Advertisement

ಸಿಡಿ ಪ್ರಕರಣ ಶೀಘ್ರ ಇತ್ಯರ್ಥವಾಗಲಿ

11:42 PM Mar 11, 2021 | Team Udayavani |

ರಾಜ್ಯ ಮತ್ತು ರಾಷ್ಟ್ರ  ಮಟ್ಟದಲ್ಲಿ  ತಲ್ಲಣ ಉಂಟು ಮಾಡಿರುವ ಸಿಡಿ ಪ್ರಕರಣ ಈಚೆಗೆ ರಾಜಕೀಯ ಮತ್ತು ರಾಜಕಾರಣಿಗಳ ಬಗ್ಗೆ ಸಮಾಜದಲ್ಲಿ ಅಸಹ್ಯ ಹುಟ್ಟಿಸುವಂತೆ ಮಾಡಿರುವುದಂತೂ ಸತ್ಯ. ಹಲವು ತಿರುವುಗಳನ್ನು ಪಡೆದುಕೊಂಡ ಪ್ರಕರಣ ಈಗ ತನಿಖೆಯ ಮಟ್ಟಕ್ಕೆ ಮುಟ್ಟಿದೆ.

Advertisement

ಗೌರವಯುತ ಸಮಾಜದಲ್ಲಿ  ಸಾರ್ವಜನಿಕ ಜೀವನದಲ್ಲಿ ಇರುವವರು ಹೇಗೆ ನಡೆದುಕೊಂಡರೂ ಅದು ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಅಶ್ಲೀಲ ವೀಡಿಯೋ ಪ್ರಕರಣ ಹಾಗೂ ಇನ್ನಷ್ಟು ಸಿಡಿಗಳಿವೆ ಎಂಬ ಬೆದರಿಕೆಗಳನ್ನು ಗಮನಿಸುತ್ತಾ ಹೋದರೆ, ನಮ್ಮ ಸಾರ್ವಜನಿಕ ಜೀವನ ತಳ ಮುಟ್ಟಿದೆ ಎಂದು ಹೇಳಲೇಬೇಕಾಗುತ್ತದೆ. ಇಡೀ ದೇಶದಲ್ಲಿ ಕರ್ನಾಟಕದ ರಾಜಕಾರಣಿಗಳು ಹಾಗೂ ರಾಜಕೀಯ ನಡೆಗಳು ಎಂದಿಗೂ ಆದರ್ಶವಾದುದು ಎಂಬ ಹೆಗ್ಗಳಿಕೆ ಪಡೆದಿತ್ತು. ಇತಿಹಾಸದಲ್ಲಿ ಕರ್ನಾಟಕದ ರಾಜಕಾರಣ ಘನತೆ ತಪ್ಪಿ ಹೆಜ್ಜೆ ಹಾಕಿದ ಪ್ರಸಂಗಗಳು ಭಾರೀ ಅಪರೂಪ. ಆದರೆ ಇಂಥ ಪ್ರಕರಣಗಳು ರಾಜ್ಯದ ಘನತೆಯನ್ನು ಮೂರಾಬಟ್ಟೆ ಮಾಡಿದೆ.

ಈ ಸಿಡಿ ಸಂಪೂರ್ಣ ನಕಲಿಯಾಗಿದೆ ಎಂದು ಪ್ರಕರಣದಲ್ಲಿ ಆರೋಪ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ರಮೇಶ್‌ ಜಾರಕಿಹೊಳಿ ಬಹಿರಂಗವಾಗಿಯೇ ಹೇಳಿದ್ದಾರೆ. ಒಬ್ಬ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ ಹೆಣ್ಣಿನ ಅಸಹಾಯಕತೆಯನ್ನು ಬಳಸಿಕೊಂಡು ದುರುಪಯೋಗ ಪಡಿಸಿಕೊಳ್ಳುವುದು ಎಷ್ಟು ಅಪರಾಧವೋ, ಒಬ್ಬ ವ್ಯಕ್ತಿಯನ್ನು ರಾಜಕೀಯವಾಗಿ ತೆರೆಗೆ ಸರಿಸಲು ಅವರ ವಿರುದ್ಧ ಷಡ್ಯಂತ್ರ ರೂಪಿಸಿ ಬಲಿಪಶು ಮಾಡುವುದೂ ಕೂಡ ಅಷ್ಟೇ ಗಂಭೀರ ಅಪರಾಧವಾಗುತ್ತದೆ. ಈಗ ಬಿಡುಗಡೆಯಾಗಿರುವ ವೀಡಿಯೋ ಪ್ರಕರಣದ ತನಿಖೆಗೆ ರಾಜ್ಯ ಸರಕಾರ ಎಸ್‌ಐಟಿ ರಚನೆ ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಈ ಪ್ರಕರಣವನ್ನು ಸರಕಾರ ಎರಡು ಆಯಾಮಗಳಲ್ಲಿ ತನಿಖೆ ನಡೆಸುವ ಅಗತ್ಯವಿದ್ದು, ಅಧಿಕಾರದಾಸೆ ತೋರಿಸಿ ಮಹಿಳೆಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆನ್ನುವ ಆರೋಪ ಹಾಗೂ ರಾಜಕೀಯವಾಗಿ ತೇಜೋವಧೆ ಮಾಡಲು ಷಡ್ಯಂತ್ರ ಮಾಡಿ ನಕಲಿ ಸಿಡಿ ಸೃಷ್ಟಿಸಲಾಗಿದೆ ಎನ್ನುವ ಆರೋಪ. ಎರಡೂ ಬೆಳವಣಿಗೆಗಳು ಅನೈತಿಕತೆಯನ್ನೇ ಬಿಂಬಿಸುತ್ತವೆ.

ಈ ರೀತಿಯ ಪ್ರಕರಣಗಳಲ್ಲಿ  ಪ್ರಾಮಾಣಿಕ ತನಿಖೆಯಾಗಿ ಆದಷ್ಟು ಶೀಘ್ರ ಸತ್ಯಾಂಶ ಹೊರಬರಬೇಕಿದೆ.  ಸಿಡಿ ಪ್ರಕರಣದಿಂದ ರಾಜಕೀಯ ವ್ಯವಸ್ಥೆ ಹಾಗೂ ರಾಜಕಾರಣಿಗಳ ಬಗ್ಗೆ  ಜನರಿಗಿರುವ ಕೀಳು ಭಾವನೆ ಯನ್ನು ಹೊಡೆದೋಡಿಸಲು ಈ ತನಿಖೆ ಅತ್ಯಂತ ಮಹತ್ವದ್ದಾಗಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಕೊಡಿಸುವ ಕೆಲಸ ಮಾಡಿದರೆ, ಅಧಿಕಾರಸ್ಥರು ಅಧಿಕಾರದ ದುರುಪಯೋಗ ಪಡಿಸಿಕೊಳ್ಳುವುದು ಹಾಗೂ ಅಧಿಕಾರದಲ್ಲಿರುವವರ ವಿರುದ್ಧ  ತೇಜೋವಧೆ ಮಾಡಲು ಅನೈತಿಕ ರೀತಿಯಲ್ಲಿ ಷಡ್ಯಂತ್ರ ಮಾಡುವುದಕ್ಕೆ ಪಾಠ ಕಲಿಸಿದಂತಾ

ಗುತ್ತದೆ. ಅಲ್ಲದೇ, ಆಗಿರುವ ಬೆಳವಣಿಗೆ ಬಗ್ಗೆ ಸಾರ್ವಜನಿಕರಲ್ಲಿರುವ ಕುತೂಹಲ, ಗೊಂದಲ, ಅನುಮಾನಗಳಿಗೆ ಉತ್ತರ ಸಿಕ್ಕಂತಾಗುತ್ತದೆ.  ಜತೆ ಜತೆಗೆ ಖಾಸಗಿ ವಿಚಾರಗಳನ್ನು ಮುನ್ನೆಲೆಗೆ ತಂದು ರಾಜಕಾರಣದ ಬೇಳೆ ಬೇಯಿಸಿಕೊಳ್ಳುವ ಬ್ಲಾಕ್‌ವೆುàಲ್‌ ಪ್ರವೃತ್ತಿಗೂ ಕಡಿವಾಣ ಹಾಕುವುದು ಈಗಿನ ತುರ್ತು ಅಗತ್ಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next