Advertisement

ಅನ್ನದಾತನಿಗೆ ಆಘಾತ

01:17 PM Aug 12, 2019 | Naveen |

ಮಂಜುನಾಥ ಎಚ್ ಕುಂಬಳೂರು
ರಾಣಿಬೆನ್ನೂರ:
ತುಂಗಭದ್ರ, ಕುಮದ್ವತಿ ನದಿಯ ಪ್ರವಾಹದ ಭೀತಿಯಿಂದಾಗಿ ಜನರು ಆತಂಕಕ್ಕೀಡಾಗಿದ್ದು, ರೈತರಂತೂ ಮತ್ತೆ ಸಾಲಬಾಧೆ ಹಾಗೂ ಬೆಳೆ ಹಾನಿಯಿಂದ ದಿಕ್ಕುತೋಚದಂತಾಗಿ ಸಂಕಷ್ಟ ಎದುರಿಸುವಂತಾಗಿದೆ.ರವಿವಾರ ಸ್ವಲ್ಪ ಮಟ್ಟಿಗೆ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೂ ಜಲಾಶಯಗಳು ಭರ್ತಿಯಾಗಿದ್ದರಿಂದ ನೀರಿನ ಹೊರಹರಿವು ಹೆಚ್ಚಾಗುತ್ತಲೇ ಇದೆ. ಪರಿಣಾಮ ತುಂಗಭದ್ರ ಹಾಗೂ ಕುಮದ್ವತಿ ನದಿಗಳು ತುಂಬಿ ಹರಿಯುತ್ತಿವೆ.

Advertisement

ಸಂಪರ್ಕ ರಸ್ತೆಗಳು ಕಡಿತ: ತಾಲೂಕಿನ ಹಲಗೇರಿ ತುಮ್ಮಿನಕಟ್ಟಿ ಮಾರ್ಗವಾಗಿ ಹೊನ್ನಾಳಿಗೆ ಹೋಗುವ ರಸ್ತೆಯ ಕುಪ್ಪೇಲೂರು ಹತ್ತಿರ ಕುಮದ್ವತಿ ನದಿ ಸೇತುವೆ ಮೇಲೆ ನೀರು ಹರಿದು ಸಂಪರ್ಕ ಕಡಿತವಾಗಿದೆ.

ಮಣಕೂರಿನಿಂದ ಲಿಂಗದಹಳ್ಳಿಗೆ ಹೋಗುವ ರಸ್ತೆಯ ಸೇತುವೆ ಮೇಲೆ ನೀರು ಹರಿದು ರಸ್ತೆಯ ಸಂಪರ್ಕ ಕಡಿತವಾಗಿದೆ. ಅಲ್ಲದೇ ತಾಲೂಕಿನ ತುಂಗಭದ್ರ ನದಿ ನೀರಿನ ಹಿನ್ನೀರಿನಿಂದ ಹರನಗಿರಿ, ಚಿಕ್ಕಕುರುವತ್ತಿ, ಚೌಡಯ್ಯದಾನಪುರ ಗ್ರಾಮಗಳಿಗೆ ಸಂಪರ್ಕ ರಸ್ತೆ ಕಡಿತಗೊಂಡಿದೆ.

ಹಸು-ಎಮ್ಮೆಗಳ ಸಾವು: ತಾಲೂಕಿನ ವಿವಿಧ ಗ್ರಾಮಗಳು ಮತ್ತು ನಗರ ಸೇರಿದಂತೆ ಒಟ್ಟು 720 ಮನೆಗಳು ಹಾನಿಗೊಳಗಾಗಿದ್ದು, ಅದರಲ್ಲಿ 23 ಮನೆಗಳು ಸಂಪೂರ್ಣ ಬಿದ್ದು, 697 ಮನೆಗಳು ಭಾಗಶಃ ಹಾನಿಗೊಂಡಿವೆ. ಚಳಗೇರಿ ಗ್ರಾಮದಲ್ಲಿ ಹಾಗೂ ಇಟಗಿ ಗ್ರಾಮದಲ್ಲಿ ಎಮ್ಮೆಗಳೆರೆಡು, ದೇವರಗುಡ್ಡದಲ್ಲಿ 1 ಹಸು ಗೋಡೆ ಕುಸಿದು ಸಾವನ್ನಪ್ಪಿದ ಘಟನೆ ನಡೆದಿವೆ.

ಪರಿಹಾರ ಕೇಂದ್ರಗಳು: ನಗರದ ಆಂಜನೇಯ ಬಡಾವಣೆ, ಮಾಕನೂರು, ಕುಪ್ಪೇಲೂರು, ನದಿಹರಳಳ್ಳಿ, ಕೊಡಿಯಾಲ ಹೊಸಪೇಟೆ, ಚಿಕ್ಕಮಾಗನೂರ ಗ್ರಾಮಗಳಲ್ಲಿ ಪರಿಹಾರ ಕೇಂದ್ರವನ್ನು ತೆರೆಯಲಾಗಿದೆ. ಅಲ್ಲದೇ ಮುಷ್ಟೂರು ಗ್ರಾಮದಲ್ಲಿ ಪರಿಹಾರ ಕೇಂದ್ರವನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

Advertisement

ಜಲಾವೃತಗೊಂಡ ಜಮೀನು: ಕುಮದ್ವತಿ ಹಾಗೂ ತುಂಗಭದ್ರ ನದಿ ತೀರದ ಗ್ರಾಮಗಳಾದ ತಾಲೂಕಿನ ಮುದೇನೂರ, ಮಾಕನೂರು, ನಾಗೇನಹಳ್ಳಿ, ಕವಲೆತ್ತು, ನದಿಹರಳಳ್ಳಿ, ಕೊಡಿಯಾಲ ಹೊಸಪೇಟೆ, ಚೌಡಯ್ಯದಾನಪುರ, ಚಂದಾಪುರ, ಚಿಕ್ಕಕುರುವತ್ತಿ, ಹರನಗಿರಿ, ಮೇಡ್ಲೇರಿ, ಊದಗಟ್ಟಿ, ಬೇಲೂರು, ಹೀಲದಹಳ್ಳಿ, ಕುಪ್ಪೇಲೂರ, ಮುಷ್ಟೂರು, ಹಿರೇಬಿದರಿ, ಐರಣಿ, ಕೋಣನತಂಬಗಿ, ಬೇಲೂರು ಸೇರಿದಂತೆ ಮತ್ತಿತರ ನದಿ ತೀರದ ಗ್ರಾಮದ ಒಟ್ಟು 4800 ಹೆಕ್ಟೇರ್‌ ಜಮೀನು ಜಲಾವೃತಗೊಂಡಿದೆ.

ಈಗಾಗಲೇ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಹತ್ತಿ, ಮೆಕ್ಕೆಜೋಳ ಹಾಗೂ ತರಕಾರಿ ಬೆಳೆದ ನದಿ ತೀರದ ಜನರು ಹಾನಿಗೊಳಗಾಗಿದ್ದು, ಇದರ ಜತೆಗೆ 5 ದಿನಗಳಿಂದ ನದಿಯ ನೀರಿನ ಪ್ರಮಾಣ ಅಧಿಕವಾಗಿದ್ದು, ನದಿ ತೀರದ ಗ್ರಾಮಗಳ ರೈತರ ಬೆಳೆಗಳಾದ ಮೆಕ್ಕೆಜೋಳ, ಹತ್ತಿ, ಕಬ್ಬು, ಭತ್ತ, ಈರುಳ್ಳಿ, ಬೆಳ್ಳುಳ್ಳಿ, ಗೋವಿನಜೋಳ ಹಾಗೂ ವಿವಿಧ ತರಕಾರಿ ಬೆಳೆಗಳು ಜಲಾವೃತಗೊಂಡಿವೆ. ಇದರಿಂದ ಅನ್ನದಾತರು ಸಂಪೂರ್ಣ ಸಂಕಷ್ಟ ಎದುರಿಸುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next