Advertisement

ರಾಮ್‌ನ ಅವತಾರ: ಪ್ರೀತಿಗಾಗಿ ದಳಪತಿಯ ಹೋರಾಟ

07:30 AM Apr 13, 2018 | |

“ಈ ಚಿತ್ರ ಹಿಟ್‌ ಆಗುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ, ಕಮರ್ಷಿಯಲ್‌ ಹೀರೋ ಆಗಿ ಪ್ರೇಮ್‌ ಎರಡು ಚಿತ್ರ ಸೈನ್‌ ಮಾಡ್ತಾರೆ …’ ಹಾಗಂತ ಘೋಷಿಸಿದರು ಪ್ರಶಾಂತ್‌. ಅವರಿಗೆ ತಮ್ಮ “ದಳಪತಿ’ ಚಿತ್ರದ ಬಗ್ಗೆ ಸಖತ್‌ ವಿಶ್ವಾಸ. ಅದಕ್ಕಿಂತ ವಿಶ್ವಾಸ, ಪ್ರೇಮ್‌ ಅವರ ಪಾತ್ರ ಮತ್ತು ಅಭಿನಯದ ಬಗ್ಗೆ ಇದೆ. ಅದೇ ಕಾರಣಕ್ಕೆ ಅವರು ಈ ಚಿತ್ರದ ನಂತರ ಪ್ರೇಮ್‌ ಕಮರ್ಷಿಯಲ್‌ ಹೀರೋ ಆಗಿ ಗುರುತಿಸಿಕೊಳ್ಳುತ್ತಾರೆ ಎಂಬ ಭವಿಷ್ಯ ನುಡಿಯುತ್ತಾರೆ.

Advertisement

ಅಂದಹಾಗೆ, ಪ್ರೇಮ್‌ ಅಭಿನಯದ “ದಳಪತಿ’ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆ ವಿಷಯವನ್ನು ಹೇಳಲೆಂದೇ ನಿರ್ದೇಶಕ ಪ್ರಶಾಂತ್‌ ರಾಜ್‌ ಒಂದು ಪತ್ರಿಕಾಗೋಷ್ಠಿ ಇಟ್ಟುಕೊಂಡಿದ್ದರು. ಮೊದಲ ಹಲವು ನಿಮಿಷಗಳ ಕಾಲ, ಚಿತ್ರ ತಡವಾಗಿದ್ದೇಕೆ ಎಂಬುದನ್ನು ಸವಿಸ್ತಾರವಾಗಿ ಹೇಳಿದರು. ಕಾರಣಗಳೆಲ್ಲಾ ಮುಗಿದ ನಂತರ ಅವರು, ಚಿತ್ರದ ಕಡೆ ಬಂದರು. “ಇಲ್ಲಿ ಪ್ರೇಮ್‌, ರಾಮ್‌ ಎನ್ನುವ ಪಾತ್ರ ಮಾಡಿದ್ದಾರೆ. ಪ್ರತಿ ಹುಡುಗಿಯೂ, ರಾಮ್‌ನಂತರ ಬಾಯ್‌ಫ್ರೆಂಡ್‌ ಅಥವಾ ಗಂಡ ಇರಬೇಕು ಎಂದು ಬಯಸುವ ಪಾತ್ರ ಅದು. ಅದೇ ತರಹ ಕೃತಿ ಇಲ್ಲಿ ವೈದೇಹಿ ಎಂಬ ಪಾತ್ರ ಮಾಡುತ್ತಿದ್ದು, ಪ್ರತೀ ಹುಡಗನೂ, ಆಕೆಯ ತರಹ ಹೆಂಡತಿ ಸಿಗಲಿ ಎಂದು ಬಯಸುವ ಪಾತ್ರ. ಇಲ್ಲಿ ನಾವೇನೂ ವಿಶೇಷವಾಗಿ ಸಂದೇಶ ಹೇಳುತ್ತಿಲ್ಲ. ಚಿತ್ರ ನೋಡಿದರೆ, ಒಳ್ಳೆಯ ಅನುಭವವಾಗುತ್ತದೆ ಎಂಬುದನ್ನು ಖಂಡಿತಾ ಹೇಳಬಲ್ಲೆ’ ಎನ್ನುತ್ತಾರೆ ಪ್ರಶಾಂತ್‌ ರಾಜ್‌.

ಇಲ್ಲಿ ಪ್ರೇಮ್‌, ಪ್ರೀತಿ ಉಳಿಸಿಕೊಳ್ಳುವ ಯೋಧನಾಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಚಿತ್ರಕ್ಕೆ “ದಳಪತಿ’ ಎಂಬ ಹೆಸರು ಸೂಕ್ತ ಎಂದು ಮಾತು ಪ್ರಾರಂಭಿಸಿದ ಅವರು, “ಇದುವರೆಗೂ ನಾನು ಮಾಡಿದ ಪಾತ್ರಗಳಿಗಿಂಥ ವಿಭಿನ್ನವಾಗಿದೆ. ಒಟ್ಟಾರೆ ಒಂದೊಳ್ಳೆಯ ತಂಡದಿಂದ ಒಳ್ಳಯ ಚಿತ್ರ ಇದು’ ಎಂದರು ಪ್ರೇಮ್‌. ಹಾಗೆಯೇ ಏಪ್ರಿಲ್‌ 18ರಂದು ತಮ್ಮ ಹುಟ್ಟುಹಬ್ಬ ಇರುವುದರಿಂದ, ತಮ್ಮ ಅಭಿಮಾನಿಗಳಿಗೆ ಒಂದೊಳ್ಳೆಯ ಗಿಫ್ಟ್ ಇದಾಗಲಿದೆ ಎಂದರು ಅವರು.

ಕೃತಿ ಖರಬಂದಗೆ “ಗೂಗ್ಲಿ’ ನಂತರ ಒಂದೊಳ್ಳೆಯ ಪಾತ್ರ ಸಿಕ್ಕಿತಂತೆ. ಇದೊಂದು ಸ್ಟೈಲಿಷ್‌ ಚಿತ್ರ. ಪ್ರೇಮ್‌ ಜೊತೆಗೆ ಕೆಲಸ ಮಾಡಿದ್ದು ಖುಷಿಯಾಯಿತು. ಮುಂಚೆ ಅವರಿಗೆ ತುಂಬಾ ಆ್ಯಟಿಟ್ಯೂಡ್‌ ಇದೆ ಎಂದುಕೊಂಡಿದ್ದೆ. ಸೆಟ್‌ಗೆ ಹೋದಮೇಲೆ ಅವರೆಂಥ ಫ್ರೆಂಡ್ಲಿ ಎಂಬುದು ಗೊತ್ತಾಯಿತು. ಇದರಲ್ಲಿ ನನ್ನದು ರೌಡಿ ತರಹದ ಪಾತ್ರ’ ಎಂದು ಹೇಳಿಕೊಂಡರು. ಚಿತ್ರದ ನಿರ್ಮಾಪಕರಾದ ನವೀನ್‌ ಮತ್ತು ಮಂಜುನಾಥ್‌, ಚಿತ್ರದ ಬಗ್ಗೆ ಮತ್ತು ಚಿತ್ರದ ಬಿಡುಗಡೆಯ ಬಗ್ಗೆ ಮಾತನಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next