ಕನ್ನಡ ಚಿತ್ರರಂಗದಲ್ಲೀಗ ಹೊಸ ಸಿನಿಮಾಗಳ ಫಸಲು ಚೆನ್ನಾಗಿದೆ. ಅದರಲ್ಲೂ ಹೊಸಬರ ಪ್ರಯತ್ನಕ್ಕೆ ಮೆಚ್ಚುಗೆಯೂ ಸಿಗುತ್ತಿದೆ. ಆ ಸಾಲಿಗೆ ಈಗ “ರಾಂಧವ’ ಕೂಡ ಸೇರಿದೆ. ಹೌದು, ಈ ಚಿತ್ರ ಬಿಡುಗಡೆಯಾದ ದಿನ ಎಲ್ಲೆಡೆ ಮೆಚ್ಚುಗೆ ಪಡೆದಿತ್ತು. ಅಷ್ಟೇ ಅಲ್ಲ, 25 ದಿನಗಳ ಯಶಸ್ವಿ ಪ್ರದರ್ಶನ ಕಂಡಿರುವುದು ಚಿತ್ರತಂಡಕ್ಕೆ ಸಹಜವಾಗಿಯೇ ಖುಷಿ ಹೆಚ್ಚಿಸಿದೆ. ಈ ಖುಷಿಗೆ ಚಿತ್ರದ ನಾಯಕ ಭುವನ್ ಅವರ ಅಭಿಮಾನಿಗಳು ಕೇಕ್ ಕತ್ತರಿಸಿ, ಸಂಭ್ರಮಿಸಿರುವುದು ವಿಶೇಷ.
ಒಂದು ಚಿತ್ರ ಸಕ್ಸಸ್ನತ್ತ ದಾಪುಗಾಲಿಟ್ಟರೆ, ಆ ಚಿತ್ರತಂಡ ಖುಷಿ ಹಂಚಿಕೊಳ್ಳುವುದು ಸಹಜ. ಆದರೆ, ಹೊಸಬರ ಚಿತ್ರ ಮೆಚ್ಚಿಕೊಂಡ ಜನರು, ಹೀರೋ ಮೂಲಕ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿರುವುದು ಹೊಸ ವಿಷಯ. ಬೆಂಗಳೂರು, ಕೊಪ್ಪಳ, ರಾಮನಗರ, ತುಮಕೂರು, ಹಾಸನ ಮತ್ತು ದೊಡ್ಡಬಳ್ಳಾಪುರ ಭಾಗದ ಅಭಿಮಾನಿಗಳು ನಾಯಕ ಭುವನ್ ಅವರಿಂದ ಕೇಕ್ನ್ನು ಕತ್ತರಿಸಿ ಖುಷಿ ಹಂಚಿಕೊಂಡರು.
ಈ ಖುಷಿ ಹಂಚಿಕೊಂಡ ನಾಯಕ ಭುವನ್, “ಸಿನಿಮಾ ಮಾಡಿ, ಬಿಡುಗಡೆ ಮಾಡುವುದು ಸುಲಭ ಅಂದುಕೊಂಡಿದ್ದೆ. ಆದರೆ, ಬಿಡುಗಡೆ ವೇಳೆ ಎಷ್ಟು ಕಷ್ಟ ಆಯ್ತು ಅನ್ನೋದನ್ನು ಅರಿತೆ. ಕೆಲವು ಕಡೆ ನಿರೀಕ್ಷೆ ಇತ್ತು. ಆದರೆ, ಅಲ್ಲೆಲ್ಲಾ ಆ ನಿರೀಕ್ಷೆ ಸುಳ್ಳಾಯ್ತು. ಆದರೆ, ಕೆಲ ಸೆಂಟರ್ಗಳಲ್ಲಿ ನಮ್ಮ ನಿರೀಕ್ಷೆ ಮೀರಿ ಚಿತ್ರ ಪ್ರದರ್ಶನ ಕಂಡಿದೆ. ನಾವು ಕೆಲವು ಚಿತ್ರಮಂದಿರಗಳಿಗೆ ಭೇಟಿ ಕೊಟ್ಟ ವೇಳೆ, ಎಲ್ಲರಿಂದಲೂ ಇದು ಹೊಸಬರ ಸಿನಿಮಾ ಎನಿಸುವುದಿಲ್ಲ ಅಂತಾನೇ ಹೇಳುತ್ತಿದ್ದರು.
ಆಗ, ನಮ್ಮ ತಂಡಕ್ಕೆ ಸಿನಿಮಾ ಮಾಡಿದ್ದಕ್ಕೂ ಸಾರ್ಥಕ ಎನಿಸಿದ್ದು ಸುಳ್ಳಲ್ಲ’ ಎಂದರು ಭುವನ್. ನಿರ್ದೇಶಕ ಸುನೀಲ್ ಆಚಾರ್ಯ ಅವರಿಗೆ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ಸೂಚನೆ ಸಿಕ್ಕಿದ್ದರಿಂದ 50 ದಿನದ ಸಂಭ್ರಮ ಆಚರಿಸಿಕೊಳ್ಳಬಹುದು ಎಂಬ ಯೋಚನೆ ಇತ್ತಂತೆ. “ಅಭಿಮಾನಿಗಳು ಸೇರಿ, 25 ದಿನದ ಸಂಭ್ರಮ ಹಂಚಿಕೊಂಡಿದ್ದಾರೆ. ಅವರ ಸಂತಸಕ್ಕೆ ನಮ್ಮ ಬೆಂಬಲ ಬೇಕು.
ಹಾಗಾಗಿ ಅವರ ಪ್ರೀತಿಯ ಆಹ್ವಾನಕ್ಕೆ ಬಂದಿದ್ದೇವೆ’ ಎಂಬುದು ಸುನಿಲ್ಆಚಾರ್ಯ ಮಾತು. ನಟಿ ವಾಣಿಶ್ರೀ ಅವರಿಗೆ ಒಳ್ಳೆಯ ಚಿತ್ರದಲ್ಲಿ ಕೆಲಸ ಮಾಡಿದ ಖುಷಿಯಂತೆ. ಅವರಿಲ್ಲಿ ಕಥೆ ಕೇಳದೆ ನಟನೆ ಮಾಡಿದ್ದನ್ನು ನೆನಪಿಸಿಕೊಂಡರು ಅವರು. ಇನ್ನು ಸಂಗೀತ ನಿರ್ದೇಶಕ ಶಶಾಂಕ್ ಶೇಷಗಿರಿ ಅವರ ಕೆಲಸಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ಸಿಕ್ಕಿದೆ. ಅದನ್ನು ಹೇಳಿಕೊಂಡು ಅವರು, ಎಲ್ಲರಿಗೂ ಧನ್ಯವಾದ ಅರ್ಪಿಸಿದರು.