Advertisement

ಬಿಸಿಲ ಝಳಕ್ಕೆ ಮಂಕಾಯ್ತು ಮತದಾನ!

01:08 PM Apr 24, 2019 | Naveen |

ರಾಯಚೂರು: ಪ್ರಜಾತಂತ್ರ ವ್ಯವಸ್ಥೆಯ ಬಹುದೊಡ್ಡ ಹಬ್ಬವೆಂದೇ ಕರೆಯುವ ಲೋಕಸಭೆ ಕ್ಷೇತ್ರದ ಚುನಾವಣೆ ಕೆಲ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಬುಧವಾರ ಶಾಂತಿ ಸುವ್ಯವಸ್ಥೆಯಿಂದ ನೆರವೇರಿತು. 41 ಡಿಗ್ರಿ ಸೆಲ್ಸಿಯಸ್‌ ಬಿಸಿಲಿನ ತಾಪಮಾನದಲ್ಲೂ ಜನ ತಮ್ಮ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಆಶಯ ಎತ್ತಿ ಹಿಡಿದರು.

Advertisement

ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾನ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ. ವಿಶೇಷ. ಎಂಟು ವಿಧಾನಸಭೆ ಕ್ಷೇತ್ರಗಳನ್ನೊಗೊಂಡ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಶುರುವಾಯಿತು. ಎಳೆ ಬಿಸಿಲಲ್ಲಿ ಮತಗಟ್ಟೆಗಳತ್ತ ಮುಖ ಮಾಡಿದ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಈ ಬಾರಿ ಮಹಿಳೆಯರು ಅತ್ಯುತ್ಸಾಹದಿಂದ ಮತ ಚಲಾಯಿಸಿದ್ದು ಕಂಡು ಬಂತು. ಪ್ರಮುಖ ಪಕ್ಷಗಳ ಅಭ್ಯರ್ಥಿಗಳಾದ ಕಾಂಗ್ರೆಸ್‌ನ ಬಿ.ವಿ.ನಾಯಕ ಸ್ವಗ್ರಾಮ ಅರಕೇರಾದ 187ನೇ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಗುರುಗುಂಟಾದ ಮತಗಟ್ಟೆ 16ರಲ್ಲಿ ಹಕ್ಕು ಚಲಾಯಿಸಿದರು. ಪ್ರಜಾಕೀಯ ಪಕ್ಷದ ಅಭ್ಯರ್ಥಿ ನಿರಂಜನ ನಾಯಕ ಕೂಡ ಅರಕೇರಾದಲ್ಲಿ ಹಕ್ಕು ಚಲಾಯಿಸಿದರೆ, ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷದ ಸೋಮಶೇಖರ ಯಾದಗಿರಿಯಲ್ಲಿ ಹಕ್ಕು ಚಲಾಯಿಸಿದರು. ಬಿಎಸ್ಪಿ ಅಭ್ಯರ್ಥಿ ಬಿ.ವೆಂಕನಗೌಡ ನಾಯಕ ದೇವದುರ್ಗ ತಾಲೂಕಿನ ಕೆ.ಇರಬಗೇರಾದ ಗ್ರಾಮದಲ್ಲಿ ಹಕ್ಕು ಚಲಾಯಿಸಿದರು.

ಜಿಲ್ಲೆಯ 1,833 ಮತಗಟ್ಟೆಗಳಲ್ಲೂ ಮತದಾನ ಪ್ರಕ್ರಿಯೆ ಸಕಾಲಕ್ಕೆ ಶುರುವಾಯಿತಾದರೂ ಕೆಲವೆಡೆ ಇವಿಎಂಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಕೆಲ ಕಾಲ ಮತದಾನ ಸ್ಥಗಿತಗೊಂಡಿತ್ತು. ತಕ್ಷಣಕ್ಕೆ ಸ್ಥಳಕ್ಕೆ ಭೇಟಿ ನೀಡಿದ ತಜ್ಞರು ದೋಷ ಸರಿಪಡಿಸಿ ಮತದಾನಕ್ಕೆ ಅನುವು ಮಾಡಿಕೊಟ್ಟರು. ಆದರೆ, ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದಂತೆ ಮತದಾನ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿತು. ಸಂಜೆ ವೇಳೆ ಮತ್ತೆ ಚೇತರಿಕೆ ಕಂಡು ಬಂತು.

ಮತದಾನ ಶುರುವಾದ ಎರಡು ಗಂಟೆಯೊಳಗೆ ಕ್ಷೇತ್ರದಲ್ಲಿ ಶೇ.6.48ರಷ್ಟು ಮತದಾನ ಪ್ರಮಾಣ ದಾಖಲಾಗಿತ್ತು. ಆದರೆ, ಸಿರವಾರ ಸಮೀಪದ ಮಲ್ಲಟದ 62ನೇ ಮತಗಟ್ಟೆ, ದೇವದುರ್ಗ ಪುರಸಭೆಯ 40ನೇ ಮತಗಟ್ಟೆ, ಬಳಗಾನೂರಿನ 110ನೇ ಮತಗಟ್ಟೆಯಲ್ಲಿ ದೋಷ ಕಂಡು ಬಂದ ಕಾರಣ ಮತದಾನ ಆರಂಭವಾಗಿರಲಿಲ್ಲ. ಸಿಂಧನೂರಿನ ಮತಗಟ್ಟೆ ಸಂಖ್ಯೆ 120, 146ರಲ್ಲೂ ಸಮಸ್ಯೆ ಕಾಣಿಸಿಕೊಂಡಿತು. ತಾಲೂಕಿನ ಕುಕನೂರು ಗ್ರಾಮದಲ್ಲೂ ಕೆಲ ಕಾಲ ಇವಿಎಂ ತಾಂತ್ರಿಕ ಸಮಸ್ಯೆಗೆ ತುತ್ತಾಗಿತ್ತು. ಕ್ರಮೇಣ ಒಂದಲ್ಲ ಒಂದು ಕಡೆ ಮತಯಂತ್ರಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಕಂಡು ಬರುತ್ತಲೇ ಇದ್ದವು. ಮಧ್ಯಾಹ್ನ 3:30ರ ಸುಮಾರಿಗೆ ಹಟ್ಟಿ ಚಿನ್ನದ ಗಣಿಯ ಬೂತ್‌ ಸಂಖ್ಯೆ 69ರಲ್ಲಿ ತಾಂತ್ರಿಕ ದೋಷ ಕಂಡು ಬಂತು. ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ 55ನೇ ವಿಭಾಗದ ಮತಗಟ್ಟೆಯಲ್ಲಿ ಕೆಲ ಕಾಲ ವಿವಿ ಪ್ಯಾಟ್‌ನಲ್ಲಿ ತಾಂತ್ರಿಕ ದೋಷಕಂಡು ಬಂದಿತು. ಹಟ್ಟಿ ಪಟ್ಟಣದ ಎರಡು ಮತಗಟ್ಟೆಗಳಲ್ಲಿ 30 ನಿಮಿಷಗಳ ತಡವಾಗಿ ಮತದಾನ ಆರಂಭಗೊಂಡಿತು. ಮಸ್ಕಿ ಕ್ಷೇತ್ರ ವ್ಯಾಪ್ತಿಯ ರಂಗಾಪುರ ಮತಗಟ್ಟೆಯ ಮತಯಂತ್ರದ ವೈರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎನ್ನಲಾಗುತ್ತಿದೆ. ಎಲ್ಲವನ್ನು ಸರಿದೂಗಿಸುತ್ತಲೇ ಚುನಾವಣೆ ಸಿಬ್ಬಂದಿ ಮತದಾನ ಪ್ರಕ್ರಿಯೆಯನ್ನು ಮುಗಿಸಿದರು.

ವೃದ್ಧರು, ವಿಶೇಷ ಚೇತನರು, ಕಾಯಿಲೆ ಪೀಡಿತರು ಎನ್ನದೇ ಎಲ್ಲರೂ ಬಂದು ತಮ್ಮ ಮತ ಚಲಾಯಿಸಿದರು. ಸಿರವಾರದ ಮತಗಟ್ಟೆ ಸಂಖ್ಯೆ 19ರಲ್ಲಿ ಆನೆಕಾಲು ರೋಗಿ ರಂಗಪ್ಪ ಇತರರ ಸಹಾಯದಿಂದ ಹಕ್ಕು ಚಲಾಯಿಸಿದರೆ, 18ನೇ ಮತಗಟ್ಟೆಯಲ್ಲಿ ವಿಶೇಷಚೇತನ ಮೌನೇಶ ಹಕ್ಕು ಚಲಾಯಿಸಿದರು. ತಾಲೂಕಿನ ಗೋನಾಲ ಗ್ರಾಮದಲ್ಲಿ 80 ವರ್ಷದ ಪಾರ್ವತಮ್ಮ ಯುವಕರ ನೆರವಿನೊಂದಿಗೆ ಹಕ್ಕು ಚಲಾಯಿಸಿದರೆ, ಸಿರವಾರದಲ್ಲಿ ಅನಿತಾ ಪ್ರಥಮ ಬಾರಿಗೆ ಹಕ್ಕು ಚಲಾಯಿಸಿದರು.

Advertisement

ಕೆಲವೆಡೆ ನೋಟಾ ಚಲಾವಣೆ: ಸಂಪೂರ್ಣ ಮದ್ಯ ನಿಷೇಧಿಸಬೇಕು ಎಂದು ಆಗ್ರಹಿಸಿ ಕ್ಷೇತ್ರದ ಕೆಲ ಹಳ್ಳಿಗಳಲ್ಲಿ ಮತದಾರರು ನೋಟಾ ಮತದಾನ ಮಾಡುವ ಮೂಲಕ ವಿನೂತನ ಹೋರಾಟ ನಡೆಸಿದರು. ಮತಗಟ್ಟೆಗಳ ಮುಂದೆಯೇ ಮದ್ಯ ನಿಷೇಧಿಸಬೇಕು ಎಂಬ ಫಲಕ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ನೋಟಾ ಚಲಾಯಿಸಿ ತಮ್ಮ ಬೆಂಬಲ ಯಾವ ಅಭ್ಯರ್ಥಿಗೂ ಇಲ್ಲ ಎಂಬ ಸಂದೇಶ ಸಾರಿದರು. ತಾಲೂಕಿನ ಯದ್ಲಾಪುರ, ಮುರಾನ್‌ಪುರ, ಸುಲ್ತಾನಪುರ ಸೇರಿ ಬೇರೆ ಸಿಂಧನೂರು, ಮಸ್ಕಿ ತಾಲೂಕುಗಳಲ್ಲೂ ಹೋರಾಟ ನಡೆಸಲಾಯಿತು. ಇನ್ನು ನಗರದ ನವೋದಯ ಕಾಲೇಜಿನ ಯುವತಿ ಅನುಮಾನಾಸ್ಪದ ಸಾವು ಖಂಡಿಸಿ ತಾಲೂಕಿನ ಶಕ್ತಿನಗರ, ದೇವಸೂಗೂರಿನಲ್ಲಿ ಯುವಕರು ಕೈಗೆ ಕಪ್ಪು ಪಟ್ಟಿ, ಕಪ್ಪು ಬಟ್ಟೆಗಳನ್ನು ಧರಿಸುವ ಮೂಲಕ ಮತ ಚಲಾಯಿಸಿ ಖಂಡನೆ ವ್ಯಕ್ತಪಡಿಸಿದರು.

ಮತದಾರ ಪಟ್ಟಿ ಗೊಂದಲ: ನಗರದ ಅರಬ್‌ ಮೊಹಲ್ಲಾ, ಗಾಲೀಬ್‌ ನಗರ, ಮಂಗಳವಾರ ಪೇಟೆ, ಎಲ್ಬಿಎಸ್‌ ನಗರ ಸೇರಿ ವಿವಿಧೆಡೆ ಮತದಾರರ ಪಟ್ಟಿಯಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿದ್ದು, ಹೆಸರುಗಳು ತಪ್ಪಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದರಿಂದ ಸಾಕಷ್ಟು ಜನ ಮತದಾನ ವಂಚಿತರಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿತ್ತು. ಆದರೆ, ಇದಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಮತಗಟ್ಟೆಗೆ ಬಂದ ಜನರಿಗೆ ಚುನಾವಣೆಯ ಅಪ್ಲಿಕೇಶನ್‌ ಸಹಾಯದಿಂದ ಅವರ ಮತ ಯಾವ ಮತಗಟ್ಟೆಯಲ್ಲಿದೆ ಎಂದು ಹೇಳಿ ಕಳುಹಿಸಿದರು. ಇದರಿಂದ ತಕ್ಕಮಟ್ಟಿಗೆ ಸಮಸ್ಯೆ ನಿವಾರಣೆಯಾಯಿತು. ಆದರೂ ಶೇ.10ರಷ್ಟು ಜನ ಮತದಾನದಿಂದ ವಂಚಿತರಾಗಿರುವ ಸಾಧ್ಯತೆ ಇದೆ ಎಂದು ಹೋರಾಟಗಾರ ಡಾ| ರಜಾಕ್‌ ಉಸ್ತಾದ್‌ ದೂರಿದ್ದಾರೆ.

ತಾಂಡಾಗಳು ಥಂಡ ಥಂಡಾ..: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಂದ ಕಳೆಗಟ್ಟಿದ್ದ ತಾಂಡಾಗಳು ಈ ಬಾರಿ ಖಾಲಿ ಖಾಲಿ ಕಂಡು ಬಂದವು. ಈ ತಾಂಡಾಗಳಲ್ಲಿ ಬಹುತೇಕರು ಗುಳೆ ಹೋಗುತ್ತಿದ್ದು, ಅವರನ್ನು ಚುನಾವಣೆ ವೇಳೆ ಕರೆ ತರಲಾಗುತ್ತಿತ್ತು. ಪುಣೆ, ಬಾಂಬೆ, ಬೆಂಗಳೂರು, ಗೋವಾ ಸೇರಿ ಅನೇಕ ಕಡೆ ಜನ ದುಡಿಯಲು ಹೋಗಿದ್ದಾರೆ. ಆದರೆ, ಈ ಬಾರಿ ಗುಳೆ ಹೋದವರನ್ನು ಕರೆ ತರುವ ಪ್ರಯಾಸವನ್ನು ಯಾವ ಅಭ್ಯರ್ಥಿಗಳು ಮಾಡಿದಂತೆ ಕಂಡು ಬರಲಿಲ್ಲ. ಹೀಗಾಗಿ ತಾಂಡಾಗಳಲ್ಲಿ ಸ್ಥಾಪಿಸಿದ್ದ ಮತಗಟ್ಟೆಗಳಲ್ಲಿ ತಾಂಡಾದಲ್ಲಿರುವ ಜನರೇ ಮತ ಚಲಾಯಿಸುತ್ತಿದ್ದದ್ದು ಕಂಡು ಬಂತು.

ಆಕರ್ಷಕ ಸಖೀ ಮತಗಟ್ಟೆ: ಮಹಿಳೆಯರಿಗಾಗಿ ಸ್ಥಾಪಿಸಿದ್ದ ಸಖೀ ಮತಗಟ್ಟೆಗಳು ಮತದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದವು. ಸ್ವಾಗತ ಕೋರುವ ಕಮಾನು, ತಳಿರು ತೋರಣದ ಚಿತ್ರಗಳು, ಮಕ್ಕಳಿಗೆ ಆಟದ ಸಾಮಾನುಗಳು, ವಿಶೇಷ ಅನುಭೂತಿ ಕಲ್ಪಿಸಿದರೆ, ಸೆಲ್ಫಿ ಪಾಯಿಂಟ್‌ನಲ್ಲಿ ಯುವಕ ಯುವತಿಯರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದು ಕಂಡು ಬಂತು. ಕ್ಷೇತ್ರದಲ್ಲಿ 23 ಸಖೀ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

ಗಣ್ಯರ ಮತ ಚಲಾವಣೆ: ಅಭ್ಯರ್ಥಿಗಳನ್ನು ಹೊರತು ಪಡಿಸಿ ಜಿಲ್ಲೆಯ ವಿವಿಧೆಡೆ ಗಣ್ಯರು ತಮ್ಮ ಹಕ್ಕು ಚಲಾಯಿಸಿದರು. ಜಿಲ್ಲಾಧಿಕಾರಿ ಶರತ್‌ ಬಿ., ಸಿಇಒ ನಲಿನ ಅತುಲ್ ಕೆಇಬಿ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಿದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಇದೇ ಮತಗಟ್ಟೆಯಲ್ಲಿ ಎಂಎಲ್ಸಿ ಎಸ್‌.ಎಸ್‌.ಬೋಸರಾಜ, ನಗರ ಶಾಸಕ ಡಾ| ಶಿವರಾಜ ಪಾಟೀಲ ಹಕ್ಕು ಚಲಾಯಿಸಿದರು. ಗ್ರಾಮೀಣ ಕ್ಷೇತ್ರದ ಶಾಸಕ ದದ್ದಲ್ ಬಸನಗೌಡ ಮಾನ್ವಿ ತಾಲೂಕು ದದ್ದಲ್ ಗ್ರಾಮದಲ್ಲಿ ಹಕ್ಕು ಚಲಾಯಿಸಿದರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ನಗರದ ಎಪಿಎಂಸಿಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಕಿಲ್ಲೆ ಬೃಹನ್ಮಠದ ಸ್ವಾಮೀಜಿ ಬೇರೂನ್‌ ಕಿಲ್ಲಾದಲ್ಲಿ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next