೆಹರಿದು ತಾವು ಮಂತ್ರಿಯಾಗುವ ಅವಕಾಶ ಸಿಕ್ಕಿದಾಗ, ಇಲ್ಲಿ ಸೀಟು ಖಾಲಿ ಇರಬೇಕಲ್ಲಾ? ಅದಕ್ಕೇ ಇದು ಅಡ್ವಾನ್ಸ್‌ ಬುಕಿಂಗ್‌ ಎನ್ನಲಾಗುತ್ತಿದೆ.

ಇಲ್ಲವಾದರೆ ಆ ಸಂದರ್ಭದಲ್ಲಿ ಯಾರೂ ಮಂತ್ರಿ ಸ್ಥಾನ ಬಿಟ್ಟುಕೊಡದೇ ಅವಕಾಶ ಕೈ ತಪ್ಪಬಹುದೆಂಬ ದೂರಾಲೋಚನೆ ಒಳಗೊಂಡಿದೆ. . ತಾನು ಸಚಿವರಾಗುವುದು ಇಲ್ಲವೇ ಆಪ್ತ ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ಕೊಡಿಸುವುದು ಸದ್ಯದ ಲೆಕ್ಕಚಾರ. ಉಳಿದಂತೆ ಬಾಲಚಂದ್ರ ಜಾರಕಿಹೊಳಿ ಅಥವಾ ಉಮೇಶ್‌ ಕತ್ತಿಯವರಿಗೆ ಸಿಕ್ಕರೆ ಪೂರ್ಣ ಅವಧಿಗೆ ಅವರೇ ಸಚಿವರಾಗಿರುತ್ತಾರೆ. ಅದಕ್ಕೆಂದೇ ಈ ಲಕ್ಷಣ ಸವದಿಯವರು ದಾಳವಾಗಿ ಬಳಕೆಯಾಗಿದ್ದಾರೆ ಎಂಬುದು ಲಭ್ಯವಿರುವ ಮಾಹಿತಿ.

ಈಗ ಹೇಗಿದ್ದರೂ ಲಕ್ಷಣ ಸವದಿಯವರು ಸೋತು ಅಧಿಕಾರದಲ್ಲಿಲ್ಲ. ಅವರನ್ನು ತನ್ನ ಬದಲು ಸಚಿವ ಪೀಠಕ್ಕೆ ಸ್ಥಾಪಿಸಿದರೆ, ನಾಳೆ ಯಾವುದೇ ಸಮಸ್ಯೆ ಉದ್ಭವಿಸದು ಎಂಬ ರಾಜಕೀಯ ಲೆಕ್ಕಾಚಾರ ಇದ್ದಂತೆ ತೋರುತ್ತಿದೆ. ಆದ ಕಾರಣ, ರಾತ್ರೋರಾತ್ರಿ ಲೆಕ್ಕಕ್ಕೇ ಇಲ್ಲದ ಲಕ್ಷಣ ಸವದಿ ಹೆಸರು ಪಟ್ಟಿಯಲ್ಲಿ ಸೇರಿಕೊಂಡದ್ದು ಎಂಬುದು ಬಿಜೆಪಿ ಮೂಲಗಳು ನೀಡಿರುವ ಮಾಹಿತಿ.

ಹಾಗಾದರೆ, ಸಿ.ಸಿ. ಪಾಟೀಲರೂ ಹೀಗೆ ಯಾರ ಸೀಟು ಕಾದಿರಿಸಲು ಮಂತ್ರಿಯಾಗಿದ್ದಾರೋ ಅಥವಾ ಅವರಿಗೇ ಅವಕಾಶ ಸಿಕ್ಕಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಉಳಿದವರ ಕಥೆಯೇನು?

ಸಚಿವ ಸಂಪುಟದ ಬೆಳವಣಿಗೆ ಬಳಿಕ ಅನರ್ಹ ಶಾಸಕರೂ ತಮ್ಮ ಲೆಕ್ಕಾಚಾರವನ್ನೂ ಆರಂಭಿಸಿದ್ದಾರೆ. ಹೇಗೆ ಪರೋಕ್ಷವಾಗಿ ಬಿಎಸ್‌ವೈ ಮಂತ್ರಿ ಮಂಡಳದಲ್ಲಿ ತಮ್ಮ ಶಕ್ತಿ ಪ್ರದರ್ಶಿಸುವುದೆಂಬುದರ ಯೋಚನೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಆ ಮೂಲಕ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸವಾಲು ಅನರ್ಹ ಶಾಸಕರ ಮುಂದಿದೆ.

*ಅಥರ್ವ

 

Advertisement

Udayavani is now on Telegram. Click here to join our channel and stay updated with the latest news.

Next