Advertisement

ರಶ್ಮಿಕಾ ಕಿರಿಕ್‌ ಸ್ಟೋರಿ!

09:22 AM Jul 24, 2019 | Lakshmi GovindaRaj |

ಇತ್ತೀಚೆಗೆ ತನ್ನ ಅಭಿನಯಕ್ಕಿಂತ ಬೇರೆ ಬೇರೆ ವಿಷಯಗಳಿಗೆ ವಿವಾದಗಳಿಗೆ ಸುದ್ದಿಯಾಗುತ್ತಿರುವ ನಟಿಯರ ಸಾಲಿನಲ್ಲಿ ರಶ್ಮಿಕಾ ಮಂದಣ್ಣ ಹೆಸರು ಮೊದಲಿಗೆ ನಿಲ್ಲುತ್ತದೆ. “ಕಿರಿಕ್‌ ಪಾರ್ಟಿ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಕೊಡಗಿನ ಹುಡುಗಿ ರಶ್ಮಿಕಾ, ಟಾಲಿವುಡ್‌ಗೆ ಹಾರಿದ ನಂತರ ವರಸೆಯೇ ಬದಲಾಗಿದೆ ಅನ್ನೋದು ರಶ್ಮಿಕಾ ಅವರನ್ನು ಹತ್ತಿರದಿಂದ ಬಲ್ಲವರ ಮಾತು. ಅದಕ್ಕೆ ಪೂರಕವೆನ್ನುವಂತೆ ರಶ್ಮಿಕಾ ವರ್ತನೆ ಕೂಡ ಇರುವುದರಿಂದ ಚಿತ್ರೋದ್ಯಮದ ಮಂದಿ ಕೂಡ ಈ ಮಾತಿಗೆ ತಲೆದೂಗುತ್ತಿದ್ದಾರೆ. ಈ ಮಾತಿಗೆ ಇಂಬು ನೀಡುವಂತೆ, ಇತ್ತೀಚೆಗೆ ರಶ್ಮಿಕಾ ಮಂದಣ್ಣ ಆಡಿರುವ ಮಾತುಗಳು ಕನ್ನಡದ ಸಿನಿಪ್ರಿಯರು ಮತ್ತು ಕನ್ನಡ ಚಿತ್ರೋದ್ಯಮದ ಮಂದಿಯ ಕೆಂಗಣ್ಣಿಗೆ ಗುರಿಯಾಗಿದೆ.

Advertisement

ತೆಲುಗು, ತಮಿಳು ಅಂದ್ರೆ ಓಕೆ. ಕನ್ನಡ ಅಂದ್ರೆ ಯಾಕೆ?: “ಗೀತ ಗೋವಿಂದಂ’ ಚಿತ್ರದ ಬಹುದೊಡ್ಡ ಸಕ್ಸಸ್‌ ನಂತರ ಅಲ್ಲೀಗ ಅವರು ಬಹುಬೇಡಿಕೆಯ ನಟಿ. ಹೀಗಾಗಿ ತಮಗೆ ಬಹುಬೇಡಿಕೆಯಿರುವುದರಿಂದ ರಶ್ಮಿಕಾ ಈಗ ತೆಲುಗು ಕಲಿತುಕೊಂಡಿದ್ದಾರೆ. ಜೊತೆಗೆ ತಮಿಳು ಭಾಷೆಯ ಮೇಲೂ ಹಿಡಿತ ಸಾಧಿಸಿದ್ದಾರೆ. ಇತ್ತೀಚೆಗೆ ತಮ್ಮ “ಡಿಯರ್‌ ಕಾಮ್ರೆಡ್‌’ ಚಿತ್ರದ ಪ್ರಚಾರಕ್ಕೆ ಹೈದರಾಬಾದ್‌ನಲ್ಲಿ ಇದ್ದಾಗ ತೆಲುಗಿನಲ್ಲೇ ಮಾತನಾಡುತ್ತಿದ್ದ ರಶ್ಮಿಕಾ, ಚೆನ್ನೈಗೆ ಹೋದಾಗ ಶುದ್ಧ ತಮಿಳಿನಲ್ಲಿ ಮಾತನಾಡಿದ್ದರು.

ಅದೇ “ಡಿಯರ್‌ ಕಾಮ್ರೆಡ್‌’ ಚಿತ್ರದ ಪ್ರಚಾರಕ್ಕೆ ಬೆಂಗಳೂರಿಗೆ ಬಂದಾಗ ರಶ್ಮಿಕಾ ಬಹುತೇಕ ಮಾತನಾಡಿದ್ದು ಮಾತ್ರ ಇಂಗ್ಲೀಷ್‌ನಲ್ಲಿ. ಕಲಾವಿದೆಯಾಗಿ ಆಕೆ ಯಾವ ಭಾಷೆ ಕಲಿತುಕೊಳ್ಳುವುದಕ್ಕೂ ಯಾರ ಆಕ್ಷೇಪವೂ ಇಲ್ಲ. ಆದರೆ ಅಲ್ಲಿ ಬೇಡಿಕೆ ಇದೆ ಎಂದಮಾತ್ರಕ್ಕೆ ಇಲ್ಲೇ ಹುಟ್ಟಿ ಕಲಿತ ಕನ್ನಡವನ್ನೇ ಮರೆತರೆ ಹೇಗೆ? ಹೀಗೆ ಕನ್ನಡವನ್ನು ಕಡೆಗಣಿಸಿ ಇಂಗ್ಲೀಷ್‌ನಲ್ಲಿ ಮಾತನಾಡುವ ದರ್ದು ಅಂಥದ್ದೇನು ಎನ್ನುವುದು ಕನ್ನಡ ಸಿನಿಪ್ರಿಯ ಪ್ರಶ್ನೆ.

ಕನ್ನಡ ಕಷ್ಟವೆಂದು ತಮಿಳಲ್ಲೇ ಹೇಳಿದ್ದ ರಶ್ಮಿಕಾ!: ಇತ್ತೀಚೆಗೆ “ಡಿಯರ್‌ ಕಾಮ್ರೆಡ್‌’ ಚಿತ್ರದ ಪ್ರಚಾರಕ್ಕೆ ನಟಿ ರಶ್ಮಿಕಾ ಚೆನ್ನೈಗೆ ತೆರಳಿದ್ದರು. ಈ ವೇಳೆ ಅಲ್ಲಿನ ವೆಬ್‌ ಚಾನೆಲ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ, “ಕನ್ನಡ ನನಗೆ ಬಲು ಕಷ್ಟ. ಕನ್ನಡ ಮಾತನಾಡಲು ಬರುವುದಿಲ್ಲ’ ಎಂದು ಶುದ್ಧ ತಮಿಳು ಭಾಷೆಯಲ್ಲೇ ಹೇಳಿಕೆ ನೀಡಿದ್ದರು. ರಶ್ಮಿಕಾ ಈ ಹೇಳಿಕೆಯ ವೀಡಿಯೋ ಈಗ ಸೋಶಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್‌ ಆಗುತ್ತಿದ್ದು, ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಕನ್ನಡ ಚಿತ್ರಗಳ ಬಗ್ಗೆ ಅದೇನೋ ಅಸಡ್ಡೆ: ರಶ್ಮಿಕಾ ಮಂದಣ್ಣ ಅವರನ್ನು ನಾಯಕ ನಟಿಯಾಗಿ ಚಿತ್ರರಂಗಕ್ಕೆ ಪರಿಚಯಿಸಿದ್ದೇ “ಕಿರಿಕ್‌ ಪಾರ್ಟಿ’ ಎನ್ನುವ ಕನ್ನಡ ಚಿತ್ರ. ಅದಾದ ಬಳಿಕ ಪುನೀತ್‌ ರಾಜಕುಮಾರ್‌ ಅಭಿನಯದ “ಅಂಜನಿಪುತ್ರ’, ದರ್ಶನ್‌ ಅಭಿನಯದ “ಯಜಮಾನ’ ಚಿತ್ರಗಳಲ್ಲಿ ನಟಿಸಿದ್ದು ಬಿಟ್ಟರೆ, ಇತ್ತೀಚೆಗೆ ಮತ್ತೆ ಯಾವ ಚಿತ್ರಗಳಲ್ಲೂ ರಶ್ಮಿಕಾ ಕಾಣಿಸಿಕೊಂಡಿಲ್ಲ. ಚಿತ್ರೋದ್ಯಮದ ಮೂಲಗಳ ಪ್ರಕಾರ, ತೆಲುಗಿನಲ್ಲಿ ಬೇಡಿಕೆಯ ನಟಿಯಾದ ಬಳಿಕ ಕನ್ನಡದಲ್ಲಿ ಬರುತ್ತಿರುವ ಅವಕಾಶಗಳನ್ನು ರಶ್ಮಿಕಾ ತಿರಸ್ಕರಿಸುತ್ತಿದ್ದಾರೆ. ಈಗಾಗಲೇ ಒಪ್ಪಿಕೊಂಡಿದ್ದ ಕೆಲ ಚಿತ್ರಗಳನ್ನೂ ಬೇರೆ ಬೇರೆ ಕಾರಣಗಳ ನೆಪವೊಡ್ಡಿ ಕ್ಯಾನ್ಸಲ್‌ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

Advertisement

ಕನ್ನಡದ ಬಗ್ಗೆ ಯಾಕೆ ಈ ಧೋರಣೆ?: ಕನ್ನಡದಿಂದಲೇ ನಟಿಯಾಗಿ ಹೋಗಿ ಟಾಲಿವುಡ್‌ನ‌ಲ್ಲಿ ಮಿಂಚುತ್ತಿರುವ ರಶ್ಮಿಕಾ, ಕನ್ನಡದ ಬಗ್ಗೆ ತೋರುತ್ತಿರುವ ಧೋರಣೆ ಸರಿಯಲ್ಲ ಎನ್ನುವುದು ಒಕ್ಕೊರಲ ಅಭಿಪ್ರಾಯ. ಕರ್ನಾಟಕದಲ್ಲಿ ಇರುವಾಗಲೂ ಅದರಲ್ಲೂ ಕನ್ನಡದ ಮಾಧ್ಯಮಗಳ ಮುಂದೆ ಬಂದಾಗಲೂ ಉದ್ದೇಶ ಪೂರ್ವಕವಾಗಿಯೇ ಇಂಗ್ಲೀಷ್‌ ಮತ್ತು ತೆಲುಗಿನಲ್ಲಿಯೇ ಮಾತನಾಡುತ್ತಾರೆ. ಇತ್ತೀಚೆಗೆ “ಡಿಯರ್‌ ಕಾಮ್ರೆಡ್‌’ ಚಿತ್ರದ ಪ್ರಚಾರಕ್ಕೆ ನಟ ವಿಜಯ್‌ ದೇವರಕೊಂಡ ಜತೆಗೆ ಬೆಂಗಳೂರಿಗೆ ಬಂದಾಗಲೂ ಇದೇ ಪುನಾರಾವರ್ತನೆ ಆಯಿತು.

“ಡಿಯರ್‌ ಕಾಮ್ರೆಡ್‌’ ಚಿತ್ರದ ಕನ್ನಡದ ಅವತರಣಿಕೆಗೆ ನಾನೇ ವಾಯ್ಸ್ ಡಬ್ಬಿಂಗ್‌ ಮಾಡಿದ್ದೇನೆ. ಇದು ತಮಗೆ ಸಾಕಷ್ಟು ಖುಷಿ ತಂದಿದೆ ಎಂಬುದಾಗಿ ಸಂತೋಷಪಟ್ಟರೂ, ಅವರು ಅಲ್ಲಿ ಮಾತನಾಡಿದ್ದು ಮಾತ್ರ ಇಂಗ್ಲಿಷ್‌ ಮಿಶ್ರಿತ ಕಂಗ್ಲೀಷ್‌ನಲ್ಲಿ! ಅದರಲ್ಲೂ ತೆಲುಗು ಪದಗಳೇ ಹೆಚ್ಚಿದ್ದವು. ಪತ್ರಿಕಾಗೋಷ್ಠಿಯಲ್ಲಿನ ಅವರು ಮಾತುಗಳಿನ್ನು ಕೇಳಿದ್ದ ಸಿನಿ ಪ್ರೇಕ್ಷಕರು ಸೋಶಿಯಲ್‌ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಅದರ ಹಿಂದೆಯೇ ರಶ್ಮಿಕಾ ಈಗ ತಮಿಳಿನಲ್ಲಿ ನೀಡಿರುವ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದ್ದು, ಕನ್ನಡದ ಸಿನಿ ಪ್ರೇಕ್ಷಕರ ಆಕ್ರೋಶ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ರಶ್ಮಿಕಾ ಮಂದಣ್ಣ ವಿರುದ್ಧ ಮಂಡಳಿಗೆ ದೂರು: “ಕನ್ನಡ ನನಗೆ ಬಲು ಕಷ್ಟ. ಕನ್ನಡ ಮಾತನಾಡಲು ಬರುವುದಿಲ್ಲ’ ಎಂದಿದ್ದ ಕಿರಿಕ್‌ ಹುಡುಗಿ ರಶ್ಮಿಕಾ ಮಂದಣ್ಣ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ. ಕೆಲ ದಿನಗಳ ಹಿಂದೆ ಪರಭಾಷೆಯ ವಾಹಿನಿಯ ಸಂದರ್ಶನದಲ್ಲಿ, ನಟಿ ರಶ್ಮಿಕಾ ಮಂದಣ್ಣ ಸುಳ್ಳು ಹೇಳಿಕೆ ನೀಡಿದ್ದಾರೆ. ಅದ್ದರಿಂದ ರಶ್ಮಿಕಾ ಸಿನಿಮಾಗಳನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡಬಾರದು.

ಕನ್ನಡದಿಂದಲೇ ಬೆಳೆದು, ಕನ್ನಡವನ್ನು ತಾತ್ಸಾರದಿಂದ ನೋಡುವ ಇಂತಹ ನಟಿಯರಿಗೆ ಇದು ಪಾಠವಾಗಬೇಕು ಎಂದು ಕನ್ನಡ ಪರ ಹೋರಾಟಗಾರರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌, “ರಶ್ಮಿಕಾ ಮಂದಣ್ಣ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಚೇಂಬರ್‌ಗೆ ದೂರು ನೀಡಿದ್ದಾರೆ. ಈ ಬಗ್ಗೆ ಶೀಘ್ರದಲ್ಲಿಯೇ ರಶ್ಮಿಕಾ ಅವರನ್ನು ಕರೆದು ಮಾತನಾಡಲಾಗುವುದು. ಅವರ ಹೇಳಿಕೆ, ನಿಲುವುಗಳ ಪರಾಮರ್ಶೆಯ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next