ಬೆಂಗಳೂರು: “ಸಮ್ಮಿಶ್ರ ಸರ್ಕಾರದಲ್ಲಿ ತಮ್ಮ ಯಾವುದೇ ಮಾತುಗಳಿಗೂ ಬೆಲೆ ಸಿಗುತ್ತಿಲ್ಲ. ತಾವು ಕಳುಹಿಸುವ ಕಡತಗಳಿಗೆ ಮುಖ್ಯಮಂತ್ರಿ ಬೆಲೆ ಕೊಡುತ್ತಿಲ್ಲ. ನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ವಿಷಯದಲ್ಲೂ ಮುಖ್ಯಮಂತ್ರಿ ಏಕ ಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಸಚಿವ ರಮೇಶ್ ಜಾರಕಿಹೊಳಿ ಡಿಸಿಎಂ ಪರಮೇಶ್ವರ್ ಎದುರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆಂದು ತಿಳಿದು ಬಂದಿದೆ.
ಮಂಗಳವಾರ ಪರಮೇಶ್ವರ್ ನಿವಾಸದಲ್ಲಿ ದಿನೇಶ್ಗುಂಡೂರಾವ್ ಸಮ್ಮುಖದಲ್ಲಿ ನಡೆದ ಮಾತುಕತೆ ಸಂದರ್ಭದಲ್ಲಿ, ನಾನು ಸಚಿವನಾ ದರೂ ನನ್ನ ಜಿಲ್ಲೆಗೆ ಸಂಬಂಧಿಸಿದ ಯಾವುದೇ ನಿರ್ಧಾರಗಳಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ. ಶಾಸಕ ಬಿ.ಸಿ. ಪಾಟೀಲ್ ಕೂಡ ಕಾಂಗ್ರೆಸ್ ನಾಯಕರ ವಿರುದಟಛಿ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆಪರೇಶನ್ ಕಮಲ ಮಾಡಲು ಮುಂದಾಗಿದ್ದಾಗ ಆಡಿಯೋ ಸಮೇತ ದಾಖಲೆ ನೀಡಿ ಪಕ್ಷ ನಿಷ್ಠೆ ತೋರಿದರೂ, ಯಾವುದಕ್ಕೂ ಪರಿಗಣಿಸದೇ
ಇದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಆದರೆ, ಸೆ. 3ನೇ ವಾರದಲ್ಲಿ ಸಂಪುಟ ವಿಸ್ತರಣೆ, ನಿಗಮ ಮಂಡಳಿ ಅಧ್ಯಕ್ಷರ ನೇಮಕದ ಸಂದರ್ಭದಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಪರಮೇಶ್ವರ್ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.
ಪರಮೇಶ್ವರ್-ದಿನೇಶ್ಗುಂಡೂರಾವ್ ಜತೆ ಮಾತುಕತೆ ನಂತರ ರಮೇಶ್ ಜಾರಕಿ ಹೊಳಿ ಹಲವು ಶಾಸಕರ ಜತೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿದರು. ಸೆವೆನ್ ಮಿನಿಸ್ಟರ್ ಕ್ವಾಟರ್ಸ್ನಲ್ಲಿ ಅವರಿಗೆ ನೀಡಿರುವ ಸರ್ಕಾರಿ ಬಂಗಲೆ ಮಂಗಳವಾರ ಸಂಪೂರ್ಣ ರಾಜಕೀಯ ಚಟುವಟಿಕೆಯ ತಾಣವಾಗಿತ್ತು. ಬಿಜೆಪಿಯ ರಾಮದುರ್ಗ ಶಾಸಕ ಮಹದೇವಪ್ಪ ಯಾದವಾಡ್ ರಮೇಶ್ ಜಾರಕಿ ಹೊಳಿ ನಿವಾಸಕ್ಕೆ ಭೇಟಿ ನೀಡಿದ್ದು ಕುತೂಹಲ ಮೂಡಿಸಿತ್ತು.
ಮಾಜಿ ಶಾಸಕರ ಭೇಟಿ: ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಬಂದ ಹಿನ್ನೆಲೆ ಯಲ್ಲಿ ತಮ್ಮ ಕ್ಷೇತ್ರಗಳ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಬದಲಾಯಿಸಲು ಹಾಗೂ ಆಗಿರುವ ಬದಲಾವಣೆಯನ್ನು ಸರಿಪಡಿಸಲು ಪೌರಾಡಳಿತ ಸಚಿವರಾಗಿರುವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಮಾಜಿ ಶಾಸಕರು ಭೇಟಿ ನೀಡಿ ಚರ್ಚೆ ನಡೆಸಿದರು. ಈ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸರಿಪಡಿಸುವುದಾಗಿ ರಮೇಶ್ ಜಾರಕಿಹೊಳಿ ಭರವಸೆ ನೀಡಿದ್ದರು ಎಂದು ತಿಳಿದು ಬಂದಿದೆ.