Advertisement

ಕೆಕೆಆರ್ ಚಕ್ರವರ್ತಿ, ರಸೆಲ್‌ ದಾಳಿಗೆ ಆರ್‌ಸಿಬಿ ಕಂಗಾಲು

08:44 AM Sep 21, 2021 | Team Udayavani |

ಅಬುಧಾಬಿ : ಮಿಸ್ಟರಿ ಸ್ಪಿನ್ನರ್‌ ವರುಣ್‌ ಚಕ್ರವರ್ತಿ, ಪೇಸ್‌ ಬೌಲರ್‌ಗಳಾದ ಆ್ಯಂಡ್ರೆ ರಸೆಲ್‌ ಮತ್ತು ಕಾಲಮ್‌ ಫ‌ರ್ಗ್ಯುಸನ್‌ ಅವರ ಬೌಲಿಂಗ್‌ ದಾಳಿಗೆ ಧೂಳೀಪಟಗೊಂಡ ರಾಯಲ್‌ ಚಾಲೆಂಜರ್ ಬೆಂಗಳೂರು, ಸೋಮವಾರದ ಕೋಲ್ಕತಾ ನೈಟ್‌ರೈಡರ್ ಎದುರಿನ ಪಂದ್ಯದಲ್ಲಿ 9 ವಿಕೆಟ್‌ಗಳ ಸೋಲಿಗೆ ತುತ್ತಾಗಿದೆ.

Advertisement

ನೀಲಿ ಜೆರ್ಸಿಯೊಂದಿಗೆ ಆಡಲಿಳಿದ ಆರ್‌ಸಿಬಿ, ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿತಾದರೂ 19 ಓವರ್‌ಗಳಲ್ಲಿ 92 ರನ್ನಿಗೆ ಸರ್ವಪತನ ಕಂಡಿತು. ಈ ಸುಲಭ ಸವಾಲನ್ನು ಬೆನ್ನಟ್ಟತೊಡಗಿದ ಕೆಕೆಆರ್‌ 10 ಓವರ್‌ಗಳಲ್ಲಿ ಒಂದು ವಿಕೆಟ್‌ನಷ್ಟಕ್ಕೆ 94 ರನ್‌ ಬಾರಿಸಿ ಗುರಿ ಮುಟ್ಟಿತು. ಮೊದಲ ಸುತ್ತಿನ ಸೋಲಿಗೆ ಸೇಡು ತೀರಿಸಿಕೊಂಡಿತು.

ಕೆಕೆಆರ್‌ ಪರ ಆರಂಭಕಾರ ಶುಭಮನ್‌ ಗಿಲ್‌(48), ವೆಂಕಟೇಶ್ವರ್‌ ಅಯ್ಯರ್‌ ಅಜೇಯ 41 ರನ್‌ ಗಳಿಸಿದರು. ಆರ್‌ಸಿಬಿ ಪರ ಚಹಲ್‌ ಒಂದು ವಿಕೆಟ್‌ ಉರುಳಿಸಿದರು. ಆರ್‌ಸಿಬಿ ಒಂದೊಂದು ರನ್ನಿಗಾಗಿ ಪರದಾಡುತ್ತ ಹೋಯಿತು. ನಾಯಕ ವಿರಾಟ್‌ ಕೊಹ್ಲಿ ಕೇವಲ 5 ರನ್‌ ಮಾಡಿ ದ್ವಿತೀಯ ಓವರ್‌ ನಲ್ಲೇ ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಲೆಗ್‌ ಬಿಫೋರ್‌ ಬಲೆಗೆ ಬಿದ್ದರು.

ಅಲ್ಲಿಂದಲೇ ತಂಡದ ಕುಸಿತ ಮೊದಲ್ಗೊಂಡಿತು. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಎಡಗೈ ಆಟಗಾರ ದೇವದತ್ತ ಪಡಿಕ್ಕಲ್‌ ಭರವಸೆ ಮೂಡಿಸಿದರೂ 22 ರನ್‌ (20 ಎಸೆತ, 3 ಬೌಂಡರಿ) ಮಾಡಿ ಫ‌ರ್ಗ್ಯುಸನ್‌ ಎಸೆತದಲ್ಲಿ ಕೀಪರ್‌ ಕಾರ್ತಿಕ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಅಲ್ಲಿಗೆ ಪವರ್‌ ಪ್ಲೇ ಕೂಡ ಮುಗಿಯಿತು. ಈ ಅವಧಿಯಲ್ಲಿ ಆರ್‌ಸಿಬಿ ಆರಂಭಿಕರನ್ನು ಕಳೆದುಕೊಂಡು 41 ರನ್‌ ಮಾಡಿತ್ತು. ಆದರೆ ಪಡಿಕ್ಕಲ್‌ ಅವರದೇ ಆರ್‌ಸಿಬಿ ಸರದಿಯ ಸರ್ವಾಧಿಕ ವೈಯಕ್ತಿಕ ಗಳಿಕೆ ಆಗಲಿದೆ ಎಂದು ಯಾರೂ ಭಾವಿಸಿರಲಿಲ್ಲ.

ರಸೆಲ್‌, ಚಕ್ರವರ್ತಿ ಘಾತಕ

Advertisement

ರಸೆಲ್‌, ಚಕ್ರವರ್ತಿ ಘಾತಕ 9ನೇ ಓವರ್‌ನಲ್ಲಿ ಆ್ಯಂಡ್ರೆ ರಸೆಲ್‌ ಅವಳಿ ಆಘಾತವನ್ನಿಕ್ಕಿ ಆರ್‌ ಸಿಬಿ ಸಂಕಟವನ್ನು ಬಿಗಡಾಯಿಸುವಂತೆ ಮಾಡಿದರು. ವನ್‌ ಡೌನ್‌ನಲ್ಲಿ ಬಂದ ಕೀಪರ್‌ ಶ್ರೀಕರ್‌ ಭರತ್‌ (19 ಎಸೆತಗಳಿಂದ 16 ರನ್‌) ಡೀಪ್‌ ಮಿಡ್‌ ವಿಕೆಟ್‌ μàಲ್ಡರ್‌ ಗಿಲ್‌ಗೆ ಕ್ಯಾಚ್‌ ನೀಡಿದರೆ, 4ನೇ ಎಸೆತದಲ್ಲಿ ಎಬಿ ಡಿ ವಿಲಿಯರ್ ಗೋಲ್ಡನ್‌ ಡಕ್‌ ಸಂಕಟಕ್ಕೆ ಸಿಲುಕಿದರು. 52ಕ್ಕೆ 4 ವಿಕೆಟ್‌ ಬಿತ್ತು. ಆರ್‌ಸಿಬಿಯ ದೊಡ್ಡ ಮೊತ್ತದ ಕನಸು ಕಮರತೊಡಗಿತು. ಬೆಂಗಳೂರು ತಂಡಕ್ಕೆ ಮತ್ತೂಂದು ಅವಳಿ ಆಘಾತವಿಕ್ಕಿದವರು ವರುಣ್‌ ಚಕ್ರವರ್ತಿ.

12ನೇ ಓವರ್‌ನ ಸತತ ಎಸೆತಗಳಲ್ಲಿ ಅವರು ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಮೊದಲ ಐಪಿಎಲ್‌ ಪಂದ್ಯವಾಡಿದ ವನಿಂದು ಹಸರಂಗ ವಿಕೆಟ್‌ ಹಾರಿಸಿದರು. ಮ್ಯಾಕ್ಸ್‌ವೆಲ್‌ 10 ರನ್ನಿಗೆ 17 ರನ್‌ ಎಸೆತ ತೆಗೆದುಕೊಂಡರು. ಇದರಲ್ಲಿ ಒಂದೂ ಬೌಂಡರಿ ಶಾಟ್‌ ಇರಲಿಲ್ಲ. ಹಸರಂಗ ಮೊದಲ ಎಸೆತದಲ್ಲೇ ಎಲ್‌ಬಿಡಬ್ಲ್ಯು ಆದರು. ಕೈಲ್‌ ಜಾಮೀಸನ್‌ ಲೆಗ್‌ ಬಿಫೋರ್‌ನಿಂದ ಪಾರಾಗುವುದರೊಂದಿಗೆ ಚಕ್ರವರ್ತಿಗೆ ಹ್ಯಾಟ್ರಿಕ್‌ ತಪ್ಪಿತು. ಚಕ್ರವರ್ತಿ ಬೇಟೆ ಇಲ್ಲಿಗೇ ಮುಗಿಯಲಿಲ್ಲ. ತಮ್ಮ ಮುಂದಿನ ಓವರ್‌ ನಲ್ಲಿ ಸಚಿನ್‌ ಬೇಬಿಗೆ ಪೆವಿಲಿಯನ್‌ ಹಾದಿ ತೋರಿಸಿದರು. 17 ಎಸೆತ ಎದುರಿಸಿದ ಸಚಿನ್‌ ಗಳಿಸಿದ್ದು ಏಳೇ ರನ್‌. 15 ಓವರ್‌ ಮುಕ್ತಾಯಕ್ಕೆ ಆರ್‌ಸಿಬಿ 75ಕ್ಕೆ 7 ವಿಕೆಟ್‌ ಉದುರಿಸಿಕೊಂಡು ಒದ್ದಾಡುತ್ತಿತ್ತು. ಕೋಲ್ಕತಾ ಬೌಲರ್ ಸಂಪೂರ್ಣ ಮೇಲುಗೈ ಸಾಧಿಸಿದ್ದರು ಚಕ್ರವರ್ತಿ.

ಕೊಹ್ಲಿ: 200 ಪಂದ್ಯಗಳ ವಿಶಿಷ್ಟ ದಾಖಲೆ

ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಸೋಮವಾರ ಕೆಕೆಆರ್‌ ವಿರುದ್ಧ ಆಡಲಿಳಿಯುವುದರೊಂದಿಗೆ ವಿಶಿಷ್ಟ ದಾಖಲೆಯೊಂದನ್ನು ಸ್ಥಾಪಿಸಿದರು. ಇದು ಅವರ 200ನೇ ಐಪಿಎಲ್‌ ಪಂದ್ಯ. ಈ ಎಲ್ಲ ಪಂದ್ಯಗಳನ್ನು ಅವರು ಆರ್‌ಸಿಬಿ ಪರವಾಗಿಯೇ ಆಡಿದ್ದರೆಂಬುದೇ ಇಲ್ಲಿನ ವಿಶೇಷ. ಐಪಿಎಲ್‌ ಇತಿಹಾಸದಲ್ಲಿ 200 ಪಂದ್ಯ ಆಡಿದ ನಾಲ್ವರು ಆಟಗಾರರಿದ್ದಾರೆ. ಆದರೆ ಕೊಹ್ಲಿ ಒಂದೇ ತಂಡದ ಪರ 200 ಪಂದ್ಯಗಳಲ್ಲಿ ಕಾಣಿಸಿಕೊಂಡ ಮೊದಲ ಕ್ರಿಕೆಟಿಗನಾಗಿದ್ದಾರೆ. ಚೆನ್ನೈ ಪರ 182 ಪಂದ್ಯಗಳನ್ನಾಡಿರುವ ಧೋನಿಗೆ ದ್ವಿತೀಯ ಸ್ಥಾನ. ರೈನಾ ಚೆನ್ನೈ ಪರ 172, ಪೊಲಾರ್ಡ್‌ ಮುಂಬೈ ಪರ 172 ಮತ್ತು ರೋಹಿತ್‌ ಶರ್ಮ ಮುಂಬೈ ಪರ 162 ಪಂದ್ಯ ಆಡಿದ್ದಾರೆ. ಐಪಿಎಲ್‌ ಪಂದ್ಯಗಳ “ದ್ವಿಶತಕ’ವೀರರೆಂದರೆ ಧೋನಿ (212), ರೋಹಿತ್‌ ಶರ್ಮ (207), ದಿನೇಶ್‌ ಕಾರ್ತಿಕ್‌ (203) ಮತ್ತು ಸುರೇಶ್‌ ರೈನಾ (201).

ಐಪಿಎಲ್‌ಗೆ ನಿಷೇಧ ಹೇರಿದ ತಾಲಿಬಾನ್‌!

ಕಾಬೂಲ್‌: ಸಿನೆಮಾ ಹಾಗೂ ಇನ್ನಿತರ ಮನರಂಜನೆಗಳಿಗೆ ನಿಷೇಧ ಹೇರಿದ್ದ ತಾಲಿಬಾನಿಗಳ ಕಣ್ಣು ಈಗ ಐಪಿಎಲ… ಮೇಲೆ ಬಿದ್ದಿದೆ. ಅದು ದೇಶದಲ್ಲಿ ಐಪಿಎಲ್‌ ಪ್ರಸಾರಕ್ಕೆ ನಿಷೇಧ ಹೇರಿದೆ. ತಾಲಿಬಾನಿಗಳ ಈ ಕ್ರಮಕ್ಕೆ ಸನ್‌ರೈಸರ್ ತಂಡದ ಅಫ್ಘಾನ್‌ ಕ್ರಿಕೆಟಿಗ ರಶೀದ್‌ ಖಾನ್‌, ಅಫ್ಘಾನ್‌ ಕ್ರಿಕೆಟ್‌ ಪ್ರೇಮಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟ್‌ ಟೂರ್ನಿಯಾಗಿರುವ ಐಪಿಎಲ್‌ ವಿಶ್ವದ ಬಹುತೇಕ ದೇಶಗಳಲ್ಲಿ ನೇರ ಪ್ರಸಾರ ಕಾಣುತ್ತಿದೆ.

ಇತ್ತ ಅಫ್ಘಾನಿಸ್ಥಾನದ ಆಟಗಾರರು ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಅಲ್ಲಿಯೂ ಎಲ್ಲ ತಂಡಗಳಿಗೆ ಅಭಿಮಾನಿಗಳಿ¨ªಾರೆ. ಅದರಂತೆ ಮೊದಲಾರ್ಧದ ಟೂರ್ನಿಯನ್ನು ವೀಕ್ಷಿಸಿದ್ದ ಅಫ್ಘಾನ್‌ ಕ್ರಿಕೆಟ್‌ ಪ್ರೇಮಿಗಳಿಗೆ ದ್ವಿತೀಯಾರ್ಧದ ಪಂದ್ಯ ವೀಕ್ಷಿಸುವ ಭಾಗ್ಯ ಇಲ್ಲದಂತಾಗಿದೆ. ಐಪಿಎಲ್‌ನ ಕೆಲವು ಅಂಶಗಳು ಇಸ್ಲಾಂ ವಿರೋಧಿ ಆಗಿರುವುದರಿಂದ ಅಫ್ಘಾನಿಸ್ಥಾನದಲ್ಲಿ ಐಪಿಎಲ್‌ ಟೂರ್ನಿಯ ಪ್ರಸಾರಕ್ಕೆ ನಿಷೇಧ ಹೇರಲಾಗಿದೆ ಎಂದು ಅಫ್ಘಾನಿಸ್ಥಾನ ಕ್ರಿಕೆಟ್‌ ಮಂಡಳಿಯ ಮಾಜಿ ಮಾಧ್ಯಮ ವ್ಯವಸ್ಥಾಪಕ ಮತ್ತು ಪತ್ರಕರ್ತ ಎಂ. ಇಬ್ರಾಹಿಂ ಮೊಮಾಂಡ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next