Advertisement

ಗಮಕ ವಾಚನದ ಮೂಲ ರಾಮಾಯಣ: ರಾಮ ಪ್ರಸಾದ್‌

01:33 PM May 05, 2021 | Team Udayavani |

ದಕ್ಷಿಣ ಕ್ಯಾಲಿಫೋರ್ನಿಯಾ

Advertisement

ಸಾಹಿತ್ಯವನ್ನು ಸಂಗೀತದ ಮೂಲಕ ಪ್ರೇಕ್ಷಕರಿಗೆ ಮುಟ್ಟಿಸುವುದಕ್ಕೆ ಗಮಕ ಅಥವಾ ಕಾವ್ಯ ವಾಚನ ಎನ್ನಲಾಗುತ್ತದೆ. ಇದಕ್ಕೆ ಮೂಲ ವಾಲ್ಮೀಕಿ ರಾಮಾಯಣ ಎಂದು ಗಮಕ ವಾಚಕ ರಾಮ ಪ್ರಸಾದ್‌ ಕೆ.ವಿಯ ಹೇಳಿದರು.

ದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘದ ವತಿಯಿಂದ ನಿಮ್ಮಲ್ಲಿಗೆ ಕನ್ನಡ ಕೂಟ ಕಾರ್ಯಕ್ರಮದಲ್ಲಿ “ಗಮಕ ಕಲೆ- ಕಾವ್ಯ ವಾಚನ ಕರ್ನಾಟಕದ ಒಂದು ವಿಶಿಷ್ಟ ಕಲೆ’ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಯನ್ನು ಗುರುವಾರ ಅವರು ರಾಮನ ಸ್ತುತಿಯೊಂದಿಗೆ ಪ್ರಾರಂಭಿಸಿದರು.

ಏಳು ಕಾಂಡಗಳ ರಾಮಾಯಣವನ್ನು ರಚಿಸಿದ ವಾಲ್ಮೀಕಿಗಳು  ಲವಕುಶರಿಗೆ ಹೇಳಿಕೊಡುತ್ತಾರೆ. ಇದನ್ನು ಸರಿಯಾಗಿ ಕೇಳುವಂತೆ, ಸುಮಧುರ ಕಂಠದಲ್ಲಿ, ಸಂಗೀತದ ಅಂಶಗಳನ್ನು ಹೊಂದಿದ, ಬೇರೆಬೇರೆ ಭಾಗಗಳಿಂದ ಒಂದುಗೂಡಿದ, ವೀಣೆಯ ಪಕ್ಕ ವಾದ್ಯಕ್ಕೆ, ಲಯವನ್ನು ಸೇರಿಸಿ ಇದನ್ನು  ಹಾಡುವಂತೆ ಹೇಳಿಕೊಟ್ಟರು ಎಂದು ಅವರು ತಿಳಿಸಿದರು.

ಅಂದು ಆರಂಭವಾದ ಈ ಕಲೆ ಭಾರತದೆಲ್ಲೆಡೆ ವ್ಯಾಪಿಸಿರಬೇಕು. ಆದರೆ ಇವತ್ತು ಕರ್ನಾಟಕದಲ್ಲಿ ಬಿಟ್ಟು ಬೇರೆಲ್ಲೂ ಇದು ಅಷ್ಟು ಪ್ರಸಿದ್ಧವಾಗಿ ಬಳಕೆಯಲ್ಲಿಲ್ಲ. ಇದು ಸಾವಿರಾರು ವರ್ಷದಿಂದ ಕನ್ನಡ ನಾಡಿನಲ್ಲಿದ್ದು ಇಂದಿಗೂ ಬೆಳೆಯುತ್ತಲೇ ಇದೆ. ಇದಕ್ಕೆ ಸಾಕ್ಷಿ ಶಾಂತಿ ವರ್ಮನ ಶಾಸನದಲ್ಲಿ ಇದರ ಉಲ್ಲೇಖವಿದೆ ಎಂದು ತಿಳಿಸಿದರು.

Advertisement

ಸುಮಾರು 100- 150 ವರ್ಷಗಳ ಹಿಂದೆ ಮೈಸೂರು ಪ್ರಾಂತ್ಯದಲ್ಲಿ ಜೈಮಿನಿ ಭಾರತವನ್ನು ಓದಿ, ಅರ್ಥ ಮಾಡಿಕೊ ಳ್ಳುವುದು ವಿದ್ಯಾವಂತನ ಸೂಚಕವಾಗಿತ್ತು. ಇವತ್ತಿಗೂ ಕೂಡ ಹೊಸ ಕಾವ್ಯಗಳನ್ನು ಬರೆಯುವವರು ಇದ್ದಾರೆ ಎಂದರು.

ಹೊಸ ಕಾವ್ಯಗಳಲ್ಲಿ ಪ್ರೊ| ವಿ. ನರಹರಿ ಅವರು ದಶಾವತಾರ ಕಾವ್ಯದಲ್ಲಿ ಪೀಠಿಕೆಯಾಗಿ ಬರೆದಿರುವ ಗಮಕಿ ಹಾಡನ್ನು ಹಾಡಿದ ರಾಮ ಪ್ರಸಾದ್‌ ಬಳಿಕ ಅದರ ವಿವರಣೆಯನ್ನು ನೀಡಿದರು.

ಸಾಹಿತ್ಯ ರಸವೇ ಪ್ರಧಾನ

ಗಮಕ ಕೇಳುವಾಗ ಅದರ ಪದಗಳ ಅರ್ಥ ತನಾಗೇ ಆಗಬೇಕು. ಅದಕ್ಕೆ ಬೇರೆ ವಿಶ್ಲೇಷಣೆಯ ಅಗತ್ಯವಿರುವುದಿಲ್ಲ. ಇದುವೇ ಗಮಕ ಮತ್ತು ಶಾಸ್ತ್ರೀಯ ಸಂಗೀತಕ್ಕೆ ಇರುವ ವ್ಯತ್ಯಾಸ. ಗಮಕದಲ್ಲಿ ಸಂಗೀತ ಗೌಣ

ವಾಗಿದ್ದು,  ಸಾಹಿತ್ಯದ ರಸವೇ ಪ್ರಾಮುಖ್ಯ ವಾಗಿರುತ್ತದೆ. ಆದರೆ ಸಂಗೀತದಲ್ಲಿ ಸಾಹಿತ್ಯ ಗೌಣವಾಗಿದ್ದು ಸಂಗೀತವೇ ಪ್ರಧಾನ ವಾಗಿರುತ್ತದೆ ಎಂದು ವಿವರಿಸಿದರು.

ದೊಡ್ಡ ದೊಡ್ಡ ಕವಿಗಳು ಬಂದು ಹೋಗಿದ್ದಾರೆ. ಆದರೆ ನಮ್ಮಲ್ಲಿ ಏನು ಉಳಿದಿದೆಯೋ ಅದನ್ನು ಕೇಳಿ ಆನಂದಿಸುವ ಕೆಲಸವನ್ನು ಗಮಕ ಕಲೆ ಮಾಡುತ್ತಿದೆ. ಕಾವ್ಯ ವಾಚನದಲ್ಲಿ ಹೀಗೆ ಹಾಡಬೇಕು ಎಂಬ ನಿಯಮವಿಲ್ಲ. ಪಕ್ಕ ವಾದ್ಯದ ಅಗತ್ಯವೂ ಇರುವುದಿಲ್ಲ. ಇದು ಓದುವ ದಿನದ ಮನೋ ಧರ್ಮವನ್ನು ಅವಲಂಬಿಸಿರುತ್ತದೆ. ಇದನ್ನು ಪ್ರೇಕ್ಷಕ, ವಾಚಕ ಬೇರೆಬೇರೆ ರೀತಿಯಲ್ಲಿ ಅನುಭವಿಸಬಹುದು ಎಂದರು.

ಲಯಬದ್ಧವಾಗಿ ಹರಿಹರನ ರಗಳೆ ಯನ್ನು ವಾಚಿಸಿದ ರಾಮ ಪ್ರಸಾದ್‌ ಅವರು, ಹಾಡಿನ ಕುಣಿತವನ್ನು ಈ ರಗಳೆ ಯಲ್ಲಿ ತೋರಿಸಲಾಗಿದ್ದು, ಇದರಲ್ಲಿ ಭಾವ ವನ್ನು ವ್ಯಕ್ತಪಡಿಸಲು ಒಂದು ಮಾಧ್ಯಮ ವಾಗುತ್ತದೆ. ಕಾವ್ಯಗಳ ವಾಚನ ಮಾಡುವಾಗ ವ್ಯಾಖ್ಯಾನಕಾರರು ಇರುತ್ತಾರೆ. ವಾಚಕರು ಉತ್ತಮವೆನಿಸಿದ  ಕಾವ್ಯಗಳನ್ನು ಮಾತ್ರ ಹಾಡುತ್ತಾರೆ. ಇಲ್ಲಿ ಕಥೆಗಳನ್ನು ಒಂದ ಕ್ಕೊಂದು ಜೋಡಿಸುವ ಕಾರ್ಯವನ್ನು ವಾಖ್ಯಾನ ಕಾರರು ಮಾಡುತ್ತಾರೆ ಎಂದು ತಿಳಿಸಿದರು.

ಕುಮಾರವ್ಯಾಸನ ಜೈಮಿನಿ ಭಾರತದಲ್ಲಿ ಕರ್ಣನ ಜನನದ ಕಾವ್ಯವನ್ನು ವಾಚಿಸಿದ ರಾಮಪ್ರಸಾದ್‌ ಅವರು, ಪದ್ಯವನ್ನು ಓದಿ ಅರ್ಥ ಮಾಡಿಕೊಂಡು ಅದಕ್ಕೆ ತಕ್ಕ ರಾಗವನ್ನು ಬಳಸಬೇಕಾಗುತ್ತದೆ. ಇದು ಗಮಕ ವಾಚನದ ಪ್ರಮುಖ ಲಕ್ಷಣಗಳು ಎಂದ ಅವರು ಇದರೊಂದಿಗೆ ಕರ್ನಾಟಕ ಶ್ರೇಷ್ಠ ಕಾವ್ಯಗಳು, ವ್ಯಾಖ್ಯಾನಕಾರರು, ವಚನಕಾರರ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ಅನಂತ ಪ್ರಸಾದ್‌ ಎಲ್ಲರನ್ನೂ ಸ್ವಾಗತಿಸುವ ಮೂಲಕ ಪ್ರಾರಂಭಿಸಿದರು. ಸಂಘದ ವಿಶ್ವೇಶ್ವರ ದೀಕ್ಷಿತ್‌ ಅವರು ರಾಮಪ್ರಸಾದ್‌ ಕೆ.ವಿ. ಅವರನ್ನು ಪರಿಚಯಿಸಿದರು. ಗುರುಪ್ರಸಾದ್‌ ಅವರು ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next