Advertisement

ಆತ್ಮಹತ್ಯೆಗೆ ಮುನ್ನ ರಮೇಶ್‌ ಡೆತ್‌ನೋಟ್‌

12:56 AM Oct 13, 2019 | Lakshmi GovindaRaju |

ಬೆಂಗಳೂರು: “ಮೊನ್ನೆ ನನ್ನ ಮನೆಯಲ್ಲಿ ನಡೆದ ಐಟಿ ದಾಳಿಯಿಂದ ನಾನು ದಿಗ್ಬ್ರಾಂತನಾಗಿದ್ದೇನೆ. ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಆತ್ಮಹತ್ಯೆಗೆ ಶರಣಾದ ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌ ಆಪ್ತ ಸಹಾಯಕ ರಮೇಶ್‌ ಡೆತ್‌ನೋಟ್‌ ಬರೆದಿಟ್ಟಿದ್ದಾರೆ.

Advertisement

ಜ್ಞಾನಭಾರತಿ ಆವರಣದಲ್ಲಿ ಪತ್ತೆಯಾದ ರಮೇಶ್‌ ಕಾರಿನಲ್ಲಿ ಸಿಕ್ಕಿರುವ ಡೆತ್‌ನೋಟ್‌ನಲ್ಲಿ, “ಮೊನ್ನೆ ನನ್ನ ಮನೆಯಲ್ಲಿ ನಡೆದ ಐಟಿ ದಾಳಿಯಿಂದ ನಾನು ದಿಗ್ಬ್ರಾಂತನಾಗಿದ್ದೇನೆ. ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಬಡವರು ಬಡವರಾಗಿಯೇ ಉಳಿಯಬೇಕೆಂಬ ಸಂಸ್ಕೃತಿಯಿಂದ ತುಂಬಾ ಬೇಜಾರಾಗಿದ್ದೇನೆ. ಐಟಿ ಅಧಿಕಾರಿಗಳೇ ನನ್ನ ಹೆಂಡತಿ, ಮಕ್ಕಳಿಗೆ ತೊಂದರೆ ಕೊಡಬೇಡಿ’ ಎಂದು ಮನವಿ ಮಾಡಿದ್ದಾರೆ.

ಸೌಮ್ಯ(ಪತ್ನಿ) ನನ್ನನ್ನು ಕ್ಷಮಿಸು, ಮಕ್ಕಳನ್ನು ಚೆನ್ನಾಗಿ ನೋಡಿಕೋ, ಲಕ್ಷ್ಮೀದೇವಿ, ಪದ್ಮಾ(ಸಹೋದರಿಯರು), ಸತೀಶ(ಸಹೋದರ) ನಿಮ್ಮೊಂದಿಗೆ ಹುಟ್ಟಿ ನಿಮಗೆ ಸಹಾಯ ಮಾಡಬೇಕೆಂಬ ನನ್ನ ಆಸೆ ಇಂದಿಗೆ ಕಮರಿದೆ. ನನ್ನ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿರುವ ವಿದ್ಯಾಸಂಸ್ಥೆಗೆ ಕೃತಜ್ಞನಾಗಿದ್ದೇನೆ. ಚಿಕ್ಕ ವಯಸ್ಸಿನಲ್ಲಿ ನಿಮ್ಮನ್ನು ಸಾಕಬೇಕಿದ್ದ ನಾನು ಹೋಗುತ್ತಿದ್ದೇನೆ ಕ್ಷಮಿಸಿ. ಎಂದು ತಮ್ಮ ಕುಟುಂಬಸ್ಥರಿಗೆ ಧನ್ಯವಾದ ಹಾಗೂ ಕ್ಷಮೆ ಕೋರಿದ್ದಾರೆ.

ಇನ್ನು ಪತ್ನಿ ಸೌಮ್ಯ ಬಳಿಯೂ ರಮೇಶ್‌ ಐಟಿ ಅಧಿಕಾರಿಗಳ ವಿಚಾರಣೆ ಬಗ್ಗೆ ಹೇಳಿಕೊಂಡಿದ್ದರು. ಈ ಕುರಿತು ಮಾಧ್ಯಮ ಪ್ರತಿಕ್ರಿಯೆ ನೀಡಿದ ಪತ್ನಿ ಸೌಮ್ಯ, ಇಷ್ಟೊಂದು ತೊಂದರೆ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಇದು ನನ್ನ ಮರ್ಯಾದೆ ವಿಷಯ. ಕರ್ನಾಟಕದಲ್ಲಿ ಎಲ್ಲ ಶಾಸಕರು, ಸಚಿವರು ಗೊತ್ತು. ಮರ್ಯಾದೆಗೋಸ್ಕರ ಬದುಕಿದ್ದೇನೆ ಎಂದು ಹೇಳಿಕೊಂಡಿದ್ದರು. ಬೆಳಗ್ಗೆ ಸಾಹೇಬ್ರ ಮನೆಗೆ ಹೋಗುತ್ತೇನೆ ಎಂದು ಹೋದರು. ಬಳಿಕ ಫೋನ್‌ ಮಾಡಿದಾಗ ಸ್ವಿಚ್‌ ಆಫ್ ಆಗಿತ್ತು ಎಂದು ಹೇಳಿದರು.

ಐಟಿ ಅಧಿಕಾರಿಗಳೇ ಕಾರಣ: ರಮೇಶ್‌ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಕಿರುಕುಳವೆ ಕಾರಣ. ಸಹೋದರ ರಮೇಶ್‌ರನ್ನು ಕರೆದೊಯ್ದು ಮಾನಸಿಕ ಹಿಂಸೆ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸಹೋದರ ಸತೀಶ್‌ ಗಂಭೀರ ಆರೋಪ ಮಾಡಿದರು. ಅಲ್ಲದೇ, ಪ್ರಕರಣದ ಸಂಬಂಧ ಜ್ಞಾನಭಾರತಿ ಠಾಣೆ ಪೊಲೀಸರ ಹೇಳಿಕೆಯಲ್ಲಿಯೂ ರಮೇಶ್‌ ಸಾವಿಗೆ ಐಟಿ ಅಧಿಕಾರಿಗಳೇ ಹೊಣೆ ಎಂದು ಆರೋಪಿಸಿದ್ದಾರೆ ಎಂದು ಪೊಲೀಸರು ಹೇಳಿದರು.

Advertisement

ಗಣ್ಯರ ಭೇಟಿ: ವಿಷಯ ತಿಳಿದು ಸ್ಥಳಕ್ಕೆ ಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಮಾಜಿ ಸಚಿವೆ ಉಮಾಶ್ರೀ, ಮಾಜಿ ಸಂಸದ ಉಗ್ರಪ್ಪ ಭೇಟಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಇದೇ ವೇಳೆ ರಮೇಶ್‌ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆಯಾಗಬೇಕು ಎಂದು ನಾಯಕರಿಗೆ ಮೃತನ ಕುಟುಂಬಸ್ಥರು ಒತ್ತಾಯಿಸಿದರು.

ಪರಮೇಶ್ವರ್‌ ಎದುರು ಅಳಲು: ಘಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ರಮೇಶ್‌ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು. ಈ ವೇಳೆ ಪತ್ನಿ ಸೌಮ್ಯ, ಪತಿ ರಮೇಶ್‌ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಐಟಿ ಅಧಿಕಾರಿಗಳು ಯಾಕೆ ನಮಗೆ ಈ ರೀತಿ ತೊಂದರೆ ಕೊಟ್ಟರು. ನಮ್ಮ ಕುಟುಂಬ ನೋಡಿಕೊಳ್ಳುವವರು ಯಾರು? ಎಂದು ಪ್ರಶ್ನಿಸಿದರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್‌, ರಮೇಶ್‌ಗೆ ಧೈರ್ಯ ಹೇಳಿ ಸಮಾಧಾನ ಮಾಡಿ ಕಳುಹಿಸಿದ್ದೆ. ಆತ ಹೀಗೆ ಯಾಕೆ ಮಾಡಿಕೊಂಡನೋ ಗೊತ್ತಿಲ್ಲ. ನಮ್ಮ ಮನೆಯಲ್ಲೇ ಐಟಿ ಅಧಿಕಾರಿಗಳು ರಮೇಶ್‌ರನ್ನು ವಿಚಾರಣೆ ನಡೆಸಿದರರು. ಆತನಿಗೆ ಏನು ಪ್ರಶ್ನೆ ಕೇಳಿದರು ಎಂದು ಗೊತ್ತಿಲ್ಲ. ಆತ ಈ ರೀತಿ ಮಾಡಿಕೊಂಡಿರುವುದು ಬೇಸರ ತಂದಿದೆ ಎಂದು ಹೇಳಿದರು.

ಕುಟುಂಬಸ್ಥರ ಆಕ್ರಂದನ: ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ರಮೇಶ್‌ ಕಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಬಳಿಕ ಕಾಂಗ್ರೆಸ್‌ ನಾಯಕರು ಆಗಮಿಸಿ ಸಮಾಧಾನ ಪಡಿಸಲು ಯತ್ನಿಸಿದರು.

ಬೆಳಗ್ಗೆ 9 ಗಂಟೆ ಸುಮಾರಿಗೆ ಸ್ನೇಹಿತರ ಜತೆ ಮಾತನಾಡುವಾಗ ಆತ್ಮಹತ್ಯೆ ಬಗ್ಗೆ ರಮೇಶ್‌ ಹೇಳಿಕೊಂಡಿದ್ದಾರೆ. ಕೂಡಲೇ ನಮಗೆ ಮಾಹಿತಿ ಬಂದಿತ್ತು. ಮೊಬೈಲ್‌ ಲೋಕೇಶನ್‌ ಆಧರಿಸಿ ಜ್ಞಾನಭಾರತಿ ಆವರಣದಲ್ಲಿ ಹುಡುಕಾಟ ನಡೆಸಿದಾಗ ಅರಣ್ಯ ಪ್ರದೇಶದಲ್ಲಿ ರಮೇಶ್‌ ಮೃತ ದೇಹ ಪತ್ತೆಯಾಗಿದೆ. ಬಳಿಕ ಕುಟುಂಬ ಸದಸ್ಯರನ್ನು ಕರೆಸಿ ಗುರುತು ಪತ್ತೆ ಮಾಡಲಾಯಿತು. ಈ ಸಂಬಂಧ ಕುಟುಂಬ ಸದಸ್ಯರು ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.
-ಬಿ.ರಮೇಶ್‌, ಡಿಸಿಪಿ ಪೂರ್ವ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next