Advertisement

ಮಳೆಕೊಯ್ಲು ಕಡ್ಡಾಯಕ್ಕೆ ಶೀಘ್ರ ‘ಹಸಿರು ಕಟ್ಟಡ ನೀತಿ’

11:49 AM Jun 21, 2019 | Team Udayavani |

ಮಂಗಳೂರು: ರಾಜ್ಯದ ನಗರ ಪ್ರದೇಶಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆಗೆ ಉತ್ತೇಜನ ಹಾಗೂ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲು ಸರಕಾರವು ಶೀಘ್ರದಲ್ಲೇ ‘ಹಸಿರು ಕಟ್ಟಡ ನೀತಿ’ (ಗ್ರೀನ್‌ ಬಿಲ್ಡಿಂಗ್‌ ಪಾಲಿಸಿ)ಯನ್ನು ರೂಪಿಸಲು ಚಿಂತನೆ ನಡೆಸಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಖಾತೆಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.

Advertisement

ದ.ಕ. ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ಉದಯವಾಣಿ ಪತ್ರಿಕೆಯು ಜಿ.ಪಂ. ಸಹಯೋಗದಲ್ಲಿ ಜಲ ಸಾಕ್ಷರತೆ ಅಭಿಯಾನದಡಿ ಬುಧವಾರ ಏರ್ಪಡಿಸಿದ್ದ ಮಳೆ ಕೊಯ್ಲು ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಹೊಸ ಹಸಿರು ಕಟ್ಟಡ ನೀತಿಯಲ್ಲಿ 30×40ವಿಸ್ತೀರ್ಣದ ಮನೆ ಅಥವಾ ಕಟ್ಟಡ ನಿರ್ಮಿಸುವವರು ಕಡ್ಡಾಯವಾಗಿ ಮಳೆ ನೀರು ಕೊಯ್ಲು (ನೀರಿಂಗಿಸುವ) ವ್ಯವಸ್ಥೆಯನ್ನು ಅಳವಡಿಸುವುದು ಹಾಗೂ ಕನಿಷ್ಠ ಒಂದೆರ‌ಡು ಗಿಡ-ಮರ ಬೆಳೆಸುವುದನ್ನು ಕಡ್ಡಾಯಗೊಳಿಸಿ ನಿಯಮ ರೂಪಿಸಲಾಗುವುದು. ಈ ರೀತಿ ಮಳೆಕೊಯ್ಲು ಅಥವಾ ಜಲ ಸಂರಕ್ಷಣೆ ನಿಯಮ ಪಾಲಿಸುವವರಿಗೆ ತೆರಿಗೆಯಲ್ಲಿ ನಿರ್ದಿಷ್ಟ ಪ್ರಮಾಣದ ರಿಯಾಯಿತಿ ನೀಡುವಂತಹ ಪ್ರೋತ್ಸಾಹಕ ಕ್ರಮ ತೆಗೆದುಕೊಳ್ಳಲಾಗುವುದು. ನಿಯಮ ಪಾಲಿಸದವರ ವಿರುದ್ಧ ಕಠಿನ ಕ್ರಮಕ್ಕೂ ಕಾಯಿದೆ ರೂಪಿಸಲಾಗುವುದು ಎಂದು ಸಚಿವರು ತಿಳಿಸಿದರು.

ಮನೆ ಕಟ್ಟುವಾಗ ಅಂಗಳದಲ್ಲಿ ನಿರ್ದಿಷ್ಟ ಜಾಗವನ್ನು ನೀರಿಂಗಲು ಬಿಡುವಂತೆಯೂ ನಿಯಮ ರೂಪಿಸಲಾಗುವುದು. ರಸ್ತೆ ಕಾಂಕ್ರೀಟಿಕರಣ ಸಂದರ್ಭ ಇಕ್ಕೆಲಗಳಲ್ಲಿ ನಿರ್ದಿಷ್ಟ ಸ್ಥಳಾವಕಾಶ ಕಾದಿರಿಸಿ ಅಲ್ಲಿ ಹಸಿರು ವಾತಾವರಣ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು. ಇದಲ್ಲದೆ ಸ್ವಚ್ಛತೆಗೆ ಸಂಬಂಧಿಸಿ ಘನ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸುವ ಬಗೆಗೂ ಕಾನೂನು ರಚನೆಗೆ ತಜ್ಞರ ಸಮಾಲೋಚನೆ ನಡೆಯುತ್ತಿದೆ; ಜಲ ಸಂರಕ್ಷಣೆ ಬಗ್ಗೆ ಕೇರಳ, ದಿಲ್ಲಿ ಮುಂತಾದ ಕಡೆಇರುವ ಕಾನೂನುಗಳ ಅಧ್ಯಯನ ಮಾಡಿ ಪರಿಣಾಮಕಾರಿಯಾದವುಗಳನ್ನು ನಮ್ಮ ರಾಜ್ಯದಲ್ಲಿಯೂ ಅಳವಡಿಸಿಕೊಳ್ಳುವತ್ತ ಗಮನಹರಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಎಲ್ಲರೂ ಮಳೆ ಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ಮಳೆ ಕೊಯ್ಲು ವ್ಯವಸ್ಥೆಯ ಬಗ್ಗೆ ಜಾಗೃತಿ ಹಾಗೂ ಮಾಹಿತಿ ಶಿಬಿರ ಏರ್ಪಡಿಸಿದ್ದ ಉದಯವಾಣಿಯ ಈ ಪ್ರಯತ್ನವನ್ನು ಶ್ಲಾಘಿಸಿದರು.

Advertisement

ಮುಖ್ಯ ಅತಿಥಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಳೆ ಕೊಯ್ಲು ಅಭಿಯಾನ ವರ್ಷ ಪೂರ್ತಿ ಮುಂದುವರಿಯಲಿ ಎಂದರು.

ಇನ್ನೋರ್ವ ಅತಿಥಿ ಕ್ರೆಡೈ ಅಧ್ಯಕ್ಷ ನವೀನ್‌ ಕಾರ್ಡೋಜಾ ಮಾತನಾಡಿ, ನಗರದಲ್ಲಿರುವ ಎಲ್ಲಬಹು ಮಹಡಿ ಕಟ್ಟಡಗಳಲ್ಲಿ ಮಳೆ ಕೊಯ್ಲುವ್ಯವಸ್ಥೆ ಅನುಷ್ಠಾನಿಸಲು ಪ್ರಯತ್ನಿಸಲಾಗುವುದು. ಯಾರಿಗಾದರೂ ಆರ್ಥಿಕ ತೊಂದರೆಯಿದ್ದರೆ ಉಚಿತವಾಗಿ ಮಾಡಲು ಕ್ರೆಡೈ ಸಿದ್ಧ ಎಂದರು.

ಉದಯವಾಣಿಯ ಸಂಪಾದಕ ಅರವಿಂದ ನಾವಡ ಮಾತನಾಡಿ, ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ವರ್ಷ ಉದ್ಭವಿಸಿದ ನೀರಿನ ಕೊರತೆ ಮುಂದಿನ ವರ್ಷ ಮರುಕಳಿಸದಂತೆ ಸಂಬಂಧಪಟ್ಟ ಸಚಿವರು ಹಾಗೂ ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ನಮ್ಮ ಜನಪ್ರತಿನಿಧಿಗಳಿಗೆ ಕಾಳಜಿಇಲ್ಲವೆಂದಲ್ಲ. ಆದರೆ ಇದ್ಯಾವುದೂ ಆದ್ಯತೆ ಆಗಿರುವುದಿಲ್ಲ. ಹಾಗಾಗಿ ಮಳೆನೀರು ಕೊಯ್ಲಿ ನಂಥ ಉಪಯುಕ್ತ ಕ್ರಮವು ಕಡ್ಡಾಯ ಜಾರಿ ಯಾಗಲು ಹಲವು ವರ್ಷಗಳು ಬೇಕಾಗಿವೆ.ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಅಣೆಕಟ್ಟಿನ ಎತ್ತರ ಏರಿಸುವ ಬದಲು ನಮ್ಮಲ್ಲೇ ಲಭ್ಯವಿರುವ ಪರ್ಯಾಯ ಜಲಮೂಲಗಳನ್ನು ಪುನರುಜ್ಜೀವನಗೊಳಿಸಬೇಕು. ಉದಯವಾಣಿಯು ಈ ನಿಟ್ಟಿನಲ್ಲಿಒಂದು ಜನಾಂದೋಲನ ರೂಪಿಸಲಿದೆ ಎಂದರು.

ಮಂಗಳೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಘು ಆಲನಹಳ್ಳಿ ಮಳೆ ನೀರು ಕೊಯ್ಲಿನ ಮಹತ್ವದ ಬಗ್ಗೆ ಮಾತನಾಡಿದರು. ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಂಗಳೂರು ತಾ.ಪಂ. ಅಧ್ಯಕ್ಷ ಮಹಮದ್‌ ಮೋನು, ಜಿ.ಪಂ. ಉಪ ಕಾರ್ಯದರ್ಶಿ ಮಹೇಶ್‌ ವೇದಿಕೆಯಲ್ಲಿದ್ದರು.

ಉದಯವಾಣಿಯ ಸಹಾಯಕ ಸಂಪಾದಕ ಮನೋಹರ ಪ್ರಸಾದ್‌ ಕಾರ್ಯಕ್ರಮ ನಿರೂಪಿಸಿದರು. ಡೆಪ್ಯುಟಿ ಬ್ಯೂರೋ ಚೀಫ್‌ ಸುರೇಶ್‌ ಪುದುವೆಟ್ಟು ಸ್ವಾಗತಿಸಿ, ಪ್ರಸ್ತಾವನೆಗೈದರು. ಮ್ಯಾಗಸಿನ್‌ ವಿಭಾಗದ ನ್ಯಾಶನಲ್ ಹೆಡ್‌ ಆನಂದ್‌ ಕೆ. ವಂದಿಸಿದರು.

ಪ್ರಾತ್ಯಕ್ಷಿಕೆ/ ಮಾಹಿತಿ

ನಿರ್ಮಿತಿ ಕೇಂದ್ರದ ನಿರ್ದೇಶಕ ರಾಜೇಂದ್ರ ಕಲ್ಬಾವಿ ಮತ್ತು ತಂಡದವರು ಮಳೆ ಕೊಯ್ಲು ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿಯನ್ನು ನೀಡಿದರು.

ದ.ಕ. ಜಿಲ್ಲೆಯಲ್ಲಿ ಜಲ ಸಾಕ್ಷರತೆ ಕನಿಷ್ಠ: ಶ್ರೀಪಡ್ರೆ
ಮಂಗಳೂರು ನಗರ ಸಹಿತ ದ.ಕ. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ತಲೆದೋರಿರುವುದು ಜಲ ಸಾಕ್ಷರತೆ ಕಡಿಮೆ ಇರುವುದರ ಸಂಕೇತ. ಜನರಲ್ಲಿ ಮಳೆ ನೀರಿನ ಕುರಿತು ಎಚ್ಚರಿಕೆ ಅತೀ ಕನಿಷ್ಠವಾಗಿದೆ. ನೀರಿನ ಕ್ಷಾಮ ಮತ್ತು ಬರ ಪರಿಸ್ಥಿತಿ ಬಂದಾಗ ಮಾತ್ರವೇ ನೀರಿನ ಮಹತ್ವವನ್ನು ಅರಿಯುವ ಸನ್ನಿವೇಶದಲ್ಲಿ ನಾವಿದ್ದೇವೆ. ಸರಾಸರಿ ವಾರ್ಷಿಕ 3,500 ಮಿ.ಮೀ. ಮಳೆ ಬೀಳುವ ಜಿಲ್ಲೆಯಲ್ಲಿ ನೀರಿಗಾಗಿ ಟ್ಯಾಂಕರ್‌ಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಅಭ್ಯುದಯದ ಲಕ್ಷಣವಲ್ಲ, ಇದು ನಾಚಿಕೆಗೇಡು ಎಂದು ಮಳೆ ಕೊಯ್ಲು ಬಗ್ಗೆ ಮಾಹಿತಿ ನೀಡಿದ ಸಂಪನ್ಮೂಲ ವ್ಯಕ್ತಿ ಜಲ ತಜ್ಞ ಶ್ರೀಪಡ್ರೆ ಹೇಳಿದರು.

ಕನಿಷ್ಠ ಸದಸ್ಯರಿರುವ ಕುಟುಂಬವೊಂದಕ್ಕೆ ಮಿತವಾಗಿ ಬಳಸಿದರೆ ವಾರ್ಷಿಕ 3 ಲಕ್ಷ ಲೀಟರ್‌ ನೀರು ಸಾಕಾಗುತ್ತದೆ. ಜಿಲ್ಲೆಯಲ್ಲಿ ಸುರಿಯುವ ಸರಾಸರಿ ಮಳೆಯ ಲೆಕ್ಕಾಚಾರದಲ್ಲಿಯೇ ಮನೆಯೊಂದರ ಮಹಡಿ ಮೇಲೆ ಬೀಳುವ ನೀರನ್ನು ಬಾವಿಗೆ ಇಂಗಿಸಿದರೆ ವರ್ಷವಿಡೀ ಆ ನೀರನ್ನು ಬಳಸಲು ಸಾಧ್ಯವಾಗುವುದು. ಈ ಕೆಲಸವನ್ನು ನಾವು ಮಾಡಬೇಕಾಗಿದೆ. ಹಾಗಾಗಿ ಕಾನೂನನ್ನು ಜಾರಿಗೆ ತರುವ ಜತೆಗೆ ಎಲ್ಲರೂ ನೀರಿನ ಕೆಲಸದಲ್ಲಿ ತೊಡಗಿಸುವಂತಾಗಬೇಕು. ಜನರು ನಗುನಗುತ್ತಾ ಮಳೆ ನೀರು ಕೊಯ್ಲನ್ನು ಅಳವಡಿಸಿಕೊಳ್ಳುವ ವ್ಯವಸ್ಥೆ ಆಗಬೇಕೆಂದು ಅವರು ಸಲಹೆ ನೀಡಿದರು.

ತೆರೆದ ಬಾವಿಗಳು ನೀರು ಮರುಪೂರಣಕ್ಕೆ ಹೆಚ್ಚು ಸೂಕ್ತವಾಗಿವೆ. 400 ವರ್ಷಗಳಿಗೂ ಹಿಂದಿನ ಇತಿಹಾಸವಿರುವ ಬಾವಿಗಳ ಮೇಲೆ ನಾವು ವಿಶ್ವಾಸವಿರಿಸಿ ಮಳೆ ನೀರನ್ನು ಬಾವಿಗೆ ಇಂಗಿಸುವಂತೆ ವ್ಯವಸ್ಥೆ ಮಾಡಿದರೆ ಸಂಭಾವ್ಯ ನೀರಿನ ಅಭಾವದಿಂದ ಪಾರಾಗಲು ಸಾಧ್ಯ; ಇದರ ಜತೆಗೆ ಮದಕ ಮತ್ತು ಕೆರೆಗಳ ಪುನರುಜ್ಜೀವನ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.

ನೀರು ಸಂರಕ್ಷಣೆಗೆ ಒತ್ತು: ಆರ್‌. ಸೆಲ್ವಮಣಿ
ಮುಖ್ಯಅತಿಥಿಯಾಗಿ ಪಾಲ್ಗೊಳ್ಳಬೇಕಾಗಿದ್ದ ದ.ಕ. ಜಿ.ಪಂ. ಸಿಇಒ ಆರ್‌. ಸೆಲ್ವಮಣಿ ತುರ್ತುಕಾರ್ಯ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಈ ಹಿನ್ನೆಲೆಯಲ್ಲಿ ಸಂದೇಶ ಕಳುಹಿಸಿದ್ದ ‘ಅವರು ನಾವು ನಮ್ಮ ಮುಂದಿನ ಪೀಳಿಗೆಗಾಗಿ ಶುದ್ಧ ಕುಡಿಯುವ ನೀರನ್ನು ಸಂರಕ್ಷಿಸಿಕೊಳ್ಳುವುದು ಅತ್ಯಗತ್ಯ. ಇತ್ತೀಚಿನ ದಿನಗಳಲ್ಲಿ ನೀರನ್ನು ಉಳಿಸುವ ಹಾಗೂ ಬಳಸಿಕೊಳ್ಳುವ ವಿಧಾನಗಳಲ್ಲಿ ಮಳೆ ನೀರಿನ ಕೊಯ್ಲು ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಈ ಕಾರ್ಯಾಗಾರದ ಸದುಪಯೋಗವನ್ನು ಎಲ್ಲರೂ ಪಡೆದು ಜಲಸಂರಕ್ಷಣೆಯಲ್ಲಿ ಕೈಜೋಡಿಸಬೇಕು’ ಎಂದು ತಿಳಿಸಿದ್ದಾರೆ.
ಶಾಸಕ ವೇದವ್ಯಾಸ ಕಾಮತ್‌ ಮನೆಯಿಂದಲೇ ಪ್ರಾರಂಭ
ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, “ಶಾಸಕನಾಗಿ ಕ್ಷೇತ್ರದ ಜನರಿಗೆ ಪ್ರೇರಣೆಯಾಗಬೇಕೆಂದು ಮಳೆಕೊಯ್ಲು ವ್ಯವಸ್ಥೆಯನ್ನು ನನ್ನ ಮನೆ ಆವರಣದಲ್ಲಿ ಪೂರ್ಣ ಪ್ರಮಾಣದಲ್ಲಿ ಮಾಡುವ ಕಾರ್ಯವನ್ನು ಉದಯವಾಣಿ ಅಭಿಯಾನದ ಬಳಿಕ ಆರಂಭಿಸಿದ್ದೇನೆ. ಪತ್ರಿಕೆಯ ಈ ವಿನೂತನ ಸಮಾಜಮುಖೀ ಅಭಿಯಾನ ಎಲ್ಲರಿಗೂ ಪ್ರೇರಣೆಯಾಗಬೇಕು’ ಎಂದು ತಿಳಿಸಿದರು.
ನಗರದಲ್ಲಿ ಅಸಮರ್ಪಕ ಒಳಚರಂಡಿ ಗಳಿಂದಾಗಿ ಬಾವಿಗಳು ಮಲಿನಗೊಂಡಿವೆ. ಹೀಗಿರುವಾಗ, ಮಳೆ ಕೊಯ್ಲಿಗೆ ಉತ್ತೇಜನ ನೀಡುವಾಗ, ನಗರದ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಗಮನಹರಿಸಬೇಕು. ಇದಕ್ಕೆ 386 ಕೋಟಿ ರೂ. ಅಗತ್ಯವಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಶಾಸಕರು ಸಚಿವ ಯು.ಟಿ. ಖಾದರ್‌ ಅವರಿಗೆ ಮನವಿ ಮಾಡಿದರು.
ನಗರದಲ್ಲಿ ಮಳೆ ಕೊಯ್ಲು ಜತೆಗೆ ಬಾವಿ, ಕೆರೆ ಸಂರಕ್ಷಣೆಯನ್ನೂ ಮಾಡಬೇಕಾಗಿದೆ. ಅದು ಈಡೇರಿದರೆ ಉದಯವಾಣಿಯ ಈ ಜಾಗೃತಿ
ಅಭಿಯಾನ ಮತ್ತಷ್ಟು ಸಾರ್ಥಕತೆಯತ್ತ ಸಾಗು ತ್ತದೆ ಎಂದು ವೇದವ್ಯಾಸ ಕಾಮತ್‌ ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next