Advertisement

ರಮೇಶ ರಾಜೀನಾಮೆ ನಿಭಾಯಿಸುವಶಕ್ತಿ ಕೈ-ದಳ ನಾಯಕರಿಗೆ ಇದೆ: ಸತೀಶ

11:29 AM May 12, 2019 | Team Udayavani |

ಹುಬ್ಬಳ್ಳಿ: ಮಾಜಿ ಸಚಿವ ರಮೇಶ ಜಾರಕಿಹೊಳಿ ಪಕ್ಷ ಬಿಡುವ ವಿಚಾರ ಅವರಿಗೆ ಬಿಟ್ಟಿದ್ದು, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಇಂತಹ ಹೇಳಿಕೆಗಳನ್ನು ಕಳೆದ ಒಂದು ವರ್ಷದಿಂದ ಕೇಳುತ್ತಿದ್ದೇವೆ. ಒಂದು ವೇಳೆ ರಾಜೀನಾಮೆ ನೀಡಿದರೂ ನಿಭಾಯಿಸುವ ಶಕ್ತಿ ಕಾಂಗ್ರೆಸ್‌-ಜೆಡಿಎಸ್‌ಗೆ ಇದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಕೊಡುತ್ತಾರೆ ಎಂದು ಹೇಳಲು ಆರಂಭಿಸಿ ಒಂದು ವರ್ಷವಾಯಿತು. ಒಂದು ವೇಳೆ ರಾಜೀನಾಮೆ ಕೊಟ್ಟರೆ ಅದನ್ನು ನಿಭಾಯಿಸುವ ಶಕ್ತಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ನಾಯಕರಿಗಿದೆ. ರಮೇಶ ಜಾರಕಿಹೊಳಿ ಪಕ್ಷ ಬಿಡುತ್ತಾರೋ ಇಲ್ಲವೋ ಎಂಬುದಕ್ಕೆ ಅವರಿಂದ ಉತ್ತರ ಪಡೆದರೆ ಸೂಕ್ತ. ಅದು ನನಗೆ ಸಂಬಂಧಿಸಿದ್ದಲ್ಲ. ಬಿಜೆಪಿಯವರು ಮಾಧ್ಯಮದವರನ್ನು ಕಂಡರೆ ಬಾಯಿಗೆ ಬಂದಂತೆ ಸುಳ್ಳು ಮಾತನಾಡುತ್ತಿದ್ದಾರೆ. ಸರ್ಕಾರ ಬೀಳುತ್ತದೆ ಎಂದು ಹೇಳಲು ಆರಂಭಿಸಿ ಒಂದು ವರ್ಷ ಕಳೆಯುತ್ತಿದೆ. ಒಂದೊಂದು ಕಾರಣದಿಂದ ಪಕ್ಷದಲ್ಲಿನ 80 ಶಾಸಕರು ಅಸಮಧಾನಗೊಂಡಿದ್ದಾರೆ. ಆದರೆ ಯಾರೂ ಪಕ್ಷ ತೊರೆಯುವ ಕುರಿತು ಮಾತನಾಡಿಲ್ಲ. ಇದಕ್ಕೆ ಹೆಚ್ಚಿನ ಒತ್ತು ಕೊಡುವ ಅಗತ್ಯವಿಲ್ಲ. ಚುನಾವಣೆಯಲ್ಲಿ ಎಲ್ಲ ಪಕ್ಷದವರು ಹಣ ಖರ್ಚು ಮಾಡುತ್ತಾರೆ. ದೇಶದಲ್ಲಿ ನಮಗಿಂತ ಹೆಚ್ಚು ಹಣ ಹಂಚಿದ ಪ್ರಶಸ್ತಿ ಬಿಜೆಪಿಯವರಿಗೆ ಕೊಡಬೇಕು. ಅವರೇ ನಂಬರ್‌ ಒನ್‌ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎನ್ನುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಈ ರೀತಿ ಮಾತನಾಡಬಾರದು ಎಂದು ರಾಜ್ಯಾಧ್ಯಕ್ಷರು ಸೂಚನೆ ಕೊಟ್ಟಿದ್ದಾರೆ. ಆದರೂ ಕೆಲವರು ಹೇಳಿದರೆ ಅದನ್ನು ವೈಯಕ್ತಿಕ ಅಭಿಪ್ರಾಯ ಎಂದು ಪರಿಗಣಿಸಬೇಕಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಇಂತಹ ಹೇಳಿಕೆಗಳನ್ನು ಕೊಡಬಾರದು. ಕುಂದಗೋಳ ಉಪ ಚುನಾವಣೆಯಲ್ಲಿ ಜೆಡಿಎಸ್‌ ನಾಯಕರು, ಕಾರ್ಯಕರ್ತರು ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ ಎಂದರು.

ಕುಂದಗೋಳದಿಂದಲೇ ನ್ಯಾಯಯೋಜನೆ ಶುರು: ಶಿವಕುಮಾರ
ಹುಬ್ಬಳ್ಳಿ: ಯುವಕರನ್ನು ನಿರ್ಲಕ್ಷಿಸಿದರೆ ಯಾವ ಪಕ್ಷವೂ ಅಧಿಕಾರ ನಡೆಸಲು ಸಾಧ್ಯವಿಲ್ಲ. ಕಾಂಗ್ರೆಸ್‌ನಲ್ಲಿ ಯುವಕರಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಲಾಗುತ್ತಿದೆ ಎಂದು ಸಚಿವ ಡಿ.ಕೆ.ಶಿವಕುಮಾರ ಹೇಳಿದರು. ಶನಿವಾರ ಕುಂದಗೋಳದ ಪಕ್ಷದ ಪ್ರಚಾರ ಕಚೇರಿಯಲ್ಲಿ ವಿವಿಧ ಮಂಡಳಿಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಶೇ.63ರಷ್ಟು ಯುವ ಜನತೆಯಿದೆ. ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಕೆಲಸ ಕಾಂಗ್ರೆಸ್‌ನಿಂದ ನಡೆಯುತ್ತಿದೆ. ಕಾಂಗ್ರೆಸ್‌ ಪಕ್ಷದ ಸಿದ್ಧಾಂತ, ಅಭಿವೃದ್ಧಿ ಪರಿಕಲ್ಪನೆಗೆ ಯುವಕರು ನಮ್ಮ ಪಕ್ಷದತ್ತ ಒಲವು ತೋರುತ್ತಿದ್ದಾರೆ. ರಾಹುಲ್ ಗಾಂಧಿ ಘೋಷಿಸಿರುವ ನ್ಯಾಯ ಯೋಜನೆ ಅನುಷ್ಠಾನ ಈ ಕ್ಷೇತ್ರದಿಂದ ಆರಂಭಿಸುವ ಮೂಲಕ ಇಲ್ಲಿನ ಜನರ ಋಣ ತೀರಿಸುವ ಕೆಲಸ ನಾನು ಮಾಡುತ್ತೇನೆ. ದೇಶಕ್ಕೆ ಪ್ರಾಣ ನೀಡಿದ ಪಕ್ಷದ ನಮ್ಮದು ಎಂದರು.

ನನ್ನ ಬಳಿ ಹಣ ಇದ್ದರೆ ಶೋಭಾ ಅಕ್ಕನ ಬ್ಯಾಗ್‌ನಲ್ಲಿ ಇಟ್ಟು ಕಳಿಸುವೆ. ಯಡಿಯೂರಪ್ಪ ಅವರೊಂದಿಗೆ ಕೇವಲ 22 ಅಲ್ಲ 222 ಶಾಸಕರು ಸಂಪರ್ಕದಲ್ಲಿದ್ದಾರೆ. ಈಶ್ವರಪ್ಪ ಅವರಿಗೆ ನನ್ನನ್ನು ಕಂಡರೆ ಬಹಳ ಪ್ರೀತಿ.
•ಡಿ.ಕೆ.ಶಿವಕುಮಾರ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next