Advertisement

ರತ್ನಗಿರಿ ರಹಸ್ಯ

01:12 PM Apr 14, 2020 | |

ರತ್ನಗಿರಿಯ ಊರು ಬೆಳೆದಂತೆಲ್ಲಾ ಕೋಟೆಯಿಂದ ಹೊರಗೆ ಮನೆಗಳನ್ನು ಕಟ್ಟಿದ್ದಾರೆ. ಊರಿಗೆ ಅಂಟಿಕೊಂಡಂತೆಯೇ ಇರುವ ಬೆಟ್ಟದ ಮೇಲೆ ರತ್ನಗಿರಿಯ ಕೋಟೆ ಇದೆ.  ಊರಿನಿಂದ ಕೋಟೆಗೆ ಹೋಗಲು ಕಾಲುದಾರಿ ಇದೆ.  ಆ ದಾರಿಯಲ್ಲಿ ಹೊರಟರೆ  ಮೊದಲಿಗೆ ಸಿಹಿನೀರಿನ ಬಾವಿಗಳು ಸಿಗುತ್ತವೆ. ಸಮೀಪದಲ್ಲೇ ಶಿವ ಮಂದಿರವಿದೆ…

Advertisement

ರತ್ನಗಿರಿದುರ್ಗ, ಚರಿತ್ರೆಯ ಮಣ್ಣಲ್ಲಿ ಮಣ್ಣಾಗಿ ಹೋದ ಒಂದು ಐತಿಹಾಸಿಕ ಸ್ಥಳ. ಅದರ ಹೆಸರೇ ಒಂದು ವೈಭವದ ಸಂಕೇತ. ಆ  ಹೆಸರು ಕೇಳಿದರೇನೇ ಅಲ್ಲಿಗೆ ಹೋಗಿ ಕಳೆದ ವೈಭವದ ಕುರುಹುಗಳನ್ನು ಕಣ್ಣಾರೆ ನೋಡಬೇಕೆಂಬ ಬಯಕೆ ಬರುವುದು ಸಹಜ. ವಿಜಯನಗರದ ಅರಸರ ಕಾಲದಿಂದಲೂ ಅಸ್ತಿತ್ವದಲ್ಲಿರುವ ಈ ಊರು ಅನೇಕ ಪಾಳೇಗಾರರ ಆಳ್ವಿಕೆಗೆ ಒಳಪಟ್ಟಿದೆ. ಪಾಳೆಗಾರರ ವಂಶಸ್ಥರು ಇಂದಿಗೂ ಇದೇ ಊರಿನಲ್ಲಿ ವಾಸವಾಗಿದ್ದಾರೆ. ರತ್ನಗಿರಿಯಲ್ಲಿರುವುದು ಅತ್ಯಂತ ಪ್ರಬಲವಾದ ಏಳು ಸುತ್ತಿನ ಕೋಟೆ, ಏಳು ಹೆಬ್ಟಾಗಿಲುಗಳು ಇಂದಿಗೂ ಕಳೆದು ಹೋದ ವೈಭವವನ್ನು ಕನಸಿನಂತೆ ಕಣ್ಣ ಮುಂದೆ ತರುತ್ತವೆ.

ರತ್ನಗಿರಿ, ಬೆಂಗಳೂರಿನಿಂದ 150 ಕಿ.ಮೀ ದೂರವಿದೆ. ಆಂಧ್ರಪ್ರದೇಶದ ಗಡಿಯಲ್ಲಿದೆ. ತುಮಕೂರು ಜಿಲ್ಲೆಯ ಗಡಿಯೂ ಇದೆ ಆಗಿರುವುದರಿಂದ ರತ್ನಗಿರಿಯಲ್ಲಿ ಕನ್ನಡವೇ ಪ್ರಮುಖ ಭಾಷೆ.  ದೂರದಿಂದಲೇ ಇದು ರತ್ನಗಿರಿ ಅನ್ನೋದರ ಕುರುಹಾಗಿ ಬೆಟ್ಟದ ಮೇಲೆ ಕೋಟೆ ಇದೆ.  ಈ ಊರಿಗೆ ಪ್ರವೇಶಿಸುವಾಗಲೇ ಎರಡು ಮಹಾದ್ವಾರಗಳನ್ನು ದಾಟಿ ಹೋಗಬೇಕು. ಎರಡೂ ದ್ವಾರಗಳನ್ನು ದಾಟಿ ಹೋದರೆ ಒಳಗಡೆ ಸುಮಾರು ನೂರೈವತ್ತು ಮನೆಗಳಿವೆ. ಹಳೇ ಊರಿನ ಸುತ್ತಲೂ ಇಂದಿಗೂ ಭದ್ರವಾಗಿರುವ ಕೋಟೆ ಇದೆ. ಊರು ಬೆಳೆದಂತೆಲ್ಲಾ ಕೋಟೆಯಿಂದ ಹೊರಗೆ ಮನೆಗಳನ್ನು ಕಟ್ಟಿದ್ದಾರೆ. ಊರಿಗೆ ಅಂಟಿಕೊಂಡಂತೆ ಇರುವ ಬೆಟ್ಟದ ಮೇಲೆ ರತ್ನಗಿರಿಯ ಕೋಟೆ ಇದೆ.  ಊರಿನಿಂದ ಕೋಟೆಗೆ ಹೋಗಲು ಕಾಲುದಾರಿ ಇದೆ. ಆ ದಾರಿಯಲ್ಲಿ ಹೊರಟರೆ, ಮೊದಲಿಗೆ ಸಿಹಿನೀರಿನ ಬಾವಿಗಳು ಸಿಗುತ್ತವೆ. ಸಮೀಪದಲ್ಲೇ ಶಿವ ಮಂದಿರವಿದೆ.  ಕೋಟೆದಾರಿಯಲ್ಲಿ ಮೊದಲನೇ ಹೆಬ್ಟಾಗಿಲನ್ನು ದಾಟಿದರೆ ನಾರಾಯಣಸ್ವಾಮಿ ಮಂದಿರವಿದೆ. ಕೋಟೆದಾರಿಯಲ್ಲಿ ಮೊದಲನೆ ಹೆಬ್ಟಾಗಿಲನ್ನು ದಾಟಿ ಹೋದರೆ, ನಿಧಿಗಳ್ಳರ ದಾಳಿಗೆ ತುತ್ತಾದ ನಾರಾಯಣಸ್ವಾಮಿ ದೇವಾಲಯವಿದೆ. ಅಲ್ಲಿರುವ ದೇವರನ್ನು ಯಾವಾಗಲೋ ಕದ್ದೊಯ್ದಿದ್ದಾರೆ.

ದೇವರಿದ್ದ ಜಾಗದಲ್ಲಿ ಆಳುದ್ದದ ಗುಂಡಿ ಇದೆ. ನಿರ್ವಹಣೆ ಇಲ್ಲದೆ ಬಾವಲಿಗಳ ಆವಾಸ ಸ್ಥಾನವಾಗಿದೆ. ದೇವಸ್ಥಾನದ ಸುತ್ತಲೂ ಹಲವು ಉಬ್ಬು ಶಿಲ್ಪಗಳಿವೆ. ಕೋಟೆ ಪ್ರವೇಶಿಸುವ ಮುಖ್ಯ ಹೆಬ್ಟಾಗಿಲು ಕೆಂಪು ಇಟ್ಟಿಗೆ, ಗಚ್ಚುಗಾರೆ ಮತ್ತು ಕಲ್ಲಿನ ಕಟ್ಟಡ, ಅಲ್ಲಿ ಸ್ವಲ್ಲ ಸಮಯ ಕುಳಿತು ಬೀಸುವ ತಣ್ಣನೆ ಗಾಳಿಗೆ ಮೈಯೊಡ್ಡಿದರೆ ನಮ್ಮನ್ನ ನಾವೆ ಮರೆಯುವುದರಲ್ಲಿ ಸಂದೇಹವಿಲ್ಲ. ಪ್ರತಿಯೊಂದು ಬಾಗಿಲಿನಲ್ಲಿಯೂ ಕಾವಲು ಕಾಯಲು ಅನುಕೂಲವಾಗುವಂತೆ ಅಡಗುತಾಣಗಳನ್ನು ನಿರ್ಮಿಸಿದ್ದಾರೆ. ಒಂದೊಂದೇ ಸುತ್ತು ಕೋಟೆಯನ್ನು ದಾಟಿ ಮೇಲೆ ಹೋದರೆ ಸುತ್ತಲೂ ಕಲ್ಲಿನ ರಾಶಿಯಂತೆ ಕಾಣುವ ಬೆಟ್ಟಗಳು, ಮಧ್ಯದಲ್ಲಿರುವ ಕೆರೆ, ಕೆರೆಯಲ್ಲಿ ಮೇಯುವ ಕುರಿ ಹಿಂಡು, ತಲೆಮೇಲೆ ಟವೆಲ್‌ ಹಾಕಿಕೊಂಡು ಕುರಿಹಿಂಡನ್ನು ಕಾಯುವ ಕುರಿ ಗಾಹಿ ನಮ್ಮ ಮನಸ್ಸನ್ನು ಸೂರೆಗೊಳ್ಳುವುದರಲ್ಲಿ ಸಂದೇಹವಿಲ್ಲ. ಬೆಟ್ಟದ ಮೇಲೆ ವಿಶಾಲವಾದ ಕಲ್ಲು ಹಾಸಿದೆ. ಮಳೆಯ ನೀರನ್ನು ಸಂಗ್ರಹಿಸಲು ಅನೇಕ ದೊಣೆಗಳಿವೆ.  ಕೋಟೆಯ ಒಳಗೆ ರಾಜ ಪರಿವಾರಕ್ಕೆ ವರ್ಷ ಪೂರ್ತಿ ಬಳಸುವಷ್ಟು ನೀರು ಸಂಗ್ರಹವಾಗುತ್ತಿದ್ದದ್ದು ಈ ದೊಣೆಗಳಿಂದಲೇ. ಇಂದಿಗೂ ಬೇಸಿಗೆಯಲ್ಲಿ ನೀರು ಬತ್ತುವುದಿಲ್ಲ. ಶಿಥಿಲಾವಸ್ಥೆಯಲ್ಲಿರುವ ಅನೇಕ ಉಗ್ರಾಣಗಳಿವೆ. ರಾಜ ಪರಿವಾರದ ವಸತಿ ಸಂಕೀರ್ಣ ದಶಕಗಳ ಹಿಂದೆಯೇ ನೆಲಕಚ್ಚಿದೆ. ಒಂದು ಕಾಲದಲ್ಲಿ ವೈಭವದಿಂದ ಮೆರೆದ ರತ್ನಗಿರಿ, ಇಂದು ತನ್ನೆಲ್ಲ ಮೆರಗನ್ನು ಕಳೆದುಕೊಂಡು ಮಣ್ಣಲ್ಲಿ ಒಂದಾಗುತ್ತಲಿದೆ.

Advertisement

ಇಂದಿನ ಯುವ ಜನಾಂಗ ಈ ಚರಿತ್ರೆಯ ಅರಿವಿಲ್ಲದೆ ಅಳಿದುಳಿದ ಸ್ಮಾರಕಗಳ ಮೇಲೆ ತಮ್ಮ ಪ್ರೇಯಸಿ, ಪ್ರಿಯತಮರ ಹೆಸರನ್ನು ಕೆತ್ತಿ, ಗಾರೆಯನ್ನೆಲ್ಲ ಹಾಳು ಮಾಡುತ್ತಿದ್ದಾರೆ. ಮುಂದಿನ ಪೀಳಿಗೆ ಇದರ ಮಹತ್ವವನ್ನು ತಿಳಿಸುವುದು ಮತ್ತು ಈ ಸ್ಮಾರಕಗಳನ್ನು ಉಳಿಸುವುದು ನಮ್ಮ ತತ್‌ಕ್ಷಣದ ಕರ್ತವ್ಯವಾಗಿದೆ. ರತ್ನಗಿರಿಗೆ  ತಲುಪಲು ಮೂರು ದಾರಿಗಳಿವೆ. ತುಮಕೂರು ಮಾರ್ಗವಾಗಿ ಶಿರಾ,ಅಗಳಿ,ರತ್ನಗಿರಿ.
ಇದಲ್ಲದೆ ದಾಬಸ್‌ಪೇಟೆ, ಮಧುಗಿರಿ, ಹೊಸಳ್ಳಿ, ಮಾರ್ಗವಾಗಿ ಕೂಡ ಹೋಗಬಹುದು. ಮೂರನೇ ದಾರಿ, ತುಮಕೂರು, ದೊಡ್ಡಾಲದಮರ ಗೇಟ್‌, ಬಡವನಹಳ್ಳಿ, ರಂಟವಾಳ ಮಾರ್ಗವಾಗಿ ಕೂಡ ಹೋಗಬಹುದು. ರಸ್ತೆ ಉತ್ತಮವಾಗಿದೆ. ಬೇಸಿಗೆಯಲ್ಲಿ ಬಿಸಿಲು ಝಳ ಜಾಸ್ತಿ ಇರುವುದರಿಂದ ಬಿಸಿಲೇರುವ ಮುನ್ನ ಬೆಟ್ಟ ಹತ್ತುವುದು ಒಳ್ಳೆಯದು. ಪ್ರತಿಯೊಬ್ಬರಿಗೂ ತಲಾ 2 ಲೀಟರ್‌ ನೀರು ತೆಗೆದುಕೊಂಡು ಹೋಗಲು ಮರೆಯಬೇಡಿ.

ಗುಡಿಬಂಡೆ ನಾಗರಿಕರಿಗೆ ತಮ್ಮ ಊರಿನಲ್ಲಿರುವ ಕೋಟೆಯ ಮಹತ್ವದ ಅರಿವಿದೆ. ಅದನ್ನು ಶುಚಿಯಾಗಿ ಇಟ್ಟಕೊಳ್ಳಬೇಕೆಂಬ ಕಾಳಜಿ ಇದೆ. ಚಾರಣಕ್ಕೆ ಬಂದವರು ರಾತ್ರಿ ವೇಳೆಯಲ್ಲಿ ಮೇಲೆ ತಂಗಲೂ ಬಿಡುವುದಿಲ್ಲ. ಸ್ಥಳಿಯರ ಕಣ್ಗಾವಲಿನಿಂದಾಗಿ ಇಲ್ಲಿ ಯಾವುದೇ ಅನೈತಿಕ ಚಟುವಟಿಗಳಿಗೆ ಅವಕಾಶವಿಲ್ಲ.

ಬಂಡೆಯ ಮೇಲೊಂದು ಕೋಟೆ
ಗುಡಿಬಂಡೆಯಲ್ಲಿ ಚಾರಿತ್ರಿಕ ಹಿನ್ನೆಲೆಯ ಒಂದು ಕೋಟೆ ಇದೆ. ಅದೇ ಊರಿನಲ್ಲಿ, ಸುಪ್ರಸಿದ್ಧ ತಿರುಮಲ ವೆಂಕಟರಮಣನ ದೇವಾಲಯವೂ ಇದೆ. ಚರಿತ್ರೆ ಮತ್ತು ಭಕ್ತಿ ಭಾವದ ಕಥೆ ಹೇಳುವ ಈ ಸ್ಥಳ ನೋಡಬೇಕೆಂದರೆ,  ಚಿಕ್ಕಬಳ್ಳಾಪುರ ದಾಟಿ , ಬಾಗೇಪಲ್ಲಿಗೂ ಮೊದಲು ಪೆರೇಸಂದ್ರದ ಹತ್ತಿರ ಎಡಕ್ಕೆ ಹೋಗಬೇಕು. ಆದಾರಿಯುದ್ದಕ್ಕೂ ಹಸಿರಿನಿಂದ ಕಂಗೊಳಿಸುವ ಹೊಲಗಳು. ಹೊಲದ ತುಂಬ ಬಣ್ಣ ಬಣ್ಣದ ಹೂವುಗಳು. ಈ ಹೊಲಗಳ ಮಧ್ಯೆ ಅಂಕುಡೋಕಾದ ಕರಿಕಾಳಿಂಗನಂತೆ ಮಲಗಿರುವ ರಸ್ತೆ ಸಿಗುತ್ತದೆ.

ಹಾಗೇ ಸಾಗಿದರೆ ಗುಡಿಬಂಡೆ ಊರು ಎದುರಾಗುತ್ತದೆ.  ಬಸ್ಟಾಂಡಿನಿಂದ ಮುಂದೆ ಹೋದರೆ ಒಂದು ಚಿಕ್ಕಸರ್ಕಲ್‌ ಸಿಗುತ್ತದೆ. ಅಲ್ಲಿಂದ ಬಲಕ್ಕೆ ತಿರುಗಿದರೆ ನೇರ ಬೆಟ್ಟದ ಮೇಲಕ್ಕೆ ಹೋಗಲು ಕಾಲುದಾರಿ ಸಿಗುತ್ತದೆ. ಬೆಟ್ಟದ ಮೇಲೆ ನಿಂತು ನೋಡಿದರೆ ಕೋಟೆ ದೂರದಿಂದಲೇ ಕಾಣುತ್ತದೆ.  ಹತ್ತಲು ಮೆಟ್ಟಿಲುಗಳಿವೆ. ಅದನ್ನು ಏರುತ್ತಾ ಹೋದಂತೆ ಗುಡಿಬಂಡೆ ಊರಿನ ಪೂರ್ತಿ ದರ್ಶನವಾಗುತ್ತದೆ.

ಊರಿನಲ್ಲಿರುವ ಜೈನ ಬಸದಿ, ದೂರದಲ್ಲಿ ಕಾಣುವ ಬೈರಸಾಗರ, ಗುಡಿಬಂಡೆ ಮುಖ್ಯರಸ್ತೆ, ದೂಳೆಬ್ಬಿಸುತ್ತಾಹೋಗುವ ಮಾರುತಿ ಬಸ್ಸು, ಎಲ್ಲವೂ ಒಂದು ಸಿನಿಮಾ ರೀಲಿನಂತೆ ಕಣ್ಮುಂದೆ ಹಾದು ಹೋಗುತ್ತದೆ. ಮೇಲೆ ಹೋದಂತೆ ಅರ್ಧ ದಾರಿಯಲ್ಲಿ ಕೋಟೆಯ ಹೆಬ್ಟಾಗಿಲು ಸಿಗುತ್ತದೆ.

ಬೆಟ್ಟದ ಮೇಲೆ ಹತ್ತೂಂಬತ್ತು ನೀರಿನ ದೊಣೆಗಳಿವೆ. ತಿರುಮಲ ವೆಂಕಟರಮಣನ ಸುಂದರವಾದ ದೇವಸ್ಥಾನವಿದೆ. ಅದರ ಮುಂದೆ ಎತ್ತರವಾದ ದೀಪ ಸ್ಥಂಭ.  ದೀಪಾವಳಿ ಹಬ್ಬದಲ್ಲಿ ಇಲ್ಲಿ ದೊಡ್ಡ ಜಾತ್ರೆಯಾಗುತ್ತದೆ.  ಕೋಟೆ ಗೋಡೆಯಿಂದ ಹೊರಚಾಚುವಂತೆ ಬಂಡೆ ಇದೆ.  ಮಹಾರಾಜರ ಆಡಳಿತವಿದ್ದ ಕಾಲದಲ್ಲಿ ಈ ಗೋಡೆಯ ಮೇಲೆ ಕೈದಿಗಳನ್ನು ನಿಲ್ಲಿಸಿ, ಕೆಳಗೆ ತಳ್ಳುತ್ತಿದ್ದರಂತೆ. ಕೋಟೆಯ ಗೋಡೆ ಕೆಲವು ಕಡೆ ಬಿದ್ದು ಹೋಗಿದೆ.

ಬೈರೇಗೌಡ ಈ ಕೋಟೆ ಆಳಿದ ಮುಖ್ಯ ಪಾಳೆಗಾರ. ಇವನು ಅಕ್ಕ ಪಕ್ಕದ ಸಂಸ್ಥಾನಗಳ ಮೇಲೆ ದಾಳಿ ಮಾಡಿ ಸಂಪತ್ತನ್ನು ಈ ಕೋಟೆಯಲಿ ಅಡಗಿಸುತ್ತಿದ್ದರಂತೆ. ಅವನ ಹಾವಳಿಯಿಂದ ಬೇರೆ ಪಾಳೆಗಾರರು ರೋಸಿ ಹೋಗಿದ್ದರಂತೆ. ಆದ್ದರಿಂದ ಇವನ ಹೆಸರಿನ ಮುಂದೆ ಹಾವಳಿ ಅನ್ವರ್ಥ ನಾಮವಾಗಿ ಸೇರಿಕೊಂಡಿದೆ. ಈತನೇ ಕಟ್ಟಿಸಿದ ಭೈರಸಾಗರ ಅಮಾನಿಕೆರೆ ಇಂದಿಗೂ ಈ ಭಾಗದ ಅತಿ ದೊಡ್ಡ ಕೆರೆ. ನೂರಾರು ವರ್ಷಗಳಿಂದ ಕೋಟೆ ಇಂದಿಗೂ ಗಾಳಿಮಳೆಗಳ ಹೊಡೆತಕ್ಕೆ ಎದುರಾಗಿ ಅಲ್ಲಾಡದೆ ನಿಂತಿದೆ.

ಸಂತೋಷದ ಸಂಗತಿ ಎಂದರೆ, ಗುಡಿಬಂಡೆ ನಾಗರಿಕರಿಗೆ ತಮ್ಮ ಊರಿನಲ್ಲಿರುವ ಕೋಟೆಯ ಮಹತ್ವದ ಅರಿವಿದೆ. ಅದನ್ನು ಶುಚಿಯಾಗಿ ಇಟ್ಟಕೊಳ್ಳಬೇಕೆಂಬ ಕಾಳಜಿ ಇದೆ. ಚಾರಣಕ್ಕೆ ಬಂದವರು ರಾತ್ರಿ ವೇಳೆಯಲ್ಲಿ ಮೇಲೆ ತಂಗಲೂ ಬಿಡುವುದಿಲ್ಲ. ಸ್ಥಳಿಯರ ಕಣ್ಗಾವಲಿನಿಂದಾಗಿ ಇಲ್ಲಿ ಯಾವುದೇ ಅನೈತಿಕ ಚಟುವಟಿಗಳಿಗೆ ಅವಕಾಶವಿಲ್ಲ.

ಶ್ರೀನಾಥ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next