Advertisement

ಪಡಿತರ; ಹರೋಹರ! ಪಡಿತರ ಚೀಟಿಗೆ ಹೆಬ್ಬೆಟ್ಟಿನ ಆಧಾರ

10:13 AM Sep 27, 2019 | sudhir |

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಸೇರಿ ರಾಜ್ಯದ ಎಲ್ಲ ಪಡಿತರ ಚೀಟಿದಾರ ಕುಟುಂಬ ಸದಸ್ಯರ “ಆಧಾರ್‌ ಜೋಡಣೆ’ ಆಗಿದೆ. ಈಗ ಜೋಡಣೆಯಾದ ಆಧಾರ ಸಂಖ್ಯೆ, ಅದೇ ವ್ಯಕ್ತಿಯದ್ದೇ ಎಂದು ಖಾತರಿಪಡಿಸಿಕೊಳ್ಳಲು ಇ-ಕೆವೈಸಿ (ನೊ ಯುವರ್‌ ಕಸ್ಟಮರ್‌) ಮೂಲಕ ಆಧಾರ್‌ ದೃಢೀಕರಣ ಪ್ರಕ್ರಿಯೆ ನಡೆಸಲಾಗುತ್ತಿದೆ. ರಾಜ್ಯ ದಲ್ಲಿ ಈ ಪ್ರಕ್ರಿಯೆ ಪೂರ್ಣಗೊಂಡರೆ ಮರಣ ಹೊಂದಿದ, ವಿಳಾಸ ಬದಲಾವಣೆಯಾದ ಫಲಾನುಭವಿಗಳು ಸೇರಿ “ನಕಲಿ’ ಎಂದು ಹೇಳಬಹುದಾದ 20ರಿಂದ 25 ಲಕ್ಷ ಪಡಿತರ ಚೀಟಿದಾರರು ಫಲಾನುಭವಿ ಪಟ್ಟಿಯಿಂದ ಡಿಲೀಟ್‌ ಆಗಲಿದ್ದಾರೆ. ಆಗ ರಾಜ್ಯ ಸರಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳು 6ರಿಂದ 7 ಕೋಟಿ ರೂ.ಗಳಂತೆ ವರ್ಷಕ್ಕೆ ಭರ್ತಿ 70ರಿಂದ 80 ಕೋಟಿ ರೂ. ಉಳಿತಾಯ ಆಗಲಿದೆ ಎನ್ನುವುದು ಲೆಕ್ಕಾಚಾರ. ಆದರೆ ಈ ಹೆಸರಿನಲ್ಲಿ ಜನರಿಗಾಗುತ್ತಿರುವ ಹಿಂಸೆ, ಗೊಂದಲ, ತೊಂದರೆಗೆ ಯಾರೂ ಸ್ಪಂದಿಸುತ್ತಿಲ್ಲ. ಈ ಕುರಿತು “ಉದಯವಾಣಿ’ಯಿಂದ ವಾಸ್ತವ ಚಿತ್ರಣ.

Advertisement

ಕುಂದಾಪುರ: ರಾಜ್ಯಾದ್ಯಂತ ಪಡಿತರ ಚೀಟಿಗೆ ಇಕೆವೈಸಿ ನಡೆಯುತ್ತಿದ್ದು ಸರ್ವರ್‌ ಸಮಸ್ಯೆಯಿಂದಾಗಿ ಜನ ಕಂಗಾಲಾಗಿದ್ದಾರೆ. ಎಂಟು ಜಿಲ್ಲೆಗಳಿಗೆ ಒಂದೇ ಸರ್ವರ್‌ ಕಾರ್ಯ ನಿರ್ವಹಿಸುತ್ತಿದ್ದು ವಿಳಂಬ ಭಾಗ್ಯ ಉಚಿತವಾಗಿ ದೊರೆಯುತ್ತಿದೆ. ಪರಿಣಾಮವಾಗಿ ಜನರಿಗೆ ಅನಾವಶ್ಯಕವಾಗಿ ನೂರಾರು ಕಿ.ಮೀ. ಪ್ರಯಾಣದ ಸಂಕಷ್ಟ. ಅವಿಭಜಿತ ಕುಂದಾಪುರ ತಾಲೂಕಿನ ಗ್ರಾಮಾಂತರ ಪ್ರದೇಶದ ನೂರಾರು ಜನ ಪ್ರತಿನಿತ್ಯ ತಾಲೂಕು ಕಚೇರಿಗೆ ಭೇಟಿ ನೀಡಿ ಆಧಾರ್‌ ಲಿಂಕ್‌ ಹಾಗೂ ಹೆಬ್ಬೆಟ್ಟಿನ ಗುರುತು ನೀಡಲಾಗದೇ ವಾಪಸಾಗುತ್ತಿದ್ದಾರೆ.

ಆಧಾರ್‌ ಕಡ್ಡಾಯ
ಸರಕಾರದ ಆದೇಶದಂತೆ ಕೆವೈಸಿ ಪ್ರಕ್ರಿಯೆಗೆ ಆಧಾರ್‌ ದೃಢೀಕರಣ ಮಾಡಿಸದ ಫಲಾನುಭವಿಗಳ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸ ಲಾಗುತ್ತದೆ. ಜೂನ್‌ ಮತ್ತು ಜುಲೈ ತಿಂಗಳಲ್ಲಿ ಪಡಿತರ ಚೀಟಿಯಲ್ಲಿ ಹೆಸರು ಇರುವ ಎಲ್ಲ ಸದಸ್ಯರ ಕೆವೈಸಿ ಮಾಡಿ ಸಲು ಸರಕಾರ ಆದೇಶಿಸಿತ್ತು. ಕಾರಣಾಂತರದಿಂದ ಕೆವೈಸಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಸರಕಾರ ಕೆವೈಸಿ ಪ್ರಕ್ರಿಯೆ ಪುನಾರಂಭಿಸುವಂತೆ ಆದೇಶಿಸಿದೆ. ಹೀಗಾಗಿ ಆಧಾರ್‌ ದೃಢೀಕರಣವನ್ನು ಸೆ. 11ರಿಂದ ನವೆಂಬರ್‌ ತಿಂಗಳ ಅಂತ್ಯದವರೆಗೆ ನಡೆಸಲಾಗುತ್ತದೆ.

ನೆರೆಹಾನಿಗೆ
ಪ್ರಕೃತಿವಿಕೋಪದಡಿ ನೆರೆ ಸಂತ್ರಸ್ತ 64 ಕುಟುಂಬಗಳಿಗೆ ತಲಾ 10 ಕೆ.ಜಿ.ಯಂತೆ ಅಕ್ಕಿಯ ಪ್ಯಾಕೆಟ್‌, 1 ಕೆ.ಜಿ. ತೊಗರಿಬೇಳೆ, 1 ಲೀ. ತಾಳೆ ಎಣ್ಣೆ, ಉಪ್ಪು, ಸಕ್ಕರೆ ಕಂದಾಯ ಇಲಾಖೆ ವತಿಯಿಂದ ಹಂಚಲಾಗಿದೆ.

ಬಯೋಮೆಟ್ರಿಕ್‌
ಪಡಿತರ ಆಹಾರ ಧಾನ್ಯಗಳ ದುರುಪಯೋಗ ತಡೆಗೆ ಸರಕಾರವು ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸಿದ್ದು, ಎಲ್ಲ ನ್ಯಾಯಬೆಲೆ ಅಂಗಡಿಗಳನ್ನು ಪಿಒಎಸ್‌ ಅಂಗಡಿಗಳಾಗಿ ಪರಿವರ್ತಿಸಲಾಗಿದೆ. ಪಡಿತರ ಚೀಟಿದಾರರು ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ ಬಯೋಮೆಟ್ರಿಕ್‌ ವ್ಯವಸ್ಥೆಯಲ್ಲಿ ಬೆರಳಚ್ಚು ನೀಡಿ ಆಹಾರ ಧಾನ್ಯ ಪಡೆಯಬಹುದು. ಇದರಿಂದ ಪಡಿತರ ವಸ್ತುಗಳು ದುರ್ಬಳಕೆಯಾಗದೆ ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪುತ್ತವೆ ಎನ್ನುವುದು ಕೆವೈಸಿಯ ಉದ್ದೇಶ.

Advertisement

ಸಮಯ ನಿಗದಿ
ಆಹಾರ ಶಾಖೆಯ ಕಂಪ್ಯೂಟರ್‌ನಲ್ಲಿ ಮಧ್ಯಾಹ್ನ 1ಗಂಟೆಯಿಂದ 4 ಗಂಟೆಯವರೆಗೆ ಹೊಸ ಪಡಿತರ ಚೀಟಿಗೆ ಅನುಮೋದನೆ, ತಿದ್ದುಪಡಿ, ಸೇರ್ಪಡೆ, ಹೆಸರು ತೆಗೆಯುವಿಕೆಗೆ ಅನುಮೋದನೆ ನೀಡ ಬಹುದು. ಈ ಅವಧಿಯಲ್ಲಿ ಸರ್ವರ್‌ ಬ್ಯುಸಿ ಇದ್ದರೆ ಕೆಲಸ ಬಾಕಿ. ತಿಂಗಳ 1ನೇ ತಾರೀಕಿನಿಂದ
10ನೇ ತಾರೀಕಿನವರೆಗೆ, 25 ತಾರೀಕಿನಿಂದ ಮಾಸಾಂತ್ಯವರೆಗೆ ಕೆವೈಸಿ ಮಾಡಬಹುದು. 10ನೇ ತಾರೀಕಿನಿಂದ 25 ತಾರೀಕಿವರೆಗೆ ಪಡಿತರ ವಿತರಣೆಯಾಗುವ ಕಾರಣ ಕೆವೈಸಿ ದೃಢೀಕರಣ ನಡೆಯುವುದಿಲ್ಲ. ಆದ್ದರಿಂದ ತಿಂಗಳಲ್ಲಿ ಒಟ್ಟು 15 ದಿನಗಳ ಅವಕಾಶ ಮಾತ್ರ.

ಸಿಬಂದಿ ಇಲ್ಲ
116 ಪಡಿತರ ಅಂಗಡಿ, 95 ಸಾವಿರ ಪಡಿತರ ಚೀಟಿ, 105 ಗ್ರಾಮಗಳಿಗೆ ಒಬ್ಬ ಆಹಾರ ನಿರೀಕ್ಷಕ. ಈ ಶಾಖೆಗೆ ಬೇರೆ ಸಿಬಂದಿಯೇ ಇಲ್ಲ. ಕಂಪ್ಯೂಟರ್‌ ಆಪರೇಟರ್‌ ಹುದ್ದೆಯನ್ನು ಎರಡು ತಿಂಗಳ ಹಿಂದೆ ಹಿಂಪಡೆಯಲಾಗಿದೆ. ಇಷ್ಟೂ ಗ್ರಾಮದ ಮಂದಿ ಆಹಾರ ಶಾಖೆಗೆ ಪಡಿತರ ಸಮಸ್ಯೆ, ಕೆವೈಸಿ, ತಿದ್ದುಪಡಿ ಎಂದು ಬೇಡಿಕೆ ಹಿಡಿದು ಬಂದರೆ ಯಾರೂ ಏನೂ ಮಾಡುವಂತಿಲ್ಲ ಎಂಬ ಸ್ಥಿತಿ. ಈ ಕುರಿತು ಯಾವೊಬ್ಬ ಜನಪ್ರತಿನಿಧಿಯೂ ಪರಿಹಾರ ಕ್ರಮ ಕೈಗೊಂಡಂತಿಲ್ಲ.

ಒಂದೇ ಶಾಖೆ
ಬೈಂದೂರು, ಕುಂದಾಪುರ, ವಂಡ್ಸೆ ಹೋಬಳಿಗೆ ಒಂದೇ ಆಹಾರ ಶಾಖೆ. ಕಂದಾಯ ಇಲಾಖೆ ಪ್ರಕಾರ ಬೈಂದೂರು ತಾಲೂಕು ಪ್ರತ್ಯೇಕವಾಗಿ ಬೇರ್ಪಡೆಯಾಗಿದ್ದರೂ ಆಹಾರ ಶಾಖೆ ಎರಡೂ ಕಡೆಗೆ ಒಂದೇ. ಗೋಳಿಯಂಗಡಿಯಿಂದ ಶಿರೂರು ವರೆಗೆ ಜನರಿಗೆ ಒಬ್ಬರೇ ಅಧಿಕಾರಿ.

ಎಷ್ಟಿದೆ?
ಕುಂದಾಪುರ, ಬೈಂದೂರು ತಾಲೂಕಿನ ಕುಂದಾಪುರ, ವಂಡ್ಸೆ, ಬೈಂದೂರು ಹೋಬಳಿಗಳು ಹಾಗೂ ಹೆಬ್ರಿ ತಾಲೂಕಿನ 4 ಗ್ರಾಮಗಳು ಸೇರಿ ಒಟ್ಟುr 105 ಗ್ರಾಮಗಳಿಗೆ 116 ಪಡಿತರ ಅಂಗಡಿಗಳಿವೆ. ಒಟ್ಟು 13,566 ಅಂತ್ಯೋದಯ, 60,906 ಬಿಪಿಎಲ್‌, 20,750 ಎಪಿಎಲ್‌ ಪಡಿತರ ಚೀಟಿಗಳಿದ್ದು, ಒಟ್ಟಾರೆ 95,262 ಮಂದಿ ಚೀಟಿ ಹೊಂದಿದ್ದಾರೆ. ಅನ್ನಭಾಗ್ಯ ಯೋಜನೆ ಸೌಲಭ್ಯದಂತೆ ಅಂತ್ಯೋದಯಕ್ಕೆ 35 ಕೆಜಿ, ಬಿಪಿಎಲ್‌ ಕಾರ್ಡಿಗೆ ಯುನಿಟ್‌ ಒಂದಕ್ಕೆ 7 ಕೆ.ಜಿ.ಯಂತೆ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಅನಿಲ ರಹಿತ ಕಾರ್ಡುಗಳಿಗೆ 3 ಲೀ. ಸೀಮೆಎಣ್ಣೆ, ಅನಿಲ ಕಾರ್ಡುಗಳಿಗೆ ನೋಂದಣಿ ಮಾಡಿದವರಿಗೆ 1 ಲೀ. ನಂತೆ ಸೀಮೆಎಣ್ಣೆ ದೊರೆಯುತ್ತದೆ.

ಬಿಪಿಎಲ್‌ ವಾಪಸಾತಿ
ಮಕ್ಕಳ ವಿದ್ಯಾಭ್ಯಾಸ ಅಥವಾ ಇನ್ನಾವುದೋ ಕಾರಣಕ್ಕಾಗಿ ಬಿಪಿಎಲ್‌ ಕಾರ್ಡ್‌ ಮಾಡಿಸಿಕೊಂಡವರಿದ್ದಾರೆ. 10-20 ಲಕ್ಷ ರೂ.ಗಳ ಕಾರಿನಲ್ಲಿ ತಿರುಗುವವರು ಕೂಡ ಬಿಪಿಎಲ್‌ ಪಡಿತರ ಚೀಟಿ ಮಾಡಿಸಿಕೊಂಡಿರುತ್ತಾರೆ. ಇಂತಹವರಿಗೂ ಪಡಿತರ ಮಂಜೂ ರಾಗುತ್ತದೆ. ಕೆಲವರು ಪಡೆಯು ತ್ತಾರೆ, ಕೆಲವರು ಪಡೆಯುವುದಿಲ್ಲ. ಸಾರಿಗೆ ಇಲಾಖೆಯಿಂದ ಮಾಹಿತಿ ಪಡೆದು ಅಂತಹವರ ಕಾರ್ಡ್‌ ರದ್ದು ಮಾಡಲಾಗುತ್ತಿದೆ. ಸೆಪ್ಟಂಬರ್‌ನಲ್ಲಿ ಅಂತಹ 71 ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. ಈ ತಿಂಗಳಲ್ಲಿ ಕುಂದಾಪುರ ಹೋಬಳಿಯ 83, ವಂಡ್ಸೆಯ 73, ಬೈಂದೂರಿನ 105 ಸೇರಿ ಒಟ್ಟು 261 ಹೊಸ ಪಡಿತರ ಚೀಟಿ ನೀಡಲಾಗಿದೆ. ಬಿಪಿಎಲ್‌ಗೆ ಆಧಾರ್‌ ಲಿಂಕ್‌ ಶೇ.100 ಆಗಿದ್ದು ಎಪಿಎಲ್‌ಗೆ ಆಧಾರ್‌ಲಿಂಕ್‌ ಕಡ್ಡಾಯ ಇಲ್ಲ.

ಸಮಸ್ಯೆ
ಪ್ರಸ್ತುತ ಪಡಿತರ ಚೀಟಿಯಲ್ಲಿ ಹೆಸರು ಇರುವವರು ವಿದೇಶದಲ್ಲಿದ್ದರೂ, ಪರವೂರಿನಲ್ಲಿದ್ದರೂ, ಮೃತರಾದರೂ ಅವರ ಹೆಸರಿನಲ್ಲಿ ಪಡಿತರ ಮಂಜೂರಾಗುತ್ತದೆ ಅಥವಾ ವಿತರಣೆಯಾಗುತ್ತದೆ. ಪಡಿತರ ಚೀಟಿಯಲ್ಲಿ ಬೆರಳಚ್ಚು ಗುರುತು ನೀಡಿದ ವ್ಯಕ್ತಿ ಬೇರೆ ಊರಿನಲ್ಲಿದ್ದರೆ ಅಂತಹವರ ಬೆರಳಚ್ಚು ಇಲ್ಲದೇ ಪಡಿತರ ದೊರೆಯದು. ಅದಕ್ಕಾಗಿ ಎಲ್ಲ ಸದಸ್ಯರ ಬೆರಳಚ್ಚು ಕಡ್ಡಾಯ ಮಾಡಲಾಗುತ್ತಿದೆ. ಈ ಹಿಂದೆ ಪುರುಷ ಸದಸ್ಯರನ್ನು ಮನೆಯ ಯಜಮಾನ ಎಂದು ನಮೂದಿಸಿ ಪಡಿತರ ಚೀಟಿ ನೀಡಲಾಗುತ್ತಿತ್ತು. ಆದರೆ ಈಗ ಮಹಿಳೆಯನ್ನೇ ಮನೆಯ ಮುಖ್ಯಸ್ಥೆಯನ್ನಾಗಿ ಮಾಡಲಾಗುತ್ತಿದೆ.

ಮರಣ ಪ್ರಮಾಣಪತ್ರ
ಮರಣ ಹೊಂದಿ ದಾಗ ಗ್ರಾಮ ಕರಣಿಕರು ಮರಣ ದೃಢೀಕರಣ ನೀಡುತ್ತಾರೆ. ಆ ದಾಖಲೆ ಉಪ ನೋಂದಣಿ ಕಚೇರಿಗೆ ಹೋಗುವ ಕಾರಣ ಅಂತಹವರಿಗೆ ಬರುತ್ತಿದ್ದ ಮಾಸಾಶನ, ವೃದ್ಧಾಪ್ಯವೇತನ, ಅಂಗವಿಕಲ ವೇತನ ಇತ್ಯಾದಿಗಳು ನಿಲ್ಲುತ್ತವೆ. ಆದರೆ ಪಡಿತರ ಚೀಟಿಯಲ್ಲಿ ಹೆಸರು ನಮೂದಾಗಿಯೇ ಇರುವ ಕಾರಣ ಅವರ ಹೆಸರಿನಲ್ಲಿ ಪಡಿತರ ಮಂಜೂರಾಗುತ್ತಿರುತ್ತದೆ. ಆದ್ದರಿಂದ ಉಪ ನೋಂದಣಿ ಕಚೇರಿಯಂತೆ ಆಹಾರ ಶಾಖೆ ಅಥವಾ ಪಡಿತರ ಅಂಗಡಿಗೆ ಮಾಹಿತಿ ನೀಡಿದರೆ ಈ ಗೊಂದಲ ಪರಿಹಾರವಾಗಲಿದೆ. ಮರಣ ದೃಢೀಕರಣ ವರದಿ ನೀಡುವ ಫಾರಂನಲ್ಲಿ ಆಧಾರ್‌ ಸಂಖ್ಯೆ ಹಾಗೂ ಪಡಿತರ ಚೀಟಿ ಸಂಖ್ಯೆ ನಮೂದಿಸುವ ಕಾಲಮ್ಮೇ ಇಲ್ಲ. ಇದನ್ನು ಸೇರ್ಪಡೆಗೊಳಿಸಿದರೆ ಎಲ್ಲ ದಾಖಲೀಕರಣ ಡಿಜಿಟಲ್‌ ಮೂಲಕ ಸುಲಭವಾಗಲಿದೆ.

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next