Advertisement

Ravindra Kala Kshethra: ರವೀಂದ್ರ ಕಲಾಕ್ಷೇತ್ರ ನವೀಕರಣ: ಕಲಾವಿದರಿಗೆ ಅನೇಕ ಆತಂಕ

10:41 AM Feb 05, 2024 | Team Udayavani |

ಬೆಂಗಳೂರು ಹೃದಯ ಭಾಗದಲ್ಲಿರುವ ರವೀಂದ್ರ ಕಲಾಕ್ಷೇತ್ರ ರಾಜ್ಯದ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ ಬಿಂದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಕಲಾ ಕ್ಷೇತ್ರದ ಕಲ್ಲಿನ ಗೋಡೆಗಳ ನಡುವೆ ಅರಳಿದ ಕಲಾ ಕುಸುಮಗಳೆಷ್ಟೋ. ನಾಡಿನ ಆರು ದಶಕಗಳ ಸಾಂಸ್ಕೃತಿಕ ಚರಿತ್ರೆಯಲ್ಲಿ ಕಲಾ ಕ್ಷೇತ್ರದ ನಿರ್ವಹಿಸಿದ ಪಾತ್ರ ಮತ್ತು ನೀಡಿದ ಕೊಡುಗೆ ಹಿರಿದು. ಈಗ ನವೀಕರಣಕ್ಕೆ ಸಜ್ಜಾಗುತ್ತಿದೆ. ಅದಕ್ಕೆ ಸಂಭ್ರಮಕ್ಕಿಂತ ಆತಂಕದ ಮಾತುಗಳೇ ಹೆಚ್ಚಾಗಿ ಕೇಳಿ ಬರುತ್ತಿವೆ. ಅದು ಏನು ಎತ್ತ ಎಂಬ ವಿವರ ಈ ವಾರದ ಸುದ್ದಿ ಸುತ್ತಾಟದಲ್ಲಿ.

Advertisement

ವಜ್ರ ಮಹೋತ್ಸವದ ವೇಳೆ ಕಲಾ ಕ್ಷೇತ್ರದ ನವೀಕರಣ ಎಂಬ ಸುದ್ದಿಗೆ ಕಲಾಲೋಕ ಪುಳಕಗೊಳ್ಳಬೇಕಿತ್ತು. ಆದರೆ, ರಾಜ್ಯದ ಹಿರಿ ಕಿರಿಯ ಕಲಾವಿದರಲ್ಲಿ ಈ ಸುದ್ದಿ ಆತಂಕ ತಂದೊಡ್ಡಿದೆ. ಕಾಮಗಾರಿ ನೆಪದಲ್ಲಿ ವರ್ಷಾನುಗಟ್ಟಲೆ ಕಲಾ ಚಟುವಟಿಕೆ ಸ್ತಬ್ಧಗೊಳ್ಳಬಹುದು, ನವೀಕರಣಗೊಂಡ ಬಳಿಕ ಪ್ರವೇಶ ಶುಲ್ಕ ಮತ್ತೆ ಏರಿಕೆ ಆಗಬಹುದು, ಕಲಾ ಕ್ಷೇತ್ರದ ಮೂಲ ಸ್ವರೂಪಕ್ಕೆ ಧಕ್ಕೆ ಬರಬಹುದು ಎಂಬ ಆತಂಕ ಕಲಾವಿದರನ್ನು ಕಾಡುತ್ತಿದೆ. ಇದರೊಂದಿಗೆ ಕಲಾ ಕ್ಷೇತ್ರದ ನವೀಕರಣಕ್ಕೆ 24 ಕೋಟಿ ರೂ. ಖರ್ಚಾಗುತ್ತಿದೆ ಎಂಬ ಮಾಹಿತಿ ಕಲಾವಿದರ ಹುಬ್ಬೇರುವಂತೆ ಮಾಡಿದೆ. ಇಷ್ಟೊಂದು ಖರ್ಚು ಮಾಡಿ ನವೀಕರಣ ನಡೆಸುವ ಅಗತ್ಯವಿಲ್ಲ ಎಂಬುದು ಕಲಾವಿದರ ಅಭಿಪ್ರಾಯ.

ಸುವರ್ಣ ಮಹೋತ್ಸವದ ನೆಪದಲ್ಲಿ 2018ರಲ್ಲಿ ನವೀಕರಣ ಮಾಡಿ, ಈಗ 5 ವರ್ಷದಲ್ಲಿ ಮತ್ತೆ ನವೀಕರಣಕ್ಕೆ ಮುಂದಾಗಿರುವುದರಲ್ಲಿ ಅರ್ಥವೇ ಇಲ್ಲ ಎಂಬ ಅಭಿಪ್ರಾಯವಿದೆ. ಖ್ಯಾತ ರಂಗಕರ್ಮಿ ನಾಗರಾಜಮೂರ್ತಿ ಪ್ರಕಾರ, ನವೀಕರಣದ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರೆದಿದ್ದ ಸಭೆಯಲ್ಲಿ ನಾನು ಭಾಗಿಯಾಗಿದ್ದೆ. ಆಗ ಸಂಸ ಬಯಲು ರಂಗ ಮಂದಿರದಲ್ಲಿ ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿನ ಶಬ್ದ, ಕಲಾ ಕ್ಷೇತ್ರದೊಳಗೆ ನಡೆಸುವ ಚಟುವಟಿಕೆಗೆ ಅಡ್ಡಿ ಆಗುತ್ತಿದೆ ಎಂಬ ವಿಷಯ ಪ್ರಸ್ತಾಪವಾಗಿದೆ. ಈ ತೊಂದರೆ ತಪ್ಪಿಸಲು ಒಂದು ಗೋಡೆ ಕಟ್ಟುವ ಸಲಹೆ ವ್ಯಕ್ತವಾಗಿದೆ. ಆದರೆ, ಈಗ ನವೀಕರಣದ ಹೆಸರಿನಲ್ಲಿ 24 ಕೋಟಿ ರೂ. ಪ್ರಸ್ತಾವನೆ ಸಿದ್ಧವಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.

ನವೀಕರಣದ ಪ್ರಸ್ತಾವನೆಗಳಿಗೆ ವಿರೋಧ ವ್ಯಕ್ತಪಡಿಸಿರುವ ಇನ್ನೋರ್ವ ಪ್ರಸಿದ್ಧ ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ, ಕಲಾಕ್ಷೇತ್ರದ ವೇದಿಕೆಯ ವಿನ್ಯಾಸವು ಕಲಾವಿದರ ಸ್ನೇಹಿ ಆಗಿದೆ. ಸಂಭಾಷಣೆಗಳು ಪ್ರೇಕ್ಷಕರ ತಲುಪುವ ರೀತಿಯಲ್ಲಿ ವೇದಿಕೆ ಸಿದ್ಧವಾಗಿದೆ. ಧ್ವನಿ ವ್ಯವಸ್ಥೆಯಿಲ್ಲದ ಸಂದರ್ಭದಲ್ಲಿಯೂ ಸಮರ್ಥವಾಗಿ ಕಲಾವಿದರು ಪ್ರದರ್ಶನ ನೀಡಿದ್ದಾರೆ. ಆದ್ದರಿಂದ ಧ್ವನಿ ವ್ಯವಸ್ಥೆಯ ಸುಧಾರಣೆ ಒಪ್ಪಲಾಗದು. ಈ ಹಿಂದೆಯೂ ಅತ್ಯುತ್ತಮ ಬೆಳಕು, ಧ್ವನಿ ವ್ಯವಸ್ಥೆ ಅಳವಡಿ ಸಿದ್ದೇವೆ ಎಂದು ಹೇಳಿಕೊಳ್ಳುವ ಪ್ರಯತ್ನಗಳು ನಡೆದಿದ್ದವು. ಆದರೆ, ಕಲಾಕ್ಷೇತ್ರಕ್ಕೆ ಸೂಕ್ತ ವ್ಯವಸ್ಥೆಗಳು ಅವಾಗಿರಲಿಲ್ಲ ಎಂದು ಹೇಳುತ್ತಾರೆ. ತಂತ್ರಜ್ಞರೊಬ್ಬರ ಕಾಯಂ ನೇಮಿಸಿ: ತಂತ್ರ ಜ್ಞಾನಗಳು ಆಧುನೀಕರಣಗೊಳ್ಳುತ್ತಲೆ ಇರುತ್ತವೆ. ಅವುಗಳ ಹಿಂದೆ ಓಡುವುದರ ಬದಲು ಕಲಾಕ್ಷೇತ್ರದಲ್ಲಿ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಸದ್ಯ ದಿನಗೂಲಿ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಇಲಾಖೆ ಗಮನಿಸಬೇಕು. ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ನಿರ್ವಹಣೆಗೆ ನುರಿತ ತಂತ್ರಜ್ಞರೊಬ್ಬರ ಕಾಯಂ ನೇಮಕಾತಿ ನಡೆಯಬೇಕು ಎಂದು ಕಪ್ಪಣ್ಣ ಆಗ್ರಹಿಸುತ್ತಾರೆ.

ಹಾಗೆಯೇ ಈಗ ಕೇಂದ್ರೀಕೃತ ಹವಾನಿಯಂತ್ರಣ ಮಾಡಲು ಮುಂದಾಗಿದ್ದಾರೆ. ಎಸಿ ಬಳಕೆಯಿಂದ ಕಾರ್ಯಕ್ರಮದ ಧ್ವನಿ ಮುದ್ರಣದಲ್ಲಿ ಸಮಸ್ಯೆಗಳಾಗುತ್ತವೆ. ಎಸಿ ಅನಿವಾರ್ಯವಲ್ಲ. ಈ ಹಿಂದೆ ಕಿಟಕಿಗಳ ತೆರೆದು ಪ್ರದರ್ಶನ ನೀಡಿದ್ದೂ ಇದೆ. ಅದೇ ರೀತಿ ರಂಗಶಂಕರದ ಆಸನಗಳನ್ನು ಉದ್ದೇಶ ಪೂರ್ವಕವಾಗಿಯೇ ಸುಖಾಸೀನ ಮಾದರಿ ವಿನ್ಯಾಸ ಮಾಡಿಲ್ಲ ಎಂದು 60 ದಶಕದಿಂದಲೂ ಕಲಾಕ್ಷೇತ್ರದ ಜೊತೆ ಅವಿನಾನುಭವ ಸಂಬಂಧ ಹೊಂದಿರುವ ಕಪ್ಪಣ್ಣ ಹೇಳುತ್ತಾರೆ. ಈ ಹಿಂದೆಯೂ ಜರ್ಮನ್‌, ಚೀನಿ ಲೈಟ್‌ ಅಳವಡಿಸಿ ವಿವಾದವಾಗಿತ್ತು. ನಂತರ ಲೈಟ್‌ ವ್ಯವಸ್ಥೆ ಬದಲಾಯಿಸಲಾಗಿತ್ತು ಎಂದು ನಾಗರಾಜಮೂರ್ತಿ ಮಾಹಿತಿ ನೀಡುತ್ತಾರೆ.

Advertisement

ನವೀಕರಣ ಕೈಬಿಟ್ಟು ನಾಲ್ಕು ದಿಕ್ಕಲ್ಲಿ ರಂಗ ಮಂದಿರ ಕಟ್ಟಲಿ: ಕಲಾ ಕ್ಷೇತ್ರದ ಸಣ್ಣಪುಟ್ಟ ರಿಪೇರಿಯೊಂದಿಗೆ ರಾಜಧಾನಿಯ ನಾಲ್ಕು ದಿಕ್ಕುಗಳಲ್ಲಿ ರಂಗ ಮಂದಿರ ಕಟ್ಟುವ ಕೆಲಸಕ್ಕೆ ವೇಗ ನೀಡಬೇಕು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರಂಗ ಮಂದಿರ ನಿರ್ಮಾಣಗೊಳ್ಳಬೇಕು. ಇರುವ ರಂಗ ಮಂದಿರಗಳ ನಿರ್ವಹಣೆ ನಡೆಯಬೇಕು. ರಂಗ ಕೇಂದ್ರಗಳ ನಿರ್ಮಾಣ, ಕಾಮಗಾರಿಗಳಲ್ಲಿ ಕಲಾವಿದರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಕಲಾ ಕ್ಷೇತ್ರದಲ್ಲಿ ಜಯಂತಿ ಕಾರ್ಯಕ್ರಮಗಳನ್ನು ಕಡಿಮೆ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕು ಎಂಬುದು ಕಲಾವಿದರ ಬೇಡಿಕೆಯಾಗಿದೆ.

ಪ್ರಸ್ತಾವನೆಯಲ್ಲಿ ಏನು ಇದೆ?: ಸಂಸ ಬಯಲು ರಂಗ ಮಂದಿರ ಮತ್ತು ಕಲಾ ಕ್ಷೇತ್ರದ ಮಧ್ಯೆ ಗೋಡೆ ನಿರ್ಮಾಣ, ವೇದಿಕೆಗೆ ಹೈಡ್ರಾಲಿಕ್‌ ತಂತ್ರಜ್ಞಾನ ಬಳಸಿ 4 ಅಡಿ ಕೆಳಗೆ ಚಲಿ ಸುವ ತಂತ್ರಜ್ಞಾನದ ಅಳವಡಿಕೆ, ಆಸನಗಳ ಬದಲಾವಣೆ, ಧ್ವನಿ, ಬೆಳಕಿಗೆ ಆಧುನಿಕ ತಂತ್ರಜ್ಞಾನ ವ್ಯವಸ್ಥೆ, ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ, ಲಲಿತಾ ಕಲಾ ಗ್ಯಾಲರಿ ಅಭಿವೃದ್ಧಿ, ಕಲಾ ಕ್ಷೇತ್ರದ ಇಕ್ಕೆಲಗಳಲ್ಲಿ ಭೋಜನ ನೀಡುವ ಜಾಗಗಳಿಗೆ ಚಾವಣಿ, ಸಂಸ ಬಯಲು ರಂಗ ಮಂದಿರಕ್ಕೆ ಚಾವಣಿ, ಧ್ವನಿ, ಬೆಳಕಿನ ವ್ಯವಸ್ಥೆಗೆ 24 ಕೋಟಿ ರೂ.ನ ಪ್ರಸ್ತಾವನೆ ಸಲ್ಲಿಕೆ ಆಗಿದೆ. ನವೀಕರಣದ ಬಗ್ಗೆ ಇಲಾಖೆ ಹೇಳುವುದೇನು?: ಕಲಾವಿದರ ಆಕ್ಷೇಪಗಳನ್ನು ಸಾರಸಗಟಾಗಿ ತಿರಸ್ಕರಿಸಿರುವ ಇಲಾಖೆ, ಕಲಾ ಕ್ಷೇತ್ರದೊಳಗೆ ಪ್ರದರ್ಶನ ನೀಡುವಾಗ ಭಾರೀ ಸೆಕೆ ಆಗುತ್ತದೆ, ನಮ್ಮ ಮೇಕಪ್‌ ಕರಗುತ್ತದೆ ಎಂದು ಹಲವು ಕಲಾವಿದರು ವೈಯಕ್ತಿಕವಾಗಿ ನಮಗೆ ದೂರು ನೀಡಿದ್ದಾರೆ.

ಇದರ ಜೊತೆಗೆ ಪ್ರೇಕ್ಷಕರು ಸಹ ಸೆಕೆಯಿಂದ ಕಿರಿಕಿರಿ ಅನುಭವಿಸುವುದು ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಸೆಂಟ್ರಲೈಸ್ಡ್ ಎಸಿ ಅಳವಡಿಸುವ ತೀರ್ಮಾನಕ್ಕೆ ಬರಲಾಗಿದೆ. ಇನ್ನು ಆಸನಗಳ ಬಗ್ಗೆ ಪ್ರತಿಕ್ರಿಯಿಸಿರುವ ಇಲಾಖೆ ಅಧಿಕಾರಿಗಳು, ಈ ಹಿಂದೆ ಆಸನಗಳ ಕುಷನ್‌ ಮಾತ್ರ ಬದಲಾಯಿಸಲಾಗಿತ್ತು. ಆದರೆ, ಆಸನಗಳು ಸಣ್ಣದಾಗುತ್ತಿವೆ ಎಂಬ ಹಿನ್ನೆಲೆಯಲ್ಲಿ ತುಸು ಅಗಲ ಆಸನ ಅಳವಡಿಸಲು ಮುಂದಾಗಿದ್ದೇವೆ ಎಂದು ಸಮರ್ಥಿಸಿಕೊಳ್ಳುತ್ತಾರೆ. ರಂಗ ಚಟುವಟಿಕೆಗಳು ಭಿನ್ನ ಸ್ವರೂಪ ಪಡೆದುಕೊಳ್ಳುತ್ತಿವೆ. ಆಧುನಿಕ ರಂಗಭೂಮಿಯಲ್ಲಿ ಬೆಳಕು ಮತ್ತು ಧ್ವನಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆಧುನಿಕ ಸ್ಪರ್ಶ ನೀಡಲು ಮುಂದಾಗಿದ್ದೇವೆ. ಸಂಸ ರಂಗ ಬಯಲು ಮಂದಿರದ ಚಟುವಟಿಕೆಗಳಿಂದ ತೊಂದರೆ ಆಗುತ್ತಿರುವ ಬಗ್ಗೆ ಕಲಾವಿದರೇ ನೀಡಿದ ದೂರಿನ ಹಿನ್ನೆಲೆಯಲ್ಲಿ ಗೋಡೆ ಕಟ್ಟಲು ಮುಂದಾಗಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ನವೀಕರಣದ ಪ್ರಸ್ತಾವನೆ ಬಗ್ಗೆ : ಯಾವುದೇ ತೀರ್ಮಾನ ಆಗಿಲ್ಲ ರವೀಂದ್ರ ಕಲಾ ಕ್ಷೇತ್ರದ ನವೀಕರಣದ ಅಗತ್ಯತೆ ಬಗ್ಗೆ ಮಾತನಾಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಅಧಿಕಾರಿಗಳು, ನಾವು ನವೀಕರಣದ ಪ್ರಸ್ತಾವನೆ ಹೌಸಿಂಗ್‌ ಬೋರ್ಡ್‌ ಮುಂದೆ ಇಟ್ಟಿದ್ದೆವು. ಆವರು ಜಿಎಸ್‌ಟಿ ಸಹಿತ 24 ಕೋಟಿ ರೂ. ಯೋಜನೆ ನಮ್ಮ ಮುಂದಿಟ್ಟಿದ್ದಾರೆ. ನಾವು ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಇದರಲ್ಲಿ ಯಾವ ಯೋಜನೆ ಕೈಗೆತ್ತಿಕೊಳ್ಳಬೇಕು, ಬಿಡಬೇಕು ಎಂಬುದು ಇನ್ನು ತೀರ್ಮಾನವಾಗಿಲ್ಲ. ಅಷ್ಟರಲ್ಲಿ 24 ಕೋಟಿ ರೂ.ನಲ್ಲಿ ಕಲಾಕ್ಷೇತ್ರ ಮತ್ತೆ ನವೀಕರಣ ಮಾಡುತ್ತಿದ್ದಾರೆ ಎಂಬ ಹುಯಿಲೆಬ್ಬಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ರವೀಂದ್ರ ಕಲಾಕ್ಷೇತ್ರವನ್ನು ಆಧುನೀ ಕರಣಗೊಳಿಸಬೇಕು ಎಂಬುದು ನಮ್ಮ ಇರಾದೆ. ಈ ಹಿನ್ನೆಲೆಯಲ್ಲಿ ಅಂದಾಜು ಪ್ರಸ್ತಾ ವನೆ ಸಲ್ಲಿಕೆಯಾಗಿದೆ. ಆದರೆ, ಇದಕ್ಕೆ ಕಲಾವಿ ದರ ವಿರೋಧ ಇದೆ. ಕಲಾಕ್ಷೇತ್ರ ಇನ್ನಷ್ಟು ಸುಸಜ್ಜಿತಗೊಳಿಸಬೇಕೆಂಬುದು ನಮ್ಮ ಉದ್ದೇಶ. ಕಲಾಕ್ಷೇತ್ರದ ಬಾಡಿಗೆ ದರ ಏರಿಸುವ ಪ್ರಸ್ತಾವನೆ ನಮ್ಮ ಮುಂದಿಲ್ಲ. ●ಶಿವರಾಜ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ.

ರಾಕೇಶ್‌ ಎನ್‌.ಎಸ್‌

Advertisement

Udayavani is now on Telegram. Click here to join our channel and stay updated with the latest news.

Next