ರಾಮನಗರ: ಖಾಸಗಿ ಸಂಸ್ಥೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯ ಅಪಘಾತಕ್ಕೆ ಸಂಸ್ಥೆಯೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಹಾರೋಹಳ್ಳಿ ತಾಲೂಕಿನ ಜಕ್ಕಸಂದ್ರ ಗ್ರಾಮದ ಬಳಿ ಇರುವ ಖಾಸಗಿ ಸಂಸ್ಥೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಆಂಧ್ರ ಮೂಲದ ವಿದ್ಯಾರ್ಥಿ ತೇಜಸ್ (19)ರಸ್ತೆ ಅಪಘಾತವಾಗಿ ತೀವ್ರವಾಗಿ ಗಾಯಗೊಂಡಿದ್ದು ಇದಕ್ಕೆ ಸಂಸ್ಥೆಯೇ ನೇರ ಹೊಣೆ ಎಂದು ಕಿಡಿಕಾರಿ ಸುಮಾರು 800ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ವಿದ್ಯಾರ್ಥಿಗಳು ಕಾಲೇಜು ಅವರಣದಿಂದ ಹೊರಗಡೆ ಇರುವ ಅದೇ ಸಂಸ್ಥೆಯ ಕ್ಯಾಂಪಸ್ ವೊಂದರ ಪಿಜಿಯಲ್ಲಿ ಉಳಿದುಕೊಂಡಿದ್ದು ವಿದ್ಯಾರ್ಥಿಗಳು ಪ್ರತಿದಿನ ಊಟ ಮಾಡಲು ಮತ್ತೆ ಕಾಲೇಜು ಕ್ಯಾಂಟೀನ್ ಗೆ ಬರಬೇಕಾಗಿತ್ತು. ಇದೇ ಸಮಯ ವಿದ್ಯಾರ್ಥಿ ತೇಜಸ್ ಊಟ ಮುಗಿಸಿಕೊಂಡು ರಸ್ತೆ ದಾಟುವ ಸಮಯದಲ್ಲಿ ಯಾವುದೋ ವಾಹನ ಡಿಕ್ಕಿ ಹೊಡೆದುಕೊಂಡು ಹೋಗಿದ್ದು ತೀವ್ರ ಗಾಯಗೊಂಡ ವಿದ್ಯಾರ್ಥಿಯ ದಯಾನಂದ ಸಾಗರ್ ಆಸ್ಪತ್ರೆಗೆ ಸೇರಿಸಲಾಗಿದ್ದು ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.
ಮಾಧ್ಯಮಗಳಿಗೆ ನಿರ್ಬಂಧ: ಇನ್ನು ವಿಷಯ ತಿಳಿದ ಕೂಡಲೇ ವರದಿ ಮಾಡಲು ತೆರಳಿದ ಮಾಧ್ಯಮದವರಿಗೆ ಸಂಸ್ಥೆಯ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ ನಿರ್ಭoಧ ಹೇರಿತ್ತು. ಹಾರೋಹಳ್ಳಿ ಪೊಲೀಸರು ಸ್ಥಳಕ್ಕಾಗಮಸಿ ವಿದ್ಯಾರ್ಥಿಗಳನ್ನು ಮನವೋಲಿಸುವ ಪ್ರಯತ್ನ ಮಾಡಿದ್ದಾರೆ.