ಮುಂಬೈ: ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶೋಚನೀಯ ಆಟ ಮುಂದುವರಿಸಿದೆ. ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು ತನ್ನ ಮೊದಲ ಆರು ಪಂದ್ಯಗಳಲ್ಲಿ ಕೇವಲ ಒಂದು ಗೆಲುವನ್ನು ಮಾತ್ರ ಪಡೆದಿದೆ. ಕಳೆದ ಗುರುವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ತಂಡದ ಪ್ರಮುಖ ಬ್ಯಾಟರ್ ಗ್ಲೆನ್ ಮ್ಯಾಕ್ಸ್ವೆಲ್ ಅವರು ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದು, ತಂಡಕ್ಕೆ ಹೊಸ ಹೊಡೆತ ನೀಡಿದೆ.
ಆರ್ಸಿಬಿ ತಂಡದ ನಿರ್ದೇಶಕ ಮೊ ಬೊಬಾಟ್ ಇದರ ಬಗ್ಗೆ ಮಾತನಾಡಿದ್ದು, “ಮ್ಯಾಕ್ಸಿ ಅವರಿಗೆ ಒಂದೆರಡು ಸ್ಕ್ಯಾನ್ ಗಳನ್ನು ಮಾಡಲಾಗಿದೆ. ಅವರು ಸದ್ಯ ಸರಿಯಾಗಿದ್ದಾರೆ. ಆದ್ದರಿಂದ, ಯಾವುದೇ ಗಾಯದ ಕಾಳಜಿ ಇಲ್ಲ” ಎಂದಿದ್ದಾರೆ.
ಮ್ಯಾಕ್ಸ್ವೆಲ್ ಕಳಪೆ ಋತುವನ್ನು ಹೊಂದಿದ್ದಾರೆ. ಅವರು ಆರು ಇನ್ನಿಂಗ್ಸ್ ಗಳಿಂದ 5.33 ಸರಾಸರಿಯಲ್ಲಿ ಕೇವಲ 32 ರನ್ ಗಳನ್ನು ಗಳಿಸಿದ್ದಾರೆ. ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.
“ಅವರು ನಿರಾಶೆಗೊಂಡಿದ್ದಾರೆ. ಅವರು ನಿಸ್ಸಂಶಯವಾಗಿ ಉನ್ನತ ಗುಣಮಟ್ಟವನ್ನು ಹೊಂದಿದ್ದಾರೆ. ಅವರು ನಮ್ಮ ಬ್ಯಾಟಿಂಗ್ ಲೈನಪ್ ನ ಪ್ರಮುಖ ಭಾಗವಾಗಿದ್ದಾರೆ. ಆದ್ದರಿಂದ, ಇಲ್ಲಿಯವರೆಗೆ, ನಾವು ಅವರನ್ನು ಬೆಂಬಲಿಸಲು ಪ್ರಯತ್ನಿಸುತ್ತಿದ್ದೇವೆ ಮತ್ತು ಸಾಧ್ಯವಾದಷ್ಟು ಅವರು ಫಾರ್ಮ್ ಗೆ ಮರಳಲು ಅವರಿಗೆ ಬೆಂಬಲವಾಗಿದ್ದೇವೆ,” ಎಂದು ಬೋಬಾಟ್ ಹೇಳಿದರು.
ಗ್ಲೆನ್ ಮ್ಯಾಕ್ಸವೆಲ್ ಸದ್ಯ ಗುಣಮುಖರಾಗಿರುವ ಕಾರಣ ಹೈದರಾಬಾದ್ ವಿರುದ್ದದ ಚಿನ್ನಸ್ವಾಮಿ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. ಆದರೆ ಒಂದು ವೇಳೆ ಆರ್ ಸಿಬಿ ಮ್ಯಾನೇಜ್ ಮೆಂಟ್ ಮ್ಯಾಕ್ಸ್ವೆಲ್ ಗೆ ವಿಶ್ರಾಂತಿ ನೀಡಲು ನಿರ್ಧರಿಸಿದರೆ, ಅವರು ಕಳೆದ ಪಂದ್ಯದಲ್ಲಿ ಹೊರಗುಳಿದಿದ್ದ ಕ್ಯಾಮರಾನ್ ಗ್ರೀನ್ ಅವರಿಗೆ ಅವಕಾಶ ನೀಡಬಹುದು.