Advertisement

ಒಳಹರಿವು ಕಡಿಮೆಯಾದರೆ ಕೈಗಾರಿಕೆಗಳಿಗೆ ರೇಷನಿಂಗ್‌!

08:28 PM Jan 20, 2022 | Team Udayavani |

ತುಂಬೆ: ಮಂಗಳೂರು ನಗರಕ್ಕೆ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರಿಕೆ ವಹಿಸಲು ಮಂಗಳೂರು ಮಹಾನಗರ ಪಾಲಿಕೆ ಈಗಾಗಲೇ ನಿಗಾ ವಹಿಸಿದೆ. ಅಗತ್ಯವಾದರೆ ಕೈಗಾರಿಕೆಗಳಿಗೆ ನೀಡುತ್ತಿರುವ ನೀರು ರೇಷನಿಂಗ್‌ ಮಾಡಲು ಚಿಂತನೆ ನಡೆಸಲಾಗಿದೆ.

Advertisement

ಸದ್ಯ ತುಂಬೆ ಡ್ಯಾಂನಲ್ಲಿ ನೀರಿನ ಒಳಹರಿವು ಉತ್ತಮವಾಗಿದ್ದು, 6 ಮೀ. ನೀರು ನಿಲುಗಡೆ ಮಾಡಿ ಹೆಚ್ಚುವರಿ ನೀರನ್ನು ಒಂದು ಗೇಟ್‌ ತೆರೆದು ಹೊರಗೆ ಬಿಡಲಾಗುತ್ತಿದೆ. ಫೆಬ್ರವರಿವರೆಗೂ ಒಳಹರಿವು ಇರುವ ನಿರೀಕ್ಷೆಯಿದೆ. ಇದು ಸಂಪೂರ್ಣ ನಿಂತ ಬಳಿಕ ತುಂಬೆ ಡ್ಯಾಂನ ಎಲ್ಲ ಗೇಟ್‌ಗಳನ್ನು ಬಂದ್‌ ಮಾಡಿ 6 ಮೀ.ನೀರು ನಿಲುಗಡೆ ಮಾಡಲಾಗುತ್ತದೆ. ಆ ವೇಳೆಗೆ ಮಳೆಯಾಗದಿದ್ದರೆ ರೇಷನಿಂಗ್‌ ಸಂಬಂಧಿತ ಕ್ರಮ ಕೈಗೊಳ್ಳಲಾಗುತ್ತದೆ.

ಈ ಎಲ್ಲ ವಿಚಾರಗಳ ಬಗ್ಗೆ ವಿಶೇಷ ನಿಗಾ ವಹಿಸುವ ನಿಟ್ಟಿನಲ್ಲಿ ಇದೀಗ ಮೊದಲ ಸುತ್ತಿನ ಮಹತ್ವದ ಸಭೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಅಧ್ಯಕ್ಷತೆಯಲ್ಲಿ ವಾರದೊಳಗೆ ನಡೆಯಲಿದೆ. ಇದರಲ್ಲಿ ಎಂಎಸ್‌ಇಝಡ್‌, ಎಂಸಿಎಫ್‌, ಎಎಂಆರ್‌ ಡ್ಯಾಂ, ಮೆಸ್ಕಾಂ, ಪಾಲಿಕೆ ಅಧಿಕಾರಿಗಳು, ಸುಯೇಜ್‌ ಸಂಸ್ಥೆಯವರ ಜತೆಗೆ ಸಭೆ ನಡೆಯಲಿದೆ. ಬಳಿಕ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಮತ್ತೂಂದು ಸುತ್ತಿನ ಸಭೆ ನಡೆಸಿ ಕುಡಿಯುವ ನೀರಿನ ಬಗ್ಗೆ ವಿಶೇಷ ನಿಗಾ ವಹಿಸಲು ನಿರ್ದೇಶನ ನೀಡಲಾಗುತ್ತದೆ.

ಪ್ರಸ್ತುತ ತುಂಬೆ ಡ್ಯಾಂನಿಂದ ಮಹಾನಗರದ ಜತೆಗೆ ಉಳ್ಳಾಲ, ಮೂಲ್ಕಿ ಪುರಸಭೆಗಳಿಗೂ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಇದಲ್ಲದೆ ನೇತ್ರಾವತಿ ನದಿಮೂಲವನ್ನು ಆಧಾರವಾಗಿಟ್ಟುಕೊಂಡು ಬಹುಗ್ರಾಮ ಕುಡಿಯುವ ನೀರು ಯೋಜನೆಗಳು ಕಾರ್ಯನಿರ್ವಹಿಸುತ್ತಿದೆ.

2016ರಿಂದ ರೇಷನಿಂಗ್‌ ಆರಂಭ :

Advertisement

2016ರ ಜನವರಿಯಲ್ಲಿಯೇ ನಗರ ಹಿಂದೆಂದೂ ಕಂಡರಿಯದ ಭೀಕರ ನೀರಿನ ಕೊರತೆ ಎದುರಿಸಿತ್ತು. ಡ್ಯಾಂನಲ್ಲಿ ನೀರಿಲ್ಲದ ಕಾರಣದಿಂದ ನಗರದಲ್ಲಿ ಟ್ಯಾಂಕರ್‌ ನೀರು ಬಳಸಲಾಗಿತ್ತು. ಅದೂ ಖಾಲಿಯಾದಾಗ, ಖಾಸಗಿ ಬಾವಿಗಳಿಂದ ನೀರು ತರಿಸಲಾಗಿತ್ತು. ಬಳಿಕ ಲಕ್ಯಾ ಡ್ಯಾಂನ ನೀರನ್ನು ಕೊಂಚ ಬಳಸಲಾಯಿತು. ಇದರಿಂದ ಎಚ್ಚೆತ್ತ ಪಾಲಿಕೆಯು 2017ರಲ್ಲಿ ಪ್ರತೀ 48 ಗಂಟೆ ನಿರಂತರ ನೀರು ಪೂರೈಕೆ ಮಾಡಿದರೆ, ಬಳಿಕದ 36 ಗಂಟೆ ನೀರು ಪೂರೈಕೆ ಸ್ಥಗಿತಗೊಳಿಸುವ ಮೂಲಕ ರೇಷನಿಂಗ್‌ ಆರಂಭಿಸಿತ್ತು. ಕೈಗಾರಿಕೆಗಳಿಗೂ ನೀರು ಕಡಿತ ಮಾಡಲಾಗಿತ್ತು. 2019ರಲ್ಲಿಯೂ ಮುನ್ನೆಚ್ಚರಿಕೆ ಕ್ರಮವಾಗಿ ಕೈಗಾರಿಕೆಗಳಿಗೆ ನೀಡುತ್ತಿರುವ ನೀರಿನ ಪ್ರಮಾಣವನ್ನು ಅರ್ಧದಷ್ಟು ಕಡಿತಗೊಳಿಸಲಾಗಿತ್ತು. 18 ಎಂಜಿಡಿ ನೀರಿನ ಪೈಕಿ 15 ಎಂಜಿಡಿಗೆ ಕಡಿತಗೊಳಿಸಲಾಗಿತ್ತು. ಬಳಿಕ 13, 10.5 ಎಂಜಿಡಿಗೆ ಇಳಿಸಲಾಗಿತ್ತು. ಕಳೆದೆರಡು ವರ್ಷ ನೀರಿನ ಸಮಸ್ಯೆ ಎದುರಾಗದಿದ್ದರೂ ಕೈಗಾರಿಕೆಗಳಿಗೆ ನೀರು ರೇಷನಿಂಗ್‌ ನಿಯಮ ಕೊಂಚ ಮಟ್ಟದಲ್ಲಿ ಜಾರಿಯಲ್ಲಿತ್ತು.

ಕೈಗಾರಿಕೆಗಳಿಗೆ ಎಷ್ಟು ನೀರು? :

ಮಂಗಳೂರು ನಗರಕ್ಕೆ 160 ಎಂಎಲ್‌ಡಿ (ದಿನವೊಂದಕ್ಕೆ ಮಿಲಿಯ ಲೀಟರ್‌) ನೀರು ಇಲ್ಲಿವರೆಗೆ ಪೂರೈಕೆಯಾಗುತ್ತದೆ. ಎಂಜಿಡಿ (ಮಿಲಿಯ ಗ್ಯಾಲನ್ಸ್‌) ಲೆಕ್ಕಾಚಾರದಲ್ಲಿ 160 ಎಂಎಲ್‌ಡಿ ಅಂದರೆ ಸುಮಾರು 35 ಎಂಜಿಡಿ. ತುಂಬೆ ಡ್ಯಾಂನಿಂದ ಎಂಸಿಎಫ್‌ಗೆ 2 ಎಂಜಿಡಿ ಹಾಗೂ ಎನ್‌ಎಂಪಿಟಿಗೆ 0.5 ಎಂಜಿಡಿ, ಇತರ ಕೈಗಾರಿಕೆಗಳಿಗೆ 1ಎಂಜಿಡಿ ನೀರು ಪೂರೈಕೆಯಾಗುತ್ತದೆ. ಬಂಟ್ವಾಳ ಸಮೀಪವಿರುವ ಎಎಂಆರ್‌ ಡ್ಯಾಂನಿಂದ ಎಂಆರ್‌ಪಿಎಲ್‌ಗೆ 6 ಎಂಜಿಡಿ ಹಾಗೂ ವಿಶೇಷ ಆರ್ಥಿಕ ವಲಯಕ್ಕೆ (ಎಸ್‌ಇಝೆಡ್‌) 8 ಎಂಜಿಡಿ ನೀರು ಪೂರೈಕೆಯಾಗುತ್ತದೆ. ಹೀಗೆ ಒಟ್ಟು ಸುಮಾರು 18 ಎಂಜಿಡಿಯಷ್ಟು ನೀರು ವಿವಿಧ ಕೈಗಾರಿಕೆಗಳಿಗೆ ತುಂಬೆ, ಎಎಂಆರ್‌ ಡ್ಯಾಂನಿಂದ ಪೂರೈಕೆಯಾಗುತ್ತದೆ.

ಕುಡಿಯುವ ನೀರಿಗೆ ಕೊರತೆಯಾಗದಂತೆ ಕ್ರಮ :

ಮಂಗಳೂರಿಗೆ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸದ್ಯ ತುಂಬೆ ಡ್ಯಾಂನಲ್ಲಿ ಒಳಹರಿವು ಉತ್ತಮವಾಗಿದೆ. ಹೀಗಾಗಿ ನೀರಿನ ಸಮಸ್ಯೆ ಈ ಬಾರಿ ಆಗಲಾರದು. ಆದರೂ ನೀರಿನ ಬಗ್ಗೆ ವಿಶೇಷ ನಿಗಾ ವಹಿಸಲಾಗುತ್ತಿದೆ. ಒಂದು ವೇಳೆ ಆವಶ್ಯಕವಾದರೆ ಕೈಗಾರಿಕೆಗಳಿಗೆ ನೀರು ರೇಷನಿಂಗ್‌ ಕ್ರಮ ಕೈಗೊಳ್ಳುವ ಬಗ್ಗೆ ಮುಂದಿನ ದಿನದಲ್ಲಿ ಚರ್ಚೆ ನಡೆಸಲಾಗುವುದು.-ಪ್ರೇಮಾನಂದ ಶೆಟ್ಟಿ,  ಮೇಯರ್‌, ಮಹಾನಗರ ಪಾಲಿಕೆ

- ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next