Advertisement

Bhairadevi; ಈ ಚಿತ್ನ ನನಗೆ ಆಪ್ತಮಿತ್ರ ನೆನಪಿಸಿತು…: ರಮೇಶ್‌ ಅರವಿಂದ್‌

06:19 PM Sep 27, 2024 | Team Udayavani |

“ಟ್ರೇಲರ್‌ ನೋಡಿದಾಗ ನನಗೆ ಆಪ್ತಮಿತ್ರ ಚಿತ್ರ ಮತ್ತೆ ನೆನಪಾ ಯಿತು…’ – ಹೀಗೆ ಹೇಳಿದರು ನಟ ರಮೇಶ್‌ ಅರವಿಂದ್‌. ಅವರು ಹೇಳಿದ್ದು “ಭೈರಾದೇವಿ’ ಚಿತ್ರದ ಬಗ್ಗೆ.

Advertisement

ರಾಧಿಕಾ ಕುಮಾರಸ್ವಾಮಿ ಮುಖ್ಯ ಭೂಮಿಕೆ ಯಲ್ಲಿ ನಟಿಸಿರುವ ಈ ಚಿತ್ರ ಅಕ್ಟೋಬರ್‌ 3ರಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ರಮೇಶ್‌ ಅರವಿಂದ್‌ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಟ್ರೇಲರ್‌ ರಿಲೀಸ್‌ ವೇಳೆ ರಮೇಶ್‌ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.

“ಭೈರಾದೇವಿ ಟ್ರೇಲರ್‌ ನೋಡಿದಾಗ ನನಗೆ “ಆಪ್ತಮಿತ್ರ’ ಚಿತ್ರ ಮತ್ತೆ ಮತ್ತೆ ಕಾಡಿತು. ಮುಖ್ಯವಾಗಿ ರಾಧಿಕಾ ಅವರನ್ನು ಕಾಳಿ ಮೇಕಪ್‌ ನಲ್ಲಿ ನೋಡಿದಾಗ, “ಮೇಡಂ ಪ್ಲೀಸ್‌ ಮೇಕಪ್‌ ತೆಗೆದು ಬನ್ನಿ’ ಎಂದು ಹೇಳಿದೆ. “ಆಪ್ತಮಿತ್ರ’ ಚಿತ್ರದಲ್ಲೂ ಸೌಂದರ್ಯ ಅವರಿಗೂ ಹೀಗೆ ಹೇಳಿದ್ದೆ. ಕ್ಲೈಮ್ಯಾಕ್ಸ್‌ನಲ್ಲಿ ನಾಗವಲ್ಲಿ ಭಾಗದ ಚಿತ್ರೀಕರಣ ಮುಗಿಸಿ ಬಂದಾಗ, ಸೌಂದರ್ಯ ಅವರನ್ನು ನೋಡೋಕೆ ಭಯವಾಗುತ್ತಿತ್ತು. ಮೇಕಪ್‌ ತೆಗೆದು ಬನ್ನಿ ಆಮೇಲೆ ಮಾತಾಡೋಣ ಎಂದು ಹೇಳಿದ್ದೆ. ಆ ತರಹದ ಒಂದು ಶಕ್ತಿ ಕೆಲವು ಪಾತ್ರಗಳಿಗೆ ಇರುತ್ತದೆ. ಪೋಸ್ಟರ್‌ನಲ್ಲಿ ರಾಧಿಕಾ ಅವರ ಕಣ್ಣುಗಳನ್ನು ನೋಡಿ, ಈಗಿರುವುದಕ್ಕಿಂತ ಡಬ್ಬಲ್‌ ಆಗಿದೆ. ಈ ಚಿತ್ರದಲ್ಲಿ ಅವರು ನಾಯಕಿ ಹಾಗೂ ನಿರ್ಮಾಪಕಿ. ನಾಯಕಿಯಾಗಿ ಅವರ ನೃತ್ಯ, ನಟನೆ ಮೆಚ್ಚಿದ್ದೇವೆ. ನಿರ್ಮಾಪಕಿಯಾಗಿ ಅವರು ಬಹಳ ಚೆನ್ನಾಗಿ ಚಿತ್ರ ನಿರ್ಮಿಸಿದ್ದಾರೆ’ ಎನ್ನುತ್ತಾರೆ ರಮೇಶ್‌.

ತಮ್ಮ ಪಾತ್ರದ ಬಗ್ಗೆ ಮಾತನಾಡುವ ರಮೇಶ್‌, “ನಾನು ಈ ಚಿತ್ರದಲ್ಲಿ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ರೌಡಿ, ಡಾನ್‌ ಯಾರನ್ನು ಬೇಕಾದರೂ ಹಿಡಿದು ಒಳಗೆ ಹಾಕುತ್ತಿರುತ್ತಾನೆ. ಯಾವ ವೈರಿಯನ್ನಾದರೂ ನಿಯಂತ್ರಣಕ್ಕೆ ತೆಗೆದು ಕೊಳ್ಳುತ್ತಾನೆ. ಆದರೆ, ಈ ಚಿತ್ರದಲ್ಲಿರುವ ವೈರಿ ಈ ಲೋಕದಲ್ಲಿ ರುವವರೇ ಅಲ್ಲ. ಬೇರೆ ಲೋಕದಿಂದ ಬಂದ ಒಂದು ಶಕ್ತಿಯ ವಿರುದ್ಧ ಹೋರಾಡಬೇಕು. ಆಗ ಆ ಪೊಲೀಸ್‌ ಅಧಿಕಾರಿ ಏನು ಮಾಡುತ್ತಾನೆ ಎನ್ನುವುದು ಕಥೆ. ಈ ಟ್ರೇಲರ್‌ ನೋಡಿದಾಗ, ನಾನೇ ಮಾಡಿದ ಇನ್ನೊಂದು ಚಿತ್ರ ನೆನಪಿಗೆ ಬರುತ್ತಿದೆ. “ಆಪ್ತಮಿತ್ರ’ ಚಿತ್ರದಲ್ಲಿ ನಮ್ಮ ಮನೆಯಲ್ಲೊಂದು ಸಮಸ್ಯೆ ಇರುತ್ತದೆ. ಆಗ ಅವಿನಾಶ್‌ ಅವರು ಬಂದು ಇಲ್ಲಿ ಏನೋ ಸಮಸ್ಯೆ ಇದೆ ಎಂದು ಹೇಳುತ್ತಾರೆ. ಅದೇ ರೀತಿ, ಈ ಚಿತ್ರದಲ್ಲಿ ಇನ್ನೊಂದು ಸಮಸ್ಯೆ ಎದುರಿಸತ್ತಾ ಇರುತ್ತೀನಿ. ಅದನ್ನು ಪರಿಹರಿಸೋಕೆ “ಭೈರಾದೇವಿ’ ಬರುತ್ತಾರಾ, ಇಲ್ಲವೋ ಎಂಬುದನ್ನು ಚಿತ್ರದಲಿ ನೋಡಬೇಕು’ ಎನ್ನುವುದು ರಮೇಶ್‌ ಅರವಿಂದ್‌ ಮಾತು.

Advertisement

Udayavani is now on Telegram. Click here to join our channel and stay updated with the latest news.

Next