ಲಂಡನ್ : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕ್ರಿಕೆಟಿಗೆ ವಿದಾಯ ಹೇಳುವ ಪ್ರಶ್ನೆಯೇ ಇಲ್ಲ; ಅವರು ಈಗಲೂ ತಂಡದ ಪ್ರಮುಖ ಹಾಗೂ ಭರವಸೆಯ ಭಾಗವಾಗಿದ್ದಾರೆ ಎಂದು ಕೋಚ್ ರವಿ ಶಾಸ್ತ್ರೀ ಹೇಳಿದ್ದಾರೆ. ಅಂತೆಯೇ ಧೋನಿ ಒನ್ ಡೇ ಕ್ರಿಕೆಟ್ ನಿವೃತ್ತಿಯ ವದಂತಿ, ಊಹಾಪೋಹಗಳನ್ನು ಅವರು ತಳ್ಳಿ ಹಾಕಿದ್ದಾರೆ.
ಧೋನಿ ಅವರು ಪ್ರಕೃತ ಒನ್ ಡೇ ಪಂದ್ಯಗಳಲ್ಲಿ ಸಲೀಸಾಗಿ ರನ್ ಮಾಡುತ್ತಿಲ್ಲ; ರನ್ಗಾಗಿ ತಿಣುಕಾಡುತ್ತಿದ್ದಾರೆ ಎಂಬ ಆರೋಪ ಇದೆ. ಲೀಡ್ಸ್ ನ ಹೆಡಿಂಗ್ಲೇ ಯಲ್ಲಿ ಇಂಗ್ಲಂಡ್ ಎದುರಿನ ಮೂರನೇ ಏಕದಿನ ಪಂದ್ಯವನ್ನು ಭಾರತ ಸೋತಾಗ, ಅಂಗಣದಲ್ಲಿದ್ದ ಧೋನಿ ಅವರು ಅಂಪಾಯರ್ ರಿಂದ ಆಟದ ಚೆಂಡನ್ನು ಪಡೆದುಕೊಂಡದ್ದು “ಕ್ರಿಕೆಟಿಗೆ ಧೋನಿ ವಿದಾಯ ಹೇಳಲಿದ್ದಾರೆ’ ಎನ್ನುವುದರ ಸೂಚನೆ ಎಂದು ಹಲವರು ಭಾವಿಸಿದ್ದರು.
ಈ ಹಿನ್ನೆಲೆಯಲ್ಲಿ ರವಿ ಶಾಸ್ತ್ರೀ ಅವರು “ಧೋನಿ ಕ್ರಿಕೆಟ್ನಿಂದ ನಿವೃತ್ತರಾಗುವ ಪ್ರಶ್ನೆಯೇ ಇಲ್ಲ; ಅವರು ಭಾರತ ತಂಡಕ್ಕೆ ಬಹುವಾಗಿ ಬೇಕಾದವರಾಗಿದ್ದಾರೆ’ ಎಂದು ಸ್ಪಷ್ಟ ಪಡಿಸಿದರು.
“ಧೋನಿ ಅವರು ಆಟದ ಚೆಂಡನ್ನು ಅಂಪಾಯರ್ ಅವರಿಂದ ಪಡೆದುಕೊಂಡದ್ದು ಅದನ್ನು ಭರತ್ ಅರುಣ್ ಅವರಿಗೆ ತೋರಿಸುವುದಕ್ಕಾಗಿ. ಧೋನಿ ಅವರಿಗೆ ಆಟದ ಚೆಂಡು ಹೇಗೆ ತನ್ನ ರೂಪ ಮತ್ತು ಗುಣವನ್ನು ಎಷ್ಟು ಬೇಗನೆ ಕಳೆದುಕೊಳ್ಳುತ್ತಿದೆ ಎಂಬುದನ್ನು ತಿಳಿಯುವ ಕುತೂಹಲವಿತ್ತು. ಇದಕ್ಕೆ ಹೊರತಾಗಿ ಬೇರೇನೂ ಕಾರಣವಿಲ್ಲ. ಹಾಗೆಯೇ ಅವರು ಕ್ರಿಕೆಟಿಗೆ ವಿದಾಯ ಹೇಳುವ ಪ್ರಶ್ನೆಯೇ ಇಲ್ಲ ಎಂದು ಶಾಸ್ತ್ರೀ ಹೇಳಿದರು.
ಇಂಗ್ಲಂಡ್ ಜಯಿಸಿದ್ದ 2ನೇ ಒನ್ ಡೇ ಪಂದ್ಯದಲ್ಲಿ ಧೋನಿ 59 ಎಸೆತಗಳನ್ನು ಎದುರಿಸಿ ಕಷ್ಟಪಟ್ಟು 37 ರನ್ ತೆಗೆದಿದ್ದರು. ಮೂರನೇ ಪಂದ್ಯದಲ್ಲಿ ಕೂಡ ಧೋನಿ 66 ಎಸೆತ ಎದುರಿಸಿ ಕಷ್ಟದಿಂದ 42 ರನ್ ತೆಗೆದಿದ್ದರು.
ಧೋನಿ ಅವರ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಬರೆದಿರುವ ಸುನೀಲ್ ಗಾವಸ್ಕರ್, ತಾನು 1975ರ ಜೂನ್ 7ರಂದು ಲಾರ್ಡ್ಸ್ನಲ್ಲಿ ನಡೆದಿದ್ದ ಪ್ರುಡೆನ್ಶಿಯಲ್ ವಿಶ್ವ ಕಪ್ ಕೂಟದಲ್ಲಿ ಇಂಗ್ಲಂಡ್ ಎದುರಿನ ಮೊದಲ ಪಂದ್ಯದಲ್ಲಿ 174 ಎಸೆತ ಎದುರಿಸಿ ತೆಗೆದಿದ್ದ 36 ರನ್ ಗಳ ಆಟವನ್ನು ಸ್ಮರಿಸಿಕೊಂಡರು.